ಧಾರವಾಡ ಕೇಂದ್ರ ಕಾರಾಗೃಹಕ್ಕೆ ನ್ಯಾ.ಬಿ.ವೀರಪ್ಪ ಅವರ ಅನಿರೀಕ್ಷಿತ ಭೇಟಿ: ಕೈದಿಗಳೊಂದಿಗೆ ಆಪ್ತ ಸಮಾಲೋಚನೆ

By Govindaraj SFirst Published May 20, 2022, 7:37 PM IST
Highlights

ಕೇಂದ್ರ ಕಾರಾಗೃಹವು ಪ್ರತಿಯೊಂದು ಕೆಲಸದಲ್ಲೂ ಒಳ್ಳೆ ರೀತಿಯಿಂದ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದ ಎಲ್ಲಾ ಕಾರಾಗೃಹಗಳಿಗಿಂತ ಧಾರವಾಡ ಕೇಂದ್ರ ಕಾರಾಗೃಹ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ಅವರು ಹೇಳಿದರು.

ವರದಿ: ಪರಮೇಶ್ವರ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ 

ಧಾರವಾಡ (ಮೇ.20): ಕೇಂದ್ರ ಕಾರಾಗೃಹವು (Central Prison) ಪ್ರತಿಯೊಂದು ಕೆಲಸದಲ್ಲೂ ಒಳ್ಳೆ ರೀತಿಯಿಂದ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದ (Karnataka) ಎಲ್ಲಾ ಕಾರಾಗೃಹಗಳಿಗಿಂತ ಧಾರವಾಡ ಕೇಂದ್ರ ಕಾರಾಗೃಹ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿಗಳು (High Court Justice) ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಾಧ್ಯಕ್ಷರೂ ಆದ ನ್ಯಾಯಮೂರ್ತಿ ಬಿ.ವೀರಪ್ಪ (B Veerappa) ಅವರು ಹೇಳಿದರು. 

ಅವರು ಇಂದು ಮಧ್ಯಾಹ್ನ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಅನಿರೀಕ್ಷಿತ ಭೇಟಿ ನೀಡಿ, ಕೈದಿಗಳ ಊಟ, ಆರೋಗ್ಯ, ಅರಿವು, ಪರಿವರ್ತನೆ ಮತ್ತು ಕಾನೂನು ನೆರವು ಕುರಿತು ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು. ಕಾರಾಗೃಹದಲ್ಲಿನ ಆಹಾರ ದಾಸ್ತಾನು ಕೊಠಡಿ, ಟೇಲಿಫೋನ್ ಬೂತ್, ಗ್ರಂಥಾಲಯ, ಅಡುಗೆ ಮನೆ, ದನದ ಕೊಟ್ಟಿಗೆ, ಹೈನುಗಾರಿಕೆ ವಿಭಾಗಗಳನ್ನು ವೀಕ್ಷಿಸಿ, ಪರಿಶೀಲಿಸಿದರು.

Congress Politics: ಕಾಂಗ್ರೆಸ್‌ಗೆ ಮುಜುಗರ ತಂದ ಹೇಳಿಕೆ: ದೀಪಕ್ ಚಿಂಚೋರೆಗೆ ನೋಟಿಸ್ ಜಾರಿ

ಅಡುಗೆ ಮನೆಗೆ ಭೇಟಿ ನೀಡಿದ ನ್ಯಾಯಮೂರ್ತಿಗಳು ಸ್ವತಃ ಅನ್ನ ಸಾರು, ಚಪಾತಿ ಸವಿಯುವ ಮೂಲಕ ಆಹಾರ ಗುಣಮಟ್ಟ ಪರೀಕ್ಷಿಸಿದರು. ಜೈಲಿನಲ್ಲಿರುವ ಪುರುಷ ಹಾಗೂ ಮಹಿಳಾ ಕೈದಿಗಳ ವಾರ್ಡ್‌ಗಳಿಗೆ ಭೇಟಿ ನೀಡಿ, ಅವರ ಕುಂದುಕೊರತೆಗಳನ್ನು ಆಲಿಸಿದರು. ಅಗತ್ಯವಿರುವ ಕೈದಿಗಳಿಗೆ ಉಚಿತವಾಗಿ ನ್ಯಾಯವಾದಿಗಳನ್ನು ನೀಡಿ, ಅವರ ಪರವಾಗಿ ಪ್ರಕರಣಗಳನ್ನು ನಡೆಸಲು ಪ್ರಾಧಿಕಾರದಿಂದ ಸಹಾಯ ಮಾಡುವುದಾಗಿ ನ್ಯಾಯಮೂರ್ತಿಗಳು ಭರವಸೆ ನೀಡಿದರು.

ಕೇಂದ್ರ ಕಾರಾಗೃಹದಲ್ಲಿನ ಗಾಂಧಿಭವನದಲ್ಲಿ ವಿಚಾರಾಧೀನ ಮತ್ತು ಶಿಕ್ಷೆಗೆ ಒಳಪಟ್ಟ  ಕೈದಿಗಳನ್ನು ಉದ್ದೇಶಿಸಿ ಮಾತನಾಡಿ ಪ್ರತಿಯೊಬ್ಬರಿಗೂ ಯೋಗ, ಧ್ಯಾನ ಮುಖ್ಯ. ಕಾರಾಗೃಹದ ಸುತ್ತ ಒಳ್ಳೆಯ ವಾತಾವರಣವಿದೆ. ಗ್ರಂಥಾಲಯವಿದೆ. ಓದಿ ವಿದ್ಯಾವಂತರಾಗಿ ಜ್ಞಾನದ ಜೊತೆ ಒಳ್ಳೆಯ ಸಂಸ್ಕಾರವನ್ನು ಬೆಳೆಸಿಕೊಂಡು ಸಮಾಜಕ್ಕೆ ಮಾದರಿ ವ್ಯಕ್ತಿಗಳಾಗಬೇಕು. ಉಚಿತ ನ್ಯಾಯ ದೊರಕಿಸಿ ಕೊಡುವಲ್ಲಿ ಪ್ರಯತ್ನಿಸುತ್ತೇವೆ ಎಂದು ಹೇಳಿದ ಅವರು, ಧಾರವಾಡ ಕಾರಾಗೃಹದ ಉತ್ತಮ ನಿರ್ವಹಣೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

MLC Election: ಹೊರಟ್ಟಿ ಹಣಿಯಲು ಜೆಡಿಎಸ್‌ ಫ್ಲ್ಯಾನ್‌..!

ಕಾರಾಗೃಹದಲ್ಲಿ ಹೊಸದಾಗಿ ರೂಪಿಸಿದ ಎಫ್.ಎಂ.ಕೇಂದ್ರ ಮಾದರಿಯ ಮನರಂಜನೆ ಹಾಗೂ ಮಾನಸಿಕ ಪರಿವರ್ತನೆ ಕಾರ್ಯಕ್ರಮ ಬಿತ್ತರಿಸುವ ರೇಡಿಯೋ ವ್ಯವಸ್ಥೆಯನ್ನು ನ್ಯಾಯಮೂರ್ತಿಗಳು ಉದ್ಘಾಟಿಸಿದರು. ಆಪ್ತ ಸಮಾಲೋಚನೆ ಹಾಗೂ ಉಚಿತ ಕಾನೂನು ನೆರವು ಘಟಕಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾಯಾಧೀಶ ಎಚ್.ಶಶಿಧರ ಶೆಟ್ಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶೆ ಪುಷ್ಪಲತ ಸಿ.ಎಂ., ಜೈಲು ಅಧೀಕ್ಷಕ ಎಮ್.ಎ.ಮರಿಗೌಡರ ಸೇರಿದಂತೆ ಜೈಲು ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

click me!