ಗುತ್ತಿಗೆದಾರರಿಂದ ಕೊಡಗು ಸಂತ್ರಸ್ತರಿಗೆ ಬೆಳಕು

By Web DeskFirst Published Aug 29, 2018, 5:59 PM IST
Highlights

ಕೊಡಗಿನ ದಾರುಣ ಸ್ಥಿತಿಯನ್ನು ಮಾಧ್ಯಮಗಳ ಮೂಲಕ ಕೇಳಿದ ತೀರ್ಥಹಳ್ಳಿಯ ವಿದ್ಯುತ್ ಗುತ್ತಿಗೆದಾರರಾದ ಎಚ್.ಆರ್. ಪೂರ್ಣೇಶ್(ಹೊಸಬೀಡಿನ ಎಸ್‌ಎಂಎಸ್ ಎಲೆಕ್ಟ್ರಿಕಲ್ಸ್) ಈ ಹಳ್ಳಿಗಳಿಗೆ ನೆರವು ನೀಡಲು ಮುಂದಾದರು. ಇವರಿಗೆ ಸಾಥ್ ನೀಡಿದವರು ಕಟ್ಟೆಹಕ್ಕಲಿನ ಸಾಯಿ ಎಲೆಕ್ಟ್ರಿಕಲ್ ಗುತ್ತಿಗೆದಾರರಾದ ಪ್ರದೀಪ್ ಮತ್ತು ಆರಗದ ವಿಷ್ಣು ಎಲೆಕ್ಟ್ರಿಲ್ಸ್‌ನ ವಿಷ್ಣುಮೂರ್ತಿ. ಈ ಮೂರು ಜನ ಸೇರಿ ತಮ್ಮ ಜೊತೆಗೆ 12 ಜನ ಕೆಲಸಗಾರರನ್ನು ಸೇರಿಸಿಕೊಂಡು, ಅಗತ್ಯ ಪರಿಕರಿಗಳೊಂದಿಗೆ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಮಾದಾಪರಕ್ಕೆ ತೆರಳಿ ಉಚಿತ ಸೇವೆ ನೀಡುತ್ತಿದ್ದಾರೆ.

ಶಿವಮೊಗ್ಗ[ಆ.29]: ವರುಣನ ಆರ್ಭಟಕ್ಕೆ ನಲುಗಿ ಕತ್ತಲ ನಾಡಾಗಿ ಪರಿವರ್ತನೆಗೊಂಡ ಕೊಡಗಿನ ಸಂತ್ರಸ್ತ ಹಳ್ಳಿಗಳಿಗೆ ಬೆಳಕು ನೀಡಲು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ವಿದ್ಯುತ್ ಗುತ್ತಿಗೆದಾರರ ತಂಡವೊಂದು ಉಚಿತ ಸೇವೆ ನೀಡಲು ಕೊಡಗಿಗೆ ತೆರಳಿದೆ. ಕಳೆದ ಎರಡು ದಿನಗಳಿಂದ ಎಡಬಿಡದೆ ಕೆಲಸದಲ್ಲಿ ತೊಡಗಿಕೊಂಡು ಹಳ್ಳಿಗಳನ್ನು ಬೆಳಗಿಸಲು ಶ್ರಮಿಸುತ್ತಿದೆ.

ಕೊಡಗಿನ ದಾರುಣ ಸ್ಥಿತಿಯನ್ನು ಮಾಧ್ಯಮಗಳ ಮೂಲಕ ಕೇಳಿದ ತೀರ್ಥಹಳ್ಳಿಯ ವಿದ್ಯುತ್ ಗುತ್ತಿಗೆದಾರರಾದ ಎಚ್.ಆರ್. ಪೂರ್ಣೇಶ್(ಹೊಸಬೀಡಿನ ಎಸ್‌ಎಂಎಸ್ ಎಲೆಕ್ಟ್ರಿಕಲ್ಸ್) ಈ ಹಳ್ಳಿಗಳಿಗೆ ನೆರವು ನೀಡಲು ಮುಂದಾದರು. ಇವರಿಗೆ ಸಾಥ್ ನೀಡಿದವರು ಕಟ್ಟೆಹಕ್ಕಲಿನ ಸಾಯಿ ಎಲೆಕ್ಟ್ರಿಕಲ್ ಗುತ್ತಿಗೆದಾರರಾದ ಪ್ರದೀಪ್ ಮತ್ತು ಆರಗದ ವಿಷ್ಣು ಎಲೆಕ್ಟ್ರಿಲ್ಸ್‌ನ ವಿಷ್ಣುಮೂರ್ತಿ. ಈ ಮೂರು ಜನ ಸೇರಿ ತಮ್ಮ ಜೊತೆಗೆ 12 ಜನ ಕೆಲಸಗಾರರನ್ನು ಸೇರಿಸಿಕೊಂಡು, ಅಗತ್ಯ ಪರಿಕರಿಗಳೊಂದಿಗೆ ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಮಾದಾಪರಕ್ಕೆ ತೆರಳಿ ಉಚಿತ ಸೇವೆ ನೀಡುತ್ತಿದ್ದಾರೆ.

ಜಿಟಿಜಿಟಿ ಮಳೆಯ ನಡುವೆಯೂ ಹಗಲು ರಾತ್ರಿ ಕೆಲಸ ಮಾಡುತ್ತಿದ್ದು, ಈಗಾಗಲೇ ಐದಾರು ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಿದ್ದೇವೆ ಎಂದು ಮಾದಾಪುರದಿಂದ ಪೂರ್ಣೇಶ್ ಅವರು ಕನ್ನಡಪ್ರಭಕ್ಕೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕಿರಣ್ ನಮಗೆ ಇಲ್ಲಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇಲ್ಲಿನ ಯಾವ ಹಳ್ಳಿಗಳಲ್ಲೂ ವಿದ್ಯುತ್ ಇದ್ದಂತೆ ಕಾಣುತ್ತಿಲ್ಲ. ವಿದ್ಯುತ್ ಕಂಬಗಳು ಸಾಲಾಗಿ ನೆಲಕ್ಕುರುಳಿವೆ. ತಂತಿಗಳು ತುಂಡಾಗಿ ನೆಲಕ್ಕೆ ಬಿದ್ದಿವೆ. ಇವುಗಳನ್ನು ಸರಿಪಡಿಸುವುದು ಸುಲಭದ ಕೆಲಸವಲ್ಲ. ನಾವು ಕಳೆದೆರಡು ದಿನಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಈಗಲೂ ಬೀಳುತ್ತಿರುವ ಮಳೆ ತೊಂದರೆ ನೀಡುತ್ತಿದೆ. ಚೆಸ್ಕಾಂ ಅವರು ವಿದ್ಯುತ್ ಕಂಬ ಮತ್ತು ತಂತಿ ನೀಡುತ್ತಿದ್ದು, ಉಳಿದ ಪರಿಕರಗಳನ್ನು ನಾವೇ ತಂದು ಬಳಸುತ್ತಿದ್ದೇವೆ. ಇಲ್ಲಿನ ವಾತಾವರಣ ಇನ್ನೂ ಕಠಿಣವಾಗಿಯೇ ಇದೆ. ನಾವು ತಿಳಿದುಕೊಂಡಿದ್ದಕ್ಕಿಂತ ಇಲ್ಲಿನ ಪರಿಸ್ಥಿತಿ ಭಯಾನಕವಾಗಿದೆ. ಸದ್ಯ ಇಲ್ಲಿನ ಗಣಪತಿ ದೇವಸ್ಥಾನದಲ್ಲಿ ನಾವು ಉಳಿದುಕೊಂಡಿದ್ದು, ಇನ್ನೂ ಎರಡು ಮೂರು ದಿನ ಅಥವಾ ಅಗತ್ಯವಿರುವಷ್ಟು ದಿನ ಕೆಲಸ ಮಾಡಿ ವಾಪಸ್ ಬರಲಿದ್ದೇವೆ. ಬೇರೆ ಕೆಲಸಗಳಿಗೆ ಇಲ್ಲಿ ಸ್ವಯಂ ಸೇವಕರಿದ್ದಾರೆ. ಆದರೆ, ವಿದ್ಯುತ್ ಪರಿಸ್ಥಿತಿ ಸುಧಾರಿಸಲು ಯಾರೂ ಇಲ್ಲ. ಹೀಗಾಗಿ, ನಾವು ಇಲ್ಲಿ ಸೇವೆ ಸಲ್ಲಿಸಲು ಬಂದಿರುವುದು ಜನರಿಗೆ ಖುಷಿ ತಂದಿದೆ ಎನ್ನುತ್ತಾರೆ ಪೂರ್ಣೇಶ್.

click me!