ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ಕಾಂಗ್ರೆಸ್‌ಗೆ ಸೇರ್ಪಡೆ

By Kannadaprabha NewsFirst Published Jun 21, 2021, 11:57 AM IST
Highlights

* ಕಾಂಗ್ರೆಸ್‌ ತತ್ವ-ಸಿದ್ಧಾಂತ ನೋಡಿ ಪಕ್ಷವನ್ನು ಸೇರುತ್ತಿದ್ದೇನೆ: ಸೈಯ್ಯದ್‌
* ಜೆಡಿಎಸ್‌ನಲ್ಲಿನ ಗೊಂದಲ ಮತ್ತು ಉತ್ತರ ಕರ್ನಾಟಕ ನಿರ್ಲಕ್ಷ್ಯದಿಂದ ಕಾಂಗ್ರೆಸ್‌ಗೆ ಸೇರ್ಪಡೆ
* ಬಿಜೆಪಿ ಆಡಳಿತದಿಂದ ರೋಸಿ ಹೋದ ರಾಜ್ಯದ ಜನತೆ 

ಕೊಪ್ಪಳ(ಜೂ.21):  ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ಕೆ.ಎಂ. ಸಯ್ಯದ್‌ ಅವರು ಜೂ. 21ರಂದು ಕೊಪ್ಪಳದಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ, ಶಾಸಕ ರಾಘವೇಂದ್ರ ಹಿಟ್ನಾಳ ಅವರ ಮುಂದಾಳತ್ವದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ.

ಜೆಡಿಎಸ್‌ನಲ್ಲಿನ ಗೊಂದಲ ಮತ್ತು ನಿರ್ಲಕ್ಷ್ಯದಿಂದ ಜೆಡಿಎಸ್‌ ತೊರೆದಿರುವ ಅವರು, ಈಗ ಕಾಂಗ್ರೆಸ್‌ ತತ್ವ-ಸಿದ್ಧಾಂತವನ್ನು ಮೆಚ್ಚಿ ಸೇರುತ್ತಿರುವುದಾಗಿ ಕೆ.ಎಂ. ಸಯ್ಯದ್‌ ಹೇಳಿಕೊಂಡಿದ್ದಾರೆ.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯಿಂದ ಜನರು ರೋಸಿ ಹೋಗಿದ್ದಾರೆ. ಸಂಕಷ್ಟದ ಸಮಯದಲ್ಲಿ ಜನರಿಗೆ ಸ್ಪಂದನೆ ಮಾಡದಿರುವ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಹತ್ತಾರು ಯೋಜನೆಗಳನ್ನು ಬಡವರಿಗಾಗಿಯೇ ತಂದಿದ್ದಾರೆ. ಎಲ್ಲ ಸಮುದಾಯವನ್ನು ಅವರು ಪ್ರೀತಿಸುತ್ತಾರೆ. ಹೀಗಾಗಿ, ಅವರ ಜನಪರ ಕಾಳಜಿ ಮತ್ತು ಕಾಂಗ್ರೆಸ್‌ ತತ್ವ-ಸಿದ್ಧಾಂತ ಮೆಚ್ಚಿ ನಾನು ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದೇನೆ. ಶಾಸಕರಾದ ರಾಘವೇಂದ್ರ ಹಿಟ್ನಾಳ, ಜಮೀರ್‌ ಅಹ್ಮದ್‌ ಅವರ ಮಾರ್ಗದರ್ಶನದಲ್ಲಿ ನಾನು ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದೇನೆ.

ಕೊಪ್ಪಳ: ಕೋವಿಡ್‌ ನಿರ್ವಹಣೆ, ದೇಶಕ್ಕೆ ಮುನಿರಾಬಾದ್‌ ಮಾದರಿ..!

ಗೆಲುವಿಗಾಗಿ ಶ್ರಮಿಸುತ್ತೇನೆ:

ಜಿಲ್ಲೆಯಲ್ಲಿ ಕಾಂಗ್ರೆಸ್‌ ಸಂಘಟನೆ ಮಾಡುತ್ತಲೇ ಪಕ್ಷದ ನಾಯಕರ ಗೆಲುವಿಗಾಗಿ ಶ್ರಮಿಸುತ್ತೇನೆ. ನಿಷ್ಠಾವಂತನಾಗಿ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ. ಪಕ್ಷದ ಹೈಕಮಾಂಡ್‌ ನಿರ್ದೇಶನದಂತೆ ಕೆಲಸ ಮಾಡುತ್ತೇನೆ. ಪಕ್ಷ ನೀಡುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

ಸೇರ್ಪಡೆ ಕಾರ್ಯಕ್ರಮ...

ಕೊಪ್ಪಳ ನಗರದ ಸಾರ್ವಜನಿಕ ಮೈದಾನದಲ್ಲಿ ನಡೆಯುವ 15,000 ಕಿಟ್‌ ವಿತರಣಾ ಸಮಾರಂಭದಲ್ಲಿ ಪ್ರತಿಪಕ್ಷದ ನಾಯಕ ಸಿಎಂ ಸಿದ್ದರಾಮಯ್ಯ ಅವರು ಜೆಡಿಸ್‌ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಎಂ. ಸಯ್ಯದ್‌ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಜಮೀರ್‌ ಅಹ್ಮದ್‌ ಹಾಗೂ ಜಿಲ್ಲೆಯ ನಾಯಕರು ಭಾಗವಹಿಸುವರು.
 

click me!