Karnataka monsoon: ಮುಂಗಾರು ಬಿತ್ತೋಣವೇ, ಹಿಂಗಾರಿಗೆ ಹಾರೋಣವೇ? ಗೊಂದಲದಲ್ಲಿ ರೈತರು!

By Kannadaprabha NewsFirst Published Jul 8, 2023, 4:43 AM IST
Highlights

ಇನ್ನೇನು ಮುಂಗಾರು ಮಳೆ ಹೋಯ್ತು, ಬರಗಾಲ ಬಿತ್ತು ಎನ್ನುವಷ್ಟರಲ್ಲಿ ಜುಲೈ ಮೊದಲ ವಾರದಲ್ಲಿ ಬಿತ್ತನೆಗೆ ಸಾಕಾಗುವಷ್ಟೇನೋ ಮಳೆಯಾಗಿದೆ. ಆದರೆ, ಸುಮಾರು ಒಂದು ತಿಂಗಳ ಕಾಲ ತಡವಾಗಿ ಬಿತ್ತನೆ ಮಾಡಿದರೆ ಬೆಳೆಗಳು ಎಷ್ಟರ ಮಟ್ಟಿಗೆ ಬರಬಹುದು ಎಂಬ ಗೊಂದಲ ರೈತರನ್ನು ಕಾಡುತ್ತಿದೆ.

ಬರದ ಬರೆ

- ಬಸವರಾಜ ಹಿರೇಮಠ

Latest Videos

ಧಾರವಾಡ (ಜು.8) : ಇನ್ನೇನು ಮುಂಗಾರು ಮಳೆ ಹೋಯ್ತು, ಬರಗಾಲ ಬಿತ್ತು ಎನ್ನುವಷ್ಟರಲ್ಲಿ ಜುಲೈ ಮೊದಲ ವಾರದಲ್ಲಿ ಬಿತ್ತನೆಗೆ ಸಾಕಾಗುವಷ್ಟೇನೋ ಮಳೆಯಾಗಿದೆ. ಆದರೆ, ಸುಮಾರು ಒಂದು ತಿಂಗಳ ಕಾಲ ತಡವಾಗಿ ಬಿತ್ತನೆ ಮಾಡಿದರೆ ಬೆಳೆಗಳು ಎಷ್ಟರ ಮಟ್ಟಿಗೆ ಬರಬಹುದು ಎಂಬ ಗೊಂದಲ ರೈತರನ್ನು ಕಾಡುತ್ತಿದೆ.

ಈ ಮುಂಗಾರಿಗೆ ಅಸಮರ್ಪಕ ಮಳೆಯಿಂದ ಕೆಲವು ಕಡೆಗಳಲ್ಲಿ ಬಿತ್ತಿದ ಬೀಜಗಳೂ ಹುಟ್ಟಿಲ್ಲ. ಆದರೂ ಬಿತ್ತನೆ ಮಾಡಿದ ರೈತರು ಕೊಳವೆ ಬಾವಿ ಹಾಗೂ ಹಳ್ಳಗಳ ನೀರು ಹಾಯಿಸಿ ಕಷ್ಟಪಟ್ಟು ತಮ್ಮ ಬೆಳೆಗಳನ್ನು ಉಳಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಕಾಲ ಬಂದ ಮಳೆಯಿಂದ ತುಸುವಾದರೂ ಬೆಳೆ ಬರಬಹುದು ಎಂಬ ನಿರೀಕ್ಷೆ ಈ ರೈತರದ್ದು. ಆದರೆ, ಕೃಷಿ ಇಲಾಖೆ ಅಂಕಿ-ಅಂಶಗಳ ಪ್ರಕಾರ, ಮಳೆ ಕೊರತೆಯಿಂದ ಇನ್ನೂ ಶೇ. 80ರಷ್ಟುರೈತರು ಬಿತ್ತನೆ ಮಾಡಿಲ್ಲ. ಈ ರೈತರು ಯಾವ ಬೆಳೆ ಬಿತ್ತಬೇಕು, ಸಮಯ ಮೀರಿದ್ದರಿಂದ ಬೆಳೆ ಕೈಗೆ ಸಿಗುವದೇ ಎಂಬ ಗೊಂದಲದಲ್ಲಿದ್ದಾರೆ.

Karnataka budget 2023: ಉತ್ತರ ಕರ್ನಾಟಕಕ್ಕೆ ಮತ್ತೊಮ್ಮೆ ನಿರಾಸೆ, ಹೇಳಿಕೊಳ್ಳುವಂಥ ಯೋಜನೆ ಇಲ್ಲ

ಹಿಂಗಾರಿಗೆ ಹಾರೋಣ

ಸಾವಿರಾರು ರುಪಾಯಿ ಮೊತ್ತದ ಬಿತ್ತನೆ ಬೀಜ, ರಸಗೊಬ್ಬರ ಹಾಕಲು ಸಿದ್ಧರಿದ್ದೇವೆ. ಬಿತ್ತನೆ ಮಾಡಲು ಬೇಕಾದಷ್ಟುಮಳೆ ಸದ್ಯ ಆಗಿದೆ. ಆದರೆ, ಹವಾಮಾನ ಯಾವ ರೀತಿ ಇರಲಿದೆ ಎಂಬುದು ಗೊತ್ತಾಗುತ್ತಿಲ್ಲ. ತಡವಾಗಿದ್ದರಿಂದ ಬೆಳೆಗಳು ರೋಗಕ್ಕೆ ತುತ್ತಾಗಬಹುದು, ಬೆಳೆ ಬರದೇ ಇರಬಹುದು ಎಂಬ ಚಿಂತನೆಗಳು ರೈತರನ್ನು ಕಾಡುತ್ತಿವೆ. ಆದ್ದರಿಂದ ಇನ್ನೆರೆಡು ತಿಂಗಳಿಗೆ ಹಿಂಗಾರು ಬರಲಿದ್ದು, ಮುಂಗಾರು ಕೈ ಬಿಟ್ಟು ಹಿಂಗಾರು ಮಾತ್ರ ಯೋಚಿಸೋಣ ಎಂಬ ಚಿಂತನೆಗಳು ರೈತರಲ್ಲಿ ಬಂದಿರುವುದರಲ್ಲಿ ತಪ್ಪೇನಿಲ್ಲ.

ಪರ್ಯಾಯ ಬೆಳೆ ಬಿತ್ತಿ

ಈ ಮಧ್ಯೆ ಜುಲೈ ತಿಂಗಳಲ್ಲಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಬಿತ್ತನೆಯಾಗದೇ ಇದ್ದ ಪ್ರದೇಶದಲ್ಲಿ ಬಿತ್ತನೆಗಾಗಿ ಆಯಾ ತಾಲೂಕುಗಳ ಕೃಷಿ ಇಲಾಖೆಯ ಅ​ಧಿಕಾರಿಗಳು ಹಾಗೂ ಕೃಷಿ ವಿವಿ ವಿಜ್ಞಾನಿಗಳು ಸಮಾಲೋಚಿಸಿ ಪರ್ಯಾಯ ಬೆಳೆ ರೂಪಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸಹಾಯಕಿ ಕೃಷಿ ನಿರ್ದೇಶಕಿ ಸುಷ್ಮಾ ಮಳಿಮಠ, ಸಾಮಾನ್ಯವಾಗಿ ಮುಂಗಾರು ಹಂಗಾಮಿನಲ್ಲಿ ಭತ್ತ, ಗೋವಿನಜೋಳ, ಸೋಯಾಬಿನ್‌, ಹೆಸರು, ಉದ್ದು, ಹತ್ತಿ ಪ್ರಮುಖ ಬೆಳೆಗಳಾಗಿದ್ದು, ಮಳೆಯ ಕೊರತೆಯಿಂದ ಬರೀ ಶೇ.15 ರಿಂದ 20ರಷ್ಟುಭಾಗದಲ್ಲಿ ಮಾತ್ರ ಬಿತ್ತನೆಯಾಗಿದೆ. ಜುಲೈ ಮೊದಲ ವಾರದಲ್ಲಿ ಮಳೆ ಬಂದಾಗ ಅಥವಾ ಅಲ್ಪ ಸ್ವಲ್ಪ ಮಳೆಯಾದರೆ ರೈತರಿಗೆ ಈ ಪರ್ಯಾಯ ಬೆಳೆ ಅಳವಡಿಸಿಕೊಳ್ಳಬಹುದು.

ಪರ್ಯಾಯ ಬೆಳೆಗಳು

ಧಾರವಾಡ ಕಪ್ಪು, ಕೆಂಪು ಮಿಶ್ರಿತ ಮಳೆಯಾಶ್ರಿತ ಜಮೀನುಗಳಲ್ಲಿ ಜುಲೈ ಮೊದಲ ವಾರದಲ್ಲಿ ಹತ್ತಿ, ಶೇಂಗಾ, ಸೋಯಾ ಅವರೆ, ಗೋವಿನ ಜೋಳ, ಮೆಣಸಿನಕಾಯಿ, ಜೋಳ, ಆಲೂಗಡ್ಡೆ, ಹೆಸರು, ಅಲಸಂದಿ ಹಾಗೂ ವಠಾಣೆ, ಜುಲೈ 2ನೇ ವಾರದಲ್ಲಿ ಸೂರ್ಯಕಾಂತಿ, ಹಬ್ಬು ಶೇಂಗಾ, ಗೋವಿನ ಜೋಳ, ಮೆಣಸಿನಕಾಯಿ, ಔಡಲ, ಅಲಸಂದಿ, ತರಕಾರಿ, ಮೇವಿನ ಜೋಳ, ಮೇವಿನ ಗೋವಿನ ಜೋಳ. ಅಗಸ್ಟ್‌ ಮೊದಲನೆಯ ವಾರದಲ್ಲಿ ವಠಾಣೆ, ಹುರಳಿ, ಗೋವಿನ ಜೋಳ, ಮೇವಿನ ಗೋವಿನ ಜೋಳ, ಸೆಣಬು, ಹಸಿರೆಲೆ ಗೊಬ್ಬರ, ಔಡಲ, ಸೂರ್ಯಕಾಂತಿ. ಆಗಸ್ಟ್‌ ಎರಡನೆಯ ವಾರದಲ್ಲಿ ಸೂರ್ಯಕಾಂತಿ, ಗೋವಿನ ಜೋಳ, ಜೋಳ, ಅಲಸಂದಿ, ಔಡಲ ಬೆಳೆಗಳನ್ನು ಬೆಳೆಯಬಹುದಾಗಿದೆ.

Karnataka budget 2023: ಕಾಫಿ ನಾಡಿಗೆ ಕೈ ಕೊಟ್ಟರಾಜ್ಯ ಸರ್ಕಾರ: ಜಿಲ್ಲೆಗೆ ಬಿಗ್‌ ಝೀರೋ ಶಾಕ್‌

ಇನ್ನು, ಅಳ್ನಾವರ, ಧಾರವಾಡ ಪಶ್ಚಿಮ ಹಾಗೂ ಕಲಘಟಗಿ ಭಾಗದ ಹಕ್ಕಲು, ಮಧ್ಯಮ, ರಂಗೀ ಜಮೀನುಗಳಲ್ಲಿ ಜುಲೈ ಮೊದಲನೆಯ ವಾರದಲ್ಲಿ ಭತ್ತ, ಗೋವಿನ ಜೋಳ, ಸೋಯಾ ಅವರೆ, ಹತ್ತಿ, ತೊಗರಿ, ಪುಂಡಿ, ರಾಗಿ, ಮೇವಿನ ಸಜ್ಜೆ ಹಾಗೂ ಮೇವಿನ ಜೋಳ. ಜುಲೈ ಎರಡನೆಯ ವಾರದಲ್ಲಿ ಭತ್ತ, ಗೋವಿನ ಜೋಳ, ಸೂರ್ಯಕಾಂತಿ, ತೊಗರಿ, ಹತ್ತಿ, ಪುಂಡಿ, ತರಕಾರಿ ಹಾಗೂ ಮೇವಿನ ಜೋಳ ಬೆಳೆಯಬಹುದು ಎಂಬ ಸಲಹೆಗಳನ್ನು ನೀಡಿದ್ದಾರೆ.

click me!