'ಮಧು ಬಂಗಾರಪ್ಪಗೆ ಕಾಂಗ್ರೆಸ್‌ಗೆ ಸ್ವಾಗತ : ಆದರೆ ಮತ್ತೋರ್ವಗೆ ಪಕ್ಷದಲ್ಲಿ ಅವಕಾಶವಿಲ್ಲ'

By Suvarna NewsFirst Published Feb 23, 2021, 1:27 PM IST
Highlights

ಜೆಡಿಎಸ್ ನಾಯಕ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೊಳ್ಳುವ ವಿಚಾರ ಸಾಕಷ್ಟು ದಿನಗಳಿಂದಲೂ ಸದ್ದಾಗುತ್ತಿದ್ದು ಇದೀಗ ಕೈ ಮುಖಂಡರೋರ್ವರು ಮಧು ಬಂಗಾರಪ್ಪ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ. 

ಶಿವಮೊಗ್ಗ (ಫೆ.23) : ಆರ್‌ಎಸ್‌ಎಸ್‌ಮ ಚಿಂತನ ಗಂಗಾ ಪುಸ್ತಕದಲ್ಲಿ ಹಿಂದೂ ವಿರೋಧಿ ಆಕ್ಷೇಪಾರ್ಹ ವಿಷಯಗಳಿವೆ. ಇದರಿಂದ ಹಿಂದೂ ಸಮಾಜದ ಏಕತೆ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. 

ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಯತ್ನಾಳ್ ತಮಗೆ ಮುಸ್ಲಿಂ ಸಮುದಾಯದ ಓಟ್ ಬೇಕಿಲ್ಲ ಅವರ ಮನೆಗೆ ಹೋಗುವುದಿಲ್ಲ ಎನ್ನುತ್ತಾರೆ. ಮೀಸಲಾತಿ ಬಗ್ಗೆ ಯತ್ನಾಳ ಯಾರ ವಿರುದ್ಧ ಹೋರಾಟ ಮಾಡುತ್ತಾರೆ? ಬಿಜೆಪಿ ವಿರುದ್ಧವೇ ಹೋರಾಟ ನಡೆಸಿದ್ದಾರೆ ಎಂದರು. 

 ಈ ಮೊದಲು ಬಿಜೆಪಿಯವರು ಮುಸ್ಲಿಂ ಸಮುದಾಯದ ವಿರುದ್ಧ  ಹೋರಾಟ ನಡೆಸಿದ್ದರು. ಇದೀಗ ಹಿಂದೂ ಸಮಾಜದ ವಿರುದ್ಧವೇ ಮೀಸಲಾತಿ ಹೆಸರಲ್ಲಿ ಹೋರಾಟ ನಡೆಸಿದ್ದಾರೆ. ಕಲ್ಲು ಗಣಿಗಾರಿಕೆ ಗೆ ಅನುಮತಿ ನೀಡದಿದ್ದರೆ ಹೋರಾಟ ನಡೆಸುವುದಾಗಿ ಹೇಳುವ ಶಾಸಕ ಆರಗ ಜ್ಞಾನೇಂದ್ರ ಮೊದಲು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರತಿಭಟನೆ ನಡೆಸಲಿ ಎಂದರು. ಅಲ್ಲದೇ ಆರಗ ಜ್ಞಾನೇಂದ್ರ ತಮ್ಮದೇ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಾರೆ ಎಂದರೆ ಏನದು ಎಂದು ಪ್ರಶ್ನೆ ಮಾಡಿದರು?

JDSಗೆ ಬಿಗ್‌ ಶಾಕ್.. ಕಾಂಗ್ರೆಸ್‌ ಸೇರ್ಪಡೆಗೆ ಮುಂದಾದ ಯುವ ನಾಯಕ.. ಡಿಕೆಶಿ ಭೇಟಿ ...

ಮೋದಿ ಸರ್ಕಾರ ಇನ್ನೂ ನಾಲ್ಕು ವರ್ಷಗಳ ಕಾಲ ಮುಂದುವರಿದರೆ  ದೇಶದ 10 ಕೋಟಿ ಜನ ಡಕಾಯಿತರಾಗುತ್ತಾರೆ ಇಲ್ಲವೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ತೀರ್ಥಹಳ್ಳಿ ತಾಲ್ಲೂಕಿನ ಗ್ರಾಪಂ ಚುನಾವಣೆಯಲ್ಲಿ 5 ರಿಂದ 10 ಕೋಟಿ ರೂ. ಖರ್ಚು ಮಾಡುತ್ತಾರೆ ಎಂದರೇ ಅದಕ್ಕೆ ತನಿಖೆ ಬೇಡವೇ ಎಂದು ಕಿಮ್ಮನೆ ಪ್ರಶ್ನೆ ಮಾಡಿದರು.

ಅನಂತ ಕುಮಾರ್ ಹೆಗಡೆ, ಬಸವನ ಗೌಡ ಯತ್ನಾಳ ಮುಸ್ಲಿಮರ ಓಟ್ ಬೇಡ ಅಂದರೆ ಅದು ದೇಶದ್ರೋಹ ಆಗುವುದಿಲ್ಲ. ಅದೇ ಮುಸ್ಲಿಂ , ಕ್ರಿಶ್ಚಿಯನ್ ಧರ್ಮದವರು ಮಾತನಾಡಿದರೆ ಅದು ದೇಶದ್ರೋಹ ಆಗುತ್ತದೆ. 

ಈಗಾಗಲೇ ಮಧು ಬಂಗಾರಪ್ಪ ಜೆಡಿಎಸ್ ತೊರೆಯುವ ವಿಚಾರ ಚರ್ಚೆಯಾಗುತ್ತಿದ್ದು ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತ ಇದೆ. ಅದೇ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಂಜುನಾಥ ಗೌಡ ಕಾಂಗ್ರೆಸ್ ಪಕ್ಷಕ್ಕೆ ಬಂದರೇ ನನ್ನ ವಿರೋಧ ಇದೆ ಎಂದು ಕಿಮ್ಮನೆ ರತ್ನಾಕರ್ ಹೇಳಿದರು. 

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಬಹುಕೋಟಿ ಹಗರಣವನ್ನು ಸಿಬಿಐ ತನಿಖೆ ಗೆ ಕೊಡಲು ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಕಿಂಚಿತ್ತೂ ಇಷ್ಟವಿಲ್ಲವೆಂದು ರತ್ನಾಕರ್ ಅಸಮಾಧಾನ ಹೊರಹಾಕಿದರು.
 
ಕ್ವಾರಿ ಸ್ಫೋಟ ಸಿಬಿಐ ತನಿಖೆಯಾಗಲಿ : ಇನ್ನು  ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಸ್ಪೋಟ ಪ್ರಕರಣ ಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಘಟನೆಯಲ್ಲಿ ಮರಣ ಹೊಂದಿದ ಕಾರ್ಮಿಕರಿಗೆ ಪರಿಹಾರ ನೀಡಬೇಕು.  ಘಟನೆಯ ಕುರಿತು ವಿಧಾನ ಸಭಾ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಪ್ರಸ್ತಾಪಿಸಲಿದ್ದಾರೆ. ಸದನದ ಹೊರಗೆ ರಾಜ್ಯದಾದ್ಯಂತ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಲಿದೆ ಎಂದು ಕಿಮ್ಮನೆ ರತ್ನಾಕರ್ ಎಚ್ಚರಿಸಿದರು. 

click me!