
ಚಿಕ್ಕಮಗಳೂರು: ಜಿಲ್ಲೆಯ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಬಳಿ ಸಂಭವಿಸಿದ ಕೇರಳ ಮೂಲದ ಬಾಲಕಿ ಶ್ರೀನಂದಾ (15) ಪ್ರಕರಣದಲ್ಲಿ ಈಗ ಟ್ವಿಸ್ಟ್ ಸಿಕ್ಕಿದೆ. ಮಂಗಳವಾರ ಸಂಜೆ ನಾಪತ್ತೆಯಾದ ಬಾಲಕಿ ಮೂರು ದಿನಗಳ ಶೋಧ ಕಾರ್ಯಾಚರಣೆ ಬಳಿಕ ಶುಕ್ರವಾರ ಬೆಳಗ್ಗೆ ಆಕೆಯ ಶವ ಪತ್ತೆಯಾಗಿತ್ತು.
ಕೇರಳದ ನಿವಾಸಿಯಾಗಿರುವ ಶ್ರೀನಂದಾ ತನ್ನ ಕುಟುಂಬದವರೊಂದಿಗೆ ಪ್ರವಾಸಕ್ಕಾಗಿ ಬಂದಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿತ್ತು. ಮಂಗಳವಾರ ಸಂಜೆ ಮಾಣಿಕ್ಯಧಾರಾ ಜಲಪಾತದ ಸುತ್ತಮುತ್ತ ಕಾಣೆಯಾಗಿದ್ದ ಆಕೆಯನ್ನು ಹುಡುಕಲು ಪೊಲೀಸರು ಹಾಗೂ ಸ್ಥಳೀಯರು ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದರು. ಆದರೆ, ಮೂರು ದಿನಗಳ ನಂತರ ಆಕೆಯ ಮೃತದೇಹ ಪತ್ತೆಯಾಗಿರುವುದು ಕುಟುಂಬಸ್ಥರಿಗೆ ಆಘಾತ ತಂದಿದೆ.
ಪ್ರಾಥಮಿಕ ತನಿಖೆಯ ವೇಳೆ ಕೆಲವು ಮಹತ್ವದ ಸಂಗತಿಗಳು ಬೆಳಕಿಗೆ ಬಂದಿವೆ. ಶ್ರೀನಂದಾ ನಾಪತ್ತೆಯಾಗುವ ಮುನ್ನ ಸುಮಾರು 1000 ಸೆಕೆಂಡ್ಗಳ ಕಾಲ ಮೊಬೈಲ್ನಲ್ಲಿ ಮಾತನಾಡಿದ್ದಳು ಎಂಬುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ವಿಶೇಷವಾಗಿ, ಆಕೆ ತನ್ನ ಸ್ನೇಹಿತೆಯೊಂದಿಗೇ ಸುಮಾರು ಹದಿನೈದು ನಿಮಿಷಗಳ ಕಾಲ ಸಂಭಾಷಣೆ ನಡೆಸಿದ್ದಾಳೆ ಎಂಬ ಮಾಹಿತಿಯೂ ಹೊರಬಿದ್ದಿದೆ.
ಇದಲ್ಲದೆ, ಮೊಬೈಲ್ ಬಳಕೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ತಂದೆ ಆಕೆಯನ್ನು ಗದರಿಸಿದ್ದರೆಂಬ ಮಾಹಿತಿ ಕೂಡ ಕುಟುಂಬ ಮೂಲಗಳಿಂದ ಲಭ್ಯವಾಗಿದೆ. ಈ ಹಿನ್ನೆಲೆ, ತಂದೆಯ ಗದರಿಕೆಯಿಂದ ಮನಸ್ಸಿಗೆ ಬೇಸರಗೊಂಡು ಬಾಲಕಿ ಅತಿ ಎತ್ತರದ ಪ್ರದೇಶದಿಂದ ಹಾರಿ ಆತ್ಮ*ಹತ್ಯೆ ಮಾಡಿಕೊಂಡಿರಬಹುದೆಂಬ ಅನುಮಾನ ವ್ಯಕ್ತವಾಗುತ್ತಿದೆ. ಆದರೆ, ಈ ವಿಷಯವನ್ನು ಪೊಲೀಸರು ಇನ್ನಷ್ಟು ಪರಿಶೀಲಿಸುತ್ತಿದ್ದಾರೆ.
ಇನ್ನೊಂದೆಡೆ, ಬಾಲಕಿಯ ಸಾವಿನ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರಿಂದ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇಬ್ಬರು ತಜ್ಞ ವೈದ್ಯರಿಂದ ವಿಡಿಯೋ ದಾಖಲಾತಿಯೊಂದಿಗೆ ಪರಿಶೀಲನೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿನ ನಿಜವಾದ ಕಾರಣ ಸ್ಪಷ್ಟವಾಗಲಿದೆ. ಒಟ್ಟಿನಲ್ಲಿ, ಈ ಪ್ರಕರಣದಲ್ಲಿ ಹಲವು ಅನುಮಾನಾಸ್ಪದ ಅಂಶಗಳು ಇದ್ದು, ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ತನಿಖೆಯ ದಿಕ್ಕು ಬದಲಾಗುವ ಸಾಧ್ಯತೆಯಿದೆ.
ಜಲಪಾತದ ಬಳಿಯ 2 ಸಾವಿರ ಅಡಿ ಪ್ರಪಾತದಲ್ಲಿ ಶ್ರೀನಂದಾ ಮೃತದೇಹ ಪತ್ತೆಯಾಗಿದೆ. ಕೇರಳದಿಂದ ಚಿಕ್ಕಮಗಳೂರಿಗೆ ಆಗಮಿಸಿದ್ದ 40 ಜನರ ಪ್ರವಾಸಿ ತಂಡದಲ್ಲಿ ಶ್ರೀನಂದಾ ಕೂಡ ಇದ್ದರು. ಇನಾಮ್ ದತ್ತಾತ್ರೇಯ ಪೀಠ ಹಾಗೂ ಮಾಣಿಕ್ಯಧಾರಕ್ಕೆ ಮಂಗಳವಾರ ಭೇಟಿ ನೀಡಿದ್ದಾಗ ಸಂಜೆ 5.30ರ ವೇಳೆಗೆ ಬಾಲಕಿ ಹಠಾತ್ತಾಗಿ ನಾಪತ್ತೆಯಾಗಿದ್ದಳು.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳ ಸೇರಿದಂತೆ ಸುತ್ತಮುತ್ತ ನಾಪತ್ತೆಯಾಗಿದ್ದ ಬಾಲಕಿ ಪತ್ತೆಗಾಗಿ ಪೊಲೀಸರ ತಂಡ ಕಾರ್ಯಾಚರಣೆ ಆರಂಭಿಸಿತ್ತು. ಇವರೊಂದಿಗೆ ಎನ್ಡಿಆರ್ಎಫ್, ಅರಣ್ಯ ಇಲಾಖೆ ಮತ್ತು ಪೊಲೀಸ್ ತಂಡಗಳ ಸೇರಿ 3 ದಿನಗಳ ತೀವ್ರ ಶೋಧದ ನಂತರ ಶುಕ್ರವಾರ ಮೃತದೇಹ ಪತ್ತೆಯಾಗಿದೆ. ಶೋಲಾ ಅರಣ್ಯ ಪ್ರದೇಶದಲ್ಲಿ ಕಡಿದಾದ ಕಣಿವೆ, ಪ್ರಪಾತಗಳು ಇದ್ದಿದ್ದರಿಂದ ಡ್ರೋನ್, ಥರ್ಮಲ್ ಕ್ಯಾಮೆರಾಗಳನ್ನು ಶೋಧ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಶುಕ್ರವಾರ ಮಾಣಿಕ್ಯಧಾರದ ಅತ್ಯಂತ ಆಳವಾದ ಪ್ರಪಾತದ ಕೆಳಗೆ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಾಲಕಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾಳೆಯೇ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಮಾಣಿಕ್ಯಧಾರ ಜಲಪಾತದಿಂದ ಕೇವಲ ಕಾಲು ಕಿಲೋಮೀಟರ್ ದೂರದಲ್ಲೇ ಶ್ರೀನಂದಾ ಶವ ಸಿಕ್ಕಿದೆ. ಶ್ರೀನಂದಾ ನಾಪತ್ತೆಯಾದ ಮೊದಲ ದಿನವೇ ಪೊಲೀಸ್ ಸಿಬ್ಬಂದಿ ಈ ಭಾಗದಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಪ್ರಪಾತದ ತಳಭಾಗ ಗಮನಿಸಿರಲಿಲ್ಲ. ಮೊದಲ ದಿನ ಕಾರ್ಯಾಚರಣೆ ನಡೆಸಿದ ಪೊಲೀಸರು 50 ಅಡಿ ಮುಂದೆ ಹೋಗಿದ್ದರೂ ಅಂದೇ ಶವ ಪತ್ತೆಯಾಗುತ್ತಿತ್ತು. ಒಂದು ವೇಳೆ ಶ್ರೀನಂದಾ ಪ್ರಪಾತಕ್ಕೆ ಬಿದ್ದಿದ್ದರೂ ಅಷ್ಟು ಆಳಕ್ಕೆ ಬೀಳಲು ಸಾಧ್ಯವಿಲ್ಲ ಎಂದು ವಾಪಸ್ ಆಗಿದ್ದರು.
ಚಿಕ್ಕಮಗಳೂರು ನಗರದ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಸಂಜೆ ಶವ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಯಿತು. ಇಬ್ಬರು ತಜ್ಞ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸಾಮಾನ್ಯವಾಗಿ ಒಬ್ಬರು ವೈದ್ಯರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸುತ್ತಾರೆ. ಈ ಪ್ರಕರಣದಲ್ಲಿ ಪೊಲೀಸರ ಮನವಿ ಮೇರೆಗೆ ವೈದ್ಯರಾದ ಲೋಹಿತ್ ಹಾಗೂ ಜಯಲಕ್ಷ್ಮಿ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.