ಕೊಪ್ಪಳ: ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿರುವ ಬಿಸಿಲ ನಾಡಿನ ಕಪ್ಪಲೆಪ್ಪ ಜಲಪಾತ..!

By Kannadaprabha NewsFirst Published Jul 27, 2020, 2:44 PM IST
Highlights

ಗದಗನಿಂದ ಗಜೇಂದ್ರಗಡ ಮಾರ್ಗವಾಗಿ ಬಂದರೆ 32 ಕಿ.ಮೀ. ಕುಷ್ಟಗಿಯಿಂದ 30 ಕಿ.ಮೀ, ಬಾಗಲಕೋಟ ಜಿಲ್ಲೆ ಇಳಕಲ್ಲನಿಂದ ಬಂದರೆ 18 ಕಿ.ಮೀ ದೂರವಾಗುತ್ತದೆ. ಹೀಗೆ ಬರುವವರು ಹನುಮಸಾಗರ ಮಾರ್ಗವಾಗಿಯೇ ಜಲಪಾತಕ್ಕೆ ಹೋಗಬಹುದಾಗಿದೆ.

ಏಕನಾಥ ಜಿ ಮೆದಿಕೇರಿ

ಹನುಮಸಾಗರ(ಜು.27):  ಹದಿನೈದು ದಿನಗಳಿಂದ ಜಿನಗುತ್ತಿರುವ ಮಳೆಗೆ ಹಿಂದೆ ಬಾಡಿ ನಿಂತಿದ್ದ ಸಮೀಪದ ಕಬ್ಬರಗಿ ಬಳಿ ಇರುವ ಕಪ್ಪಲೆಪ್ಪ ಜಲಪಾತ ಈಗ ತುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ. 

ಕಪ್ಪಲೆಪ್ಪ, ಕಪೀಲತೀರ್ಥ, ಕಬ್ಬರಗಿ ದಿಡಗ ಎಂದೆಲ್ಲ ಕರೆಯುವ ಈ ಬಿಸಿಲ ನಾಡಿನ ಜಲಪಾತ ಈ ಭಾಗದಲ್ಲಿ ಏಕೈಕ ಜಲಪಾತವಾಗಿರುವುದರಿಂದ ನೀರು ಬೀಳುತ್ತಿರುವುದನ್ನು ಕೇಳಿದ ಸುತ್ತಲಿನ ಜನರು ಇತ್ತ ದೌಡಾಯಿಸುವುದು ಸಹಜ.
ಬಹುತೇಕ ಜಲಪಾತಗಳನ್ನು ದೂರದಿಂದಲೇ ನಿಂತು ನೋಡಿ ಆನಂದಿಸಬಹುದು. ಆದರೆ ಇಲ್ಲಿ ಜಲಧಾರೆಯ ಅಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಾಸುಬಂಡೆ ಇರುವುದರಿಂದ ಜಲಪಾತಕ್ಕೆ ಮೈಯೊಡ್ಡಿ ಮೈ-ಮನ ಹಗುರ ಮಾಡಿಕೊಳ್ಳಲು ಯಾವುದೇ ಅಪಾಯವಿಲ್ಲ. ಸುಮಾರು 25 ಅಡಿ ಎತ್ತರದಿಂದ ಬೀಳುವ ನೀರು ನೋಡಲು ಮನೋಹರವಾಗಿ ಕಾಣುತ್ತದೆ. ಬಂಡೆಗೆ ಅಪ್ಪಳಿಸಿದ ನೀರು ಹನಿ-ಹನಿಯಾಗಿ ಮೇಲಕ್ಕೆ ಚಿಮ್ಮುವ ದೃಶ್ಯ  ಆಕರ್ಷಕವಾಗಿರುತ್ತದೆ. ಬೆಳಗಿನ ಮಂಜು ಮುಸುಕಿದ ವಾತಾವರಣದಲ್ಲಿ ಜಲಪಾತದ ಸುತ್ತ ಮಂಜಿನ ಹನಿಗಳ ಸಂಗಮವೇ ಮೇಳೈಸಿರುತ್ತದೆ.

ಕೊಪ್ಪಳದಲ್ಲಿ ಸೋಷಿಯಲ್ ಡಿಸ್ಟೆನ್ಸಿಂಗ್ ವೈದ್ಯ; ಸೂಪರಾಗಿದೆ ಐಡ್ಯಾ..!

ಜಲಪಾತದ ನೀರು ಮುಂದೆ ಹರಿದು ಹೋಗಿ ದೊಡ್ಡಕರೆಯನ್ನು ಸೇರುತ್ತದೆ. ಈ ಕೆರೆ ತುಂಬಿದರೆ ಸುತ್ತಲಿನ ಕೊಳವೆಬಾವಿಗಳಿಗೆ ವರ್ಷಪೂರ್ತಿ ನೀರಿನ ಆಶ್ರಯ ದೊರತಂತಾಗುತ್ತದೆ. ಸದ್ಯ ಭೊರ್ಗರೆಯುವ ಜಲಪಾತ ವಾರದವರೆಗೂ ಮುಂದುವರೆಯುತ್ತದೆ, ಮಳೆ ನಿರಂತರವಾದರೆ ತಿಂಗಳದವರೆಗೂ ಜಲಪಾತದ ಸವಿ ಸವಿಯಬಹುದಾಗಿದೆ.

ದಾರಿ 

ಗದಗನಿಂದ ಗಜೇಂದ್ರಗಡ ಮಾರ್ಗವಾಗಿ ಬಂದರೆ 32 ಕಿ.ಮೀ. ಕುಷ್ಟಗಿಯಿಂದ 30 ಕಿ.ಮೀ, ಬಾಗಲಕೋಟ ಜಿಲ್ಲೆ ಇಳಕಲ್ಲನಿಂದ ಬಂದರೆ 18 ಕಿ.ಮೀ ದೂರವಾಗುತ್ತದೆ. ಹೀಗೆ ಬರುವವರು ಹನುಮಸಾಗರ ಮಾರ್ಗವಾಗಿಯೇ ಜಲಪಾತಕ್ಕೆ ಹೋಗಬಹುದಾಗಿದೆ.
 

click me!