Chikkaballapur: ಕನ್ನಂಪಲ್ಲಿ ಕೆರೆ ಸ್ವಚ್ಛತೆ ಕ್ರಮ: ಸಚಿವ ಡಾ.ಎಂ.ಸಿ ಸುಧಾಕರ್‌ ಭರವಸೆ

By Kannadaprabha NewsFirst Published Jun 19, 2023, 9:43 PM IST
Highlights

ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕನ್ನಂಪಲ್ಲಿ ಕೆರೆಗೆ ಭಾನುವಾರ ಬೆಳಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್‌ ಭೇಟಿ ನೀಡಿ ಅಲ್ಲಿನ ನೀರಿನ ಪ್ರಮಾಣ ಹಾಗೂ ಸ್ಥಳದಲ್ಲಿನ ಸ್ಥಿತಿಗತಿಗಳ ಪರಿಶೀಲನೆ ನಡೆಸಿದರು.

ಚಿಂತಾಮಣಿ (ಜೂ.19): ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕನ್ನಂಪಲ್ಲಿ ಕೆರೆಗೆ ಭಾನುವಾರ ಬೆಳಗ್ಗೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್‌ ಭೇಟಿ ನೀಡಿ ಅಲ್ಲಿನ ನೀರಿನ ಪ್ರಮಾಣ ಹಾಗೂ ಸ್ಥಳದಲ್ಲಿನ ಸ್ಥಿತಿಗತಿಗಳ ಪರಿಶೀಲನೆ ನಡೆಸಿದರು. ನೀರಿನ ಪ್ರಮಾಣ ಹಾಗೂ ಸ್ಥಳದಲ್ಲಿನ ಸ್ಥಿತಿಗಳನ್ನು ಪರಿಶೀಲನೆ ನಡೆಸಿ, ಕೆರೆಯ ಬಳಿಯ ಅವ್ಯವಸ್ಥೆಗಳನ್ನು ಕಂಡು ಕೆರೆ ಸುತ್ತಮುತ್ತಲಿನ ಗಿಡಿಗಂಟಿಗಳು ಹಾಗೂ ಕಸಕಡ್ಡಿ, ಕೋಳಿ ಪುಕ್ಕ, ಕಟ್ಟಡಗಳ ಹಾಗೂ ಗ್ರಾನೈಟ್‌ ತ್ಯಾಜ್ಯ ಇತ್ಯಾದಿಗಳನ್ನು ಕಂಡ ಸಚಿವ ಸುಧಾಕರ್‌, ಕೆರೆಯ ಸುತ್ತಮುತ್ತ ವಾತಾವರಣವನ್ನು ಸ್ವಚ್ಛವಾಗಿಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನೀರು ಪೂರೈಕೆಗೆ ಅಗತ್ಯ ಕ್ರಮ: ಬಳಿಕ ಮಾತನಾಡಿದ ಸಚಿವರು, ಕನ್ನಂಪಲ್ಲಿ ಕೆರೆಯ ಅಭಿವೃದ್ಧಿಯಾಗಿಲ್ಲ. ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಮುಂದಿನ ಒಂದು ತಿಂಗಳೊಳಗಾಗಿ ಮಳೆ ಬಾರದಿದ್ದರೆ ಕುಡಿಯುವ ನೀರಿನ ಅಭಾವ ನೀಗಿಸಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಅಧಿಕಾರಿಗಳೋಂದಿಗೆ ಚರ್ಚೆ ಮಾಡಿ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದೆಂದರು.

ಸಂಸದ ಡಿ.ಕೆ.​ಸು​ರೇಶ್‌ಗೆ ನೋವು, ಬೇಸರ, ಆತಂಕ ಕಾಡುತ್ತಿದೆಯಾ!

ನಗರದ ಶೇಕಡವಾರು ಪ್ರದೇಶಕ್ಕೆ ಕುಡಿಯುವ ನೀರನ್ನು ಪೂರೈಸುವ ಪ್ರಮುಖ ಕೆರೆಯಾಗಿದ್ದು ಜನತೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕಾದರೆ ಕೆರೆ ಸ್ವಚ್ಛಗೊಳಿಸುವುದು ಅನಿವಾರ್ಯವಾಗಿದೆ. ಈಗಾಗಲೇ ಮುಂಗಾರು ಮಳೆ ತಡವಾಗುತ್ತಿರುವುದು ಜನತೆಯಲ್ಲಿ ಹಾಗೂ ರೈತಾಪಿ ವರ್ಗದವರಲ್ಲಿ ಕಳವಳವನ್ನು ಉಂಟು ಮಾಡಿದೆ. ನಗರ ಭಾಗದ ಜನತೆಗೆ ಸಮರ್ಪಕ ಕುಡಿಯುವ ನೀರನ್ನು ಪೂರೈಸುವುದು ಸೇರಿದಂತೆ ಕೆರೆ ಸ್ವಚ್ಛತೆ ಕಾಪಾಡುವುದರ ಮೂಲಕ ನೀರು ಕಲುಷಿತವಾಗದಂತೆ ತಡಯಬೇಕಾಗಿದೆ ಎಂದರು.

ಮತದಾರರ ಋುಣ ತೀರಿಸಲು ಪ್ರಾಮಾಣಿಕ ಪ್ರಯತ್ನ: ಶಾಸಕ ಶರತ್‌ ಬಚ್ಚೇಗೌಡ

ಕೆರೆ ಸ್ವಚ್ಛಗೊಳಿಸಲು ಸೂಚನೆ: ಕೆರೆಯ ಸುತ್ತಮುತ್ತಲು ಗಿಡಗಂಟೆಗಳು ಬೆಳೆದಿದ್ದು, ಸರಿಯಾದ ಶುಚಿತ್ವವಿಲ್ಲದೆ ಶುದ್ಧಿಗೊಳಿಸದೆ ನೀರು ಪೂರೈಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇವೆಲ್ಲವನ್ನು ಸರಿಪಡಿಸುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ತಿಳಿಸಿದರು. ಕೆರೆಯ ಸುತ್ತಮುತ್ತ ತ್ಯಾಜ್ಯವನ್ನು ತಂದು ಸುರಿಯುತ್ತಿರವವರಿಗೆ ನೋಟಿಸ್‌ ನೀಡಿ ಎಚ್ಚರಿಕೆ ನೀಡಬೇಕು. ಆದರೂ ಇದೇ ಪರಿಸ್ಥಿತಿ ಮುಂದುವರಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚಿಸಿದರು ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಜಗದೀಶ್‌ ರೆಡ್ಡಿ, ಮುಖಂಡರಾದ ಉಮೇಶ್‌, ಬಾಬುರೆಡ್ಡಿ, ಶೇಷಾರೆಡ್ಡಿ, ರವಿ, ವೇಣುಗೋಪಾಲ್‌, ಎಟಿಎಸ್‌ ಶ್ರೀನಿವಾಸ್‌, ಸುರೇಶ್‌, ಬೈರಾರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು. ರಾಜೀವ್‌ ನಗರ ವೆಲ್‌ ಫೇರ್‌ ಅಸೋಸಿಯೇಷನ್‌ ಅಧ್ಯಕ್ಷ ಬಿ.ಕೆ.ಕೃಷ್ಣಾರೆಡ್ಡಿ ಇದ್ದರು.

click me!