ಕಲಬುರಗಿ: ಹಿಂದು ಸಂಪ್ರದಾಯದಂತೆ ಮಂಗನ ಅಂತಿಮ ಸಂಸ್ಕಾರ ನಡೆಸಿದ ಗ್ರಾಮಸ್ಥರು

By Kannadaprabha NewsFirst Published Jul 20, 2024, 7:26 AM IST
Highlights

ಅನಾರೋಗ್ಯದಿಂದ ಮೃತಪಟ್ಟ ಮಂಗನನ್ನು ಎಬ್ಬಿಸುತ್ತಿರುವ ಮರಿ ಕಂದಮ್ಮ ಎಷ್ಟು ಕರೆದರೂ ತಾಯಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ್ದರಿಂದ ನೋವಿನಿಂದ ಕಿರುಚಾಡಿದ ಮರಿ ಮಂಗ. ಇಂತಹ ಹೃದಯ ಕಲಕುವ ದೃಶ್ಯಕ್ಕೆ ಮಳ್ಳಿ ಗ್ರಾಮ ಸಾಕ್ಷಿಯಾಯಿತು.
 

ಯಡ್ರಾಮಿ (ಜು.20): ಅನಾರೋಗ್ಯದಿಂದ ಮೃತಪಟ್ಟ ಮಂಗನನ್ನು ಎಬ್ಬಿಸುತ್ತಿರುವ ಮರಿ ಕಂದಮ್ಮ ಎಷ್ಟು ಕರೆದರೂ ತಾಯಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ್ದರಿಂದ ನೋವಿನಿಂದ ಕಿರುಚಾಡಿದ ಮರಿ ಮಂಗ. ಇಂತಹ ಹೃದಯ ಕಲಕುವ ದೃಶ್ಯಕ್ಕೆ ಮಳ್ಳಿ ಗ್ರಾಮ ಸಾಕ್ಷಿಯಾಯಿತು. ತಾಲೂಕಿನ ಮಳ್ಳಿ ಗ್ರಾಮದಲ್ಲಿ ಬಹುದಿನಗಳಿಂದ ಮಂಗಗಳ ಗುಂಪೊಂದು ಗ್ರಾಮದಲ್ಲಿ ಠಿಕಾಣಿ ಹೂಡಿತ್ತು. ಸೋಮವಾರ ಬೆಳಗ್ಗೆ ಈ ಗುಂಪಿನಲ್ಲಿದ್ದ ಮಂಗವೊಂದು ಅನಾರೋಗ್ಯದಿಂದ ಮೃತಪಟ್ಟು ಮರದ ಕೆಳಗೆ ಬಿದ್ದಿತ್ತು. ಇದರ ಮರಿ ತಾಯಿಯನ್ನು ಎಬ್ಬಿಸಲು ಸಾಕಷ್ಟು ಒದ್ದಾಡುತ್ತಿತ್ತು. 

ಕಣ್ಣೀರು ಹಾಕುತ್ತಲೇ ತಬ್ಬಿಕೊಂಡು ಕುಳಿತಿತ್ತು. ಈ ದೃಶ್ಯ ಕಂಡ ಸ್ಥಳೀಯರು ಮರಿಯನ್ನು ಬೇರೆಡೆ ಕರೆತಂದರೂ ಮತ್ತೆ ತಾಯಿ ಬಳಿ ಹೋಗಿ ಅಳುತ್ತಿತ್ತು. ನಂತರ ಗ್ರಾಮಸ್ಥರು ಸೇರಿ ಹಿಂದು ಸಂಪ್ರದಾಯದಂತೆ ವಿಶೇಷ ಪೂಜೆ, ಆರತಿ ಬೆಳಗಿ ಕುರ್ಚಿ ಮೇಲೆ ಕೂರಿಸಿ ಹನುಮಾನ ದೇವಸ್ಥಾನವರೆಗೆ ಮೆರವಣಿಗೆ ನಡೆಸಿದ ಬಳಿಕ ದೇವಾಲಯದ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.

Latest Videos

ಮೆರವಣಿಗೆ ಮತ್ತು ಅಂತ್ಯಕ್ರಿಯೆ ಮುಗಿಯುವವರೆಗೂ ಮರಿ ಮಂಗ ತಾಯಿಯನ್ನು ಬಿಟ್ಟು ಕದಲಿಲ್ಲ. ಈ ದೃಶ್ಯ ಕಂಡ ಪ್ರತಿಯೊಬ್ಬರೂ ಕಣ್ಣೀರು ಹಾಕಿದರು. ಅಂತ್ಯಕ್ರಿಯೆ ಸಮಯದಲ್ಲಂತೂ ಮರಿ ಮಂಗ ಅಮ್ಮನನ್ನು ಬಿಡಲೇ ಇಲ್ಲ. ಗ್ರಾಮಸ್ಥರು ಎಷ್ಟೇ ದೂರ ಸರಿಸಿದರೂ ಮತ್ತೆ ಮತ್ತೆ ಬರುತ್ತಿತ್ತು. ಕೊನೆಯದಾಗಿ ಒತ್ತಾಯಪೂರ್ವಕವಾಗಿ ಮರಿಯನ್ನು ಎತ್ತಿಕೊಂಡು ಬಂದು ಮನೆಯಲ್ಲಿ ಅರೈಕೆ ಮಾಡುತ್ತಿದ್ದಾರೆ. ಸ್ವಲ್ಪ ಸುಧಾರಿಸಿಕೊಂಡ ಬಳಿ ಅರಣ್ಯ ಇಲಾಖೆಗೆ ಒಪ್ಪಿಸುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ತಳ್ಳು ಗಾಡಿ ಮೇಲೆ ಕುಳಿತು ಮಾವು ಮಾರಾಟ ಮಾಡುತ್ತಿದೆ ಕೋತಿ: ವಿಡಿಯೋ ವೈರಲ್

ಪ್ರಮುಖರಾದ ನಿಂಗನಗೌಡ ಶಾಂತಗೌಡ, ಅರವಿಂದಗೌಡ, ಬಸವರಾಜ ಬಳಬಟ್ಟಿ, ಸುರೇಶ ಮಲ್ಲೇದ, ಓಂಪ್ರಕಾಶ ದುದ್ದಗಿ, ಶಿವಶರಣ ಮೈಲಾಪುರ, ಈರಣ್ಣ ಮಡಿವಾಳಕರ, ಮುರ್ತಜಾ ಅವಟಿ, ನಬಿ ಗೋಲಗೇರಿ, ಸೈಫನ್‌ಶಾ ನಾಯೊಡಿ, ಶಿವಪ್ಪ ಭಂಡಾರಿ ಇತರರಿದ್ದರು.

click me!