KLE ಶಾಲೆ ಉದ್ಘಾಟನೆ: ಡಾಟಾ ಬಳಕೆಯಲ್ಲಿ ನಾವೇ ನಂ.1: ಕೇಂದ್ರ ಸಚಿವ ಜೈಶಂಕರ್

By Kannadaprabha NewsFirst Published Feb 29, 2024, 8:50 PM IST
Highlights

ಕಳೆದ ಹತ್ತು ವರ್ಷಗಳ ಹಿಂದೆ ಭಾರತದ ಆರ್ಥಿಕವಾಗಿ 11ನೇ ಸ್ಥಾನದಲ್ಲಿದ್ದನ್ನು ಪ್ರಧಾನಿ ಮೋದಿಯವರು ಇಂದು ಆತ್ಮ ನಿರ್ಭರ ಯೋಜನೆಗಳಿಂದ 5ನೇ ಸ್ಥಾನವನ್ನು ಪಡೆದುಕೊಂಡು ಜಗತ್ತಿಗೆ ಒಂದು ಸಂದೇಶ ನೀಡಿದೆ ಎಂದು ಎಂದು ಕೇಂದ್ರ ವಿದೇಶಾಂಗ ಸಚಿವ ಪದ್ಮಶ್ರೀ ಡಾ.ಎಸ್.ಜೈಶಂಕರ್ ಹೇಳಿದರು. 

ಚಿಕ್ಕೋಡಿ (ಫೆ.29): ಕಳೆದ ಹತ್ತು ವರ್ಷಗಳ ಹಿಂದೆ ಭಾರತದ ಆರ್ಥಿಕವಾಗಿ 11ನೇ ಸ್ಥಾನದಲ್ಲಿದ್ದನ್ನು ಪ್ರಧಾನಿ ಮೋದಿಯವರು ಇಂದು ಆತ್ಮ ನಿರ್ಭರ ಯೋಜನೆಗಳಿಂದ 5ನೇ ಸ್ಥಾನವನ್ನು ಪಡೆದುಕೊಂಡು ಜಗತ್ತಿಗೆ ಒಂದು ಸಂದೇಶ ನೀಡಿದೆ ಎಂದು ಎಂದು ಕೇಂದ್ರ ವಿದೇಶಾಂಗ ಸಚಿವ ಪದ್ಮಶ್ರೀ ಡಾ.ಎಸ್.ಜೈಶಂಕರ್ ಹೇಳಿದರು. ಚಿಕ್ಕೋಡಿಯಲ್ಲಿ ಕೆಎಲ್‌ಇ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಕಳೆದೊಂದು ದಶಕದಲ್ಲಿ ಭಾರತವು ಐದನೇ ಆರ್ಥಿಕ ವಲಯವಾಗಿ ಬೆಳೆದು ನಿಂತಿದೆ. ಔದ್ಯಮಿಕವಾಗಿ, ಆರೋಗ್ಯ, ಶೈಕ್ಷಣಿಕವಾಗಿ ಭಾರತವು ಡಿಜಿಟಲ್ ರೂಪು ಪಡೆದುಕೊಂಡು ಪ್ರಕಾಶಿಸುತ್ತಿರುವುದಕ್ಕೆ ಮೋದಿಜಿಯವರ ಸಮರ್ಥ ನಾಯಕತ್ವದಿಂದ ಸಾಧ್ಯವಾಗಿದೆ ಎಂದರು.

ಕೋವಿಡ್ ಸಂದರ್ಭದಲ್ಲಿ ನಮ್ಮಲ್ಲಿ ಉತ್ತಮವಾದ ಆಸ್ಪತ್ರೆಗಳು ಇರಲಿಲ್ಲ. ಸೌಲಭ್ಯಗಳು ಇರಲಿಲ್ಲ. ಭಾರತ ಜಾಗತಿಕವಾಗಿ ಕೋವಿಡ್‌ನ್ನು ಎದುರಿಸುವುದು ದುಸ್ತರವೆಂಬುದು ಅನೇಕ ಪ್ರಗತಿಶೀಲದೇಶಗಳ ಅಂಬೋಣವಾಗಿತ್ತು. ಆದರೆ ಭಾರತ ಕೇವಲ ಒಂದುವರ್ಷದ ಅವಧಿಯಲ್ಲಿ ಎಲ್ಲರ ಊಹೆಗಳನ್ನು ಬದಲಾಯಿಸಿತು. ನೂರಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ಲಸಿಕೆಯನ್ನು ನೀಡಿದ ಹೆಮ್ಮೆ ಭಾರತದೇಶದ್ದು. ಇದೆಲ್ಲವೂ ಸಾಧ್ಯವಾಗಿದ್ದು ಮೋದಿಜಿಯವರ ದೂರದೃಷ್ಟಿ ಹಾಗೂ ನಾಯಕತ್ವದ ಗುಣದಿಂದ ಸಾದ್ಯವಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ಗೆ ದೇಶಕಿಂತ ದೇಶದ್ರೋಹಿಗಳೇ ಮೆಚ್ಚು: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

ವಿದೇಶಿಗರು ಭಾರತವನ್ನು ಮೊದಲನಂತೇ ನೋಡುವ ದೃಷ್ಟಿಕೋನ ಬದಲಾಗಿದ್ದು, ಒಂದು ಕಾಲದಲ್ಲಿ ದೇಶದಲ್ಲಿ 77 ಪಾಸ್‌ಪೋರ್ಟ್ ಕೇಂದ್ರಗಳು ಇದ್ದವು. ಇಂದು 527 ಕೇಂದ್ರಗಳು ಸೇವೆ ಸಲ್ಲಿಸುತ್ತಿದ್ದು, ತ್ವರಿತವಾಗಿ ಪಾಸ್‌ಪೋರ್ಟ್‌ಗಳನ್ನು ವಿತರಿಸುತ್ತಿದೆ ಎಂದರು. ಹೊಸ ಹೊಸ ಅನ್ವೇಷಣೆಗಳು, ಸ್ಟಾರ್ಟ್ಅಪ್‌ಗಳು, ಉದ್ಯೋಗ-ಶೈಕ್ಷಣಿಕ ಹೊಸ ಕೌಶಲಗಳನ್ನು ಹುಟ್ಟುಹಾಕಿ ಭಾರತವನ್ನು ಜಾಗತಿಕವಾಗಿ 3ನೇ ಶಕ್ತಿಶೀಲ ರಾಷ್ಟ್ರವನ್ನಾಗಿ ರೂಪಿಸುವುದು ಮೋದಿಜಿ ಅವರ ಕನಸಾಗಿದೆ ಎಂದು ಜೈಶಂಕರ ಹೇಳಿದರು.

ಕೆಎಲ್‌ಇ ಸಂಸ್ಥೆ ಅಗಾಧವಾಗಿ ಬೆಳೆದಿದೆ: ಕೇಂದ್ರ ಸಚಿವ ಡಾ.ಜೈಶಂಕರ ಅವರು ಮಾತನಾಡುತ್ತ, ಕೆಎಲ್‌ಇ ಸಂಸ್ಥೆಯು ಶಿಕ್ಷಣ ಆರೋಗ್ಯ ಸಂಶೋಧನಾ ಕ್ಷೇತ್ರದಲ್ಲಿ ಅಗಾಧವಾಗಿ ಸಾಧನೆ ಮಾಡಿದೆ. ಡಾ.ಪ್ರಭಾಕರ ಕೋರೆಯವರ ಹಾಗೂ ಅವರ ತಂಡದವರು ಚಿಕ್ಕೋಡಿಯನ್ನು ಬದಲಾಯಿಸಿದ್ದಾರೆ. ನಾನು 45 ವರ್ಷ ನಂತರ ಇಲ್ಲಿ ಬಂದಿದ್ದೇನೆ. ಸಂತೋಷವೆನಿಸುತ್ತಿದೆ. ಇಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಏನೂ ಇರಲಿಲ್ಲ. ಇಂದು ಚಿಕ್ಕೋಡಿ ಶೈಕ್ಷಣಿಕವಾಗಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಬೆಳೆದುನಿಂತಿದೆ. ಇದರ ಹೆಮ್ಮೆ ಮತ್ತೊಂದಿಲ್ಲ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ ಜೋಶಿ ಅವರು ಮಾತನಾಡಿ, ನಾನು ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿ. ಕೆಎಲ್‌ಇ ಕಾಲೇಜಿನ ಮೂಲಕ ಪದವಿಯನ್ನು ಪಡೆದು ಬೆಳೆದವನು. ಅಂದರೆ ಕೆಎಲ್‌ಇ ಸಂಸ್ಥೆಯು ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದರ ಫಲವಾಗಿ ಅಸಂಖ್ಯ ವಿದ್ಯಾರ್ಥಿಗಳ ಬದುಕನ್ನು ಅರಳಿಸಿತು. ಇಂದು ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ಪ್ರಾರಂಭಿಸಿ ಹೊಸ ಕ್ರಾಂತಿಯನ್ನು ಹುಟ್ಟುಹಾಕಿದೆ ಎಂದು ಹೇಳಿದರು. ಕೆಎಲ್‌ಇ ಸಂಸ್ಥೆಯು ಶಿಕ್ಷಣ-ಆರೋಗ್ಯ-ಸಂಶೋಧನೆಯ ಮೂಲಕ ಜಾಗತಿಕವಾಗಿ ವಿಸ್ತರಿಸಿದೆ. 

ಆಲೋಪತಿ-ಆಯುರ್ವೇದ-ಹೋಮಿಯೋಪಥಿ ಮೂರು ಚಿಕಿತ್ಸೆಗಳ ಮೂಲಕ 4500 ಹಾಸಿಗೆಗಳ ಬೃಹತ್ ಆರೋಗ್ಯಜಾಲವನ್ನು ಹೊಂದಿದೆ. ಬೆಳಗಾವಿಯಲ್ಲಿ 300 ಹಾಸಿಗೆಗಳ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಸಿದ್ದಗೊಂಡಿದೆ. ಮಾತ್ರವಲ್ಲದೆ ಮುಂಬರುವ ದಿನಗಳಲ್ಲಿ ಕೆಎಲ್‌ಇ ಒಲಂಪಿಕ್ಸ್‌ನಲ್ಲಿ ಸಾಧನೆಗೆ ಅಣಿಯಾಗಲಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಗೌರವವನ್ನು ಹೆಚ್ಚಿಸಿದ ಕೀರ್ತಿ ಪದ್ಮಶೀ ಡಾ.ಎಸ್. ಜೈಶಂಕರ ಅವರಿಗೆ ಸಲ್ಲುತ್ತದೆ. ಅವರು ವೃತ್ತಿ ಜೀವನವನ್ನು ಚಿಕ್ಕೋಡಿ ಎಸಿಯಾಗಿ ಪ್ರಾರಂಭಿಸಿರುವುದು ಸಂತೋಷವನ್ನುಂಟು ಮಾಡಿದೆ ಎಂದರು.

ಸಂಸದ ರಾಘವೇಂದ್ರ ಗೆಲ್ಲಿಸಿ, ಮೋದಿ ಕೈ ಬಲಪಡಿಸಬೇಕು: ಯಡಿಯೂರಪ್ಪ ಮನವಿ

ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಕೆಎಲ್‌ಇ ನಿರ್ದೇಶಕ ಡಾ.ವಿ.ಎಸ್.ಸಾಧುನವರ, ಚಿಕ್ಕೋಡಿ ಪುರಸಭೆ ಮಾಜಿ ಅಧ್ಯಕ್ಷ ಪ್ರವೀಣ ಕಾಂಬಳೆ, ಕೆಎಲ್‌ಇ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ, ಮಹಾಂತೇಶ ಕವಟಗಿಮಠ, ಬಸವರಾಜ ಪಾಟೀಲ, ಮಹೇಶ ಭಾತೆ, ಮಲ್ಲಿಕಾರ್ಜುನ ಕೋರೆ, ಭರತೇಶ ಬನವನೆ, ಜಗದೀಶ ಕವಟಗಿಮಠ, ಸುಭಾಸ ಕವಲಾಪೂರೆ ಉಪಸ್ಥಿತರಿದ್ದರು. ಡಾ.ಪ್ರಭಾಕರ ಕೋರೆಯವರು ಕೇಂದ್ರ ಸಚಿವ ಡಾ.ಎಸ್.ಜೈ ಶಂಕರ ಅವರಿಗೆ ಬಸವಣ್ಣನವರ ಬೆಳ್ಳಿಯ ಮೂರ್ತಿ ನೀಡಿ ಸತ್ಕರಿಸಿದರು. ಶಿಕ್ಷಕಿ ಜಿನಲ್ ಶಹಾ, ಗಂಗಾ ಅರಭಾವಿ ನಿರೂಪಿಸಿದರು. ಪ್ರಾಚಾರ್ಯ ಚೇತನ ಅಲವಾಡೆ ವಂದಿಸಿದರು.

click me!