ಕೊಡಗು ಪ್ರವಾಸೋದ್ಯಮಕ್ಕೆ ದಸರಾ ‘ಆರ್ಥಿಕ ಚೇತರಿಕೆ’

By Kannadaprabha NewsFirst Published Oct 19, 2021, 3:19 PM IST
Highlights
  • ದಸರಾ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆ ಕಳೆದ ನಾಲ್ಕು ದಿನ ಪ್ರವಾಸಿಗರಿಂದ ತುಂಬಿ ತುಳುಕುತ್ತಿತ್ತು
  •  ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ದಸರಾದಿಂದ ಒಂದಷ್ಟುಆರ್ಥಿಕ ಚೇತರಿಕೆ

ವರದಿ :  ವಿಘ್ನೇಶ್‌ ಎಂ. ಭೂತನಕಾಡು

 ಮಡಿಕೇರಿ (ಅ.19):  ದಸರಾ (Dasara) ಹಿನ್ನೆಲೆಯಲ್ಲಿ ಕೊಡಗು (Kodagu) ಜಿಲ್ಲೆ ಕಳೆದ ನಾಲ್ಕು ದಿನ ಪ್ರವಾಸಿಗರಿಂದ (Tourist) ತುಂಬಿ ತುಳುಕುತ್ತಿತ್ತು. ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ದಸರಾದಿಂದ ಒಂದಷ್ಟುಆರ್ಥಿಕ ಚೇತರಿಕೆ ಕಂಡಿದೆ.

ದಸರಾ ರಜೆ (Holiday) ಕಾರಣದಿಂದಾಗಿ ಕೊಡಗು ಜಿಲ್ಲೆಗೆ ಪ್ರವಾಸಿಗರ ದಂಡೇ ಹರಿದು ಬಂದಿತ್ತು. ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ನಂಬಿಕೊಂಡು ಹೋಂಸ್ಟೇ (Home Stay), ರೆಸಾರ್ಟ್‌ (Resort), ಹೋಟೆಲ್‌ಗಳು (Hotel), ಸ್ಪೈಸಸ್‌ ಮಳಿಗೆಗಳು, ಟ್ಯಾಕ್ಸಿ ಚಾಲಕರು ಸೇರಿದಂತೆ ಹಲವು ವ್ಯಾಪಾರಿಗಳು ಜೀವನ ನಡೆಸುತ್ತಿದ್ದಾರೆ. ಕಳೆದ ಎರಡು ವರ್ಷದಿಂದ ಕೊರೋನಾ (Corona) ಕಾರಣದಿಂದಾಗಿ ಪ್ರವಾಸೋದ್ಯಮ ನಂಬಿ ಜೀವನ ಸಾಗಿಸುತ್ತಿದ್ದವರಿಗೆ ಅಪಾರ ನಷ್ಟಸಂಭವಿಸಿತ್ತು. ಆದರೆ ಈ ಬಾರಿಯ ದಸರಾ ಅದನ್ನು ಮರೆಸುವಂತೆ ಮಾಡಿದೆ.

ಕೋವಿಡ್‌ ಇಳಿಮುಖ:

ಜಿಲ್ಲೆಯಲ್ಲಿ ಇತ್ತೀಚೆಗೆ ದಿನೇ ದಿನೇ ಕೋವಿಡ್‌ ಪ್ರಕರಣ ಕೂಡ ಕಡಿಮೆಯಾಗುತ್ತಿದೆ. ದಸರಾ ಹಬ್ಬದ ಹಿನ್ನೆಲೆಯಲ್ಲಿ ಅ.15ರಿಂದಲೇ ಕೊಡಗು ಜಿಲ್ಲೆಗೆ ಪ್ರವಾಸಿಗರ ಆಗಮನ ಹೆಚ್ಚಿತ್ತು. ಅ.18ರ ವರೆಗೂ ಜಿಲ್ಲೆಯಲ್ಲಿ ಪ್ರವಾಸಿಗರು ತಂಗಿದ್ದರು. ಇದರಿಂದ ರೆಸಾರ್ಟ್‌, ಹೋಂಸ್ಟೇ ಹಾಗೂ ಹೊಟೇಲ್‌ಗಳು ಹೌಸ್‌ ಫುಲ್‌ ಆಗಿದ್ದವು. ಕಳೆದ ಎರಡು ವರ್ಷದ ಬಳಿಕ ಇಷ್ಟೊಂದು ಪ್ರವಾಸಿಗರು ಜಿಲ್ಲೆಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮವನ್ನು ನಂಬಿದ್ದವರಿಗೆ ಒಂದಷ್ಟುಆದಾಯ (Income) ದೊರಕುವ ಮೂಲಕ ಆರ್ಥಿಕವಾಗಿ ಚೇತರಿಕೆ ನೀಡಿ ಸಮಾಧಾನ ತರಿಸಿದೆ.

ದೇವರನಾಡಿನಲ್ಲಿ ಮಹಾಮಳೆ, ಕೊಡಗಿನಲ್ಲಿ 3 ವರ್ಷದ ಬಳಿಕ ಪ್ರವಾಹದ ಆತಂಕ!

ಕಳೆದ ಬಾರಿ ಮಡಿಕೇರಿಯಲ್ಲಿ (Madikeri) ಸರಳವಾಗಿ ದಸರಾ ಉತ್ಸವ ಆಚರಿಸಲಾಗಿತ್ತು. ಅಂದು ಜಿಲ್ಲೆಗೆ ಪ್ರವಾಸಿಗರಿಗೆ ಅವಕಾಶ ನಿರಾಕರಿಸಲಾಗಿತ್ತು. ಆದರೆ ಈ ಬಾರಿ ಮಡಿಕೇರಿ ನಗರದ ಪ್ರವಾಸಿ ತಾಣಗಳನ್ನು ಮಾತ್ರ ಬಂದ್‌ ಮಾಡಿ ಜಿಲ್ಲಾಡಳಿತ ಆದೇಶ ಮಾಡಿತ್ತು. ಪ್ರವಾಸಿಗರಿಗೆ ಯಾವುದೇ ನಿರ್ಬಂಧ ಕೂಡ ಇರಲಿಲ್ಲ. ಮಡಿಕೇರಿಯಲ್ಲಿ ಪ್ರವಾಸಿ ತಾಣಗಳು (Tourism Spots) ಬಂದ್‌ ಆಗಿದ್ದರೂ ಜಿಲ್ಲೆಯ ಉಳಿದ ಪ್ರವಾಸಿ ತಾಣಗಳಾದ ದುಬಾರೆ (Dubare), ನಿಸರ್ಗಧಾಮ ಸೇರಿದಂತೆ ವಿವಿಧ ಪ್ರವಾಸಿ ತಾಣಗಳು ಎಂದಿನಂತೆ ಕಾರ್ಯಚರಿಸಿದವು. ಈ ಹಿನ್ನೆಲೆಯಲ್ಲಿ ಅಲ್ಲಿಗೆ ಪ್ರವಾಸಿಗರು ಭೇಟಿ ನೀಡಿ ಸಂಭ್ರಮಿಸಿದರು.

ರಾಜ್ಯ ನಾನಾ ಭಾಗ ಹಾಗೂ ಇತರೆ ಕಡೆಗಳಿಂದಲೂ ಮಡಿಕೇರಿ ದಸರಾ ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸಿದ್ದರು. ದಸರೆಯ ಪ್ರಮುಖ ಆಕರ್ಷಣೆಯಾಗಿರುವ ದಶ ಮಂಟಪಗಳ ಶೋಭಾಯಾತ್ರೆ ವೇಳೆ ರಸ್ತೆಯುದ್ದಕ್ಕೂ ಜನ ಸಾಗರ ಇದ್ದಂತೆ ಕಂಡುಬಂತು. ದಸರಾ ಸಂದರ್ಭದಲ್ಲಿ ಪ್ರವಾಸಿಗರನ್ನು ನಿರ್ಬಂಧಿಸುವಂತೆ ಕೆಲವು ಸಂಘಟನೆಗಳು ಜಿಲ್ಲಾಡಳಿತವನ್ನು ಒತ್ತಾಯಿಸಿತ್ತು.

ದಸರಾ ಹಾಗೂ ತಲಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಮಡಿಕೇರಿಯ ಪ್ರವಾಸಿ ತಾಣಗಳಾದ ರಾಜಾಸೀಟು, ಗದ್ದುಗೆ, ನೆಹರು ಮಂಟಪ, ಜ.ತಿಮ್ಮಯ್ಯ ಮ್ಯೂಸಿಯಂಗಳನ್ನು ಬಂದ್‌ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೂ ದಸರಾ ಸಂದರ್ಭದಲ್ಲಿ ಮಡಿಕೇರಿಗೆ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡಿದ್ದರು. ಸರಳ ದಸರಾವಾಗಿದ್ದರೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಇದೀಗ ದಸರೆ ಹಾಗೂ ತಲಕಾವೇರಿ ತೀರ್ಥೋದ್ಭವ ಮುಕ್ತಾಯವಾಗಿದ್ದು, ಮಡಿಕೇರಿಯ ಪ್ರವಾಸಿ ತಾಣಗಳು ಮತ್ತೆ ತೆರೆದುಕೊಂಡಿವೆ. ದಸರಾ ರಜೆ ಮುಕ್ತಾಯಗೊಂಡಂತೆ ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಸಂಭ್ರಮಿಸಿದ್ದ ಪ್ರವಾಸಿಗರು ಕಡಿಮೆಯಾಗುತ್ತಿದ್ದಾರೆ.

1 ನಿಮಿಷ ತಡವಾದ ತೀರ್ಥೋದ್ಭವ: ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ ತಾಯಿ ಕಾವೇರಿ

ದಸರಾ ಹಿನ್ನೆಲೆಯಲ್ಲಿ ಅ.15ರಿಂದ ನಾಲ್ಕು ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದರಿಂದ ಪ್ರವಾಸೋದ್ಯಮಕ್ಕೆ ಆರ್ಥಿಕ ಚೇತರಿಕೆಯಾಗಿದೆ. ರಜೆ ಮುಗಿದ ಹಿನ್ನೆಲೆಯಲ್ಲಿ ಇದೀಗ ಪ್ರವಾಸಿಗರು ಖಾಲಿಯಾಗುತ್ತಿದ್ದಾರೆ.

-ನಾಗೇಂದ್ರ ಪ್ರಸಾದ್‌, ಅಧ್ಯಕ್ಷ, ಜಿಲ್ಲಾ ಹೊಟೇಲ್‌, ರೆಸಾರ್ಟ್‌ ಮಾಲೀಕರ ಸಂಘ.

ದಸರಾ ಹಿನ್ನೆಲೆಯಲ್ಲಿ ಹೋಂಸ್ಟೇಗಳು ಫುಲ್‌ ಆಗಿದ್ದವು. ಇದು ದಸರಾ ಸಂದರ್ಭದಲ್ಲಿ ಮಾತ್ರ ಆರ್ಥಿಕ ಚೇತರಿಕೆಯಾಗಿದೆಯಷ್ಟೇ. ಇನ್ನು ಮುಂದೆ ಹೇಗೆ ಇರುತ್ತದೆ ಎಂದು ಕಾದು ನೋಡಬೇಕಿದೆ.

-ಬಿ.ಜಿ. ಅನಂತಶಯನ, ಅಧ್ಯಕ್ಷ, ಜಿಲ್ಲಾ ಹೋಂಸ್ಟೇ ಮಾಲೀಕರ ಸಂಘ.

click me!