ಸರ್ಕಾರಿ ಸೇವಕನಾಗಿ 'ಜನರ ಧನ ನುಂಗಿದ ಜನಾರ್ಧನ' ₹4.42 ಕೋಟಿ ಒಡೆಯ; ಆದಾಯಕ್ಕಿಂತ 216% ಹೆಚ್ಚು ಆಸ್ತಿ ಪತ್ತೆ!

Published : Feb 12, 2026, 06:47 PM IST
Lokayukta Raid KREIS HM Janardhana

ಸಾರಾಂಶ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಅಧೀಕ್ಷಕ ಅಭಿಯಂತರ ಎಚ್.ಎಂ. ಜನಾರ್ಧನ್ ಅವರ ಮೇಲೆ ನಡೆದ ಲೋಕಾಯುಕ್ತ ದಾಳಿಯಲ್ಲಿ, ಅವರ ಆದಾಯಕ್ಕಿಂತ ಶೇ. 216ರಷ್ಟು ಅಧಿಕ ಅಕ್ರಮ ಆಸ್ತಿ ಪತ್ತೆಯಾಗಿದೆ. ಕೋಟ್ಯಂತರ ರೂ. ನಗದು, 34 ಎಕರೆ ಜಮೀನು, ಐಷಾರಾಮಿ ಮನೆಗಳು, ವಾಹನಗಳು ವಶಪಡಿಸಿಕೊಳ್ಳಲಾಗಿದೆ

ಬೆಂಗಳೂರು (ಫೆ.12) : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (KREIS) ಅಧೀಕ್ಷಕ ಅಭಿಯಂತರ ಎಚ್.ಎಂ. ಜನಾರ್ಧನ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ನಡೆದ ಲೋಕಾಯುಕ್ತ ದಾಳಿಯಲ್ಲಿ ಬೆಚ್ಚಿಬೀಳಿಸುವಂತಹ ಅಕ್ರಮ ಆಸ್ತಿಯ ವಿವರಗಳು ಹೊರಬಿದ್ದಿವೆ. ಅಧಿಕಾರಿಯ ಆದಾಯಕ್ಕಿಂತ ಬರೋಬ್ಬರಿ ಶೇ. 216ರಷ್ಟು ಹೆಚ್ಚಿನ ಆಸ್ತಿ ಪತ್ತೆಯಾಗಿದ್ದು, ಇಡೀ ಆಡಳಿತ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಆಳಕ್ಕೆ ಈ ದಾಳಿ ಸಾಕ್ಷಿಯಾಗಿದೆ.

34 ಎಕರೆ ಜಮೀನು, 3 ಐಷಾರಾಮಿ ಮನೆ:

ಲೋಕಾಯುಕ್ತ ಅಧಿಕಾರಿಗಳ ಪ್ರಾಥಮಿಕ ತನಿಖೆಯ ಪ್ರಕಾರ, ಜನಾರ್ಧನ್ ಅವರು ಮಂಡ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 66 ಲಕ್ಷ ರೂಪಾಯಿ ಮೌಲ್ಯದ 34 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ, ನಗರ ಪ್ರದೇಶಗಳಲ್ಲಿ ಬರೋಬ್ಬರಿ 2 ಕೋಟಿ 40 ಲಕ್ಷ ರೂಪಾಯಿ ಮೌಲ್ಯದ ಮೂರು ಭವ್ಯ ಮನೆಗಳನ್ನು ನಿರ್ಮಿಸಿದ್ದಾರೆ. 12 ಲಕ್ಷ 77 ಸಾವಿರ ರೂಪಾಯಿ ಮೌಲ್ಯದ ಒಂದು ನಿವೇಶನ (Site) ಕೂಡ ಪತ್ತೆಯಾಗಿದೆ.

ಸ್ನೇಹಿತನ ಪ್ಲಾಟ್‌ನಲ್ಲಿ ಸಿಕ್ಕಿತ್ತು 1.70 ಕೋಟಿ ನಗದು:

ಈ ದಾಳಿಯ ಅತ್ಯಂತ ರೋಚಕ ಸಂಗತಿಯೆಂದರೆ, ಜನಾರ್ಧನ್ ಅವರ ಆಪ್ತ ಸ್ನೇಹಿತ ಸುಜಯ್ ಶೆಟ್ಟಿ ಎಂಬುವವರ ಪ್ಲಾಟ್‌ನಲ್ಲಿ ಅಡಗಿಸಿಟ್ಟಿದ್ದ 1 ಕೋಟಿ 70 ಲಕ್ಷ ರೂಪಾಯಿ ನಗದು ಹಣವನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದು ಅಕ್ರಮವಾಗಿ ಗಳಿಸಿರುವ ಹಣವಾಗಿದ್ದು, ತನಿಖಾ ಸಂಸ್ಥೆಯ ಕಣ್ಣು ತಪ್ಪಿಸಲು ಸ್ನೇಹಿತನ ಬಳಿ ಇರಿಸಲಾಗಿತ್ತು ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಚರಾಸ್ತಿ ಮತ್ತು ವಾಹನಗಳ ರಾಶಿ:

ಅಧಿಕಾರಿಯ ನಿವಾಸದಲ್ಲಿ ಕೇವಲ ನಗದು ಮಾತ್ರವಲ್ಲದೆ, ಬೃಹತ್ ಪ್ರಮಾಣದ ಚರಾಸ್ತಿ ಕೂಡ ಸಿಕ್ಕಿದೆ. ಸುಮಾರು 2 ಕೋಟಿ 57 ಲಕ್ಷ ರೂಪಾಯಿ ಮೌಲ್ಯದ ವಿವಿಧ ಚರಾಸ್ತಿಗಳು, 7 ಲಕ್ಷ 8 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಹಾಗೂ 20 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ವಾಹನಗಳನ್ನು ಜನಾರ್ಧನ್ ಹೊಂದಿದ್ದಾರೆ. ಇನ್ನು ಇವರು ಮಾಡಿಕೊಂಡಿರುವ ಮನೆ ಭೋಗ್ಯದ (Lease) ಮೊತ್ತವೇ 60 ಲಕ್ಷ ರೂಪಾಯಿ ದಾಟಿದೆ ಎಂದು ತಿಳಿದುಬಂದಿದೆ.

ಆದಾಯಕ್ಕಿಂತ 216% ಏರಿಕೆ:

ಪತ್ತೆಯಾದ ಒಟ್ಟು ಆಸ್ತಿಯ ಮೌಲ್ಯವು ಬರೋಬ್ಬರಿ 4 ಕೋಟಿ 42 ಲಕ್ಷದ 39 ಸಾವಿರದ 262 ರೂಪಾಯಿಗಳೆಂದು ಅಂದಾಜಿಸಲಾಗಿದೆ. ಜನಾರ್ಧನ್ ಅವರ ಅಧಿಕೃತ ವೇತನ ಮತ್ತು ಆದಾಯದ ಮೂಲಗಳನ್ನು ಲೆಕ್ಕ ಹಾಕಿದಾಗ, ಅವರು ಹೊಂದಿರುವ ಆಸ್ತಿಯು ಅವರ ಒಟ್ಟು ಆದಾಯಕ್ಕಿಂತ ಶೇಕಡಾ 216ರಷ್ಟು ಹೆಚ್ಚಾಗಿದೆ. 'ಇದು ಅಕ್ಷರಶಃ ಲೂಟಿಯಾಗಿದೆ. ಒಬ್ಬ ಇಂಜಿನಿಯರ್ ಇಷ್ಟೊಂದು ಪ್ರಮಾಣದ ಭೂಮಿ ಮತ್ತು ನಗದನ್ನು ಅಕ್ರಮವಾಗಿ ಗಳಿಸಿರುವುದು ಗಂಭೀರವಾದ ವಿಚಾರ' ಎಂದು ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.

ಸದ್ಯ ಜನಾರ್ಧನ್ ಮತ್ತು ಅವರ ಆಪ್ತರನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಇನ್ನೂ ಹಲವು ಬೇನಾಮಿ ಆಸ್ತಿಗಳ ಬಗ್ಗೆ ಸುಳಿವು ಸಿಗುವ ಸಾಧ್ಯತೆಯಿದೆ. ರಾಜ್ಯದಾದ್ಯಂತ ಈ ದಾಳಿ ಭಾರಿ ಚರ್ಚೆಗೆ ಕಾರಣವಾಗಿದೆ.

PREV
Read more Articles on
click me!

Recommended Stories

ಬೆಳಗಾವಿ: ಮಲಪ್ರಭಾ ನದಿಯಲ್ಲಿ ಸಿಕ್ಕಿದ್ದು ಹೆಣಗಳಲ್ಲ 3 ಬೈಕ್‌ಗಳು! ಜನರಿಗೆ ಗಾಬರಿ, ಖಾಕಿಗೆ ಇವರ ಮೇಲೆಯೇ ಅನುಮಾನ
ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಈಗಿನ ಸಿದ್ದು ಸರ್ಕಾರದಲ್ಲೇ ಭ್ರಷ್ಟಾಚಾರ ಹೆಚ್ಚು, ಗುತ್ತಿಗೆದಾರರ ಸಂಘದ ಗಂಭೀರ ಆರೋಪ