ವಿಧಾನಸೌಧದ ಮುಂಭಾಗದಲ್ಲೂ ಕೆಂಪೇಗೌಡರ ಪ್ರತಿಮೆ ನಿರ್ಮಾಣ: ಸಚಿವ ಅಶ್ವತ್ಥ ನಾರಾ​ಯಣ

By Kannadaprabha NewsFirst Published Nov 21, 2022, 2:00 AM IST
Highlights

ಕೆಂಪೇಗೌಡರು ಒಂದು ವರ್ಗಕ್ಕೆ ಸೀಮಿತರಾಗಿರಲಿಲ್ಲ, ಅವರು ನಿರ್ಮಾಣ ಮಾಡಿದ ಬೆಂಗಳೂರು ಇಂದು ವಿಶ್ವ ಖ್ಯಾತಿಯನ್ನು ಪಡೆದಿದ್ದು, ಮುಂಬೈ ದೆಹಲಿಯನ್ನು ಮೀರಿಸುವಂತಹ ನಗರವಾಗಿ ಬೆಳೆದಿದೆ: ಅಶ್ವತ್ಥ ನಾರಾ​ಯಣ

ಮಾಗಡಿ(ನ.21): ವಿಧಾನಸೌಧದ ಮುಂಭಾಗದಲ್ಲಿಯೂ ​ಶೀ​ಘ್ರ​ದಲ್ಲೇ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥ ನಾರಾಯಣ ಹೇಳಿದರು. ಪಟ್ಟಣದ ಆರ್‌ .ಆರ್‌ ಪ್ಯಾಲೇಸ್‌ನಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪ್ರಗತಿಯ ಮತ್ತು ಸಮೃದ್ಧಿಯ ಸಂಕೇತವಾಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೃಹತ್‌ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಇನ್ನೂ ವಿಧಾನಸೌಧದ ಮುಂಭಾಗದಲ್ಲೂ ಕೂಡ ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಮುಖ್ಯಮಂತ್ರಿಗಳು ಭೂಮಿ ಪೂಜೆ ನೆರವೇರಿಸಿ ಕೆಂಪೇಗೌಡರ ಜನ್ಮದಿನವಾ​ದ ಜೂ. 27ರಂದು ಲೋಕಾರ್ಪಣೆ ಮಾಡಲಾಗುವುದು ಎಂದರು.

ವಿಮಾನ ನಿಲ್ದಾಣದಲ್ಲಿ ಪ್ರತಿಮೆ ನಿರ್ಮಾಣ ಮಾಡುವ ಮೂಲಕ ಯಾವ ಸರ್ಕಾರವೂ ಮಾಡದಂತಹ ಸಾಧನೆಯನ್ನು ಮಾಡುವುದು ದೊಡ್ಡ ಸಾಹಸವಾಗಿತ್ತು. 25 ಎಕರೆ ಜಾಗವನ್ನು ಮೀಸಲಿಟ್ಟು ಕೆಂಪೇಗೌಡರ ಹೆಸರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಲಾಗಿದೆ. ಕರ್ನಾಟಕದ ವಿವಿಧ ಪುಣ್ಯಕ್ಷೇತ್ರಗಳಿಂದ ಮೃತ್ತಿಕೆ ಸಂಗ್ರಹಣೆ ಮಾಡಲು 21 ಕೆಂಪೇಗೌಡರ ರಥ ಸಿದ್ಧಪಡಿಸಿ 22 ಕಿ.ಮೀ ಉದ್ದಗಲ ಸಂಚರಿಸಿ 17 ದಿನಗಳ ಕಾಲ 24 ಸಾವಿರ ಸ್ಥಳಗಳಿಂದ ಪವಿತ್ರ ಮಣ್ಣನ್ನು ಸಂಗ್ರಹಿಸಿ ದನ್ನು ಕೆಂಪೇಗೌಡರ ಪ್ರತಿಮೆ ಬಳಿ ನಾಲ್ಕು ಗೋಪುರಗಳ ಬಳಿ ಸಂಗ್ರಹಣೆ ಮಾಡಿ ಪ್ರತಿಮೆಗೆ ಕರ್ನಾಟಕದ ಪ್ರತಿ ಭಾಗದ ಸ್ಪರ್ಶವನ್ನು ಮಾಡಿಸುವ ಕೆಲಸವನ್ನು ಮಾಡಿದ್ದೇವೆ ಎಂದು ಹೇಳಿ​ದರು.

ರಾಮ​ನ​ಗರ: ರಾಜೀವ್‌ ಗಾಂಧಿ ಆರೋಗ್ಯ ವಿವಿ ಕನ​ಸಿಗೆ ಮತ್ತೆ ಜೀವ..!

ಕೆಂಪೇಗೌಡರು ಒಂದು ವರ್ಗಕ್ಕೆ ಸೀಮಿತರಾಗಿರಲಿಲ್ಲ, ಅವರು ನಿರ್ಮಾಣ ಮಾಡಿದ ಬೆಂಗಳೂರು ಇಂದು ವಿಶ್ವ ಖ್ಯಾತಿಯನ್ನು ಪಡೆದಿದ್ದು, ಮುಂಬೈ ದೆಹಲಿಯನ್ನು ಮೀರಿಸುವಂತಹ ನಗರವಾಗಿ ಬೆಳೆದಿದೆ. ಇನ್ನು 25 ವರ್ಷಗಳಲ್ಲಿ ವಿಶ್ವಕ್ಕೆ ನಂಬರ್‌ ಒನ್‌ ನಗರವಾಗಿ ಬೆಂಗಳೂರು ರೂಪುಗೊಳ್ಳಲಿದೆ ಎಂದು ತಿಳಿಸಿದರು.

ಕೆಂಪೇಗೌಡರ ಹೆಸರು ಹೇಳಿ ಶುಭ ಕಾರ್ಯ ಮಾಡಿ: 

ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ನಿರ್ಮಾಣವಾಗಿದ್ದು ಸಾರ್ವಜನಿಕರು ಯಾವುದೇ ಶುಭ ಸಮಾರಂಭ ಮಾಡುವ ಮುನ್ನ ಕೆಂಪೇಗೌಡರ ಆಶೀರ್ವಾದ ಪಡೆದು ಕಾರ್ಯವನ್ನು ಆರಂಭಿಸಿ ಎಲ್ಲಾ ಕಾರ್ಯವು ಶುಭವಾಗಿ ನಡೆಯುತ್ತದೆ ಎಂದು ಹೇಳಿದರು.

ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷ ಎ.ಎಚ್‌. ಬಸವರಾಜು ಮಾತನಾಡಿ, ಕೆಂಪೇಗೌಡರು ಐಕ್ಯವಾದ ಸ್ಥಳಕ್ಕೆ ಕಾಂಗ್ರೆಸ್‌ ಪಕ್ಷದ ನಾಯಕರು ಬರಲು ಹಿಂದೇಟು ಹಾಕಿದರು. ವಿರೋಧ ಪಕ್ಷದಲ್ಲೇ ಇದ್ದುಕೊಂಡು ಪ್ರಾಧಿಕಾರ ರಚನೆಗೆ ಬಿಜೆಪಿಯ ಪಾತ್ರ ಮಹತ್ವದ್ದಾಗಿತ್ತು. ಈಗ ಕೆಂಪೇಗೌಡರ ಸಮಾ​ಧಿ ಅಭಿವೃದ್ಧಿ ಆಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಯಲ್ಲಿ ಕಡ್ಡಾಯವಾಗಿ ಕೆಂಪೇಗೌಡರ ಭಾವಚಿತ್ರ ಹಾಕುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ಕೊಡಬೇಕೆಂದು ಮನವಿ ಮಾಡಿದರು. ಜೊತೆಗೆ ಮಾಗಡಿಯ ಹೆಬ್ಬಾಗಿಲನ್ನು ಅಭಿವೃದ್ಧಿಪಡಿಸಬೇಕೆಂದು ಮನವಿ ಮಾಡಿದರು.

ವಿಧಾನ ಪರಿಷತ್‌ ಸದಸ್ಯ ಅ. ದೇವೇಗೌಡ ಮಾತನಾಡಿ, ಪ್ರತಿಮೆ ನಿರ್ಮಾಣಕ್ಕೆ ಶ್ರಮಿಸಿದ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೊಡ್ಡ ಮಟ್ಟದಲ್ಲಿ ಅಭಿನಂದನಾ ಸಮಾರಂಭ ನಡೆಸಬೇಕಾಗಿತ್ತು. ತರಾತುರಿಯಲ್ಲಿ ಸಮಾರಂಭ ಮಾಡಿದ್ದು, ಮುಂದೆ ಮುಖ್ಯಮಂತ್ರಿಗಳಾಗುವ ಎಲ್ಲಾ ಯೋಗವು ಡಾ. ಅಶ್ವತ್ಥ ನಾರಾ​ಯಣ ಅವ​ರಿಗೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದ ರೂವಾರಿ ಬಿಜೆಪಿ ಯುವ ಮುಖಂಡ ಪ್ರಸಾದ್‌ ಗೌಡ ಮಾತನಾಡಿ, ಕೆಂಪೇಗೌಡರ ಪ್ರತಿಮೆ ನಿರ್ಮಾಣದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಡಾ. ಅಶ್ವತ್ಥ ನಾರಾಯಣ ಅವರಿಗೆ ತಾಲೂಕು ವತಿಯಿಂದ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

ಚುನಾವಣಾ ಆಯೋಗದ ಮೇಲೂ ಹಿಡಿತ ಸಾಧಿಸಲು ಹೊರಟ ಬಿಜೆಪಿ: ಡಿ.ಕೆ.​ಸು​ರೇಶ್‌

ತಾಲೂಕು ವತಿಯಿಂದ ಡಾ.ಅಶ್ವತ್ಥ ನಾರಾ​ಯಣ ಅವ​ರಿಗೆ ಸಮಾಜ ಸೇವಕ ಕೆ ಬಾಗೇಗೌಡ ಬೆಳ್ಳಿ ಖಡ್ಗ ಹಾಗೂ ಪ್ರಸಾದ್‌ ಗೌಡ ಬೆಳ್ಳಿ ಗದೆ ನೀಡಿ ಸನ್ಮಾನಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಲೂಕು ಅಧ್ಯಕ್ಷ ಧನಂಜಯ್ಯ, ಮುಖಂಡರಾದ ಪ್ರೊ.ಮುನಿರಾಜಪ್ಪ, ನಟರಾಜು, ಕೆಂಪೇಗೌಡ, ಪ್ರೊ. ನಂಜುಂಡಯ್ಯ, ರಾಜೇಶ್‌, ಧನಂಜಯ್ಯ, ಚಿಕ್ಕಕಲ್ಯಾ ಶ್ರೀಧರ್‌ , ಪುರಸಭಾ ಸದಸ್ಯ ಭಾಗ್ಯಮ್ಮ, ತಗ್ಗಿಕುಪ್ಪೆ ರಾಮು, ಶಿವಣ್ಣ, ಶಂಕರ್‌, ಭಾಸ್ಕರ್‌ ಮತ್ತಿ​ತ​ರರು ಉಪ​ಸ್ಥಿ​ತ​ರಿ​ದ್ದರು.

ಅಶ್ವತ್ಥ ನಾರಾ​ಯ​ಣ​ರಿಗೆ ಬೆಳ್ಳಿ ಗದೆ - ಖಡ್ಗ ಅರ್ಪಣೆ

ಮಾಗಡಿ: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅವರಣದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಸ್ಥಾಪಿಸಲು ಶ್ರಮಿಸಿದ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರಿಗೆ ಭಾನುವಾರ ಜನಾಭಿನಂದನೆಯ ಗೌರವ ಸಲ್ಲಿಸಲಾಯಿತು. ಕೆಂಪೇಗೌಡ ಸಂಘಗಳ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಸಚಿವರಿಗೆ ಪುಷ್ಪವೃಷ್ಟಿ, ಸೇಬಿನ ಬೃಹತ್‌ ಹಾರ ಮತ್ತು ಬೆಳ್ಳಿಯ ಗದೆಯನ್ನು ಪ್ರೀತಿಯಿಂದ ಅರ್ಪಿಸಲಾಯಿತು. ತಮ್ಮ ತವರೂರಿನ ಜನರ ಈ ಪ್ರೀತಿ-ಅಭಿಮಾನಗಳಲ್ಲಿ ಸಚಿವರು ಮಿಂದೆದ್ದರು.
 

click me!