ಕೋಲಾರ-ಚಿಕ್ಕಬಳ್ಳಾಪುರ ಗೋಲ್ಡನ್ ಡೈರಿ ಫೈಟ್!

By Govindaraj SFirst Published Apr 29, 2022, 11:38 PM IST
Highlights

ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆ ಅವಳಿ ಜಿಲ್ಲೆಯ ನಾಯಕರ ಪ್ರತಿಷ್ಠೆಯಾಗಿದೆ. ಡೈರಿ ವಿಚಾರವನ್ನ ಪ್ರತಿಷ್ಠೆಯಾಗಿಸಿಕೊಂಡು ರಾಜಕೀಯ ಮಾಡಲಾಗುತ್ತಿದೆ.

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ.

ಕೋಲಾರ (ಏ.29): ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ವಿಭಜನೆ ಅವಳಿ ಜಿಲ್ಲೆಯ ನಾಯಕರ ಪ್ರತಿಷ್ಠೆಯಾಗಿದೆ. ಡೈರಿ ವಿಚಾರವನ್ನ ಪ್ರತಿಷ್ಠೆಯಾಗಿಸಿಕೊಂಡು ರಾಜಕೀಯ ಮಾಡಲಾಗುತ್ತಿದೆ. ಲಕ್ಷಾಂತರ ರೈತರ ಜೀವನಾಡಿಯಾಗಿರುವ ಸಹಕಾರಿ ಒಕ್ಕೂಟದಲ್ಲಿ ಕ್ಷೀರ ಕ್ರಾಂತಿಯ ಹರಿಕಾರ ಎಂವಿಕೆ ಮೆಗಾ ಡೈರಿಗೆ ತಡೆಯಾಜ್ಞೆ ತಂದಿದ್ದು, ಇದರಿಂದ ಕೆರಳಿರುವ ಆಡಳಿತ ಮಂಡಳಿ ಹೋರಾಟ ಎಚ್ಚರಿಕೆ ನೀಡಿದೆ. ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ನಷ್ಟದಲ್ಲಿದೆ ಅನ್ನೋ ಮಾತು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಈ ನಡುವೆ ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ಪ್ರತ್ಯೇಕ ಮಾಡಬೇಕೆನ್ನುವ ಪ್ರಕ್ರಿಯೆ ಸಹ ನಡೆಯುತ್ತಿದೆ.

ಈ ಬೆನ್ನಲ್ಲೆ ಕೋಚಿಮುಲ್‌ನಲ್ಲಿ ಅವ್ಯವಹಾರ ಆಗಿದೆ ಎಂದು ಚಿಕ್ಕಬಳ್ಳಾಪುರ ನಿರ್ದೇಶಕನೊರ್ವ ಆರೋಪಿಸಿರುವುದು ಹಾಲು ಒಕ್ಕೂಟದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದಕ್ಕೆ ಸ್ಪಷ್ಟ ಸಂದೇಶವಾಗಿದೆ. ಹೌದು ಕಳೆದ 30 ವರ್ಷಗಳಿಂದ ಹೈನೋಧ್ಯಮದಲ್ಲಿ ಕೋಚಿಮುಲ್ ತನ್ನದೇ ಆದ ಮೈಲಿಗಲ್ಲನ್ನು ಸ್ಥಾಪಿಸಿದೆ. ಹಾಗಾಗಿ ಹಾಲು ಉತ್ಪಾದನೆಯಲ್ಲಿ ಕೋಚಿಮುಲ್ ರಾಜ್ಯದ 14 ಡೈರಿಗಳ ಪೈಕಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇಂತಹ ಇತಿಹಾಸ ಹೊಂದಿರುವ ಒಕ್ಕೂಟದಲ್ಲಿ ಈಗ ಹೊಸ ಎಂವಿಕೆ ಡೈರಿ ಸ್ಥಾಪಿಸುವ ವಿವಾದ ರಾಜಕೀಯ ತಿರುವ ಪಡೆದುಕೊಂಡು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. 

Kolara Seeds Preserver Papamma ನೂರಾರು ವರ್ಷಗಳ ಮಡಿಕೆಯಲ್ಲಿ ಬೀಜ ಸಂರಕ್ಷಣೆ

ಇದರಿಂದ ಕೆಲವರು ಏನಾದರೂ ಮಾಡಿ ಒಕ್ಕೂಟಕ್ಕೆ ಕೆಟ್ಟ ಹೆಸರು ತರುವ ಹುನ್ನಾರಕ್ಕೆ ಮುಂದಾಗಿ ಅವ್ಯವಹಾರದ ಆರೋಪ ಮಾಡಲಾಗಿದೆ. ಅವ್ಯವಹಾರ ಆರೋಪ ಸುಳ್ಳು ಇದೆಲ್ಲಾ ರಾಜಕೀಯ ಉದ್ದೇಶಕ್ಕೆ ಕೆಲವರು ಮಾಡುತ್ತಿರುವ ಆರೋಪ ಒಕ್ಕೂಟ ಪ್ರತ್ಯೇಕಿಸುವ ಉದ್ದೇಶಕ್ಕೆ ಟೆಟ್ರಾಪ್ಯಾಕ್ ವಿಚಾರವನ್ನು ತಂದಿದ್ದು, ಯಾವುದೆ ಅವ್ಯವಹಾರ ನಡೆದಿಲ್ಲ ಎಂದು, ಕೋಚಿಮುಲ್ ಅಧ್ಯಕ್ಷ ಕೆ.ವೈ ನಂಜೇಗೌಡ ಸ್ಪಷ್ಟನೆ ನೀಡಿದ್ದಾರೆ. ಇನ್ನೂ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಡಿಯಲ್ಲಿ 1800 ಹಾಲು ಉತ್ಪಾದಕರ ಸಂಘಗಳಿದ್ದು, ಈ ಸಂಘಗಳಿಂದ ನಿತ್ಯ 8.5 ಲಕ್ಷ ಲೀಟರ್‌ನಷ್ಟು ಹಾಲು ಸಂಗ್ರಹವಾಗುತ್ತಿದೆ.

ಇಂತಹ ಒಕ್ಕೂಟದಲ್ಲಿ ಸದ್ಯ ಹಳೆಯ ಯಂತ್ರಗಳಲ್ಲೆ 358 ಜನ ಖಾಯಂ ನೌಕರರು,1950 ಕ್ಕೂ ಹೆಚ್ಚು ಜನ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಂತಹ ಒಕ್ಕೂಟಕ್ಕೆ 180 ಕೋಟಿ ರೂ ವೆಚ್ಚದ ಎಂವಿಕೆ ಗೋಲ್ಡನ್ ಮೆಗಾ ಡೈರಿಗೆ ಶಂಕು ಸ್ಥಾಪನೆಯಾಗಿ ಸರ್ಕಾರದ ಅನುಮೋದನೆ ಸಿಕ್ಕಿದೆ. ಆದರೆ ಗೋಲ್ಡನ್ ಡೈರಿಗೆ ಟೆಂಡರ್ ಕರೆಯುವ ಪ್ರಕ್ರಿಯೆ ಹಂತದಲ್ಲಿ ಸದ್ಯದ ಬಿಜೆಪಿ ಸರ್ಕಾರದ ಆರೋಗ್ಯ ಸಚಿವ ಸುಧಾಕರ್ ಹಾಗು ಸಹಕಾರ ಸಚಿವ ಸೋಮಶೇಖರ್ ಟೆಂಡರ್ ಪ್ರಕ್ರಿಯೆ ಹಾಗೂ ಸಿವಿಲ್ ಕಾಮಗಾರಿಗಳನ್ನು ಮಾಡದಂತೆ ತಡೆಯಾಜ್ಞೆ ತಂದಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದೆ.

4 ದಶಕ ಕಳೆದರೂ ಸಿಗದ ಪರಿಹಾರ, ರಸ್ತೆಯನ್ನೇ ಅಗೆದು ರೈತ ಪ್ರತಿಭಟನೆ!

ಸದ್ಯ ಸರ್ಕಾರ ವಿಭಜನೆ ಹಾಗೂ ಡೈರಿ ಮಾಡುವ ವಿಚಾರದಲ್ಲಿ ವಿಳಂಭ ನೀತಿ ಅನುಸರಿಸುತ್ತಿದ್ದು, ಇದರಿಂದ ಕೆಲ ಪ್ರಭಾವಿ ಸಚಿವರು ಅವ್ಯವಹಾರದ ಆರೋಪ ಹೊರೆಸುತ್ತಿದ್ದಾರೆ ಅನ್ನೋದು ನಿರ್ದೇಶಕರ ಮಾತು. ಒಟ್ಟಾರೆ ಅವಳಿ ಜಿಲ್ಲೆಯ ನಾಯಕರ ಒಣ ಪ್ರತಿಷ್ಠೆ ಲಕ್ಷಾಂತರ ರೈತ ಕುಟುಂಬಗಳು ಸೇರಿದಂತೆ ಕ್ಷೀರ ಕ್ರಾಂತಿಯ ಹರಿಕಾರ ಎಂವಿಕೆ ಅವರಿಗೆ ಅಗೌರವ ತೋರುವ ಮೂಲಕ ರಾಜಕೀಯ ಮಾಡುತ್ತಿರುವುದು ಬೇಸರದ ಸಂಗತಿ. ಇದರಿಂದ ಬೇಸತ್ತ ಆಡಳಿತ ಮಂಡಳಿ ಪ್ರಭಾವಿ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

click me!