ರೋಹಿಣಿ ಮಳೆಯೂ ಮಾಯ, ಆತಂಕದಲ್ಲಿ ಕೊಪ್ಪಳ ರೈತರು!

By Kannadaprabha NewsFirst Published Jun 4, 2023, 1:02 PM IST
Highlights

ರೋಹಿಣಿ ಮಳೆಯಾದರೇ ಓಣಿ ತುಂಬಾ ಜೋಳ ಎನ್ನುವ ಮಾತು ಇದೆ. ಆದರೆ, ಈ ವರ್ಷಾ ನೋಡ್ರಿ ಇನ್ನು ರೋಹಿಣಿ ಮಳಿನೂ ಆಗುವಲ್ದು. ಇನ್ನೆರಡು ದಿನ ಐತಿ, ಇಂಥ ಮಳೆಯೇ ಆಗದಿದ್ದರೆ ನಮ್ಮ ಗತಿ ಹ್ಯಾಂಗ್ರಿ ಈ ವರ್ಷ. ಇದು, ಓಡುವ ಮೋಡಗಳನ್ನು ನೋಡುತ್ತಲೇ ಮಳೆ ಜಪಿಸುತ್ತಿರುವ ರೈತ ಮಾರ್ತಂಡಪ್ಪನ ಆತಂಕದ ಮಾತು.

ಸೋಮರಡ್ಡಿ ಅಳವಂಡಿ

ಕೊಪ್ಪಳ (ಜೂ.4) : ರೋಹಿಣಿ ಮಳೆಯಾದರೇ ಓಣಿ ತುಂಬಾ ಜೋಳ ಎನ್ನುವ ಮಾತು ಇದೆ. ಆದರೆ, ಈ ವರ್ಷಾ ನೋಡ್ರಿ ಇನ್ನು ರೋಹಿಣಿ ಮಳಿನೂ ಆಗುವಲ್ದು. ಇನ್ನೆರಡು ದಿನ ಐತಿ, ಇಂಥ ಮಳೆಯೇ ಆಗದಿದ್ದರೆ ನಮ್ಮ ಗತಿ ಹ್ಯಾಂಗ್ರಿ ಈ ವರ್ಷ. ಇದು, ಓಡುವ ಮೋಡಗಳನ್ನು ನೋಡುತ್ತಲೇ ಮಳೆ ಜಪಿಸುತ್ತಿರುವ ರೈತ ಮಾರ್ತಂಡಪ್ಪನ ಆತಂಕದ ಮಾತು.

ಹೌದು, ಈ ವರ್ಷ ಇನ್ನು ಮಂಗಾರು ಜಿಲ್ಲೆಯಲ್ಲಿ ಅಷ್ಟಾಗಿ ಕಚ್ಚಿಯೇ (ಆಗಿಯೇ ಇಲ್ಲ) ಇಲ್ಲ. ಬರಬೇಕಾದ ಮಳೆಯೂ ಬಂದಿಲ್ಲ. ರೈತರು ಅಕ್ಷರಶಃ ಚಿಂತೆಗೀಡಾಗಿದ್ದಾರೆ. ಈಗಾಗಲೇ ನಾಲ್ಕಾರು ಮಳೆ ಮುಗಿದು ಹೋಗಿವೆ. ಯಾವ ಮಳೆ ಹೋದರೂ ನಮಗೆ ರೋಹಿಣಿ ಮಳೆ ಆಗುತ್ತದೆ ಎನ್ನುವ ನಂಬಿಕೆ ಇದ್ದೇ ಇರುತ್ತದೆ. ಈ ಮಳೆಯಾದರೇ ಓಣಿ ತುಂಬಾ ಜೋಳ ಎನ್ನಲಾಗುತ್ತದೆ. ಈ ಮಳೆ ಕೈ ಕೊಟ್ರೆ ಭಾನಕ್ಕೂ ಕುತ್ತು ಗ್ಯಾರಂಟಿ ಎನ್ನುತ್ತಾರೆ ರೈತರು.

ಕೊಪ್ಪಳ: ವಿಮಾನ ಹಾರಿದ್ದು ಆಯಿತು, ಈಗ ಡ್ರೋನ್‌ಗಳ ಹಾರಾಟ!

ಮಳೆ ಕೊರತೆ ವಿಪರೀತ:

ಮೇ ಅಂತ್ಯಕ್ಕೆ ಮತ್ತು ಜೂನ್‌ ಮೊದಲೆರಡು ದಿನಗಳ ಲೆಕ್ಕಾ್ಕಚಾರ ಹಾಕಿದರೆ ಮಳೆಯ ಅಭಾವ ಜಿಲ್ಲೆಯಲ್ಲಿ ವಿಪರೀತವಾಗಿದೆ. ಶೇ.70-80 ರಷ್ಟುಮಳೆಯಾಗಿಲ್ಲ. ಆಗಬೇಕಾಗಿರುವ ವಾಡಿಕೆಯ ಮಳೆಯೂ ಶೇ.20 ರಷ್ಟುಸಹ ಆಗದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

ಮುಂಗಾರು ಬಿತ್ತನೆಗೆ ಇನ್ನೂ ಸಾಕಷ್ಟುಕಾಲವಕಾಶ ಇದೆಯಾದರೂ ಬಿತ್ತನೆಗೆ ತಯಾರಿ ಮಾಡಿಕೊಳ್ಳುವುದಕ್ಕೂ ಮಳೆಯ ಅಭಾವ ಕಾಡುತ್ತಿದೆ. ಈ ಮುಂಗಾರು ಪ್ರಾರಂಭದಲ್ಲಿಯೇ ಕಾಡಿದರೆ ಮುಂದಿನ ದಿನಗಳಲ್ಲಿ ಏನು ಗತಿ ಎಂದು ರೈತರು ಈಗಲೇ ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ಜೂನ್‌ ಪ್ರಾರಂಭದ ಮೂರು ದಿನಗಳಲ್ಲಿ ಆಗಿರುವ ಲೆಕ್ಕಾಚಾರದಲ್ಲಿ ಶೇ. 90 ರಷ್ಟುಮಳೆ ಕೊರತೆಯಾಗಿದೆ. ಗಂಗಾವತಿ ತಾಲೂಕಿನಲ್ಲಿ 2.3 ಮಿಮೀ ಮಳೆ ಆಗಬೇಕಾಗಿತ್ತು. ಆಗಿರುವುದು ಕೇವಲ 0.1 ಮಿಮೀ ಮಾತ್ರ. ಅಂದರೇ ಶೇ.96 ರಷ್ಟುಕೊರತೆಯಾಗಿದೆ. ಕೊಪ್ಪಳ ತಾಲೂಕಿನಲ್ಲಿ 3.3 ಮಿಮೀ ಮಳೆಯಾಗಬೇಕಾಗಿದ್ದರೂ ಹನಿಯೂ ಮಳೆಯಾಗಿಲ್ಲ. ಹೀಗಾಗಿ,ಶೇ.100 ರಷ್ಟುಕೊರತೆ ಕಾಡುತ್ತಿದೆ.

ಬರಿದಾಗಿರುವ ಜಲಾಶಯ:

ಜಿಲ್ಲೆಯಲ್ಲಿ ತುಂಗಭದ್ರಾ ಜಲಾಶಯ ಮತ್ತು ಹಿರೇಹಳ್ಳ ಜಲಾಶಯ ಇದ್ದು, ಎರಡೂ ಸಹ ಬರಿದಾಗಿವೆ. ಡೆಡ್‌ ಸ್ಟೋರೇಜ್‌ ಮಾತ್ರ ನೀರು ಇದೆ. ತುಂಗಭದ್ರಾ ಜಲಾಶಯದಲ್ಲಿ ಈಗ 4.88 ಟಿಎಂಸಿ ಮಾತ್ರ ನೀರು ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 38 ಟಿಎಂಸಿ ನೀರು ಇತ್ತು. ಜೂನ್‌ ಮೊದಲ ವಾರದ ಲೆಕ್ಕಾಚಾರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿಯೇ ಕನಿಷ್ಠ ನೀರು ಜಲಾಶಯದಲ್ಲಿದೆ. ಜಲಚರಗಳನ್ನು ಕಾಪಾಡಿಕೊಳ್ಳಲು ಮಾತ್ರ ನೀರು ಲಭ್ಯವಿದೆ.

ಕೊಪ್ಪಳ ಸೇರಿದಂತೆ ಜಲಾಶಯ ವ್ಯಾಪ್ತಿಯಲ್ಲಿ ಹಾಗೂ ಜಲಾಶಯ ಮುಂದಿನ ಭಾಗದಲ್ಲಿಯೂ ಇರುವ ನಗರ ಮತ್ತು ಪಟ್ಟಣಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವಂತಾಗಿದೆ. ಜಿಲ್ಲಾ ಕೇಂದ್ರ ಕೊಪ್ಪಳ ನಗರಕ್ಕೆ ತುಂಗಭದ್ರಾ ಜಲಾಶಯದ ಹಿನ್ನೀರು ಭಾಗದಿಂದ ನೀರು ಪೂರೈಕೆಯಾಗುತ್ತದೆ. ಆದರೆ, ನೀರಿನ ಅಭಾವ ಎದುರಾಗಿರುವುದರಿಂದ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವಂತಾಗಿದೆ.

ಹಿರೇಹಳ್ಳ ಜಲಾಶಯವೂ ಬರಿದು:

ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಬಳಿ ಇರುವ ಹಿರೇಹಳ್ಳ ಜಲಾಶಯ ಸಾಮರ್ಥ್ಯ 1.67 ಟಿಎಂಸಿ ಇದೆ. ಈಗ ಕೇವಲ 0.44 ಟಿಎಂಸಿ ನೀರು ಮಾತ್ರ ಇದೆ.ಇದು ಸಹ ಬಹುತೇಕ ಹೂಳು ತುಂಬಿರುವುದರಿಂದ ಡೆಡ್‌ ಸ್ಟೋರೇಜ್‌ ಸಹ ಜಲಾಶಯದಲ್ಲಿ ಇರದಂತಾಗಿದೆ.

ಜಲಾಶಯದಲ್ಲಿ ಕನಿಷ ್ಠಮಟ್ಟಕ್ಕೆ ನೀರು ಇಳಿದಿರುವುದರಿಂದ ಸಮಸ್ಯೆಯಾಗಿದ್ದು,ಪರಿಸ್ಥಿತಿ ಹೀಗೆ ಮುಂದುವರೆದರೇ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎನ್ನಲಾಗುತ್ತದೆ.

ಕೈಕೊಟ್ಟಮಳೆ:

ಈಗಾಗಲೇ ನಾಲ್ಕು ಮಳೆಗಳು ಕೈ ಕೊಟ್ಟಿವೆ. ರೋಹಿಣಿ ಮಳೆಯೂ ಕೈ ಕೊಟ್ಟರೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಹಿನ್ನಡೆಯಾಗುತ್ತದೆ. ಕೇವಲ ಇನ್ನು ಎರಡು ದಿನ (ಮೇ 5 ವರೆಗು)ಇದ್ದು, ಕೊನೆ ಪಾದದಲ್ಲಿ ನಾಲ್ಕಾರು ಹನಿ ಸುರಿಸಿದರೆ ಭೂ ತಾಯಿಗೆ ಬೀಜ ಮಳೆ ಬಿದ್ದಂತೆ ಆಗುತ್ತದೆ. ಅಷ್ಟಾದರೆ ಮುಂದಿನ ಎಲ್ಲವೂ ಸುಲಲಿತವಾಗಿ ಆಗುತ್ತದೆ ಎನ್ನುತ್ತಾರೆ ಅನ್ನದಾತರು.

 

ಈ ಬಾರಿ ಮಳೆ ವಿಳಂಬ: ನಾಡಿದ್ದು ಮುಂಗಾರು ಕೇರಳ ತೀರ ತಲುಪುವ ಸಾಧ್ಯತೆ

ಜಲಾಶಯದ ಇತಿಹಾಸ ನೋಡಿದರೆ ಕಳೆದ ನಾಲ್ಕು ವರ್ಷಗಳಲ್ಲಿಯೇ ಕನಿಷ್ಠ ನೀರು ತುಂಗಭದ್ರಾ ಜಲಾಶಯದಲ್ಲಿ ಇದೆ. ಕಳೆದ ವರ್ಷ 38 ಟಿಎಂಸಿ ಇದ್ದಿದ್ದು,ಈ ಬಾರಿ ಕೇವಲ 4.88 ಟಿಎಂಸಿ ನೀರು ಮಾತ್ರ ಇದೆ.

ನಿಂಗಪ್ಪ ಜಾನಕರ್‌, ಇಇ ತುಂಗಭದ್ರಾ ಕಾಡಾ

ಮುಂಗಾರು ಪ್ರವೇಶ ವಿಳಂಬವಾಗಿರುವುದು ನಿಜ. ಆದರೆ, ಇನ್ನು ಕಾಲವಕಾಶ ಇದ್ದು, ಈ ಕುರಿತು ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತದೆ.

ಎಂ. ಸುಂದರೇಶಬಾಬು ಡಿಸಿ ಕೊಪ್ಪಳ

click me!