ಮಧ್ಯವರ್ತಿಗಳಿಲ್ಲದೆ ಫಲಾನುಭವಿಗೆ ನೇರ ಸೌಲಭ್ಯ

By Kannadaprabha NewsFirst Published Mar 19, 2023, 4:54 AM IST
Highlights

  ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮದಿಂದ ಸರ್ಕಾರದ ಯೋಜನೆಗಳು ಯಾವುದೇ ಮಧ್ಯವರ್ತಿಗಳಿಂದ ತಲುಪದೆ, ನೇರವಾಗಿ ಫಲನುಭವಿಗಳಿಗೆ ತಲುಪಿ ಯೋಜನೆ ಪ್ರಯೋಜನಾಕಾರಿಯಾಗಿ ಯಶಸ್ವಿಯಾಗಿದೆ ಎಂದು ಶಾಸಕ ಡಾ.ಸಿಎಂ ರಾಜೇಶ್‌ ಗೌಡ ಹೇಳಿದರು.

  ಶಿರಾ :  ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮದಿಂದ ಸರ್ಕಾರದ ಯೋಜನೆಗಳು ಯಾವುದೇ ಮಧ್ಯವರ್ತಿಗಳಿಂದ ತಲುಪದೆ, ನೇರವಾಗಿ ಫಲನುಭವಿಗಳಿಗೆ ತಲುಪಿ ಯೋಜನೆ ಪ್ರಯೋಜನಾಕಾರಿಯಾಗಿ ಯಶಸ್ವಿಯಾಗಿದೆ ಎಂದು ಶಾಸಕ ಡಾ.ಸಿಎಂ ರಾಜೇಶ್‌ ಗೌಡ ಹೇಳಿದರು.

ತಾಲೂಕಿನ ಹುಲಿಕುಂಟೆ ಹೋಬಳಿಯ ಬರಗೂರು ಗ್ರಾಮದಲ್ಲಿ ಶನಿವಾರ ಕಂದಾಯ ಇಲಾಖೆ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆಗೆ ಹಳ್ಳಿ ಕಡೆಗೆ ಕಾರ್ಯಕ್ರಮದಲ್ಲಿ ವಿವಿಧ ಫಲಾನುಭವಿಗಳಿಗೆ ಮಾಸಾಶನ ಪತ್ರ ವಿತರಣೆ ಮಾಡಿ ಮಾತನಾಡಿದರು.

ವೃದ್ಧರಿಗೆ ಕಚೇರಿಗೆ ಬಂದು ಸವಲತ್ತು ಪಡೆಯಲು ತೊಂದರೆಯಾಗುವ ಕಾರಣ ತಾಲೂಕು ಆಡಳಿತ ಮತ್ತು ಅಧಿಕಾರಿಗಳೆ ನೇರವಾಗಿ ಮನೆಗೆ ತೆರಳಿ ಪಿಂಚಣಿ ಪತ್ರ ನೀಡುವ ಕಾರ್ಯ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ 102 ಫಲಾನುಭವಿಗಳಿಗೆ ಪಿಂಚಣಿ ನೀಡಲಾಗಿದೆ ಎಂದರು.

ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ ಮಾತನಾಡಿ, ಇಲಾಖೆಗಳ ಸೌಲಭ್ಯಗಳು ನೇರವಾಗಿ ಜನರಿಗೆ ತಲುಪಿವೆ. ಮದಲೂರಿನ ಕೆರೆಗೆ ಹೇಮಾವತಿ ನೀರು ಹರಿಸಿದ ಹಿನ್ನೆಲೆ ಈ ಭಾಗದಲ್ಲಿ ಅಂತರ್ಜಲ ಹೆಚ್ಚಿ ರೈತರಿಗೆ ಸಾಕಷ್ಟುಅಭಿವೃದ್ಧಿ ಕೆಲಸಗಳಿಗೆ ಅನುಕೂಲವಾಗಿದೆ. ಶಿರಾ ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ಸುಮಾರು ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ನಡೆಯುತ್ತಿದೆ. ನೀರು ತುಂಬಿಸುವ ಮಹತ್ವಕಾಂಕ್ಷೆಯ ಯೋಜನೆಗೆ ಸರ್ಕಾರ ಸಹಕಾರ ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್‌ ಮುರಳಿಧರ್‌, ಗ್ರೇಡ್‌-2 ತಹಸೀಲ್ದಾರ್‌ ಮಂಜುನಾಥ್‌, ಹುಲಿಕುಂಟೆ ನಾಡ ಕಚೇರಿ ಉಪ ತಹಸೀಲ್ದಾರ್‌ ಹೊನ್ನಪ್ಪ, ಸಹಾಯಕ ಕೃಷಿ ನಿದೇರ್ಶಕ ರಂಗನಾಥ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಹಿರಿಯ ಮೇಲ್ವಿಚಾರಕಿ ಸುರೇಖ ಟಾಕೆ, ಡಾ.ವಿ.ನಂದೀಶ್‌, ಬರಗೂರು ಗ್ರಾಪಂ ಅಧ್ಯಕ್ಷ ಲಕ್ಷ್ಮಣ, ಉಪಾಧ್ಯಕ್ಷೆ ಮಂಜುಳ, ಮುಖಂಡರಾದ ಬಿ ಹಲಗುಂಡೇಗೌಡ, ಪ್ರಕಾಶ್‌ ಗೌಡ, ದಯಾನಂದ್‌ ಗೌಡ, ಮಹೇಂದ್ರ ಗೌಡ ಸೇರಿದಂತೆ ಹಲವರು ಹಾಜರಿದ್ದರು.

18ಶಿರಾ2: ಶಿರಾ ತಾಲೂಕಿನ ಬರಗೂರು ಗ್ರಾಮದಲ್ಲಿ ಶನಿವಾರ ಕಂದಾಯ ಇಲಾಖೆ ಅಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆಗೆ ಹಳ್ಳಿ ಕಡೆಗೆ ಕಾರ್ಯಕ್ರಮವನ್ನು ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ಉದ್ಘಾಟಿಸಿದರು.

ಮಾದರಿ ನಗರವನ್ನಾಗಿಸುವೆ

ಶಿರಾ : ಶಿರಾ ನಗರವನ್ನು ರಾಜ್ಯದಲ್ಲಿಯೇ ಮಾದರಿ ನಗರವನ್ನಾಗಿ ಮಾಡುವುದಾಗಿ ಉಪಚುನಾವಣೆಯಲ್ಲಿ ಕೊಟ್ಟಮಾತಿನಂತೆ ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ ಸುಮಾರು 25.50 ಕೋಟಿ ರು. ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ಹೇಳಿದರು.

ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ ಸುಮಾರು 17.50 ಕೋಟಿ ರು. ವೆಚ್ಚದಲ್ಲಿ ನಗರದ ಎಲ್ಲಾ 31 ವಾರ್ಡುಗಳಲ್ಲೂ ರಸ್ತೆ ಮತ್ತು ಒಳಚರಂಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಅಮೃತ ನಗರೋತ್ಥಾನ ಯೋಜನೆಯಡಿಯಲ್ಲಿ ಅನುದಾನ ಮಂಜೂರಾತಿಗೆ ಗಳಲ್ಲಿ ಮನವಿ ಮಾಡಲಾಗಿತ್ತು. ಮುಖ್ಯಮಂತ್ರಿಗಳು ಶಿರಾ ಹಾಗೂ ತಿಪಟೂರು ತಾಲೂಕುಗಳಿಗೆ ಸುಮಾರು 25.50 ಕೋಟಿ ರು. ಗಳ ಅನುದಾನ ಮಂಜೂರು ಮಾಡಿದ್ದಾರೆ. ಈ ಅನುದಾನದಲ್ಲಿ ಸುಮಾರು 17.50 ಕೋಟಿ ರು.ಗಳನ್ನು ರಸ್ತೆ ಹಾಗೂ ಚರಂಡಿ ಕಾಮಗಾರಿಗೆ, ಸುಮಾರು 3.50 ಕೋಟಿ ರು.ಗಳನ್ನು ನಗರದ ಖಾಸಗಿ  ಅಭಿವೃದ್ಧಿಪಡಿಸಲು ವಿನಿಯೋಗಿಸಲಾಗುವುದು. ಉಳಿದ ಅನುದಾನವನ್ನು ನಗರದ ಮೂಲಭೂತ ಸೌಲಭ್ಯಗಳಿಗೆ ಉಪಯೋಗಿಸಲಾಗುವುದು ಎಂದ ಅವರು ಶಿರಾ ನಗರದ ಜನರು ಕೇವಲ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಕಾರ್ಯ ಆಗುತ್ತಿವೆ, ನಗರ ಭಾಗದಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎಂಬ ಆರೋಪ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲೂ ಸಹ ಜನರ ಮೂಲಭೂತ ಅಗತ್ಯಗಳನ್ನು ಪೂರೈಸಲು ಬದ್ಧನಿದ್ದೇನೆ ಎಂದರು.

ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ ಮಾತನಾಡಿ, ನಗರೋತ್ಥಾನ ನಾಲ್ಕನೇ ಹಂತದಲ್ಲಿ ಸುಮಾರು 25.50 ಕೋಟಿ ಹಣ ಬಿಡುಗಡೆಯಾಗಿದ್ದು ನಗರದ ಎಲ್ಲಾ 31 ವಾರ್ಡುಗಳಿಗೂ ಸಹ ವಿವಿಧ ರಸ್ತೆ ಹಾಗೂ ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಅಂಬುಜ ನಟರಾಜ್‌, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌.ಎಲ್‌.ರಂಗನಾಥ್‌, ನಗರಸಭೆ ಸದಸ್ಯರಾದ ಶಂಕರಪ್ಪ, ಗಿರಿಜ ವಿಜಯ್‌ಕುಮಾರ್‌, ಪೂಜಾ ಪೆದ್ದರಾಜು, ತೇಜು.ಎಲ್‌. ಬಾನುಪ್ರಕಾಶ್‌, ಉಮಾ ವಿಜಯರಾಜ್‌, ಅಜಯ್‌ಕುಮಾರ್‌, ಸ್ವಾತಿ ಮಂಜೇಶ್‌, ಮುಖಂಡರಾದ ವಿಜಯ್‌ಕುಮಾರ್‌, ರೂಪೇಶ್‌ ಕೃಷ್ಣಯ್ಯ, ಹನುಮಂತನಾಯ್ಕ, ಲೋಕೇಶ್‌ ಸೇರಿದಂತೆ ಹಲವರು ಹಾಜರಿದ್ದರು.

click me!