ರೈತರಿಗೆ ₹18 ಕೋಟಿ ಮಧ್ಯಂತರ ಪರಿಹಾರ ಶೀಘ್ರದಲ್ಲೇ ಮಂಜೂರು: ಸಚಿವ ಪ್ರಿಯಾಂಕ್ ಖರ್ಗೆ

Published : Sep 02, 2026, 08:40 AM IST
Priyank Kharge

ಸಾರಾಂಶ

ಖಾರಿಫ್ ಋತುವಿನಲ್ಲಿ ಮಳೆ ಕೊರತೆಯಿಂದಾದ ಬೆಳೆ ನಷ್ಟಕ್ಕೆ, ಕಲಬುರಗಿ ಜಿಲ್ಲೆಯ 37,051 ರೈತರಿಗೆ 18 ಕೋಟಿ ರೂ. ಮಧ್ಯಂತರ ಬೆಳೆ ವಿಮೆ ಪರಿಹಾರ ಶೀಘ್ರದಲ್ಲೇ ಮಂಜೂರಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಅಲ್ಲದೆ, ಆಗಸ್ಟ್ ತಿಂಗಳ ಮಳೆ ಕೊರತೆ ಆಧರಿಸಿ ಜಿಲ್ಲೆಯ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು.

ಕಲಬುರಗಿ: ಖಾರಿಫ್ ಋತುಮಾನದಲ್ಲಿ‌ ಮಳೆ ಕೊರತೆ ಕಾರಣ ಪ್ರಸಕ್ತ 2026-27ನೇ ಸಾಲಿನ ಬೆಳೆ ವಿಮೆ ಯೋಜನೆಯಡಿ ಅಲ್ಪಾವಧಿ ಬೆಳೆಗಳಾದ ಹೆಸರು, ಉದ್ದು ಹಾಗೂ ಸೋಯಾಬೀನ್ ಬೆಳೆಗಳಿಗೆ ಬೆಳೆ ವಿಮೆ ಮದ್ಯಂತರ ಪರಿಹಾರಕ್ಕಾಗಿ 18 ಕೋಟಿ ರು. ಸರ್ಕಾರಕ್ಕೆ ಕಲಬುರಗಿ ಜಿಲ್ಲಾಡಳಿತದಿಂದ ವರದಿ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಪರಿಹಾರ ಮಂಜೂರಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ರೈತರಿಗೆ ದಾಖಲೆ ಪ್ರಮಾಣದಲ್ಲಿ ಪರಿಹಾರ

ಮಂಗಳವಾರ ಇಲ್ಲಿನ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದರಿಂದ ಜಿಲ್ಲೆಯ 37,051 ರೈತರಿಗೆ ನೆರವಾಗಲಿದೆ.‌ ಕಳೆದ ವರ್ಷವೂ ಸಹ ಜಿಲ್ಲಾಡಳಿತ ಹಾಗೂ ನಮ್ಮೆಲ್ಲರ ಪ್ರಯತ್ನದಿಂದ ನಮ್ಮ ಜಿಲ್ಲೆಯ ರೈತರಿಗೆ ದಾಖಲೆ ಪ್ರಮಾಣದಲ್ಲಿ ಪರಿಹಾರ ಬರಲು ಸಾಧ್ಯವಾಗಿದೆ ಎಂದರು.

ಪ್ರಸ್ತುತ ಜೂನ್ ಮತ್ತು ಜುಲೈ ಮಾಹೆಯಲ್ಲಿ ಸತತ ಮೂರು ವಾರಗಳ ಕಾಲ ಮಳೆ‌ ಇಲ್ಲದ ತಾಲೂಕುಗಳನ್ನು ಎನ್.ಡಿ.ಆರ್.ಎಫ್ ನಿಯಮಾವಳಿ ಪ್ರಕಾರ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಬರ ಘೋಷಣೆಯ ತಾಲೂಕಿನಲ್ಲಿ ಕಲಬುರಗಿ ಜಿಲ್ಲೆಯ ಒಂದು ತಾಲೂಕು ಇಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಗಸ್ಟ್ ಮಾಹೆಯಲ್ಲಿ ಅಫಜಲಪುರದಲ್ಲಿ ಶೇ.65, ಆಳಂದ ಶೇ.66, ಚಿಂಚೋಳಿ ಶೇ.61, ಕಲಬುರಗಿ ಶೇ.68, ಜೇವರ್ಗಿ ಶೇ.74, ಕಮಲಾಪೂರ ಶೇ.57, ಯಡ್ರಾಮಿ ಶೇ.69 ಹಾಗೂ ಶಹಾಬಾದ್‌ ಶೇ.62 ಮಳೆ‌ ಕೊರತೆ ಇದೆ. ಮುಂದಿನ ದಿನದಲ್ಲಿ ಈ ತಾಲೂಕುಗಳನ್ನು ಎನ್.ಡಿ.ಅರ್.ಎಫ್ ನಿಯಮಾವಳಿ ಪ್ರಕಾರ ಮಾಸಿಕ ಶೇ.55-60ರಷ್ಟು ಮಳೆ ಕೊರತೆ ಪ್ರದೇಶವನ್ನು ಬರಪೀಡಿತ ತಾಲೂಕು ಎಂದು ಘೋಷಿಸಲಾಗುವುದು ಎಂದರು.

ಎನ್‌ಡಿಆರ್‌ಎಫ್ ನಿಯಮ ಬದಲಾವಣೆ ತನ್ನಿ

ಬರ ಘೋಷಣೆಯ ಎನ್.ಡಿ.ಆರ್.ಎಫ್‌ ನಿಯಮಾವಳಿ‌ 2020ರಲ್ಲಿ ಎನ್.ಡಿ.ಎ. ಸರ್ಕಾರ ಪರಿಷ್ಕರಿಸಿದ್ದು, ಇದರಿಂದ‌ ವಾಸ್ತವದಲ್ಲಿ ಬರಗಾಲವಿದ್ದರೂ, ಬರ ಘೋಷಣೆ ಮಾಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಬರ ಘೋಷಣೆ ರಾಜ್ಯಗಳಿಗೆ ಸ್ವಾತಂತ್ರ್ಯವಿಲ್ಲ. ಯು.ಪಿ.ಎ. ಅವಧಿಯಲ್ಲಿದ್ದ ಎನ್.ಡಿ.ಆರ್.ಎಫ್. ನಿಯಮಾವಳಿ ಜಾರಿಗೆ ತರಬೇಕೆಂಬುದು ನಮ್ಮ‌ ಬೇಡಿಕೆಯಾಗಿದ್ದು, ಕೇಂದ್ರ ಸರ್ಕಾರ ಇದಕ್ಕೆ‌ ಸ್ಪಂದಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಪೊಲೀಸ್ ಇಲಾಖೆಯಲ್ಲಿ ಸುಧಾರಣೆ: ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಸುಧಾರಣೆಗೆ ಪುನರ್ ರಚನೆ ಸಮಿತಿ ರಚಿಸಿದ್ದು, ಮುಂದಿನ ಒಂದು ತಿಂಗಳಲ್ಲಿ ಸಚಿವ ಸಂಪುಟ ಸಭೆಯ ಮುಂದೆ ಬರಲಿದೆ. ನಿನ್ನೆಯಷ್ಟೆ ರಾಜ್ಯದ ಬೆಸ್ಟ್ ಪಿ.ಸಿ. ಹೆಡ್ ಕಾನ್ಸ್ಟೇಬಲ್ ಅವರೊಂದಿಗೆ ಸಂವಾದ ನಡೆಸಿದ್ದೇನೆ. ಸಿ & ಆರ್ ಸಹ ತಿದ್ದುಪಡಿ ತರಲಾಗುತ್ತಿದೆ. ಡ್ರಗ್ಸ್ ಮಾಫಿಯಾಗೆ ಬ್ರೇಕ್, ಜೂಜಾಟ ತಡೆಯಲು, ಯುವ ಜನರನ್ನು ದುಶ್ಚಟದಿಂದ ರಕ್ಷಿಸಲು ನಶಾಮುಕ್ತ ಅಭಿಯಾನ, ಬೇಡ ಬ್ರೋ ಅಭಿಯಾನ ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಪ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ ಇದ್ದರು.

PREV
Read more Articles on
click me!

Recommended Stories

"3 ವೀಲ್ಸ್... 7,900 ಕಿ.ಮೀ! ಹಿಮಾಲಯ ತುದಿ ತಲುಪಿದ ಬೆಂಗಳೂರಿನ ಕೆಚ್ಚೆದೆಯ ಆಟೋ ಡ್ರೈವರ್!"
ಹೊನ್ನಾವರ ರೈಲ್ವೆ ನಿಲ್ದಾಣದಲ್ಲಿ ಮೂರು ಎಕ್ಸ್‌ಪ್ರೆಸ್‌ ರೈಲುಗಳ ನಿಲುಗಡೆಗೆ ಮನವಿ ಸಲ್ಲಿಕೆ