
ಬೆಂಗಳೂರು (ಮಾ.19): ಸಿಲಿಕಾನ್ ಸಿಟಿಯಲ್ಲಿ ಮನೆ ಬಾಡಿಗೆ ಪಡೆಯುವುದು ಎಷ್ಟು ಕಷ್ಟವೋ, ಮನೆ ಖಾಲಿ ಮಾಡುವಾಗ ಕೊಟ್ಟ ಹಣವನ್ನು ವಾಪಸ್ ಪಡೆಯುವುದು ಅಷ್ಟೇ ಸವಾಲಿನ ಕೆಲಸ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಯಶವಂತಪುರದ 'ಆರ್ಜ್ ಅರ್ಬನ್ ಬ್ಲೂಮ್' (Arge Urban Bloom) ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ ಯುವತಿಯೊಬ್ಬರು ತಮ್ಮ ಮನೆ ಮಾಲೀಕರು ಸೆಕ್ಯೂರಿಟಿ ಡೆಪಾಸಿಟ್ ಹಣವನ್ನು ಮರಳಿಸದೆ ವಂಚಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಸಂತ್ರಸ್ತೆ, ವೀರೇಂದ್ರ ಪಿ. ಖಟ್ವಕರ್ ಮತ್ತು ರೇಖಾ ವಿ. ಖಟ್ವಕರ್ ಎಂಬುವವರಿಗೆ ಸೇರಿದ 3BHK ಫ್ಲಾಟ್ನಲ್ಲಿ ವಾಸವಿದ್ದರು. ಮನೆ ಪಡೆಯುವಾಗ ಅವರು ₹70,000 ಮೊತ್ತವನ್ನು ಸೆಕ್ಯೂರಿಟಿ ಡೆಪಾಸಿಟ್ ಆಗಿ ನೀಡಿದ್ದರು. ಇತ್ತೀಚೆಗೆ ಮಾಲೀಕರು ಆಸ್ತಿಯನ್ನು ಮಾರಾಟ ಮಾಡುವ ನಿರ್ಧಾರ ಮಾಡಿ, ಯುವತಿಗೆ ಮನೆ ಖಾಲಿ ಮಾಡುವಂತೆ ಸೂಚಿಸಿದ್ದರು. ಆದರೆ, ಮನೆ ಖಾಲಿ ಮಾಡಿದ ನಂತರ ಮಾಲೀಕರು ಕೇವಲ ₹18,000 ಹಣವನ್ನು ಮಾತ್ರ ಮರಳಿಸಿದ್ದಾರೆ ಎಂದು ಅವರು ದೂರಿದ್ದಾರೆ. ಅಂದರೆ, ಯಾವುದೇ ಸೂಕ್ತ ಕಾರಣವಿಲ್ಲದೆ ಸುಮಾರು ₹52,000 ಹಣವನ್ನು ಮಾಲೀಕರು ಕಡಿತಗೊಳಿಸಿದ್ದಾರೆ ಎಂಬುದು ಯುವತಿಯ ವಾದ.
ತಮಗೆ ಆದ ಅನ್ಯಾಯದ ಬಗ್ಗೆ ಯುವತಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಈ ರೀಲ್ಸ್ ಈಗಾಗಲೇ 7.3 ಲಕ್ಷಕ್ಕೂ ಅಧಿಕ ವೀಕ್ಷಣೆ ಹಾಗೂ 17,000 ಲೈಕ್ಸ್ ಪಡೆದಿದ್ದು, ನೆಟ್ಟಿಗರು ಮಾಲೀಕರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರು ನಗರ ಪೊಲೀಸ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಟ್ಯಾಗ್ ಮಾಡಿರುವ ಅವರು, ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮನೆ ಮಾಲೀಕರು ಡೆಪಾಸಿಟ್ ಹಣದಲ್ಲಿ ಅನ್ಯಾಯವಾಗಿ ಕಡಿತ ಮಾಡುವುದು ಹೊಸದೇನಲ್ಲ. ಸಾಮಾನ್ಯವಾಗಿ ಇಂತಹ ಸಮಸ್ಯೆಗಳು ಎದುರಾಗುತ್ತವೆ. ಮನೆ ಖಾಲಿ ಮಾಡುವಾಗ ಅತಿಯಾದ ಪೇಂಟಿಂಗ್ ಚಾರ್ಜ್ ಹಾಗೂ ಅನಗತ್ಯ ರಿಪೇರಿ ನೆಪ ಹೇಳಿ ಡೆಪಾಸಿಟ್ ನುಂಗುವುದು ಸಾಮಾನ್ಯವಾಗಿದೆ. ಮನೆ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿ ಬಾಡಿಗೆದಾರರನ್ನು ಅವಧಿಗೂ ಮುನ್ನವೇ ಖಾಲಿ ಮಾಡಿಸಿ, ಡೆಪಾಸಿಟ್ ಮರಳಿಸುವಲ್ಲಿ ಸತಾಯಿಸಲಾಗುತ್ತದೆ. ಕರ್ನಾಟಕ ಬಾಡಿಗೆ ನಿಯಂತ್ರಣ ಕಾಯ್ದೆಯ ಪ್ರಕಾರ ಮಾಲೀಕರು ಸೀಮಿತ ತಿಂಗಳ ಬಾಡಿಗೆಯನ್ನು ಮಾತ್ರ ಮುಂಗಡವಾಗಿ ಪಡೆಯಬೇಕು. ಆದರೆ ಬೆಂಗಳೂರಿನಲ್ಲಿ 10 ತಿಂಗಳ ಬಾಡಿಗೆಯನ್ನು ಮುಂಗಡವಾಗಿ ಪಡೆಯುವ ಸಂಪ್ರದಾಯ ಇನ್ನೂ ಮುಂದುವರಿದಿದೆ.