
ಉತ್ತರ ಕನ್ನಡ (ಡಿ.10): ಹುಟ್ಟುಹಬ್ಬದ ಸಂಭ್ರಮದಲ್ಲೇ ಹೆರಿಗೆಗೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಗರ್ಭಿಣಿಯೊಬ್ಬರು ಮಾರ್ಗ ಮಧ್ಯೆಯೇ ಅಕಾಲಿಕವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಜಗಲ್ಬೇಟ್ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮೃತ ಗರ್ಭಿಣಿಯ ಕುಟುಂಬಸ್ಥರು, ದಾಂಡೇಲಿಯ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿ ಆಸ್ಪತ್ರೆಯಲ್ಲಿ ಜಗಳವಾಡಿದ್ದಾರೆ.
ಸಾವಿಗೀಡಾದ ಗರ್ಭಿಣಿಯನ್ನು ರೋಹಿಣಿ ಮನೋಜ್ ಹಣಬರ್ (26) ಎಂದು ಗುರುತಿಸಲಾಗಿದೆ. ರೋಹಿಣಿ ಅವರಿಗೆ ವೈದ್ಯರು ನಿರೀಕ್ಷಿತ ಹೆರಿಗೆ ದಿನಾಂಕವನ್ನು ನೀಡಿದ್ದ ಹಿನ್ನೆಲೆಯಲ್ಲಿ ಮನೆಯವರು ಅವರನ್ನು ದಾಂಡೇಲಿಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ನಿನ್ನೆ ಮಧ್ಯರಾತ್ರಿ ರೋಹಿಣಿಯ ಆರೋಗ್ಯದಲ್ಲಿ ಹಠಾತ್ತಾಗಿ ಏರುಪೇರಾಗಲು ಪ್ರಾರಂಭಿಸಿತು. ತಕ್ಷಣವೇ ದಾಂಡೇಲಿಯ ವೈದ್ಯರು ಅವರ ಸ್ಥಿತಿ ಗಂಭೀರವಾಗಿರುವುದನ್ನು ಮನಗಂಡು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡಕ್ಕೆ ವರ್ಗಾವಣೆ ಮಾಡಿದರು.
ಆಂಬ್ಯುಲೆನ್ಸ್ನಲ್ಲಿ ರೋಹಿಣಿಯನ್ನು ಧಾರವಾಡಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ, ಹಳಿಯಾಳ ಪಟ್ಟಣ ತಲುಪುವಷ್ಟರಲ್ಲಿ ರೋಹಿಣಿಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ತುರ್ತು ಪರಿಸ್ಥಿತಿಯನ್ನು ಅರಿತ ಕುಟುಂಬಸ್ಥರು, ಆಕೆಯನ್ನು ಹಳಿಯಾಳ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ, ಹಳಿಯಾಳದ ವೈದ್ಯರು ಪರಿಶೀಲನೆ ನಡೆಸಿದಾಗ ರೋಹಿಣಿ ಆಗಲೇ ಸಾವನ್ನಪ್ಪಿರುವುದು ದೃಢಪಟ್ಟಿದೆ. ವೈದ್ಯಕೀಯ ವರದಿಗಳ ಪ್ರಕಾರ, ಗರ್ಭಿಣಿ ರೋಹಿಣಿ ಅವರು ಹೃದಯಾಘಾತದಿಂದ (ಹಾರ್ಟ್ ಅಟ್ಯಾಕ್) ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ತಮ್ಮ ಮನೆಯ ಸದಸ್ಯೆಯ ಸಾವಿಗೆ ದಾಂಡೇಲಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಮೃತರ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿರುವುದು ಮತ್ತು ತುರ್ತು ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸದಿರುವುದು ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಇಂದು ಕುಟುಂಬಸ್ಥರು ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಜಗಳವಾಡಿ, ರೋಹಿಣಿ ಮತ್ತು ಆಕೆಯ ಮಗುವಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ.
ಈ ದುರಂತದಿಂದ ಮೃತ ರೋಹಿಣಿಯ ಇಬ್ಬರು ಚಿಕ್ಕ ಹೆಣ್ಣುಮಕ್ಕಳು ತಾಯಿಯನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದು, ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ. ಈ ಘಟನೆ ಕುರಿತು ಜೊಯಿಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.