
ಕೊಪ್ಪಳ (ಮಾ.8): ಇಂದು ಇಡೀ ವಿಶ್ವದ ಕಣ್ಣು ಟಿ-20 ವಿಶ್ವಕಪ್ನ ಹೈವೋಲ್ಟೇಜ್ ಫೈನಲ್ ಪಂದ್ಯದ ಮೇಲಿದೆ. ಭಾನುವಾರ ನಡೆಯಲಿರುವ ಈ ಮಹತ್ವದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಟೀಮ್ ಇಂಡಿಯಾ ಕಣಕ್ಕಿಳಿಯುತ್ತಿದ್ದು, ದೇಶಾದ್ಯಂತ ಕ್ರೀಡಾಭಿಮಾನಿಗಳನ್ನ ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿದೆ. ಭಾರತ ತಂಡವು ಮೈದಾನದಲ್ಲಿ ಅಬ್ಬರಿಸಿ ಮತ್ತೊಮ್ಮೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಲಿ ಎಂದು ಕೋಟಿ ಕೋಟಿ ಭಾರತೀಯರು ಪ್ರಾರ್ಥಿಸುತ್ತಿದ್ದಾರೆ.
ಇಂದು ವಿಶ್ವಕಪ್ ಫೈನಲ್ ಪಂದ್ಯದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ ಅವರು ಭಾರತ ತಂಡದ ಗೆಲುವಿನ ಬಗ್ಗೆ ಭಾರೀ ವಿಶ್ವಾಸ ವ್ಯಕ್ತಪಡಿಸಿದರು 'ಈ ಸಲನೂ ವಿಶ್ವಕಪ್ ನಮ್ಮದೇ, ಭಾರತ ತಂಡಕ್ಕೆ ಗೆಲುವು ನಿಶ್ಚಿತ' ಎಂದು ಭವಿಷ್ಯ ನುಡಿದರು.
ನಾವು ಈ ಹಿಂದೆಯೂ ವಿಶ್ವಕಪ್ ಗೆದ್ದ ಇತಿಹಾಸ ಹೊಂದಿದ್ದೇವೆ. ನಮ್ಮ ದೇಶದ ಆಟಗಾರರು ಯಾವಾಗಲೂ ಶ್ರೇಷ್ಠ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಈ ಸಲವೂ ಕೂಡ ನಮ್ಮ ಭಾರತ ತಂಡವು ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಲಲಿದೆ ಎಂದರು.
ತಂಡದ ಬಲವೇ ಗೆಲುವಿಗೆ ಶ್ರೀರಕ್ಷೆ
ಭಾರತ ತಂಡದಲ್ಲಿ ಅತ್ಯಂತ ಪ್ರತಿಭಾವಂತ, ಪವರ್ಫುಲ್ ಆಟಗಾರರು ಇದ್ದಾರೆ. ತಂಡವು ಸಂಘಟಿತವಾಗಿ ತುಂಬಾ ಚೆನ್ನಾಗಿ ಆಟವಾಡುತ್ತಿದೆ. ಪ್ರಸ್ತುತ ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿದ್ದು, ನಿಜವಾಗಲೂ ಇದೊಂದು ಅದ್ಭುತ ತಂಡವಾಗಿದೆ. ಹಾಗಾಗಿ ಭಾರತ ಗೆದ್ದೇ ಗೆಲ್ಲುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಚಿವರು ತಂಡದ ಬಲವನ್ನು ಶ್ಲಾಘಿಸಿದರು.
ಸಚಿವರ ಕ್ರಿಕೆಟ್ ಪ್ರೇಮ: ಪ್ರತಿ ಪಂದ್ಯವೂ ನೋಡ್ತಿದ್ದೇನೆ..
ನಾನು ಈ ವಿಶ್ವಕಪ್ನ ಎಲ್ಲಾ ಪಂದ್ಯಗಳನ್ನು ಆರಂಭದಿಂದಲೂ ನೋಡುತ್ತಾ ಬಂದಿದ್ದೇನೆ. ತಂಡದ ಸತತ ಗೆಲುವುಗಳನ್ನು ನೋಡಿದರೆ ಇಂದಿನ ಫೈನಲ್ನಲ್ಲೂ ಭಾರತವೇ ಮೇಲುಗೈ ಸಾಧಿಸುತ್ತದೆ ಎಂಬ ನಂಬಿಕೆ ನನಗಿದೆ ಎಂದು ಹೇಳುವ ಮೂಲಕ ಶಿವರಾಜ್ ತಂಗಡಗಿ ಅವರು ಟೀಮ್ ಇಂಡಿಯಾಗೆ ಆಲ್ ದಿ ಬೆಸ್ಟ್ ಹೇಳಿದರು.