ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸಾರಥಿ ಯಾರೆಂದು ಎರಡು ವಿಧಾನಸಭಾ ಕ್ಷೇತ್ರಗಳ 456313 ಮತದಾರರು ನಿರ್ಧರಿಸಿ ಭವಿಷ್ಯ ಬರೆದಿದ್ದಾರೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮೇ.12): ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಮೇ 10 ರಂದು ಬರೆದಿದ್ದು ಅದು ಈಗಾಗಲೇ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದೆ. ಅಭ್ಯರ್ಥಿಗಳ ಈ ಭವಿಷ್ಯ ಏನು ಎನ್ನುವುದು ಬಹಿರಂಗ ಆಗುವುದಕ್ಕೆ ಕ್ಷಣಗಣನೆ ಶುರುವಾಗಿದೆ. ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಸಾರಥಿ ಯಾರೆಂದು ಎರಡು ವಿಧಾನಸಭಾ ಕ್ಷೇತ್ರಗಳ 456313 ಮತದಾರರು ನಿರ್ಧರಿಸಿ ಭವಿಷ್ಯ ಬರೆದಿದ್ದಾರೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಇರುವ ಸಂತ ಜೋಸೆಫ್ ಕಾನ್ವೆಂಟ್ ನಲ್ಲಿ ತೀವ್ರ ಭದ್ರತೆಯಲ್ಲಿ ಮತಪೆಟ್ಟಿಗೆಗಳನ್ನು ಇರಿಸಲಾಗಿದೆ. ಶನಿವಾರ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ನಡೆಯಲಿದ್ದು ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ.
ಮಡಿಕೇರಿ ಮತ್ತು ವಿರಾಜಪೇಟೆ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟಿತ್ತು. ಹೀಗಾಗಿ ಬಿಜೆಪಿ ಅಭ್ಯರ್ಥಿಗಳಾದ ಅಪ್ಪಚ್ಚು ರಂಜನ್ ಮತ್ತು ಕೆ. ಜಿ ಬೋಪಯ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಾದ ಮಂತರ್ ಗೌಡ ಮತ್ತು ಎ. ಎಸ್ ಪೊನ್ನಣ್ಣ ಸೇರಿದಂತೆ ಎರಡು ಪಕ್ಷಗಳ ನಾಲ್ಕು ಅಭ್ಯರ್ಥಿಗಳ ಎದೆಯಲ್ಲಿ ಬಡಿತ ಜೋರಾಗಿದೆ. ಕಳೆದ ಎರಡುವರೆ ದಶಕಗಳಿಂದ ಭದ್ರಕೋಟೆಯನ್ನು ನಿರ್ಮಿಸಿಕೊಂಡಿದ್ದ ಬಿಜೆಪಿಯ ಎರಡು ಶಾಸಕರ ವಿರುದ್ಧ ಆಡಳಿತ ವಿರೋಧಿ ಅಲೆ ತೀವ್ರವಾಗಿದೆ. ಜೊತೆಗೆ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎನ್ನುವ ಆರೋಪವಿದೆ. ಇದು ಕಾಂಗ್ರೆಸ್ ಅಭ್ಯರ್ಥಿಗಳಿಗೆ ವರವಾಗುತ್ತಾ ಎನ್ನುವ ಕುತೂಹಲವಿದೆ.
ಚುನಾವಣ ಪ್ರಚಾರದ ಸಂದರ್ಭದಲ್ಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಹವಾ ಜೋರಾಗಿಯೇ ಇತ್ತು. ಈ ಎಲ್ಲಾ ಕಾರಣಗಳಿಂದ ನಾಳೆಯ ಮತ ಎಣಿಕೆ ಸಾಕಷ್ಟು ಕುತೂಹಲ ಮೂಡಿಸಿದೆ. ಮತ ಎಣಿಕೆ ಹಿನ್ನೆಯಲ್ಲಿ ಜಿಲ್ಲಾಡಳಿವೂ ಕೂಡ ಸಕಲ ಸಿದ್ಧತೆ ನಡೆಸಿದೆ. ಒಟ್ಟು ನಾಲ್ಕು ಟೇಬಲ್ ಗಳಲ್ಲಿ 16 ಸುತ್ತಿನ ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಬಿ. ಸಿ ಸತೀಶ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 12 ಗಂಟೆಯಿಂದ ಶನಿವಾರ ರಾತ್ರಿ 12 ಗಂಟೆವರೆಗೆ 144 ಸೆಕ್ಷನ್ ಜಾರಿ ಮಾಡಿದೆ. ಜೊತೆಗೆ ಮತ ಎಣಿಕೆ ಕೇಂದ್ರದ ಸುತ್ತಲೂ 200 ಮೀಟರ್ ಈಗಾಗಲೇ ನಿಷೇಧಾಜ್ಞೆ ಹೇರಿ ನಿರ್ಬಂಧಿಸಿ. ಇತ್ತ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ವೀಕ್ಷಕರಾಗಿ ನೇಮಕಗೊಂಡಿರುವ ಜಿ.ಪ್ರಸನ್ನ ರಾಮಸ್ವಾಮಿ (ಭಾ.ಆ.ಸೇ) ಅವರು ನಗರದ ಸಂತ ಜೋಸೆಫರ ಶಾಲೆಗೆ ಶುಕ್ರವಾರ ಭೇಟಿ ನೀಡಿ ಮತ ಎಣಿಕೆ ಸಿದ್ಧತೆ ಬಗ್ಗೆ ಪರಿಶೀಲಿಸಿದರು.
ನಿಖರ ಮತ್ತು ಸ್ಪಷ್ಟ ಫಲಿತಾಂಶ ಹೇಳಿದವರಿಗೆ ಸಿಗಲಿದೆ 10 ಲಕ್ಷ!
ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಜೊತೆ ಸಮಾಲೋಚನೆ ನಡೆಸಿದರು. ಹಾಗೆಯೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಶಬನಾ ಎಂ.ಶೇಕ್ ಅವರಿಂದ ಮತ ಎಣಿಕೆಗೆ ಕೈಗೊಳ್ಳಲಾಗಿರುವ ಸಿದ್ಧತೆ ಬಗ್ಗೆ ಮಾಹಿತಿ ಪಡೆದರು. ಈಗಾಗಲೇ ಚುನಾವಣಾ ಸಾಮಾನ್ಯ ವೀಕ್ಷಕರಾಗಿ ನೇಮಕವಾಗಿರುವ ವಿಕ್ರಮ ಸಿಂಗ್ ಮಲ್ಲಿಕ್(ಭಾ.ಆ.ಸೇ) ಅವರು ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಮತ ಎಣಿಕೆ ವೀಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮತ ಎಣಿಕೆ ಸಂಬಂಧಿಸಿದಂತೆ ಅಂತಿಮ ಸಿದ್ಧತೆಯನ್ನು ಪರಿಶೀಲಿಸಿದರು.
ಫಲಿತಾಂಶಕ್ಕೆ ಕೆಲ ಗಂಟೆಗಳು ಬಾಕಿ ಇರುವಾಗಲೇ ಕಾಂಗ್ರೆಸ್ ಸರಣಿ ಸಭೆ, ಪಕ್ಷೇತರ ಅಭ್ಯರ್ಥಿಗಳಿಗೆ
ಹಾಗೆಯೇ ಅಂಚೆ ಮತಪತ್ರ ಎಣಿಕೆ ಹಾಗೂ ವಿದ್ಯುನ್ಮಾನ ಮತಯಂತ್ರದ ಮತ ಎಣಿಕೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಸಮಾಲೋಚಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಯತೀಶ್ ಉಳ್ಳಾಲ್, ಸಹಾಯಕ ಚುನಾವಣಾಧಿಕಾರಿಗಳಾದ ಎಸ್.ಎನ್. ನರಗುಂದ ಮುಂತಾದ ಅಧಿಕಾರಿಗಳು ಇದ್ದರು.