ದೇಶದ ಯಾವುದೇ ಭಾಗಕ್ಕೂ ತಲುಪಲಿದೆ ತಲಕಾವೇರಿ ಇ-ಪ್ರಸಾದ, ಆನ್‌ಲೈನ್‌ನಲ್ಲಿ 300 ರೂ ಪೇ ಮಾಡಿ ಬುಕ್ ಮಾಡಿ

By Suvarna NewsFirst Published Mar 6, 2023, 5:59 PM IST
Highlights

ತಲಕಾವೇರಿ ಮತ್ತು ಭಾಗಮಂಡಲ ದೇವಾಲಯದ ವತಿಯಿಂದ ಇ ಪ್ರಸಾದ ಆರಂಭಿಸಲಾಗಿದೆ. ಇನ್ಮುಂದೆ ತೀರ್ಥ ಪ್ರಸಾದ ಬೇಕಾಯಿತ್ತೆಂದರೆ ಭಕ್ತರು ಆನ್ಲೈನ್ ನಲ್ಲಿಯೇ ಬುಕ್ ಮಾಡಿ ಪಡೆದುಕೊಳ್ಳಬಹುದು.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣನ್ಯೂಸ್
 
ಕೊಡಗು (ಮಾ.6): ಕೊಡಗಿನಲ್ಲಿ ಹುಟ್ಟಿ ನಾಡಿನ ಉದ್ದಗಲಕ್ಕೂ ಹರಿದು ಇಡೀ ನಾಡನ್ನೇ ಹಸಿರಾಗಿಸುವ ನಾಡಿನ ಜೀವನದಿ, ಕೊಡಗಿನ ಕುಲದೇವಿ ಮಾತೆ ಕಾವೇರಿಗೆ ಕೇವಲ ತವರು ಜಿಲ್ಲೆ ಕೊಡಗು ಜೊತೆಗೆ ರಾಜ್ಯದ ಉದ್ಧಗಲಕ್ಕೂ ಭಕ್ತರಿದ್ದಾರೆ. ಅಷ್ಟೇ ಅಲ್ಲ ತಲಕಾವೇರಿಯಿಂದ ಹಿಂದೂ ಮಹಾಸಾಗರದವರೆಗೆ ಲಕ್ಷಾಂತರ ರೈತರ ಬದುಕು ಹಸನು ಮಾಡುವ ಕಾವೇರಿ ಆ ಎಲ್ಲಾ ರಾಜ್ಯಗಳ ಲಕ್ಷಾಂತರ ಭಕ್ತರಿಗೆ ದೇವತೆ. ಈ ವಿವಿಧ ರಾಜ್ಯಗಳ ಉದ್ದಗಲಕ್ಕೂ ಭಕ್ತರು ಇದ್ದಾರೆ. ಎಷ್ಟೋ ಸಾವಿರಾರು ಕುಟುಂಬಗಳು ಕಾವೇರಿ ಮಾತೆಯ ತೀರ್ಥವಿಲ್ಲದೆ ಯಾವುದೇ ಶುಭಕಾರ್ಯ ಆರಂಭಿಸಲ್ಲ. ಕಾವೇರಿ ಪವಿತ್ರ ತೀರ್ಥ ಬೇಕಾದರೆ ಕೊಡಗಿನ ಗಡಿಭಾಗ ತಲಕಾವೇರಿಗೆ ಹೋಗಲೇ ಬೇಕು. ಆದರೆ ಅದು ಎಲ್ಲಾ ಕುಟುಂಬಗಳಿಗೆ ಸಾಧ್ಯವಾಗದೆ ಕಾವೇರಿ ತೀರ್ಥಕ್ಕಾಗಿ ಈ ಕುಟುಂಬಗಳು ಪರದಾಡುತ್ತವೆ. ಇದೆಲ್ಲವನ್ನು ಮನಗಂಡಿರುವ ತಲಕಾವೇರಿ ಮತ್ತು ಭಾಗಮಂಡಲ ದೇವಾಲಯದ ವತಿಯಿಂದ ಇ ಪ್ರಸಾದ ಆರಂಭಿಸಲಾಗಿದೆ.

ಇನ್ಮುಂದೆ ತೀರ್ಥ ಪ್ರಸಾದ ಬೇಕಾಯಿತ್ತೆಂದರೆ ಭಕ್ತರು ಆನ್ಲೈನ್ ನಲ್ಲಿಯೇ ಬುಕ್ ಮಾಡಿ ಪಡೆದುಕೊಳ್ಳಬಹುದು. ಹೌದು ಅದಕ್ಕಾಗಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಕೊಡಗು ಜಿಲ್ಲಾಡಳಿತ, ಭಾರತೀಯ ಅಂಚೆ ಕಚೇರಿ ಇಲಾಖೆ ಮತ್ತು  ತಲಕಾವೇರಿ ಮತ್ತು ಭಾಗಮಂಡಲ ದೇವಾಲಯಗಳ ಸಹಯೋಗದಲ್ಲಿ ಇ- ಪ್ರಸಾದ ಸೇವೆ ಆರಂಭಿಸಲಾಗಿದೆ.

Latest Videos

ಇನ್ಮುಂದೆ ಭಕ್ತರ ಮನೆ ಬಾಗಿಲಿಗೆ ತೀರ್ಥ, ಪ್ರಸಾದ ವಿತರಣೆ ಆಗಲಿದೆ. www.indiapost.gov.in ವೆಬ್ ವಿಳಾಸದಲ್ಲಿ ರಿಜಿಸ್ಟರ್ ಆಗುವ ಮೂಲಕ ತೀರ್ಥ ಪ್ರಸಾದಕ್ಕೆ ಬುಕ್ ಮಾಡಿಕೊಳ್ಳಬಹುದು ಎಂದು ಕೊಡಗು ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್ ಹೇಳಿದರು. ಇ.ಪ್ರಸಾದ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ ಭಾಗಮಂಡಲ ದೇವಾಲಯಗಳ ಕಾರ್ಯ ನಿರ್ವಹಣಾಧಿಕಾರಿ ದೊರೆ ಇವರು ಇ- ಪ್ರಸಾದಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಅವರು ಇ-ಪ್ರಸಾದ ಬೇಕಾಗಿರುವವರು ದೇಶದ ಯಾವುದೇ ಮೂಲೆಯಿಂದ ರಿಸ್ಟರ್ ಮಾಡಿ 300 ರೂಪಾಯಿಯನ್ನು ಆನ್ಲೈನ್ ಪೇ ಮಾಡಿ ಕಾವೇರಿ ಮಾತೆಯ ತೀರ್ಥ, ಪ್ರಸಾದ ಪಡೆಯಬಹುದು. ಇದಕ್ಕೆ ಯಾವ ರೀತಿಯ ಸ್ಪಂದನೆ ಇರುತ್ತದೆ ಎನ್ನುವುದನ್ನು ನೋಡಿಕೊಂಡು ಹೆಚ್ಚಿನ ಇ-ಸೇವೆ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

Mythology: ಅಗಸ್ತ್ಯರ ಮೇಲೆ ಮುನಿದು ನದಿಯಾಗಿ ಭೋರ್ಗರೆದ ಕಾವೇರಿ!

ಇನ್ನು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ದೊರೆ ಮಾತನಾಡಿ ಸಾಕಷ್ಟು ಜನರಿಗೆ ತಲಕಾವೇರಿಗೆ ಹೋಗಬೇಕು ದರ್ಶನ ಪಡೆಯಬೇಕು ಎನ್ನುವ ಹಂಬಲ ಇರುತ್ತದೆ. ಆದರೆ ಸಾಧ್ಯವಾಗುತ್ತಿರುವುದಿಲ್ಲ. ಜೊತೆಗೆ ಆಂಧ್ರ ಪ್ರದೇಶ, ತಮಿಳುನಾಡು, ಪಾಂಡಿಚೇರಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾವೇರಿ ಮಾತೆಯ ಭಕ್ತರಿದ್ದಾರೆ. ಅವರು ನಾವು ತಲಕಾವೇರಿಗೆ ಬರಲು ಸಾಧ್ಯವಾಗುತ್ತಿಲ್ಲ. ಪ್ರಸಾದ ಬೇಕು ಎಂದು ಕೇಳುತ್ತಿದ್ದರು.

ಕೊಡಗಿನ ತಲಕಾವೇರಿಯಲ್ಲಿ ಜಿಯೋ 4ಜಿ ಆರಂಭ, ಬೆಟ್ಟದ ತಪ್ಪಲಿನಲ್ಲೂ ನೆಟ್‌ವರ್ಕ್!

ಅಂತವರಿಗೆ ಅನುಕೂಲವಾಗಲೆಂದು ಇ-ಪ್ರಸಾದ ಸೇವೆ ಆರಂಭಿಸಿದ್ದೇವೆ. 300 ರೂಪಾಯಿಗೆ 100 ಗ್ರಾಂ ಪಂಚಕಚ್ಚಾಯ, 100 ಮಿಲಿ ಲೀಟರ್ ಕಾವೇರಿ ತೀರ್ಥ, ಅರ್ಚನೆ ಮಾಡಿದ ಕುಂಕುಮ ಮತ್ತು ಕಾವೇರಿ ಮಾತೆಯ ನನ್ನಿಧಿಯಲ್ಲಿಟ್ಟು ಪೂಜಿಸಿದ ಶ್ರಿಗಂಧವನ್ನು ಇ-ಪ್ರಸಾದದ ಮೂಲಕ ತಲುಪಿಸುತ್ತೇವೆ. ಪಂಚಕಚ್ಚಾಯವನ್ನು ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿಯೇ ಸಿದ್ದಗೊಳಿಸುತ್ತೇವೆ. ಕೊಡಗು ಜಿಲ್ಲೆಯ ಒಳಗಿನ ಬುಕ್ಕಿಂಗ್ ಆದಲ್ಲಿ ಎರಡು ದಿನಗಳಲ್ಲಿ ಪ್ರಸಾದ ತಲುಪುತ್ತದೆ. ಹೊರ ರಾಜ್ಯಗಳಿಂದ ಬುಕಿಂಗ್ ಆಗಿದ್ದರಲ್ಲಿ ನಾಲ್ಕು ದಿನಗಳಲ್ಲಿ ಪ್ರಸಾದ ತಲುಪಲಿದೆ ಎಂದಿದ್ದಾರೆ.

click me!