ಪ್ರವಾಹ ಎದುರಿಸಲು ಕೊಡಗು ಪೊಲೀಸರು ಸಜ್ಜು: ಹಾರಂಗಿ ಜಲಾಶಯದ ಆಳ ನೀರಿನಲ್ಲಿ ಕಟ್ಟುನಿಟ್ಟಿನ ತಾಲೀಮು

By Govindaraj SFirst Published Jun 2, 2024, 8:41 PM IST
Highlights

ಜಿಲ್ಲೆಯಲ್ಲಿ 2018 ರಂತೆ ಈ ಬಾರಿಯೂ ಪ್ರವಾಹ ಎದುರಾಗುವ ಸಾಧ್ಯತೆ ಇದೆ ಎನ್ನುವ ಸುಳಿವು ಸಿಕ್ಕಿದೆ. ಈ ಸುಳಿವು ಸಿಗುತ್ತಿದ್ದಂತೆ ಕೊಡಗು ಪೊಲೀಸರು ಕಾನೂನು ಸುವ್ಯವಸ್ಥೆ ರಕ್ಷಣೆ ಅಷ್ಟೇ ಅಲ್ಲ, ಪ್ರವಾಹ ಎದುರಾದರೆ ಅಲ್ಲಿಯೂ ಜನರ ಪ್ರಾಣ ರಕ್ಷಣೆಗೂ ಸಿದ್ಧವಾಗುತ್ತಿದ್ದಾರೆ. 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜೂ.02): ಜಿಲ್ಲೆಯಲ್ಲಿ 2018 ರಂತೆ ಈ ಬಾರಿಯೂ ಪ್ರವಾಹ ಎದುರಾಗುವ ಸಾಧ್ಯತೆ ಇದೆ ಎನ್ನುವ ಸುಳಿವು ಸಿಕ್ಕಿದೆ. ಈ ಸುಳಿವು ಸಿಗುತ್ತಿದ್ದಂತೆ ಕೊಡಗು ಪೊಲೀಸರು ಕಾನೂನು ಸುವ್ಯವಸ್ಥೆ ರಕ್ಷಣೆ ಅಷ್ಟೇ ಅಲ್ಲ, ಪ್ರವಾಹ ಎದುರಾದರೆ ಅಲ್ಲಿಯೂ ಜನರ ಪ್ರಾಣ ರಕ್ಷಣೆಗೂ ಸಿದ್ಧವಾಗುತ್ತಿದ್ದಾರೆ. ಹೌದು! ಕೊಡಗು ಜಿಲ್ಲೆಯಲ್ಲಿ ಪ್ರವಾಹ ಎದುರಾಗುವ ಸಾಧ್ಯತೆ ಇರುವುದರಿಂದ ಕೊಡಗು ಜಿಲ್ಲಾ ಪೊಲೀಸರು ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯದಲ್ಲಿ ಪ್ರವಾಹ ಅಥವಾ ನೀರಿನಲ್ಲಿ ಸಿಲುಕಿರುವವರನ್ನು ರಕ್ಷಿಸುವ ಸಲುವಾಗಿ ತಾಲೀಮು ನಡೆಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ನೇತೃತ್ವದಲ್ಲಿ 60 ಪೊಲೀಸರ ತಂಡ ತಾಲೀಮು ನಡೆಸಿದೆ. 

Latest Videos

ಕೊಡಗು ಜಿಲ್ಲೆಯಲ್ಲಿ 2018 ರಿಂದ ಭೂಕುಸಿತ ಮತ್ತು ಪ್ರವಾಹ ಎದುರಾಗಿದ್ದು ಗೊತ್ತೇ ಇದೆ. ಜೀವನದಿ ಕಾವೇರಿ ಉಕ್ಕಿ ಹರಿದ ಪರಿಣಾಮ ಮಡಿಕೇರಿ, ವಿರಾಜಪೇಟೆ ಹಾಗೂ ಕುಶಾಲನಗರ ತಾಲ್ಲೂಕುಗಳ ವ್ಯಾಪ್ತಿಯ 36 ಕ್ಕೂ ಹೆಚ್ಚು ಹಳ್ಳಿಗಳು ಪ್ರವಾಹದಲ್ಲಿ ಮುಳುಗಡೆಯಾಗಿದ್ದವು. ನೂರಾರು ಕುಟುಂಬಗಳ ಮನೆಗಳು ಪ್ರವಾಹದಲ್ಲಿ ತೇಲಿ ಹೋಗಿ ಜನರ ಬದುಕೇ ಕೊಚ್ಚಿ ಹೋಯಿತು. ಎಂದೂ ಕಂಡು ಕೇಳರಿಯದಂತಹ ರೀತಿಯಲ್ಲಿ ಕಾವೇರಿ ನದಿ ಪ್ರವಾಹ ರುದ್ರವಾತಾರದ ರೂಪ ತಾಳಿ ಹರಿದಿದ್ದರಿಂದ ಎಷ್ಟೋ ಜನರು ಈ ಪ್ರವಾಹದಲ್ಲಿ ಮನೆ ಮಠ ಅಷ್ಟೇ ಅಲ್ಲ ಪ್ರಾಣವನ್ನೂ ಕಳೆದುಕೊಳ್ಳಬೇಕಾಯಿತು. ಇದಕ್ಕೆ ಮುಖ್ಯ ಕಾರಣ ನಾಡನ್ನೇ ಸಮೃದ್ಧಗೊಳಿಸುವ ಕಾವೇರಿ ತವರು ಜಿಲ್ಲೆಯನ್ನು ಇಷ್ಟರ ಮಟ್ಟಿಗೆ ಕಾಡುತ್ತಾಳೆ ಎನ್ನುವ ಸಣ್ಣ ಅಂದಾಜು ಇರಲಿಲ್ಲ. 

ವಿಧಾನಪರಿಷತ್ ಸ್ಥಾನ: ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ದತ್ತಾತ್ರೇಯ ದರ್ಶನ ಪಡೆದ ಸಿ.ಟಿ.ರವಿ

ಜೊತೆಗೆ ಇಷ್ಟು ದೊಡ್ಡ ಪ್ರವಾಹ ಎದುರಾದಾಗ ರಕ್ಷಣಾ ಕಾರ್ಯಾಚರಣೆಗೆ ಅಗತ್ಯ ತರಬೇತಿಯ ಸಿಬ್ಬಂದಿ ಇಲ್ಲದೆ ಕಷ್ಟಕರವಾಗಿದ್ದರಿಂದ ಇಷ್ಟೊಂದು ಸಮಸ್ಯೆ ಎದುರಾಗಿತ್ತು. ಇದನ್ನು ಮನಗಂಡ ಕೊಡಗು ಪೊಲೀಸ್ ಇಲಾಖೆ 2020 ರಿಂದಲೂ ನಿರಂತರವಾಗಿ ಪ್ರವಾಹದಲ್ಲಿ ಜನರ ರಕ್ಷಣೆ, ಭೂಕುಸಿತವಾದಾಗ ಬೆಟ್ಟಗುಡ್ಡಗಳಲ್ಲಿ ಜನರ ರಕ್ಷಣೆಗೆ ಸಂಬಂಧಿಸಿದಂತೆ ತರಬೇತಿ ನಡೆಸುತ್ತಿದ್ದಾರೆ. ಈ ವರ್ಷವೂ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಪ್ರದೇಶಗಳಲ್ಲಿ ಪ್ರವಾಹ ಎದುರಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಈಗಾಗಲೇ ದೊರೆತ್ತಿರುವುದರಿಂದ ಅದಕ್ಕಾಗಿ ಪೊಲೀಸರು ಸಿದ್ಧರಾಗುತ್ತಿದ್ದಾರೆ. 

ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಹಾಗೂ ಕುಶಾಲನಗರ ಉಪವಿಭಾಗಗಳಲ್ಲಿ ತಲಾ 15 ಪೊಲೀಸರ 4 ತಂಡಗಳನ್ನು ಸಿದ್ಧಗೊಳಿಸಲಾಗಿದೆ. ಪ್ರತಿಯೊಬ್ಬರಿಗೂ ಪ್ರತಿಯೊಂದು ಕೆಲಸವೂ ಗೊತ್ತಿರುವಂತೆ ತರಬೇತಿ ನೀಡಲಾಗುತ್ತಿದೆ. ಸ್ವತಃ ಎಸ್ಪಿ ರಾಮರಾಜನ್ ಕೂಡ ಹಾರಂಗಿ ಜಲಾಶಯಕ್ಕೆ ಧುಮುಕಿ ಈಜಿದರು. ಜೊತೆಗೆ ಜಲಾಶಯದಲ್ಲಿ ಬಿದ್ದಿರುವವರನ್ನು ರಕ್ಷಿಸುವ ಕೆಲಸವನ್ನು ಮಾಡಿದರು. ಈ ಕುರಿತು ಮಾತನಾಡಿದ ಅವರು ನಮ್ಮ ಪೊಲೀಸ್ ಸಿಬ್ಬಂದಿ ಕನಿಷ್ಠ ಎರಡು ಕಿಲೋ ಮೀಟರ್ ದೂರದವರೆಗೆ ನೀರಿನಲ್ಲೇ ಈಜಿ ಜನರನ್ನು ರಕ್ಷಿಸುವಲ್ಲಿ ಸಮರ್ಥರಾಗುವಂತೆ ತರಬೇತಿ ನೀಡಲಾಗುತ್ತಿದೆ. 

ಹಗರಣಗಳಲ್ಲೇ ಮುಳುಗಿದ ಕಾಂಗ್ರೆಸ್ ಸರ್ಕಾರ: ಸಿ.ಪಿ.ಯೋಗೇಶ್ವರ್

ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಸಿಬ್ಬಂದಿ ಇರುತ್ತಾರೆ ಆದರೂ ನಾವೂ ಕೂಡ ತಕ್ಷಣವೇ ಜನರ ರಕ್ಷಣೆಗೆ ಮುಂದಾಗಬೇಕು ಎಂಬ ದೃಷ್ಟಿಯಿಂದ ಈ ತರಬೇತಿ ನಡೆಸುತ್ತಿದ್ದೇವೆ. ಕಳೆದ ವರ್ಷ ಬಂಡೆಗಳನ್ನು ಹತ್ತಿ ಇಳಿದು ಭೂಕುಸಿತದಲ್ಲಿ ಸಿಲುಕಿದರೆ ಅಂತಹವರನ್ನು ರಕ್ಷಣೆ ಮಾಡುವ ಕುರಿತು ತರಬೇತಿ ಪಡೆದಿದ್ದೆವು. ಜಲಾಶಯದಲ್ಲಿ 50 ರಿಂದ 80 ಅಡಿ ಆಳದ ನೀರು ಇದ್ದು ಇದರಲ್ಲಿ ತರಬೇತಿ ನಡೆಸಿದರೆ ಪ್ರವಾಹದಲ್ಲಿ ಜನರನ್ನು ರಕ್ಷಿಸಲು ಧೈರ್ಯ ಬರುತ್ತದೆ ಎಂದಿದ್ದಾರೆ. ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಈ ಬಾರಿಯೂ ಪ್ರವಾಹ ಎದುರಾಗುತ್ತದೆ ಎನ್ನುವುದು ಇಷ್ಟೆಲ್ಲಾ ತರಬೇತಿ ಮಾಡುವುದಕ್ಕೆ ಕಾರಣವಾಗಿರುವುದಂತು ಸತ್ಯ.

click me!