ಕಸಾಪ ಸತತ ಪರಿಶ್ರಮದಿಂದ ಪಾವಗಡ ಕನ್ನಡಮಯ: ಶಾಸಕ

By Kannadaprabha NewsFirst Published Mar 19, 2023, 5:06 AM IST
Highlights

ಕಸಾಪ ಹಾಗೂ ಇತರೆ ಕನ್ನಡಪರ ಸಂಘಟನೆಗಳ ಸತತ ಪರಿಶ್ರಮದಿಂದ ಗಡಿಭಾಗದ ತಾಲೂಕಿನಲ್ಲಿ ಕನ್ನಡದ ಕಂಪು ಹರಡಲು ಸಾಧ್ಯವಾಗಿದ್ದು, ಇಂತಹ ಕನ್ನಡ ಪರ ಸಂಘಟನೆಗಳಿಗೆ ಸರ್ಕಾರ ಹೆಚ್ಚು ಪ್ರೋತ್ಸಾಹಿಸಿ ಉತ್ತೇಜನ ನೀಡಬೇಕು ಎಂದು ಶಾಸಕ ವೆಂಕಟರಮಣಪ್ಪ ಹೇಳಿದರು.

  ಪಾವಗಡ :  ಕಸಾಪ ಹಾಗೂ ಇತರೆ ಕನ್ನಡಪರ ಸಂಘಟನೆಗಳ ಸತತ ಪರಿಶ್ರಮದಿಂದ ಗಡಿಭಾಗದ ತಾಲೂಕಿನಲ್ಲಿ ಕನ್ನಡದ ಕಂಪು ಹರಡಲು ಸಾಧ್ಯವಾಗಿದ್ದು, ಇಂತಹ ಕನ್ನಡ ಪರ ಸಂಘಟನೆಗಳಿಗೆ ಸರ್ಕಾರ ಹೆಚ್ಚು ಪ್ರೋತ್ಸಾಹಿಸಿ ಉತ್ತೇಜನ ನೀಡಬೇಕು ಎಂದು ಶಾಸಕ ವೆಂಕಟರಮಣಪ್ಪ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಶನಿವಾರ ಪಟ್ಟಣದ ಎಸ್‌ಎಸ್‌ಕೆ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾದಂಬರಿಕಾರ ಡಾ.ಕುಂ.ವೀರಭದ್ರಯ್ಯ ಮಾತನಾಡಿ, ಕನ್ನಡದ ಹಿರಿಮೆ ಹಾಗೂ ಭಾಷೆಯ ಮಹತ್ವ ಕುರಿತು ವಿವರಿಸಿದರು.ಗಡಿ ಭಾಗದಲ್ಲಿ ಕನ್ನಡವನ್ನು ಎತ್ತರಕ್ಕೆ ಕೊಂಡೊಯ್ದು ಇಲ್ಲಿನ ಕಸಾಪ ಸೇವೆ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.

ಸಮ್ಮೇಳನಾಧ್ಯಕ್ಷ ಹ.ರಾಮಚಂದ್ರಪ್ಪ ಮಾತನಾಡಿ, ಆರು ವರ್ಷಗಳ ಕಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಆರು ವರ್ಷಗಳ ಕಾಲ ಗಡಿನಾಡು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕನ್ನಡ ಸೇವೆ ಮಾಡಿದ ತೃಪ್ತಿ ನನ್ನಗಿದೆ. ತೆಲುಗುಮಯವಾಗಿದ್ದ ಗಡಿಭಾಗದ ಪಾವಗಡ ತಾಲೂಕಿನಲ್ಲಿ ಕನ್ನಡದ ಕಂಪು ಹರಡಲು ಸಾಹಿತ್ಯ ಪರಿಷತ್‌ನ ಶ್ರಮ ಹೆಚ್ಚಿದೆ. ನಿಮ್ಮಲ್ಲರ ಸಹಕಾರದ ಮೇರೆಗೆ ತಾಲೂಕು ಕನ್ನಡಮಯವಾಗಿದ್ದು ನನ್ನನ್ನು ಗುರ್ತಿಸಿ ಸಮ್ಮೇಳನಾಧ್ಯಕರನ್ನಾಗಿ ಆಯ್ಕೆ ಮಾಡಿ ಸನ್ಮಾನಿಸಿ ಗೌರವಿಸಿದ ಇಲ್ಲಿನ ಎಲ್ಲಾ ಕಸಾಪ ಪದಾಧಿಕಾರಿ ಮತ್ತು ಕನ್ನಡಾಭಿಮಾನಿಗಳಿಗೆ ಅಬಾರಿಯಾಗಿದ್ದೇನೆ ಎಂದರು.

ಸಮ್ಮೇಳನದ ಭಾಗವಾಗಿ ಪುರ ಮೆರವಣಿಗೆ, ಎರಡು ವಿಚಾರಗೋಷ್ಠಿಗಳು, ಒಂದು ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಮತ್ತು ಸಂಜೆ ಸಮಾರೋಪ ಸಮಾರಂಭ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ನೆರೆವೇರಿಸಲಾಯಿತು.

ಸಮಾರಂಭದ ಲಾಂಚನವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್‌.ಸಿದ್ದಲಿಂಗಪ್ಪ ಅನಾವರಣಗೊಳಿಸಿದ್ದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ವಿ.ಆರ್‌.ಚಲವರಾಜನ್‌,ಧ್ವಜಾ ಹಸ್ತಾಂತರಿಸಿದರು. ಸಮ್ಮೇಳನಾಧ್ಯಕ್ಷ ಹ.ರಾಮಚಂದ್ರಪ್ಪ ಧ್ವಜಾ ಸ್ವೀಕಾರ ನೆರವೇರಿಸಿದ್ದು ರಾಜ್ಯ ಕಸಾಪ ಗೌರವಾಧ್ಯಕ್ಷ ನೇ.ಭ.ರಾಮಲಿಂಗಶೆಟ್ಟಿಕೃತಿ ಬಿಡುಗಡೆ ಮತ್ತು ತಾಲೂಕು ಕಸಾಪ ಅಧ್ಯಕ್ಷ ಕಟ್ಟಾನರಸಿಂಹಮೂರ್ತಿ ಆಶಯನುಡಿಗಳನ್ನಾಡಿದರು.

ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಎಚ್‌.ರಾಮಾಂಜಿನೇಯ,ಎಸ್‌ಎಸ್‌ಕೆ ಸಂಘದ ಅಧ್ಯಕ್ಷ ಕೆ.ವಿ.ಶ್ರೀನಿವಾಸ್‌,ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ,ಜಿ.ವೆಂಕಟರಾಮಯ್ಯ, ರೊಪ್ಪ ಗ್ರಾಪಂ ಅಧ್ಯಕ್ಷರಾದ ಗೀತಾ ಸೊಗಡು ವೆಂಕಟೇಶ್‌, ನಿವೃತ್ತ ಉಪಕಾರ್ಯದರ್ಶಿ ಎಚ್‌.ವಿ.ರಾಮಚಂದ್ರರಾವ್‌,ಹಿರಿಯ ಜಾನಪದ ಸಾಹಿತಿ ಸಣ್ಣನಾಗಪ್ಪ, ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಆರ್‌.ಟಿ.ಖಾನ್‌, ತಾಪಂ ಮಾಜಿ ಅಧ್ಯಕ್ಷ ಸೊಗಡು ವೆಂಕಟೇಶ್‌,ಕೆ.ಎಂ.ಪ್ರಭಾಕರ್‌, ಕಲಾವಿದ ಕರಿಯಮ್ಮನಪಾಳ್ಯ ಆರ್‌.ಎನ್‌.ಲಿಂಗಣ್ಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಎನ್‌.ಶ್ರೀಧರ್‌, ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ಕೆ.ಒ.ಮಾರಪ್ಪ, ನಾಗರಾಜ್‌, ಐ.ಎ.ನಾರಾಯಣಪ್ಪ ಇತರೆ ಗಣ್ಯರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು.

‘ಕನ್ನಡ ಕಟ್ಟುವ ಕಾರ‍್ಯ ಹೆಚ್ಚು ನಡೆಯಲಿ’

ಪಾವಗಡ ತಾಲೂಕು ತೆಲುಗುಮಯವಾಗಿತ್ತು. ಇಂತಹ ಪ್ರದೇಶದಲ್ಲಿ ಸತತ ಹೋರಾಟ ಮತ್ತು ಕನ್ನಡಪರ ಕಾರ್ಯಕ್ರಮಗಳ ಹಿನ್ನಲೆಯಲ್ಲಿ ಇತ್ತೀಚೆಗೆ ತೆಲುಗಿನ ಪ್ರಭಾವ ರಡಿಮೆ ಆಗಿದೆ. ತಾಲೂಕಿನಲ್ಲಿ ಕನ್ನಡದ ಮಹತ್ವ ಇದರ ಕಂಪು ಹರಡಿದ ಕೀರ್ತಿ ಕಸಾಪಗೆ ಸಲ್ಲಬೇಕಿದೆ. ನಗರ ಹಾಗೂ ಗ್ರಾಮೀಣ ಮಟ್ಟದಲ್ಲಿ ಕನ್ನಡ ಕಟ್ಟುವ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಇಂತಹ ಕಾರ್ಯಕ್ರಮಗಳಿಗೆ ಸರ್ಕಾರದ ಪ್ರೋತ್ಸಾಹ ಅಗತ್ಯವಾಗಿದೆ. ಕನ್ನಡಪರ ಕಾರ್ಯಕ್ರಮಗಳಿಗೆ ಸದಾ ಬೆಂಬಲ ಹಾಗೂ ಪ್ರೋತ್ಸಾಹ ನೀಡುವ ಭರವಸೆ ವ್ಯಕ್ತಪಡಿಸಿದ ಶಾಸಕ ವೆಂಕಟ ರಮಣಪ್ಪ ಅವರು ಕನ್ನಡ ಭಾಷೆಯ ವಿಸ್ತಾರಕ್ಕೆ ಶ್ರಮಿಸಿದ ಹಿರಿಯರಾದ ಹ.ರಾಮಚಂದ್ರಪ್ಪ, ಇತರರ ಸೇವೆಯ ಬಗ್ಗೆ ಸ್ಮರಿಸಿ ಶ್ಲಾಘನೆ ವ್ಯಕ್ತಪಡಿಸಿದರು.

click me!