BIG-3 Impact: ಕಷ್ಟದಲ್ಲಿದ್ದ ತಾಯಿ ಮಗನಿಗೆ ನೆರವಾದ ಕನ್ನಡದ ಜನತೆ: ದಾನಿಗಳಿಂದ ಭರಪೂರ ಧನಸಹಾಯ

By Sathish Kumar KHFirst Published Jan 18, 2023, 7:39 PM IST
Highlights

ಹುಟ್ಟುತ್ತಲೇ ಅಂಗವಿಕಲತೆ ಹೊಂದಿದ್ದ ಮಗನನ್ನು ಸಾಕಲು ತಾಯಿಯ ಪರದಾಟ
ಸುವರ್ಣ ನ್ಯೂಸ್ ನ ಬಿಗ್-3ನಲ್ಲಿ ಪರದಾಟದ ವರದಿ ಪ್ರಸಾರ
ಕರುನಾಡಿನ ಜನತೆ ಸುವರ್ಣ ನ್ಯೂಸ್‌ನೊಂದಿಗೆ ಕೈಜೋಡಿಸಿ 4.44 ಲಕ್ಷ ಹಣ ನೀಡಿದೆ.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜ18): ಜನ್ಮತಃ ವಿಕಲತೆಯನ್ನು ಹೊಂದಿ ಮಗನನ್ನು ಪಡೆದ ತಾಯಿ ಜೀವನ ಪೂರ್ತಿ ಕಷ್ಟಪಟ್ಟು ಪೋಷಣೆ ಮಾಡಿದ್ದಾಳೆ. ಇನ್ನು ತನಗೂ ವಯಸ್ಸಾಗುತ್ತಿದ್ದು ಮಗನನ್ನು ಬಿಟ್ಟು ಹೊರಗೆ ಹೋಗಿ ದುಡಿದು ಬಂದು ಸಾಕಲು ಆಗುತ್ತಿದ್ದ ಸಮಸ್ಯೆಯನ್ನು ಸುವರ್ಣನ್ಯೂಸ್‌ಗೆ ಹೇಳಿಕೊಂಡಿದ್ದರು. ಅವರಿಗೆ ಸ್ಪಂದಿಸಿದ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಬಿಗ್-3 ವರದಿಗೆ ನಾಡಿನ ಜನರು ಧಾರಾಳವಾಗಿ ನೆರವಿನ ಹಸ್ತ ಚಾಚಿದ್ದಾರೆ. ಈ ಕುರಿತ ಫುಲ್‌ ಸ್ಟೋರಿ ಇಲ್ಲಿದೆ ನೋಡಿ...

ಹುಟ್ಟಿನಿಂದಲೇ ವಿಕಲಾಂಗ ಮಗನ ಸಾಕಿ ಸಲಹುತ್ತಿದ್ದ ಮಹಿಳೆ ರುಕ್ಮಿಣಿ ತನ್ನ ಪತಿ ಮಾಡಿದ ಸಾಲದ ಶೂಲಕ್ಕೆ ಸಿಲುಕಿ ಋಣ ತೀರಿಸಲಾರದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ವಿಕಲಾಂಗ ಮಗನನ್ನು ಹೊರತ್ತು ಪಡಿಸಿ ಬೇರೆ ಯಾರು ಇಲ್ಲ. ಅಮ್ಮನನ್ನ ಬಿಟ್ಟು ಪುತ್ರ, ಪುತ್ರನನ್ನ ಬಿಟ್ಟು ಅಮ್ಮ ಒಂದು ಕ್ಷಣ ಇರದ ಪರಿಸ್ಥಿತಿ ಅವರದ್ದು. ತಮ್ಮ ನೋವನ್ನ ಹಂಚಿಕೊಳ್ಳಲು ಸುವರ್ಣ ನ್ಯೂಸ್ ಬೆಂಗಳೂರು ಚೇರಿಗೆ ಆಗಮಿಸಿದ್ದರು. ಅವರ ಪರಿಸ್ಥಿತಿ ಕಂಡು ಬಿಗ್3 ಅವರ ನೆರಿವಿಗೆ ನಿಂತಿತು. ಈಗ ಅವರ ಬದುಕಲ್ಲಿ ಮಂದಹಾಸ ಮೂಡಿದೆ. ಇದಕ್ಕೆಲ್ಲ ಕಾರಣ ಆಗಿದ್ದು ಕರುನಾಡಿನ ಜನ.. ಧನ್ಯವಾದ ಕರ್ನಾಟಕ. ಇದು ಮಾನವೀಯತೆಯ ಇಂಪ್ಯಾಕ್ಟ್.

BIG 3ನಿತ್ಯ ತಾಯಿ-ಮಗನ ನರಕಯಾತನೆ: ಸಾಲ ತೀರಿಸಲಾಗದೇ ಪರದಾಡುತ್ತಿದೆ ಕುಟುಂಬ

ಪಡಿತರ ಅಕ್ಕಿಯೇ ಜೀವನಾಧಾರ: ಹೌದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಗಂಗಾವರ ಗ್ರಾಮದಲ್ಲಿ ತಾಯಿ ರುಕ್ಮಿಣಿ, ಹಾಗೂ 26 ವರ್ಷದ ಮಗ ಜಯರಾಮ್ ಸಾಲದ ಶೂಲಕ್ಕೆ ಸಿಲುಕಿ ಪಡಬಾರದ ಕಷ್ಟ ಪಡುವಂತೆ ಆಗಿತ್ತು. ವಾಸಕ್ಕೆ ಯೋಗ್ಯವಾದ ಮನೆಯೂ ಇಲ್ಲದೆ, ಕೇವಲ ನ್ಯಾಯಬೆಲೆ ಅಂಗಡಿಯಲ್ಲಿ ಸಿಗುವ ಅಕ್ಕಿ ಪಡೆದು ಒಂದೊತ್ತಿನ ನೆಮ್ಮದಿ ಊಟಕ್ಕೆ ವ್ಯವಸ್ಥೆ ಇಲ್ಲದೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದರು. ರುಕ್ಮಿಣಿ ಅವರ ಮಗ ಜಯರಾಮ್ ಹುಟ್ಟಿನಿಂದಲೇ ವಿಶೇಷಚೇತನ. ಈ ತಾಯಿ ಗಂಡ, ಮಕ್ಕಳ ಚಿಕಿತ್ಸೆಗಾಗಿ ನಾಲ್ಕು ವರ್ಷಗಳ ಹಿಂದೆ ಮಾಡಿದ ಸಾಲದ ಋಣಭಾರವನ್ನು ತೀರಿಸುವುದಕ್ಕಾಗಿ ಇನ್ನಿಲ್ಲದ ಪರಿಪಾಟಲು ಪಡುತ್ತಿದ್ದಾರೆ. 

ಪ್ರಾಣವನ್ನೇ ಕಳೆದುಕೊಳ್ಳಲು ನಿರ್ಧಾರ: 25 ವರ್ಷಗಳ ಹಿಂದೆ ಮಾಡಿರುವ ಚಿಕ್ಕ ಮನೆಯೊಂದು ಬಿಟ್ಟರೆ ಇವರ ಪಾಲಿಗೆ ಇರುವುದು 26 ವರ್ಷದ ಕನಿಷ್ಠ ಅತ್ತಿಂದಿತ್ತ ಒರಳಲು ಸಾಧ್ಯವಿಲ್ಲದ ಮಗ ಮಾತ್ರ. ಇವರ ಬದುಕನ್ನ ನೋಡ್ತಿದ್ರೆ ಎಂತಹವರ ಕರುಳು ಕೂಡ ಕಿತ್ತು ಬರುತ್ತೆ. ತೀರ ಸಂಕಷ್ಟಕ್ಕೆ ಸಿಲುಕಿದ ರುಕ್ಮಿಣಿ ಮತ್ತು ಅವರ ಮಗ ಜಯರಾಮ್ ಅವರು ಬೇರೆ ದಾರಿಯಿಲ್ಲದೆ ಪ್ರಾಣವನ್ನೇ ಕಳೆದುಕೊಂಡು ಬಿಡೋಣ ಎಂದು ನಿರ್ಧಾರಕ್ಕೆ ಬಂದಿದ್ದರು. ಇದನ್ನ ಗಮನಿಸಿದ ಗ್ರಾಮದವರು ಅವರನ್ನ ಸಮಾಧಾನ ಪಡಿಸಿ ಕೆಟ್ಟ ನಿರ್ಧಾರ ಬೇಡ. ನಾವಿದ್ದೇವೆ ಅನ್ನೋ ಧೈರ್ಯ ತುಂಬಿದ್ದರು. 

BIG 3 ಚಾರ್ಮಾಡಿ ಚೆಕ್‌ ಪೋಸ್ಟ್‌ಗೆ ಕಾಯಕಲ್ಪ: ಇದು ಬಿಗ್ 3 ಫಲಶ್ರುತಿ

ಸಾಲಮುಕ್ತ ಮಾಡುವಂತೆ ಬಿಗ್-3 ತಂಡದ ಮುಂದೆ ಅಳಲು: ಕನಿಷ್ಟ ಉಪ್ಪು, ಹುಳಿಗೂ ಹಣವಿಲ್ಲದೆ ಪರದಾಡುತ್ತಿದ್ದ ಈ ಕುಟುಂಬಕ್ಕೆ ಊರಿನವರು ಸುವರ್ಣ ನ್ಯೂಸ್ ಬಿಗ್-3ಗೇ ಹೋಗಿ ಅಲ್ಲಿ ಸಹಾಯ ಮಾಡ್ತಾರೆ ಅಂತ ಧೈರ್ಯ ತುಂಬಿ ಕಳುಹಿಸಿದ್ದರು. ಸುವರ್ಣ ನ್ಯೂಸ್ ಕಚೇರಿಗೆ ಬಂದ ತಾಯಿ - ಮಗನ ಆ ದೃಶ್ಯ ಮನಕಲುಕುವಂತೆ ಇತ್ತು. ಬಂದವರು ಸೀದಾ ಬಿಗ್-3 ನಿರೂಪಕರು ಜೊತೆಗೆ ಕರೆಂಟ್ ಅಫೇರ್ಸ್ ಎಡಿಟರ್ ಆಗಿರೋ ಜಯಪ್ರಕಾಶ್ ಶೆಟ್ಟಿ ಜೊತೆ ತಮ್ಮ ಅಳಲನ್ನ ತೋಡಿಕೊಂಡಿದ್ದರು. ಜಯರಾಮ್ ಅಷ್ಟೇ ಅಲ್ಲ ಹಲವು ವರ್ಷ ಹಿಂದೆಯೇ ಮೃತಪಟ್ಟಿದ್ದ ಇಬ್ಬರು ಹೆಣ್ಣುಮಕ್ಕಳ ಸೇರಿದಂತೆ ಜಯರಾಮನ ಚಿಕಿತ್ಸೆಗಾಗಿ ಒಟ್ಟು 2 ಲಕ್ಷ ರೂಪಾಯಿ ಸಾಲ ಮಾಡಿದ್ದರು. ಚೂರುಪಾರು ಒಡವೆ ಅಡ ಇಟ್ಟಿದ್ದೇವೆ. ನಮ್ಮನ್ನ ಸಾಲದಿಂದ ಮುಕ್ತಿ ಮಾಡಿ ಅಂತ ಕೇಳಿಕೊಂಡರು.

ರುಕ್ಮಿಣಿ ಬ್ಯಾಂಕ್‌ ಖಾತೆಗೆ 4.44 ಲಕ್ಷ ರೂ. ಹಣ ಜಮಾ:
ಈ ಕುರಿತು ಇಂದು ಸುವರ್ಣ ನ್ಯೂಸ್ ಬಿತ್ತರಿಸಿದ ತಾಯಿ-ಮಗನ ಮಾನವೀಯ ವರದಿಗೆ ಇಡೀ ಕರುನಾಡು ಸ್ಪಂದಿಸಿದೆ. ಬಿಗ್3ಯಲ್ಲಿ ತಾಯಿ-ಮಗನ ಕರುಣಾಜನಕ ವರದಿ ಪ್ರಸಾರ ಆಗ್ತಿದ್ದಂತೆ ಇಡೀ ಕರುನಾಡು ಸ್ಪಂದಿಸಿದೆ. ಬೆಳಗ್ಗೆ 9 ಗಂಟೆಗೆ ವರದಿ ಪ್ರಸಾರ ಆಗಿ ಎರಡುವರೆ ಗಂಟೆಯಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಹಣ ಜಮೆ ಆಗಿತ್ತು. ಮಧ್ಯಾಹ್ನ ಮೂರುವರೆ ಗಂಟೆ ಒತ್ತಿಗೆ 4.44 ಲಕ್ಷ ಹಣವನ್ನು ಕರುನಾಡ ಜನರು ರುಕ್ಮಿಣಿ ಅವರ ಖಾತೆಗೆ ಹಾಕಿ ಅವರ ಸಂಕಷ್ಟಕ್ಕೆ ನೆರವಾಗಿ ಜನರು ಮಾನವೀಯತೆಯ ಮೇರುಪರ್ವವತನ್ನೇ ಮೆರೆದಿದ್ದಾರೆ.

ನಾಡಿನ ಜನತೆಗೆ ಧನ್ಯವಾದ ಅರ್ಪಿಸಿದ ತಾಯಿ: ಖಾತೆಗೆ ನಾಲ್ಕುವರೆ ಲಕ್ಷ ಹಣ ಬಂದಿರುವುದಕ್ಕೆ ರುಕ್ಮಿಣಿ ಮತ್ತು ಅವರ ಮಗ ಜಯರಾಮ್ ಕರುನಾಡ ಜನತೆಗೆ ಮತ್ತು ಸುವರ್ಣ ನ್ಯೂಸ್ ಗೆ ಕೈಮುಗಿದು ಧನ್ಯವಾದ ಅರ್ಪಿಸಿದ್ದಾರೆ. ಒಟ್ಟಿನಲ್ಲಿ ತಾಯಿ ಮಗ ಸಾಲದ ಸುಳಿಯಿಂದ ಹೊರ ಬರುವಂತೆ ಮಾಡಿದ ಕರುನಾಡಿಗರಿಗೆ ಬಿಗ್3 ಕಡೆಯಿಂದ ಧನ್ಯವಾದಗಳು. ಇದು ಬಿಗ್-3ಯ ಮಾನವೀಯತೆಯ ಇಂಪ್ಯಾಕ್ಟ್.

click me!