
ಹುಬ್ಬಳ್ಳಿ: ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಹುಚ್ಚಾಟ ಮತ್ತೊಮ್ಮೆ ದುರ್ಘಟನೆಯಲ್ಲಿ ಅಂತ್ಯಗೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ರೀಲ್ಸ್ ಮಾಡುವ ಹುಚ್ಚಾಟಕ್ಕೆ ಬಲಿಯಾದ ಬಾಲಕನ ಸಾವಿನ ಘಟನೆ ರಾಜ್ಯದಾದ್ಯಂತ ಆತಂಕ ಮತ್ತು ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆಯುವ ಉದ್ದೇಶದಿಂದ ಸ್ಟಂಟ್ ಮಾಡಿ ರೀಲ್ಸ್ ಮಾಡುವಾಗ ಸಂಭವಿಸಿದ ಅಪಘಾತದಲ್ಲಿ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ.
ಈ ಪ್ರಕರಣವೀಗ ಮತ್ತೊಂದು ಚರ್ಚೆಯನ್ನು ಹುಟ್ಟುಹಾಕಿದೆ. 16 ವರ್ಷದ ಒಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಎಂದು ಕರ್ನಾಟಕದಲ್ಲಿ ನಿಷೇಧವಿದೆ. ಹಾಗಿದ್ದರೂ ಯುವಕನಿಗೆ ರೀಲ್ಸ್ ಮಾಡಲು ಮೊಬೈಲ್ ನೀಡಲಾಗಿದೆ. ಮೃತ ಯುವಕನಿಗೆ 15 ವರ್ಷವಾಗಿದೆ. ಡ್ರೈವಿಂಗ್ ಮಾಡುವಂತಿಲ್ಲ.
ಘಟನೆಯ ನಂತರ ಬಾಲಕನನ್ನು ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ದುರ್ಘಟನೆ ತಿಳಿದ ತಕ್ಷಣ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಆಸ್ಪತ್ರೆಗೆ ಭೇಟಿ ನೀಡಿ, ಬಾಲಕನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮೃತ ಬಾಲಕ ಬಿಜೆಪಿ ಮುಖಂಡ ವೀರೇಶ್ ಸಂಗಳ ಅವರ ಪುತ್ರನಾಗಿದ್ದು, ಕುಟುಂಬದ ದುಃಖದಲ್ಲಿ ಶಾಸಕರು ಪಾಲ್ಗೊಂಡರು.
ಆಸ್ಪತ್ರೆ ಭೇಟಿ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಟೆಂಗಿನಕಾಯಿ, “ನಮ್ಮ ಪಕ್ಷದ ಮುಖಂಡನ ಮಗ ರೀಲ್ಸ್ ಮಾಡಲು ಹೋಗಿ ಜೀವ ಕಳೆದುಕೊಂಡಿರುವುದು ಅತ್ಯಂತ ದುಃಖಕರ ಸಂಗತಿ. ಇತ್ತೀಚಿನ ದಿನಗಳಲ್ಲಿ ಯುವಕರು ರೀಲ್ಸ್ ಮತ್ತು ಸ್ಟಂಟ್ಗಳ ಹುಚ್ಚಾಟಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ,” ಎಂದು ಹೇಳಿದರು.
ಯುವಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಲೈಕ್ ಮತ್ತು ಫಾಲೋವರ್ಸ್ ಪಡೆಯುವ ಉದ್ದೇಶದಿಂದ ಅಪಾಯಕಾರಿ ಸಾಹಸಗಳಿಗೆ ಮುಂದಾಗುವ ಪ್ರವೃತ್ತಿ ಹೆಚ್ಚುತ್ತಿರುವುದು ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಈ ಘಟನೆ ಪಾಠವಾಗಬೇಕಿದ್ದು, ತಂದೆ-ತಾಯಿಗಳು ತಮ್ಮ ಮಕ್ಕಳಿಗೆ ವಾಹನಗಳನ್ನು ಸುಲಭವಾಗಿ ನೀಡುವುದನ್ನು ಮರುಪರಿಶೀಲಿಸಬೇಕು ಎಂದು ಸಲಹೆ ನೀಡಿದರು.
“ಸ್ಟಂಟ್ ಮಾಡುವ ಉದ್ದೇಶದಿಂದ ವಾಹನಗಳನ್ನು ಬಳಸುವ ಯುವಕರು ತಮ್ಮ ಜೀವವನ್ನೇ ಪಣಕ್ಕಿಡುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಅಪಘಾತ ಸಂಭವಿಸಿದರೆ, ಕೇವಲ ಚಾಲಕ ಮಾತ್ರವಲ್ಲದೆ ವಾಹನದ ಮಾಲೀಕರ ಮೇಲೂ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಆದ್ದರಿಂದ ಕುಟುಂಬಸ್ಥರು ಕೂಡ ಹೆಚ್ಚಿನ ಜಾಗ್ರತೆ ವಹಿಸಬೇಕು,” ಎಂದು ಶಾಸಕರು ಎಚ್ಚರಿಸಿದರು.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಪ್ರವೃತ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅನೇಕ ಯುವಕರು ಅಪಾಯಕಾರಿ ಸಾಹಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದರ ಪರಿಣಾಮವಾಗಿ ಅಮಾಯಕ ಜೀವಗಳು ಬಲಿಯಾಗುತ್ತಿರುವ ಘಟನೆಗಳು ಹೆಚ್ಚುತ್ತಿರುವುದು ಸಮಾಜಕ್ಕೆ ಎಚ್ಚರಿಕೆಯ ಸೂಚನೆಯಾಗಿದೆ.
ಈ ಹಿನ್ನೆಲೆಯಲ್ಲಿ, ಅಪಾಯಕಾರಿ ಸ್ಟಂಟ್ಗಳನ್ನು ಮಾಡಿ ರೀಲ್ಸ್ ಚಿತ್ರೀಕರಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಶಾಸಕ ಟೆಂಗಿನಕಾಯಿ ಆಗ್ರಹಿಸಿದರು. ಸಾರ್ವಜನಿಕರ ಜೀವ ಭದ್ರತೆಗಾಗಿ ಕಾನೂನು ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂಬುದು ಅವರ ಅಭಿಪ್ರಾಯವಾಗಿದೆ.
ಒಟ್ಟಾರೆ, ಈ ದುರ್ಘಟನೆ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಮತ್ತು ಅಪಾಯಕಾರಿ ಮನರಂಜನೆಯ ಪರಿಣಾಮವನ್ನು ಮತ್ತೊಮ್ಮೆ ತೋರಿಸಿದೆ. ಯುವಕರು ಜಾಗ್ರತೆಯಿಂದ ನಡೆದುಕೊಳ್ಳಬೇಕು ಹಾಗೂ ಪೋಷಕರು ಮಕ್ಕಳ ಚಟುವಟಿಕೆಗಳ ಮೇಲೆ ಕಣ್ಣಿಡಬೇಕು ಎಂಬ ಸಂದೇಶವನ್ನು ಈ ಘಟನೆ ನೀಡಿದೆ.
ಬಿಜೆಪಿ ಮುಖಂಡ ವಿರೇಶ್ ಸಂಗಳದ ಪುತ್ರ ರೀಲ್ಸ್ ಹುಚ್ಚಾಟಕ್ಕೆ ಬೈಕ್ ಮತ್ತು ಕಾರಿನ ನಡುವೆ ಅಪಘಾತ ನಡೆದು ಈ ದುರಂತ ನಡೆದಿದೆ. ಮೃತ ಯುವಕ ನಮೀಷ್ ಸಂಗಳದ, ಉಣಕಲ್ ಕೆರೆ ಸಮೀಪದ ಶೇಜವಾಡಕರ ಲೇಔಟ್ನಲ್ಲಿ ಈ ಭೀಕರ ಘಟನೆ ನಡೆದಿದೆ. ರಿಲ್ಸ್ ಮಾಡುವ ಹುಚ್ಚಿಗೆ ಬಿದ್ದು, ಬೈಕ್ ಮುತ್ತು AUDI ಕಾರಿನ ನಡುವೆ ಅಪಘಾತ. ಬೈಕ್ ಅನ್ನು ಸ್ವತ ನಮೀಷ್ ಓಡಿಸುತ್ತಿದ್ದ ಆಡಿ ಕಾರನ್ನು ಆತನ 15 ವರ್ಷದ ಗೆಳೆಯ ಓಡಿಸುತ್ತಿದ್ದ ಎಂದು ತಿಳಿದುಬಂದಿದೆ.