Chikkamagaluru: ಕಾಫಿನಾಡಲ್ಲಿ ಗೃಹಜ್ಯೋತಿ ಶಾಕ್: 50 ಸಾವಿರ ಫಲಾನುಭವಿಗಳು ಔಟ್ ?

Published : Sep 02, 2026, 06:47 AM IST
Gruha Jyoti

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಗೃಹ ಜ್ಯೋತಿ ಯೋಜನೆ ಫಲಾನುಭವಿಗಳ ಪರಿಶೀಲನೆಯಿಂದಾಗಿ, ಸುಮಾರು 50,000ಕ್ಕೂ ಹೆಚ್ಚು ಮಂದಿ ಉಚಿತ ವಿದ್ಯುತ್ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆಯಿದೆ. ಮನೆ ಬದಲಾವಣೆ, ವಾಣಿಜ್ಯ ಬಳಕೆ, ಮತ್ತು ತಾಂತ್ರಿಕ ದೋಷಗಳಂತಹ ಕಾರಣಗಳಿಂದ ಈ ಅನರ್ಹತೆ ಉಂಟಾಗುತ್ತಿದ್ದು, ದಾಖಲೆಗಳನ್ನು ಸಲ್ಲಿಸಲು ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.

ವಿಶ್ವನಾಥ ಮಲೇಬೆನ್ನೂರು

ಚಿಕ್ಕಮಗಳೂರು: ರಾಜ್ಯಾದ್ಯಂತ ಗೃಹ ಜ್ಯೋತಿ ಫಲಾನುಭವಿಗಳ ಅರ್ಹತೆ ಪರಿಶೀಲನೆ ನಡೆಸಲಾಗುತ್ತಿದ್ದು, ಇದರಿಂದ ಚಿಕ್ಕಮಗಳೂರು ಜಿಲ್ಲೆಯ ಸುಮಾರು 50 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಉಚಿತ ವಿದ್ಯುತ್‌ ಕಟ್‌ ಆಗುವ ಸಾಧ್ಯತೆ ಇದೆ.

ಕಳೆದ ಜುಲೈನಿಂದ ರಾಜ್ಯಾದ್ಯಂತ ಇಂಧನ ಇಲಾಖೆ ಅಧಿಕಾರಿ ಸಿಬ್ಬಂದಿ ಪ್ರತಿ ಮನೆ ಭೇಟಿ ನೀಡಿ ಗೃಹ ಜ್ಯೋತಿ ಯೋಜನೆ ಫಲಾನುಭವಿಗಳ ದಾಖಲಾತಿ ಸಂಗ್ರಹಿಸುವ ಮೂಲಕ ಪರಿಶೀಲನೆ ಕಾರ್ಯ ಮಾಡಲಾಗುತ್ತಿದೆ.

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮೆಸ್ಕಾಂ ಅಧಿಕಾರಿ ಸಿಬ್ಬಂದಿ ಮನೆ ಮನೆ ಭೇಟಿ ನೀಡಿ ಅಗತ್ಯ ದಾಖಲಾತಿ ಪಡೆಯ ಲಾಗುತ್ತಿದೆ. ಈ ವೇಳೆ ಗೃಹ ಜ್ಯೋತಿ ಯೋಜನೆ ಅನುಷ್ಠಾನದ ಆರಂಭದಲ್ಲಿ ನೋಂದಣಿ ಮಾಡಿ ಇದೀಗ ಬೇರೆ ಮನೆಗೆ ಹೋದವರು, ಖಾಲಿ ಮನೆ, ವಾಣಿಜ್ಯ ಬಳಕೆ ಸೇರಿದಂತೆ ಸುಮಾರು 20 ರಿಂದ 25 ವಿವಿಧ ಕಾರಣದಿಂದ ಸುಮಾರು 50 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ ಉಚಿತ ವಿದ್ಯುತ್‌ ಸೌಲಭ್ಯ ಕಟ್‌ ಆಗುವ ಸಾಧ್ಯತೆ ಇದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ 3.14 ಲಕ್ಷ ಗೃಹ ಬಳಕೆ ಮೀಟರ್‌ಗಳಿವೆ. ಈ ಪೈಕಿ ಇದುವರೆಗೆ 2.60 ಲಕ್ಷ ಗೃಹ ಬಳಕೆ ಮೀಟರ್‌ ಹೊಂದಿರುವ ಗ್ರಾಹಕರು ತಮ್ಮ ದಾಖಲೆಗಳನ್ನು ಮೆಸ್ಕಾಂ ಸಿಬ್ಬಂದಿ ನೋಡಿವ ಮೂಲಕ ಪರಿಶೀನೆಗೆ ಒಳಪಟ್ಟಿದ್ದಾರೆ.

ಇನ್ನೂ 54,191 ಗ್ರಾಹಕರು ಪರಿಶೀಲನೆ ಆಗಬೇಕಿದೆ. ಶೇ.88 ರಷ್ಟು ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ. ಆ.31ರ ವರೆಗೆ ಇದ್ದ ಸರ್ವೇ ಅವಧಿ ಇದೀಗ ಸೆ.30ರ ವರೆಗೆ ವಿಸ್ತರಣೆ ಮಾಡಲಾಗಿದೆ. ಈ ಅವಧಿಯಲ್ಲಿ ನೋಂದಣಿ ಮಾಡಿದರೆ ಅರ್ಹರಿಗೆ ಉಚಿತ ವಿದ್ಯುತ್‌ ಸೌಲಭ್ಯ ಮುಂದುವರಿಯಲಿದೆ.

17 ಸಾವಿರ ಮನೆ ಬೀಗ ಮತ್ತು ಖಾಲಿ

ಚಿಕ್ಕಮಗಳೂರು ಜಿಲ್ಲೆಯ 17,570 ಮನೆಗಳಲ್ಲಿ ಕೆಲವು ಮನೆಗೆ ಬೀಗ ಹಾಕಲಾಗಿದೆ. ಇನ್ನೂ ಕೆಲವು ಮನೆ ಖಾಲಿ ಇರುವುದು ಕಂಡು ಬಂದಿದೆ. ಹೀಗಾಗಿ, ಪರಿಶೀಲನೆಗೆ ಸಾಧ್ಯವಾಗಿಲ್ಲ. ಮೆಸ್ಕಾಂ ಅಧಿಕಾರಿಗಳು 3 ಬಾರಿ ಭೇಟಿ ನೀಡಿ ಪರಿಶೀಲನೆ ಮಾಡಲಿ ದ್ದಾರೆ. ಈ ಅವಧಿಯಲ್ಲಿ ಮನೆ ನಿವಾಸಿಗಳು ಲಭ್ಯವಿದ್ದು, ದಾಖಲಾತಿ ಒದಗಿಸದಿದ್ದರೆ, ಸೌಲಭ್ಯ ಕಟ್‌ ಆಗುವುದು ಬಹುತೇಕ ಖಚಿತ.

ಗೃಹ ಬಳಕೆ ವಿದ್ಯುತ್‌ ಶಾಲಾ-ಕಾಲೇಜಿಗೆ ಬಳಕೆ

ರಾಜ್ಯ ಸರ್ಕಾರವು ಗೃಹ ಬಳಕೆದಾರರಿಗೆ ಅನುಕೂಲ ಮಾಡಬೇಕೆಂಬ ಕಾರಣಕ್ಕೆ ಮಾಸಿಕ 200 ಯುನಿಟ್‌ಗಿಂತ ಕಡಿಮೆ ಗೃಹ ಬಳಕೆದಾರರಿಗೆ ಉಚಿತ ವಿದ್ಯುತ್‌ ಪೂರೈಕೆಗೆ ಗೃಹ ಜ್ಯೋತಿ ಯೋಜನೆ ಜಾರಿಗೊಳಿಸಲಾಗಿತ್ತು. ಆದರೆ, ಈ ಸೌಲಭ್ಯ ದುರ್ಬಳಕೆ ಮಾಡಿದ ಕೆಲವು ಖಾಸಗಿ ಆಸ್ಪತ್ರೆ ಮತ್ತು ಖಾಸಗಿ ಶಾಲೆಗಳು ಗೃಹ ಬಳಕೆಯಡಿ ನೋಂದಣಿ ಮಾಡಿಕೊಂಡಿರುವುದು ಇದೀಗ ಪರಿಶೀಲನೆ ವೇಳೆ ಕಂಡು ಬಂದಿದೆ. ಈ ಬಗ್ಗೆ ಪರಿಶೀಲನೆ ವೇಳೆ ಮಾಹಿತಿ ದಾಖಲಿಸಲಾಗಿದೆ. ಅಂತಿಮ ವಾಗಿ ಸರ್ಕಾರ ಈ ಬಗ್ಗೆ ತೀರ್ಮಾನ ಮಾಡಲಿದೆ ಎಂದು ಮೆಸ್ಕಾಂ ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ದೇವಸ್ಥಾನ, ಮಸೀದಿ, ಚರ್ಚ್‌ನಲ್ಲಿ ಗೃಹ ಜ್ಯೋತಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ದೇವಸ್ಥಾನ, ಮಸೀದಿ, ಚರ್ಚ್‌ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಸಹ ಗೃಹ ಜ್ಯೋತಿಯಡಿ ನೋಂದಣಿ ಮಾಡಲಾಗಿದೆ. ಸರ್ಕಾರ ಗೃಹ ಬಳಕೆದಾರರಿಗೆ ಮಾತ್ರ ಅನ್ವಯವಾಗುವಂತೆ ಯೋಜನೆ ಜಾರಿಗೊಳಿಸ ಲಾಗಿದೆ. ಆದರೆ, ದೇವಸ್ಥಾನ, ಮಸೀದಿ, ಚರ್ಚ್‌ನಲ್ಲಿ ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ.

ದತ್ತಾಂಶ ದಾಖಲಾತಿ ಸಮಸ್ಯೆ

ಇನ್ನೂ ಪರಿಶೀಲನೆ ವೇಳೆ ಹಲವು ತಾಂತ್ರಿಕ ಸಮಸ್ಯೆ ಎದುರಾಗುತ್ತಿರುವುದರಿಂದ ನೋಂದಣಿ ಸಾಧ್ಯವಾಗುತ್ತಿಲ್ಲ. ಕಳೆದ 3 ವರ್ಷದಲ್ಲಿ ಯಾವುದಾರರೂ ಒಂದು ತಿಂಗಳು 200 ಯುನಿಟ್‌ಗಿಂತ ಹೆಚ್ಚಿನ ವಿದ್ಯುತ್‌ ಬಳಕೆಯಾಗಿದ್ದರೂ ಅಂತಹ ಫಲಾನುಭವಿ ಮಾಹಿತಿ ದಾಖಲಿಸುವುದಕ್ಕೆ ಆ್ಯಪ್‌ನಲ್ಲಿ ಸಾಧ್ಯವಾಗುತ್ತಿಲ್ಲ. ಉಳಿದಂತೆ ಸೋಲಾರ್‌ ವಿದ್ಯುತ್ ಹೊಂದಿರುವವರು. ಈ ಹಿಂದೆ ಭಾಗ್ಯ ಜ್ಯೋತಿ, ಅಮೃತ ಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆ ವಿದ್ಯುತ್‌ ಮೀಟರ್‌ ಪಡೆದವರು, ಇದೀಗ ಆ್ಯಪ್‌ನಲ್ಲಿ ನೋಂದಣಿ ಆಗುತ್ತಿಲ್ಲ. ಈ ರೀತಿಯ ಸಮಸ್ಯೆಗಳಿಂದ ಹಲವು ಮಂದಿ ಸೌಲಭ್ಯ ವಂಚಿತರಾಗುವ ಸಾಧ್ಯತೆ ಇದೆ.

ಪರಿಶೀಲನೆ ಬಾಕಿ ಇರುವ ಗ್ರಾಹಕರು ಹತ್ತಿರದ ಮೆಸ್ಕಾಂ ಕಚೇರಿಗೆ ದಾಖಲೆ ಸಹಿತ ಭೇಟಿ ನೀಡಿದರೆ ನೋಂದಣಿ ಮಾಡಿ ಕೊಡಲಾಗುವುದು. ಆ.31ರ ವರೆಗಿನ ನೋಂದಣಿ ಅವಧಿಯನ್ನು ಸರ್ಕಾರ ಸೆ.30ರ ವರೆಗೆ ವಿಸ್ತರಣೆ ಮಾಡಿದೆ.

ಮಂಜುನಾಥ್‌, ಅಧೀಕ್ಷಕ ಎಂಜಿನಿಯರ್‌, ಚಿಕ್ಕಮಗಳೂರು ಮೆಸ್ಕಾಂ

PREV
Read more Articles on
click me!

Recommended Stories

MB Patil: ವಿಜಯಪುರಕ್ಕೆ ವೇಗದ ಸ್ಪರ್ಶ: ಜಿಲ್ಲೆಯ ಹಲವು ರಸ್ತೆ ಕಾಮಗಾರಿಗಳಿಗೆ ಚಾಲನೆ
Chitradurga: ಶಿಕ್ಷಕರ ಬದ್ಧತೆಗೆ ಸಾಕ್ಷಿಯಾದ 1963ರಲ್ಲಿ ಶುರುವಾದ ಕೆಇಬಿ ಸರ್ಕಾರಿ ಶಾಲೆ