'ಅಂಬೇಡ್ಕರ್‌ಗೆ ಅಪಮಾನ ಮಾಡಿದ ನ್ಯಾಯಾಧೀಶರ ಮೇಲೆ ಕ್ರಮ ಕೈಗೊಳ್ಳಿ' ಸಿಎಂ ಸಭೆಯಲ್ಲಿ ಒತ್ತಾಯ

By Contributor AsianetFirst Published Apr 13, 2022, 8:19 PM IST
Highlights

* ರಾಯಚೂರು ಗಣರಾಜ್ಯ ದಿನದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಗೆ ಅಪಮಾನ
* ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಸಿಎಂ ಸಭೆಯಲ್ಲಿ ಒತ್ತಾಯ
* ದಲಿತ ಸಂಘಟನೆ ಮುಖಂಡರೊಂದಿಗೆ ಬೊಮ್ಮಾಯಿ ಸಭೆ
* ಶ್ರೀರಾಮುಲು,  ಕೋಟಾ ಶ್ರೀನಿವಾಸ ಪೂಜಾರಿ ಹಾಜರು

ಬೆಂಗಳೂರು(ಏ. 13)  ಎಲ್ಲಾ ಕೋರ್ಟ್ ಗಳಲ್ಲೂ ಡಾ. ಬಿ.ಆರ್. ಅಂಬೇಡ್ಕರ್ (Dr. BR Ambedkar) ಫೋಟೋ ಹಾಕಬೇಕು ಮತ್ತು ಅಂಬೇಡ್ಕರ್ ಫೋಟೋಗೆ ಅವಮಾನ ಮಾಡಿದ ಆರೋಪ ಹೊತ್ತಿರುವ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಮೇಲೆ ಕ್ರಮ ಕೈಗೊಳ್ಳುವಂತೆ  ದಲಿತ ಸಂಘಟನೆಯ ಮುಖಂಡರು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡ ರೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ , ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ  ಬಿ ಶ್ರೀರಾಮುಲು,   ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವ ಜೆಸಿ ಮಾಧುಸ್ವಾಮಿ ಹಾಜರಿದ್ದರು. ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಬೆಳವಣಿಗೆಳ ಬಗ್ಗೆಯೂ ಚರ್ಚೆ ಮಾಡಲಾಯಿತು,.

Latest Videos

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ:    ರಾಯಚೂರು ಜಿಲ್ಲಾ ನ್ಯಾಯಾಲಯದ ಗಣರಾಜ್ಯೋತ್ಸವ ಸಂದರ್ಭ  ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರ ತೆರವು  ಮಾಡಿದ್ದ ಘಟನೆ ದೊಡ್ಡ ಸುದ್ದಿಯಾಗಿತ್ತು.  ಈ ಹಿಂದಿನಿಂದಲೂ ಅಂಬೇಡ್ಕರ್ ಭಾವಚಿತ್ರ  ಇಡುವ ಪದ್ಧತಿ ಇಲ್ಲ.   ಇಟ್ಟಿರುವ ಭಾವಚಿತ್ರ ತೆಗೆದರೆ ಮಾತ್ರ ಕೋರ್ಟ್ ಆವರಣದಲ್ಲಿ ಧ್ವಜಾರೋಹಣ ಮಾಡುವುದಿಲ್ಲ ಎಂದು ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಪಟ್ಟು ಹಿಡಿದಿದ್ದರು.

Hijab Row: ಏಕರೂಪ ಸಂಹಿತೆ ಬಗ್ಗೆ ಅಂಬೇಡ್ಕರ್‌ ಹೇಳಿದ್ದೇನು?

ಈ ಸುದ್ದಿ ಬಹಿರಂಗವಾಗುತ್ತಿದ್ದಂತೆ ದಲಿತ ಸಂಘಟನೆಗಳು ಪ್ರತಿಭಟನೆಗೆ ಇಳಿದಿದ್ದವು.  ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ  ನಡೆಸಿದ್ದವು..  ರಾಯಚೂರು ಮಾತ್ರವಲ್ಲದೆ  ಕರ್ನಾಟಕದ ಇತರ ಕಡೆಗಳಲ್ಲಿಯೂ ಪ್ರತಿಭಟನೆ  ನಡೆದಿತ್ತು.  ಇನ್ನೊಂದು ಕಡೆ ಘಟನೆಗೆ ಸಂಬಂಧಿಸಿ  ನ್ಯಾಯಾಧೀಶರು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿ ಸತ್ಯ ಸಂಗತಿ ಮರೆಮಾಚಿ ಅಪಪ್ರಚಾರ ಮಾಡಲಾಗುತ್ತಿದೆ  ಎಂದಿದ್ದರು.

73ನೇ ಗಣರಾಜ್ಯೋತ್ಸವ  ಸಂದರ್ಭ ಜಿಲ್ಲಾ(Raichur) ಕೋರ್ಟ್ ಆವರಣದಲ್ಲಿ ಧ್ವಜಾರೋಹಣಕ್ಕಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಅಂಬೇಡ್ಕರ್  ಮತ್ತು ಗಾಂಧೀಜಿ (Mahatma Gandhi)ಪೋಟೋ  ಒಂದರ ಪಕ್ಕ ಒಂದು ಇಡಲಾಗಿತ್ತು.  ಆದರೆ ಅಂಬೇಡ್ಕರ್ ಪೋಟೋ ತೆರವು ಮಾಡಿದ್ರೆ ಮಾತ್ರ ಧ್ವಜಾರೋಹಣಕ್ಕೆ ಬರುತ್ತೇನೆ ಎಂದು ನ್ಯಾಯಧೀಶರು ಹೇಳಿದ್ದರು ಎನ್ನು ವುದೇ ವಿವಾದದ ಮೂಲ.

ಗಣರಾಜ್ಯೋತ್ಸವದ ವೇಳೆ ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರವು ಆದೇಶ ಹೊರಡಿಸಿತ್ತು. ಆದರೆ ನ್ಯಾಯಾಧೀಶರು ಸರ್ಕಾರದ ಆದೇಶವು ಹೈಕೋರ್ಟ್‌ ಮುಖಾಂತರ ಕೈ ಸೇರಿಲ್ಲ. ಅದಕ್ಕಾಗಿ ಅಂಬೇಡ್ಕರ್‌ ಭಾವಚಿತ್ರವನ್ನು ತೆರವುಗೊಳಿಸಿದ್ದಾರೆ ಎಂದು ಎಸ್ಸಿ ಸಮುದಾಯ ಹಾಗೂ ಇತರೆ ವಕೀಲರು ಆರೋಪಿಸಿ ಕೋರ್ಟ್‌ ಆವರಣದಲ್ಲಿ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ನಂತರ ಹೈಕೋರ್ಟಿನ ಉಸ್ತುವಾರಿ ನ್ಯಾಯಮೂರ್ತಿಗಳೊಂದಿಗೆ ನ್ಯಾಯಾಧೀಶರು ಚರ್ಚೆ ನಡೆಸಿದ ಬಳಿಕ ಅಂಬೇಡ್ಕರ್‌ ಭಾವಚಿತ್ರವನ್ನು ತಂದು ಮತ್ತೆ ಅದೇ ಸ್ಥಾನದಲ್ಲಿ ಇರಿಸಲಾಯಿತು. ಅಂಬೇಡ್ಕರ್‌ ಭಾವಚಿತ್ರ ತೆರವುಗೊಳಿಸಿದ ವಿಚಾರಕ್ಕಾಗಿ ಸ್ಥಳೀಯರು ನ್ಯಾಯಾಧೀಶರ ನಡೆಯ ವಿರುದ್ಧ ತೀವ್ರ ಅಸಮಾಧಾನ ಹೊರ ಹಾಕಿದ್ದರು.

ಸತ್ಯ ಘಟನೆ ಮರೆಮಾಚಿ ಅಪಪ್ರಚಾರ: ರಾಯಚೂರು “ಸಂವಿಧಾನ ಶಿಲ್ಪಿ ಹಾಗೂ ಭಾರತ ರತ್ನ ಡಾ.ಬಿ.ಅರ್.ಅಂಬೇಡ್ಕರವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಅಭಿಮಾನ ಇದೆ” ಎಂದು ರಾಯಚೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ತಿಳಿಸಿದ್ದರು.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿ, ಪ್ರತಿ ವರ್ಷ ನವೆಂಬರ್ 26 ರಂದು ಸಂವಿಧಾನ ದಿನ ಆಚರಣೆ ಮಾಡುತ್ತಾ ಬಂದಿದ್ದು, ಆ ಸಮಯದಲ್ಲಿ ನಾನು ಅಂತಹ ಮಹಾನ್ ವ್ಯಕ್ತಿತ್ವ,ತತ್ವ, ಆದರ್ಶ ಮತ್ತು ನಡೆ ನುಡಿಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಅಂತಾ ವಿನಂತಿಸಿಕೊಂಡಿರುತ್ತೇನೆ.  ಮಹಾನ್ ವ್ಯಕ್ತಿಗೆ ನಾನು ಯಾವತ್ತು ಅಗೌರವ ತೋರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ನನ್ನ ಬಗ್ಗೆ ಯಾವ ಉದ್ದೇಶ ಇಟ್ಟುಕೊಂಡು ಆ ರೀತಿ ಅಪಪ್ರಚಾರ ಮಾಡಿದ್ದಾರೆ ಎನ್ನುವುದು ತಿಳಿಯದಾಗಿದೆ. ವದಂತಿ ಸುಳ್ಳಾಗಿದ್ದು ಅದನ್ನು ನಂಬಬೇಡಿ ಎಂದು ವಿನಂತಿ ಮಾಡಿಕೊಂಡಿದ್ದರು. ಇದೆಲ್ಲದರ ನಡುವೆ ದಲಿತ ಸಂಘಟನೆಗಳು ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದವು. ಈಗ ಸಿಎಂ ಮುಂದಿನ ಸಭೆಯಲ್ಲೂ ಮನವಿ ಮಾಡಿಕೊಳ್ಳಲಾಗಿದೆ.

click me!