Hubballi: ದೇಶದ 13 ರಾಜ್ಯಗಳಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ: ಕಾಡಸಿದ್ದೇಶ್ವರ ಸ್ವಾಮೀಜಿ

By Govindaraj SFirst Published Jun 4, 2022, 2:01 AM IST
Highlights

ಭಾರತ ವಿವಿಧತೆಯಲ್ಲಿ ಏಕತೆ ಸಾರುವ ದೇಶ. ಇಲ್ಲಿ ಲೆಕ್ಕವಿಲ್ಲದಷ್ಟು ಜಾತಿ, ಮತ, ಪಂಥಗಳಿವೆ. ಒಬ್ಬೊಬ್ಬರದ್ದು ಒಂದೊಂದು ಬಗೆಯ ಆಚರಣೆಗಳಿವೆ. ಈ ಎಲ್ಲ ಸಂಗತಿಗಳನ್ನು ಒಗ್ಗೂಡಿಸಿಕೊಂಡು ಹೋಗುವ ಕೆಲಸವನ್ನು ವಿಶ್ವ ಹಿಂದು ಪರಿಷತ್ ಮಾಡುತ್ತಿದೆ ಎಂದು ವಿ. ನಾಗರಾಜ ಅಭಿಪ್ರಾಯ ಪಟ್ಟಿದ್ದಾರೆ.

ವರದಿ: ಗುರುರಾಜ್ ಹೂಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಹುಬ್ಬಳ್ಳಿ (ಜೂ.04): ಭಾರತ ವಿವಿಧತೆಯಲ್ಲಿ ಏಕತೆ ಸಾರುವ ದೇಶ. ಇಲ್ಲಿ ಲೆಕ್ಕವಿಲ್ಲದಷ್ಟು ಜಾತಿ, ಮತ, ಪಂಥಗಳಿವೆ. ಒಬ್ಬೊಬ್ಬರದ್ದು ಒಂದೊಂದು ಬಗೆಯ ಆಚರಣೆಗಳಿವೆ. ಈ ಎಲ್ಲ ಸಂಗತಿಗಳನ್ನು ಒಗ್ಗೂಡಿಸಿಕೊಂಡು ಹೋಗುವ ಕೆಲಸವನ್ನು ವಿಶ್ವ ಹಿಂದು ಪರಿಷತ್ ಮಾಡುತ್ತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ದಕ್ಷಿಣ ಮಧ್ಯ ಕ್ಷೇತ್ರ ಸಂಘಚಾಲಕ ವಿ. ನಾಗರಾಜ ಅಭಿಪ್ರಾಯ ಪಟ್ಟಿದ್ದಾರೆ. ಹುಬ್ಬಳ್ಳಿಯ ಶಿರೂರು ಪಾರ್ಕ್ ಅಯ್ಯಪ್ಪಸ್ವಾಮಿ ದೇಗುಲದ ಹಿಂಭಾಗ ಪುರುಷೋತ್ತಮ ನಗರದಲ್ಲಿ ವಿಶ್ವ ಹಿಂದು ಪರಿಷತ್ ಉತ್ತರ ಕರ್ನಾಟಕ ಟ್ರಸ್ಟ್, ಪ್ರೇರಣಾ ಸೇವಾ ಸಂಸ್ಥೆ ವತಿಯಿಂದ ನಿರ್ಮಿಸಿರುವ ‘ಧರ್ಮಸಿರಿ’ ಕಾರ್ಯಾಲಯ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.  

Latest Videos

ವಿಎಚ್‌ಪಿ ಮೊದಲಿನಿಂದಲೂ ಹಿಂದು ಧರ್ಮದ ರಕ್ಷಣೆ ಮಾಡುತ್ತ ತನ್ನ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುತ್ತ ಬೃಹತ್ತಾಗಿ ಬೆಳೆದು ನಿಂತಿದೆ. ವೈವಿಧ್ಯಮಯ ಜೀವನದ ಜತೆಗೆ ಅಧ್ಯಾತ್ಮದ ಚಿಂತನೆಯತ್ತ ಸಮಾಜದ ಜನರನ್ನು ಕೊಂಡೊಯ್ಯುತ್ತಿದೆ. ಪ್ರಸ್ತುತವಾಗಿ ಜಗತ್ತಿಗೆ ಭಾರತೀಯ ಹಿಂದು ಧರ್ಮದ ಚಿಂತನೆ ಬೇಕಾಗಿದೆ. ನಾವೆಲ್ಲರೂ ಒಂದು ಎಂಬ ಭಾವನೆಯನ್ನು ಪ್ರತಿಯೊಬ್ಬರಲ್ಲಿ ಮೂಡಿಸಬೇಕಾಗಿದೆ ಎಂದು ಸಲಹೆ ನೀಡಿದರು. ಮೂರು ಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಧರ್ಮ ಮತ್ತು ಸಿರಿ ಎರಡೂ ಶಬ್ದ ಒಂದೇ ಆಗಿದೆ. 

'ಕೋರ್ಟ್ ಆದೇಶ ಪಾಲಿಸದವರ ಮೇಲೆ ನಾನೇ ಗುಂಡಿಟ್ಟು ಹೊಡೆಯುತೇನೆ'

ಧರ್ಮ ಎಂದರೆ ಸಂಪತ್ತು, ಸಿರಿ ಐಸಿರಿಯಾಗಿದೆ. ಧರ್ಮವನ್ನು ಬಿಟ್ಟರೆ ಶೋಭೆ ಇರುವುದಿಲ್ಲ. ಕೋಟಿ ಕೋಟಿ ಹಣ ಗಳಿಸಬಹುದು. ಆದರೆ ಅದು ಶಾಶ್ವತವಲ್ಲ. ಧರ್ಮ ಯಾವತ್ತೂ ಶಾಶ್ವತ ಎಂದು ಹೇಳಿದರು. ಕೊಲ್ಹಾಪುರ ಕನ್ಹೇರಿಯ ಸಿದ್ಧಗಿರಿ ಸಿದ್ಧ ಸಂಸ್ಥಾನ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ದೇಶದ 13 ರಾಜ್ಯಗಳಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದನ್ನು ಹಿಂದು ಸಮಾಜ ಗಂಭೀರವಾಗಿ ಪರಿಗಣಿಸಬೇಕು ಎಂದರು. 

ಅಂಜನಾದ್ರಿಗೆ ಪ್ರತ್ಯೇಕ ಟ್ರಸ್ಟ್ ರಚಿಸಿ: ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಅಲ್ಲಿಗೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿದ್ದಾರೆ. ಅದೊಂದು ಪ್ರಮುಖ ಧಾರ್ಮಿಕ ಸ್ಥಳವಾಗಿ ಮಾರ್ಪಟ್ಟಿದೆ. ಇದಕ್ಕಾಗಿ ಪ್ರತ್ಯೇಕ ಟ್ರಸ್ಟ್ ಒಂದನ್ನು ರಚಿಸಿ, ಇದರ ಆಡಳಿತವನ್ನು ಟ್ರಸ್ಟ್‌ಗೆ ಒಪ್ಪಿಸಬೇಕು ಎಂದು ವಿಎಚ್‌ಪಿ ಮುಖಂಡ ಗೋಪಾಲ ನಾಗರಕಟ್ಟೆ ಸರ್ಕಾರಕ್ಕೆ ಮನವಿ ಮಾಡಿದರು.

ಹಲವರಿಗೆ ಸನ್ಮಾನ: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ ರೂ. ದೇಣಿಗೆ ನೀಡಿದ ಸ್ವರ್ಣ ಸಮೂಹ ಸಂಸ್ಥೆ ಚೇರ್ಮನ್ ವಿ.ಎಸ್.ವಿ. ಪ್ರಸಾದ ಹಾಗೂ ದಿನೇಶ ನಾಯಕ ಕುಟುಂಬದವರಿಗೆ ಹಾಗೂ ಸಂಘದ ಹಿರಿಯರಾದ ಶ್ರೀಧರ ದೀಕ್ಷಿತ ದಂಪತಿ, ಡಾ.ನರೇಗಲ್, ಮತ್ತಿತರರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ‘ಚೈತನ್ಯ ಸಿಂಧು’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. 

'ರಾಜ್ಯದಲ್ಲಿ 2023ಕ್ಕೆ ಬಿಜೆಪಿ ಸರ್ಕಾರ, ಕೇಂದ್ರದಲ್ಲಿ ಮೋದಿ ಸರಕಾರ ಮೂರನೇ ಸಲ ಅಧಿಕಾರಕ್ಕೆ ಬರುತ್ತೆ'

ಗದಗ ಶಿವಾನಂದ ಮಠದ ಶ್ರೀ ಸದಾಶಿವಾನಂದ ಸ್ವಾಮೀಜಿ, ವಿಜಯಪುರದ ಬಂಜಾರ ಶಂಕರಲಿಂಗ ಗುರುಪೀಠದ ಶ್ರೀ ಸೋಮಲಿಂಗ ಸ್ವಾಮೀಜಿ, ಚಿತ್ರದುರ್ಗ ಚನ್ನಯ್ಯ ಗುರುಪೀಠದ ಶ್ರೀ ಬಸವ ಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ, ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಸೇರಿದಂತೆ ನೂರಾರು ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ವಿಶ್ವ ಹಿಂದು ಪರಿಷತ್ ಪ್ರಾಂತ ಅಧ್ಯಕ್ಷ ಡಾ. ಎಸ್.ಆರ್ ರಾಮನಗೌಡರು, ಪ್ರೇರಣಾ ಸಂಸ್ಥೆಯ ಅಧ್ಯಕ್ಷ ಸಂಜು ಬಡಸ್ಕರ ಮತ್ತು ಪ್ರಾಂತ ಕಾರ್ಯದರ್ಶಿ ಕೆ. ಗೋವರ್ಧರಾವ್, ಮತ್ತಿತರರು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಚಿವರಾದ ಸಿ.ಸಿ. ಪಾಟೀಲ, ಶಂಕರ ಪಾಟೀಲ ಮುನೇನಕೊಪ್ಪ, ಪ್ರಭು ಚವ್ಹಾಣ, ಶಾಸಕ ರಮೇಶ ಜಾರಕಿಹೊಳಿ, ಮತ್ತಿತರ ಗಣ್ಯರು ಹಾಜರಿದ್ದರು.

click me!