Jog Falls : ಜೋಗದಲ್ಲಿ ಮಹತ್ವದ ಯೋಜನೆ - ಪ್ರವಾಸಿಗರಿಗೂ ಗುಡ್ ನ್ಯೂಸ್

By Kannadaprabha NewsFirst Published Jan 7, 2022, 10:53 AM IST
Highlights
  •  ಜೋಗದಲ್ಲಿ ರೋಪ್‌ ವೇ, ಫೈವ್‌ ಸ್ಟಾರ್‌ ಹೋಟೆಲ್‌
  •  116 ಕೋಟಿ ಬಿಡುಗಡೆಗೆ ಸಚಿವ ಸಂಪುಟ ಒಪ್ಪಿಗೆ
  •  ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ

  ಬೆಂಗಳೂರು(ಜ.07):   ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಹೊಸ ಆಕರ್ಷಣೆ ನೀಡುವ ಉದ್ದೇಶದಿಂದ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ರೋಪ್‌ ವೇ ಮತ್ತು ಪಂಚತಾರಾ ಹೋಟೆಲ್‌ ನಿರ್ಮಾಣಕ್ಕೆ 116 ಕೋಟಿ ರು. ನೀಡಲು ಸಚಿವ ಸಂಪುಟ ಸಭೆ ಮಹತ್ವದ ನಿರ್ಣಯ ಕೈಗೊಂಡಿದೆ.  ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai ) ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ಜೋಗ ಜಲಪಾತದಲ್ಲಿ (Jog Falls )  ರೋಪ್‌ ವೇ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಒತ್ತಾಯವಿದ್ದ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ.

ಸಚಿವ ಸಂಪುಟ (Karnataka Cabinet) ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಪಿಪಿಪಿ (PPP) ಮಾದರಿಯಲ್ಲಿ ಜೋಗ ಜಲಪಾತದಲ್ಲಿ ಐಷಾರಾಮಿ ಹೋಟೆಲ್‌ (Hotel) ಮತ್ತು ಶರಾವತಿ ನದಿಗೆ (River) ಅಡ್ಡಲಾಗಿ ರೋಪ್‌ ವೇ (Ropeway) ಅನ್ನು 116 ಕೋಟಿ ರು. ಅಂದಾಜು ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ. ಈಗಾಗಲೇ ಜೋಗ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಆದರೆ, ರೋಪ್‌ ವೇ ಮತ್ತು ಐಷಾರಾಮಿ ಹೊಟೇಲ್‌ ನಿರ್ಮಾಣಕ್ಕೂ ಪ್ರಾಧಿಕಾರಕ್ಕೂ ಸಂಬಂಧ ಇಲ್ಲ. ಸರ್ಕಾರ ಪ್ರತ್ಯೇಕ ವೆಚ್ಚದಲ್ಲಿ ನಿರ್ಮಿಸಲಿದೆ ಎಂದು ಸ್ಪಷ್ಟಪಡಿಸಿದರು.

52 ಯೋಜನೆಗೆ ಖಾಸಗಿ ಸಹಭಾಗಿತ್ವ  : ಕರ್ನಾಟಕ ಸರ್ಕಾರದ (Karnataka Govt) ಹಿರಿಯ ಅಧಿಕಾರಿಗಳು ಸಭೆ  ನಡೆಸಿದ್ದು ಖಾಸಗಿ ಕಂಪನಿಗಳ ಸಹಭಾಗಿತ್ವದಲ್ಲಿ  52  ಯೋಜನೆ ಅನುಷ್ಠಾನಕ್ಕೆ  ನೀಲನಕ್ಷೆ ಸಿದ್ಧಮಾಡಿವೆ.   13  ಇಲಾಖೆಗಳಿಗೆ ಸಂಬಂಧಿಸಿದ  52  ಬೃಹತ್ ಯೋಜನೆಗಳು ಇಲ್ಲಿವೆ.  ಬೆಂಗಳೂರಿನ ಹೊರಗೆ  ರಿಂಗ್ ರೋಡ್ (peripheral ring road) ಕಾಮಗಾರಿ, ಬಸವೇಶ್ವರ ನಗರದಲ್ಲಿ ಸಾಫ್ಟ್ ವೇರ್ ಪಾರ್ಕ್,  ಜೋಗ್ ಫಾಲ್ಸ್ (Jog Falls) ನಲ್ಲಿ ರೋಪ್ ವೇ ಸೇರಿದಂತೆ ಅನೇಕ ಯೋಜನೆಗಳನ್ನು ಒಳಗೊಂಡಿದೆ.

ಈ ಎಲ್ಲ ಯೋಜನೆಗಳ ನೀಲ ನಕ್ಷೆ ಸಿದ್ಧವಾಗಿದ್ದು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗೆ ಕಳುಹಿಸಿಕೊಡಲಾಗಿದೆ.  ರಾಜ್ಯದ (Karnataka)  ಮುಖ್ಯ ಕಾರ್ಯದರ್ಶಿ ನೇತೃತ್ವದ  ಕಮೀಟಿ ಸಭೆ ನಡೆಸುವುದಕ್ಕೂ ಮುನ್ನ ಈ ಯೋಜನೆಗಳ ಕರಡು ಸಿದ್ಧವಾಗಿದೆ.  ನಂತರ ಕ್ಯಾಬಿನೆಟ್ ಅನುಮೋದನೆಯನ್ನು ಪಡೆದುಕೊಳ್ಳಲಾಗುವುದು ಎಂದು ಹೆಚ್ಚುವರಿ ಕಾರ್ಯದರ್ಶಿ ಬಿ ಎಚ್ ಅನಿಲ್ ಕುಮಾರ್ ತಿಳಿಸಿದ್ದಾರೆ.

ಫೆರಿಫೆರಲ್ ರಿಂಗ್ ರೋಡ್: ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಗಳು ಅನುಷ್ಠಾನಗೊಳ್ಳಲಿವೆ. ಖಾಸಗಿ ಸಂಸ್ಥೆಗಳು ಹಣ ಹೂಡಿಕೆ ಮಾಡಲಿವೆ.  ಸರ್ಕಾರ ಭೂಮಿಯನ್ನು ಒದಗಿಸಿಕೊಡಲಿದೆ. ರಿಂಗ್ ರೋಡ್ ವಿಚಾರದಲ್ಲಿ ಭೂಮಿಗೆ ಖಾಸಗಿಯವರು ಹಣ ನೀಡಲಿದ್ದಾರೆ ಎಂದು ತಿಳಿಸಿದರು.'

ಗೋವಾದಲ್ಲಿ ಕರ್ನಾಟಕ ಭವನ ನಿರ್ಮಾಣ

ಇದರಲ್ಲಿ  65 ಕೀಮೀ ಯೋಜನೆ ಒಳಗೊಂಡಿರುತ್ತದೆ. ತುಮಕೂರು ರಸ್ತೆ ಬಳ್ಳಾರಿ ರಸ್ತೆ ಹಳೆ ಮದ್ರಾಸ್ ರೋಡ್  ಹೊಸೂರು ಹೆದ್ದಾರಿಗಳನ್ನು ಈ ರಿಂಗ್ ರೋಡ್ ಸಂಪರ್ಕ ಮಾಡಲಿದೆ. ಕನಕಪುರ ರಸ್ತೆ ಮತ್ತು ಮೈಸೂರು ರಸ್ತೆ ನಡುವೆ ತಡೆರಹಿತ ಸಂಪರ್ಕ ಸಾಧ್ಯವಾಗಲಿದೆ.  ತಮಿಳುಮತ್ತು ಕೇರಳದ ಹೆದ್ದಾರಿಗಳಿಗೂ ಸಂಪರ್ಕ ಸಾಧ್ಯವಾಗಲಿದೆ.  ಎರಡು ದಶಕದಲ್ಲಿ ಈ ಪ್ರಾಜೆಕ್ಟ್ ಮುಗಿಸುವ ಯೋಜನೆ ಇದ್ದು ವೆಚ್ಚ  21,000  ಕೋಟಿ ರೂ.  ಆಗಲಿದೆ.  ಭೂಮಿ ವಶಕ್ಕೆ ಪಡೆಯಲು 15,000  ಕೋಟಿ ರೂ. ಬೇಕಾಗುವುದು.

ಪಶುಲೋಕ; ಪಶುಸಂಗೋಪನೆ ಇಲಾಖೆ  ಅಡಿಯಲ್ಲಿ  ಪಶುಲೋಕ ಥೀಮ್ ಪಾರ್ಕ್ ಹೆಸರಘಟ್ಟದಲ್ಲಿ ನಿರ್ಮಾಣವಾಗಲಿದೆ.  ದಾಸರಹಳ್ಳಿಯಲ್ಲೊಂದು ಶ್ವಾನ ಆರೈಕೆ ಕೇಂದ್ರ, ದೊಡ್ಡಬಳ್ಳಾಪುರದಲ್ಲೊಂದು ಥೀರ್ಮ್ ಪಾರ್ಕ್, ಯುವಜನ ಮತ್ತು ಕ್ರೀಡಾ ಇಲಾಖೆಯಿಂದ ಕಂಠೀರವ ಸ್ಟೇಡಿಯಂ ಅಭಿವೃದ್ಧಿ,  ಕ್ರೀಡಾ ಅಕಾಡೆಮಿ, ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೂ ಸಹ ಪ್ರಸ್ತಾವನೆ ಸಲ್ಲಿಕೆಯಾಗಿದೆ. 

ಇನ್ನು ಗ್ರಾಮೀಣಾಭಿವೃದ್ಧಿ ಮತ್ತು  ಪಂಚಾಯತ್ ರಾಜ್ ಇಲಾಖೆ  ಮೂಲಸೌಕರ್ಯ ಅಭಿವೃದ್ಧಿ ಮತ್ತು ಕುಡಿಯುವ  ನೀರಿನ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿದೆ. ಇದು ಸಹ  150  ಕೋಟಿ ರೂ. ವೆಚ್ಚದ ಯೋಜನೆಯಾಗಿದೆ.

ಸ್ಮಾರ್ಟ್ ಎನರ್ಜಿ ಮತ್ತು ವಾಟರ್ ಮೀಟರ್ ಅಳವಡಿಕೆ, ಬೋರ್ ವೆಲ್ ಸೆಸ್ಸಾರ್, ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೂ ಖಾಸಗಿಯವರಿಗೆ ಆಹ್ವಾನ ನೀಡಿದ್ದೇವೆ.   ಈ ಯೋಜನೆಗಳು ಕಡಿಮೆ ಶಕ್ತಿ ಬಳಸಿಕೊಂಡು ಅತಿ ಹೆಚ್ಚಿನ ಉಪಯೋಗ ನೀಡಲಿವೆ ಎಂದು ತಿಳಿಸಿದ್ದಾರೆ.

ದೊಡ್ಡ ಯೋಜನೆಗಳಿಗೆ ಬಜೆಟ್ ನಲ್ಲಿಯೇ ಹಣ ಮೀಸಲಿಟ್ಟಿದ್ದರೂ  ಅನುಷ್ಠಾನಕ್ಕೆ ಸರಿಯಾದ ರೂಪು ರೇಷೆ ಸಿಕ್ಕಿರಲಿಲ್ಲ. ಈಗ ಅಂತಿಮವಾಗಿ  ಅಧಿಕಾರಿಗಳು  ಎಲ್ಲ ಇಲಾಖೆಗಳ ಪ್ರಸ್ತಾವನೆಗಳ ಆಧಾರದಲ್ಲಿ ನೀಲ ನಕ್ಷೆ ಸಿದ್ಧ ಮಾಡಿ ಕ್ಯಾಬಿನೆಟ್ ಮುಂದೆ ಇಡಲಿದ್ದಾರೆ. ಕರ್ನಾಟಕ ಕ್ಯಾಬಿನೆಟ್ ಸಹ ಈ ಯೋಜನೆಗಳಿಗೆ ಅನುಮತಿ ನೀಡುವ ಸಾಧ್ಯತೆ ಹೆಚ್ಚಿದೆ. ಪ್ರವಾಸೋದ್ಯಮ, ಹೈನುಗಾರಿಕೆ ಮತ್ತು ಮೂಲಸೌಕರ್ಯ ವಿಚಾರದಲ್ಲಿ ಆಯಾ ಜಿಲ್ಲೆಗಳಿಗೂ ಈ ಯೋಜನೆಗಳು ಪ್ರಮುಖವಾಗುತ್ತದೆ. ಸಿಎಂ ಬಸವರಾಜ  ಬೊಮ್ಮಾಯಿ ನೇತೃತ್ವದಲ್ಲಿ ನಡೆಯುವ ಕ್ಯಾಬಿನೆಟ್ ನಲ್ಲಿ ಈ ಯೋಜನೆಗಳ ಪಸ್ತಾಪ ಆಗಲಿದೆ. 

click me!