ಕೋಲಾರ: ಪ್ಲಾಸ್ಟಿಕ್‌ ನಿಷೇಧ ಜಾಗೃತಿ ಮೂಡಿಸಲು ಬೀದಿಗಿಳಿದ ಜಿಲ್ಲಾಧಿಕಾರಿ..!

By Kannadaprabha NewsFirst Published Aug 2, 2019, 8:58 AM IST
Highlights

ಪ್ಲಾಸ್ಟಿಕ್ ಬಳಸಬೇಡಿ ಅಂತ ಎಷ್ಟೇ ಸೂಚನೆ ನೀಡಿದರೂ ಜನ ಅದನ್ನು ಪಾಲಿಸದಿರುವುದನ್ನು ಕಂಡು ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಸ್ವತಃ ಬೀದಿಗಿಳಿದು ಜನರಿಗೆ ಪರಿಸರ ಸ್ನೇಹಿ ಬ್ಯಾಗ್ ವಿತರಿಸಿ ಜಾಗೃತಿ ಮೂಡಿಸಿದ್ದಾರೆ. ಪ್ಲಾಸ್ಟಿಕ್ ಚೀಲದೊಂದಿಗೆ ಬಂದವರನ್ನು ತಡೆದು ಪರಿಸರ ಸ್ನೇಹಿ ಬ್ಯಾಗ್‌ ನೀಡಿ ಪ್ಲಾಸ್ಟಿಕ್ ಬಳಸದಂತೆ ಸೂಚಿಸಿದ್ದಾರೆ.

ಚಿಕ್ಕಬಳ್ಳಾಪುರ(ಆ.02): ಪರಿಸರಕ್ಕೆ ಮಾರಕವಾಗಿ ಪರಿಣಮಿಸಿರುವ ಪ್ಲಾಸ್ಟಿಕ್‌ ನಿಷೇಧ ಕುರಿತು ಹಲವು ವರ್ಷಗಳಿಂದ ಅಧಿಕಾರಿಗಳು ಜಾಗೃತಿ ಮೂಡಿಸುವ ಕಾರ್ಯದಲ್ಲಿ ನಿರತರಾಗಿದ್ದರೂ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಇನ್ನೂ ಸಂಪೂರ್ಣವಾಗಿ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸದ ಕಾರಣ ಅರಿವು ಮೂಡಿಸಲು ಜಿಲ್ಲಾಧಿಕಾರಿಗಳೇ ರಸ್ತೆಗಿಳಿದ ಘಟನೆ ಗುರುವಾರ ನಡೆಯಿತು.

ನಗರಸಭೆ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಎಷ್ಟೇ ಶ್ರಮಪಟ್ಟರೂ ಅದಕ್ಕೂ ಪೂರಕ ಫಲಿತಾಂಶ ಬಾರದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಗುರುವಾರ ನಗರದ ಮುಖ್ಯರಸ್ತೆಯಲ್ಲಿರುವ ಬಸ್‌ ನಿಲ್ದಾಣದಲ್ಲಿ ನಿಂತು ಪ್ಲಾಸ್ಟಿಕ್‌ ಚೀಲದೊಂದಿಗೆ ಸಾಗುವ ಸಾರ್ವಜನಿಕರಿಗೆ ಪರಿಸರ ಸ್ನೇಹಿ ಬ್ಯಾಗ್‌ ವಿತರಿಸಿ, ಪ್ಲಾಸ್ಟಿಕ್‌ ಬಳಸದಂತೆ ಮನವಿ ಮಾಡಿದ್ದು ವಿಶೇಷವಾಗಿತ್ತು.

ನಿಷೇಧಿತ ಪದಾರ್ಥ ಬಳಕೆ ಬೇಡ:

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್‌, ಪ್ಲಾಸ್ಟಿಕ್‌ ವಸ್ತುಗಳು ನಿಷೇಧಗೊಂಡ ನಂತರ 2016ರಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಪ್ಲಾಸ್ಟಿಕ್‌ ನಿಷೇಧಿಸಲಾಯಿತು. ಆದರೂ ಸಾರ್ವಜನಿಕರಲ್ಲಿ ಈ ಕುರಿತು ಜಾಗೃತಿ ಮೂಡದಿರುವುದು ದುರಂತ. ಪರಿಸರ ಹಾಗೂ ಆರೋಗ್ಯದ ದೃಷ್ಟಿಯಿಂದ ನಿಷೇಧಿತ ವಸ್ತುಗಳನ್ನು ಬಳಕೆ ಮಾಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಪ್ಲಾಸ್ಟಿಕ್‌ ವಸ್ತುಗಳಿಗೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಸಾರ್ವಜನಿಕರು ಪರಿಸರ ಸ್ನೇಹಿ ಜೀವನ ಶೈಲಿ ಬೆಳೆಸಿಕೊಳ್ಳಬೇಕಿದೆ. ಪ್ಲಾಸ್ಟಿಕ್‌ ಬಳಸುವ ಸಾರ್ವಜನಿಕರಿಗೂ ಸ್ಥಳದಲ್ಲಿಯೇ ದಂಡ ಹಾಕಲಾಗುವುದು ಎಂದು ಎಚ್ಚರಿಸಿದರು.

ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳಾದ ಗ್ಲಾಸ್‌, ಬ್ಯಾಗ್‌, ಸ್ಫೂನ್‌, ಸ್ಟ್ರಾ ಸೇರಿದಂತೆ ಇತರೆ ವಸ್ತುಗಳನ್ನು ಮಾರುವುದು, ಬಳಕೆ ಮಾಡುವುದು ಕಂಡು ಬಂದಲ್ಲಿ ಸಾರ್ವಜನಿಕರು ಅಧಿಕಾರಿಗಳಿಗೆ ದೂರು ನೀಡುವ ಪರಿಪಾಠವನ್ನು ಪ್ರಜ್ಞಾವಂತರು ಬೆಳಸಿಕೊಳ್ಳಬೇಕಿದೆ. ಅಲ್ಲದೆ ಸಕಲ ಜೀವರಾಶಿಗಳ ಜೊತೆಗೆ ಪರಿಸರದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಪ್ಲಾಸ್ಟಿಕ್‌ ಬಳಕೆಯನ್ನು ಪ್ರತಿಯೊಬ್ಬರೂ ತ್ಯಜಿಸುವ ಮೂಲಕ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ಒದಗಿಸಲು ಮುಂದಾಗಬೇಕು ಎಂದು ಕೋರಿದರು.

ಪರವಾನಿಗೆ ರದ್ದು!

ನಿಷೇಧದ ನಡುವೆಯೂ ಹೋಟೆಲ್‌, ಮಾಂಸದ ಅಂಗಡಿ, ಕಾಂಡಿಮೆಂಟ್ಸ್‌ ಸೇರಿದಂತೆ ಬಹುತೇಕ ಅಂಗಡಿಗಳಲ್ಲಿ ರಾಜಾರೋಷವಾಗಿ ಪಾಸ್ಟಿಕ್‌ ಬಳಕೆ ಮಾಡಲಾಗುತ್ತಿದೆ. ಸಾರ್ವಜನಿಕರ ದೂರಿಗೆ ಸ್ಪಂದಿಸಿದ ಡಿಸಿ ಅನಿರುದ್ದ್ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಕೆ ಮಾಡುವ ಹೋಟೆಲ್‌, ಅಂಗಡಿಗಳನ್ನು ಪತ್ತೆ ಹಚ್ಚಿ ಪರವಾನಗಿ ರದ್ದುಗೊಳಿಸುವ ಮೂಲಕ ಬಿಸಿಮುಟ್ಟಿಸಲು ಪೌರಾಯುಕ್ತ ಉಮಾಕಾಂತ್‌ ಅವರಿಗೆ ಕಟ್ಟುನಿಟ್ಟಿನ ಆದೇಶ ಮಾಡಿದರು.

ಡಿಸಿ, ಎಸ್‌ಪಿ ಜಂಟಿ ಕಾರ್ಯಾಚರಣೆ!

ನಿಷೇಧಿತ ಪ್ಲಾಸ್ಟಿಕ್‌ ವಸ್ತು ಬಳಸದಂತೆ ಆದೇಶವಿದ್ದರೂ ಸಾರ್ವಜನಿಕರು ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸುತ್ತಿದ್ದ ಹಿನ್ನೆಲೆಯಲ್ಲಿ ಖುದ್ದು ಅಖಾಡಕ್ಕಿಳಿದ ಜಿಲ್ಲಾಧಿಕಾರಿ ಅನಿರುದ್‌್ಧ ಶ್ರವಣ್‌ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂತೋಷ್‌ ಬಾಬು ನಗರದ ಖಾಸಗಿ ಬಸ್‌ ನಿಲ್ದಾಣದಲ್ಲಿ ಪ್ಲಾಸ್ಟಿಕ್‌ ಚೀಲ ಒಯ್ಯುತ್ತಿದ್ದ ಕೆಲ ಸಾರ್ವಜನಿಕರಿಂದ ಪ್ಲಾಸ್ಟಿಕ್‌ ಚೀಲ ಪಡೆದು ಪರಿಸರ ಸ್ನೇಹಿ ಚೀಲ ವಿತರಿಸುವ ಜೊತೆಗೆ ಪ್ಲಾಸ್ಟಿಕ್‌ ಹೊಂದಿದ್ದ ಕೆಲ ಅಂಗಡಿಗಳಿಗೆ ದಂಡ ವಿಧಿಸಿದರು.

ವಿದ್ಯಾರ್ಥಿನಿಗೆ ಡಿಸಿ, ಎಸ್ಪಿ ನೀತಿ ಪಾಠ

ಪದವಿ ಪ್ರಮಾಣ ಪತ್ರಗಳನ್ನು ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿಕೊಂಡು ಸಾಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ತಡೆದ ಜಿಲ್ಲಾಧಿಕಾರಿಗಳು, ವಿದ್ಯಾವಂತರೇ ಪ್ಲಾಸ್ಟಿಕ್‌ ಬಳಸುವುದರಿಂದ ಅನಕ್ಷರಸ್ಥರೂ ಅದನ್ನು ಅನುಸರಿಸುತ್ತಾರೆ. ನಿಷೇಧಿತ ಪ್ಲಾಸ್ಟಿಕ್‌ ಬಳಸುವುದು ಕಾನೂನು ರೀತಿಯಲ್ಲಿ ಅಪರಾಧ ಎಂದು ವಿದ್ಯಾರ್ಥಿನಿಗೆ ಅರಿವು ಮೂಡಿಸುವ ಜೊತೆಗೆ ಪರಿಸರ ಸ್ನೇಹಿ ಬ್ಯಾಗಿನಲ್ಲಿ ಪ್ರಮಾಣ ಪತ್ರಗಳನ್ನು ಒಯ್ಯುವಂತೆ ಸೂಚಿಸಿ, ಪ್ಲಾಸ್ಟಿಕ್‌ ವಶಕ್ಕೆ ಪಡೆದರು.

ಚಿತ್ರದುರ್ಗ: ಬಿಲ್‌ ಕೊಡದೆ ಪುಗ್ಸಟ್ಟೆ ನೀರು ಕುಡಿದವರ ಬಗ್ಗೆ ಡಿಸಿ ಗರಂ..!

ಅಂಗಡಿ ಮಳಿಗೆಗಳ ಹರಾಜು 13ಕ್ಕೆ:

ಹಲವು ವರ್ಷಗಳಿಂದ ನಿರುಪಯುಕ್ತವಾಗಿದ್ದ ಖಾಸಗಿ ಬಸ್‌ ನಿಲ್ದಾಣದಲ್ಲಿನ ಅಂಗಡಿ ಮಳಿಗೆಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ಆ.13ರಂದು ಖಾಸಗಿ ಬಸ್‌ ನಿಲ್ದಾಣದ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್‌ ತಿಳಿಸಿದರು. ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ ಕುರಿತು ಹಳೆ ಬಸ್‌ನಿಲ್ದಾಣಲ್ಲಿದ್ದ ಅಂಗಡಿಗಳ ಮಾಲಿಕರೊಂದಿಗೆ ಸಭೆ ನಡೆಸಲಾಗಿದ್ದು, ಅಂಗಡಿ ಮಾಲೀಕರು ನ್ಯಾಯಾಲಯದ ಆದೇಶದಂತೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಅಂಗಡಿಗಳನ್ನು ಪಡೆಯಬಹುದು ಎಂದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ವೇಳೆ ಪೌರಾಯುಕ್ತ ಉಮಾಕಾಂತ್‌, ನಗರಸಭೆ ಪರಿಸರ ಅಭಿಯಂತರ ಶಿವಶಂಕರ್‌, ನಗರಸಭೆ ಮಾಜಿ ಸದಸ್ಯ ಮಹಾಕಾಳಿ ಬಾಬು ಸೇರಿದಂತೆ ಇತರರು ಇದ್ದರು.

click me!