Mandya Politics: ದಳಪತಿಗಳ ಘರ್ಜನೆ! ಥಂಡಾ ಹೊಡೆದ ಸಂಸದೆ ಸುಮಲತಾ

Kannadaprabha News   | Asianet News
Published : Dec 28, 2021, 10:45 AM ISTUpdated : Dec 28, 2021, 10:53 AM IST
Mandya Politics:   ದಳಪತಿಗಳ ಘರ್ಜನೆ!  ಥಂಡಾ ಹೊಡೆದ ಸಂಸದೆ ಸುಮಲತಾ

ಸಾರಾಂಶ

 ಮಂಡ್ಯದಲ್ಲಿ ದಳಪತಿಗಳ ಘರ್ಜನೆ!  ಥಂಡಾ ಹೊಡೆದ ಸಂಸದೆ ಸುಮಲತಾ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ ಶಾಸಕರ ಮಾತಿನ ಅಬ್ಬರಕ್ಕೆ ಥಂಡಾ ಹೊಡೆದ ಸಂಸದೆ

 ಮಂಡ್ಯ (ಡಿ.28): ದಿಶಾ ಸಭೆಯಲ್ಲಿ (Disha Meeting) ಘರ್ಜಿಸಿದ ದಳಪತಿಗಳು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ, ಶಾಸಕರ (MLA) ಮಾತಿನ ಅಬ್ಬರಕ್ಕೆ ಬೆದರಿದ ಸಂಸದೆ, ಸಭೆಯ ಆರಂಭದಲ್ಲೇ ಅಪಸ್ವರ, ಶಾಸಕರು, ದಿಶಾ ಸದಸ್ಯರ ನಡುವೆ ಮಾತಿನ ಚಕಮಕಿ.  ಇವು ನಗರದ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಕೇಂದ್ರ ವಲಯ, ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂಡುಬಂದ ಪ್ರಮುಖ ದೃಶ್ಯಾವಳಿಗಳು.

ಬೆಂಗಳೂರು-ಮೈಸೂರು (Bengaluru  - Mysuru)  ಹೆದ್ದಾರಿ ಕಾಮಗಾರಿ ಮಾಡುವುದಕ್ಕೆ ಜಿಲ್ಲೆಯ ರಸ್ತೆಗಳನ್ನು ಹಾಳು ಮಾಡಿರುವ ಕುರಿತಂತೆ ಶಾಸಕರಾದ ಸಿ.ಎಸ್‌.ಪುಟ್ಟರಾಜು (Puttaraju), ಕೆ.ಸುರೇಶ್‌ ಗೌಡ (Suresh Gowda) ಅವರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ನಿಮ್ಮನ್ನು ಹೇಳೋರು-ಕೇಳೋರು ಇಲ್ವಾ!:  ಹೊಳಲು ಸರ್ಕಲ್‌ನಿಂದ ಕೆಆರ್‌ಎಸ್‌ ವರೆಗಿನ ರಸ್ತೆ (Road) ನಿರ್ಮಾಣವಾಗಿ ಎರಡು ವರ್ಷ ಕಳೆದಿಲ್ಲ. ನಿಮ್ಮ ವಾಹನಗಳ (Vehicle) ಓಡಾಟದಿಂದ ದುದ್ದ, ಚಿನಕುರಳಿ, ಕಸಬಾ ಹೋಬಳಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಇದಕ್ಕೆಲ್ಲಾ ಯಾರು ಹೊಣೆ. ಆ ರಸ್ತೆಗಳನ್ನು ಯಾವಾಗ ರಿಪೇರಿ ಮಾಡಿಕೊಡುತ್ತೀರಿ. ರಸ್ತೆಗಳಲ್ಲಿ ಜನರು, ವಾಹನಗಳು ಓಡಾಡುವುದಕ್ಕೆ ಆಗುತ್ತಿಲ್ಲ. ಓವರ್‌ಲೋಡ್‌ ತುಂಬಿಕೊಂಡು ಓಡಾಡುತ್ತೀರಲ್ಲ. ನಿಮ್ಮನ್ನು ಹೇಳೋರು ಕೇಳೋರು ಯಾರು ಇಲ್ಲ ಅಂತ ತಿಳ್ಕೊಂಡಿದ್ದೀರಾ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು (Puttaraju) ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಾಳಾಗಿರುವ ರಸ್ತೆಗಳಲ್ಲಿ ಸರಿಪಡಿಸುವ ಕಾಮಗಾರಿ ನಡೆಯುತ್ತಿದೆ. ಸಂಪೂರ್ಣ ರಸ್ತೆ ಹಾಳಾಗಿದ್ದರೆ ಹೊಸದಾಗಿ ನಿರ್ಮಿಸಿಕೊಡುವುದಾಗಿ ಅಧಿಕಾರಿಗಳು ಹೇಳಿದಾಗ, ಮತ್ತೆ ಉದ್ವೇಗಗೊಂಡ ಪುಟ್ಟರಾಜು, ಎಲ್ರೀ ಕೆಲಸ ಮಾಡ್ತಿದ್ದೀರಿ. ದುದ್ದ ಹೋಬಳಿ, ಚಿನಕುರಳಿ ಹೋಬಳಿಯಲ್ಲಿ ಸಮೀಕ್ಷೆ ನಡೆಸಿ ಎರಡು ತಿಂಗಳಾಗಿದೆ. ಇನ್ನೂ ರಸ್ತೆ ದುರಸ್ತಿ ಮಾಡಿಲ್ಲ. ಸಭೆಗೆ ಸುಳ್ಳು ಹೇಳಬೇಡಿ ಎಂದು ತರಾಟೆ ತೆಗೆದುಕೊಂಡರು.

ಯಾವಾಗ ರಿಪೇರಿ ಮಾಡಿಕೊಡುವಿರಿ?:  ಅಧಿಕಾರಿಗಳ ಮಾತಿನಿಂದ ತೃಪ್ತರಾಗದ ಸಂಸದೆ ಸುಮಲತಾ (Sumalatha), ಹೆದ್ದಾರಿ ಕಾಮಗಾರಿಗೆ ಜಲ್ಲಿ, ಎಂ-ಸ್ಯಾಂಡ್‌ ಪೂರೈಕೆ ವೇಳೆ ರಸ್ತೆಗಳು ಹಾಳಾಗಿರುವ ಬಗ್ಗೆ ಬಹಳಷ್ಟುದೂರುಗಳು ಕೇಳಿಬಂದಿವೆ. ಈ ರಸ್ತೆಗಳನ್ನೆಲ್ಲಾ ಯಾವಾಗ ರಿಪೇರಿ ಮಾಡಿಕೊಡುವಿರಿ ಎಂದಾಗ, ಒಂದು ತಿಂಗಳೊಳಗೆ ರಿಪೇರಿ ಮಾಡಿಕೊಡುವುದಾಗಿ ಅಧಿಕಾರಿ ಹೇಳಿದಾಗ, ಹಿಂದಿನ ದಿಶಾ (Disha) ಮೀಟಿಂಗ್‌ನಲ್ಲೂ ಇದೇ ಮಾತನ್ನು ಹೇಳಿದ್ದಿರಿ. ಎರಡು ತಿಂಗಳಾದರೂ ರಸ್ತೆಗಳು ದುರಸ್ತಿಗೊಂಡಿಲ್ಲ. ಈಗ ಇನ್ನೊಂದು ತಿಂಗಳೊಳಗೆ ಸರಿಮಾಡಿಬಿಡ್ತೀರಾ. ಇದನ್ನು ನಂಬುವುದಕ್ಕಾಗುವುದೇ. ಕೆಲಸ ಮುಗಿದ ಮೇಲೆ ನಿಮ್ಮನ್ನು ಹುಡುವುದಕ್ಕೆ ಆಗುವುದೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಅವರು ಒಂದು ತಿಂಗಳೊಳಗೆ ಮುಗಿಸಿಕೊಡುತ್ತೇವೆ. ರಸ್ತೆ ನಿರ್ವಹಣೆಗಾಗಿ ಕಾಮಗಾರಿ ಮುಗಿದ ಬಳಿಕವೂ ಇಲ್ಲೇ ಇರುತ್ತೇವೆ ಎಂದು ಹೆದ್ದಾರಿ ಅ​ಭಿ​ವೃದ್ಧಿ ಪ್ರಾ​ಧಿ​ಕಾ​ರದ ಯೋ​ಜನಾ ನಿರ್ದೇಶ​ಕರ ಪ​ರ​ವಾಗಿ ಸ​ಭೆಗೆ ಆ​ಗ​ಮಿ​ಸಿದ್ದ ಮ​ಲ್ಲಿ​ಕಾರ್ಜುನ್‌ ಭರವಸೆ ನೀಡಿದರು.

ದೂರು ದಾ​ಖಲಿಸಿ: ಹೆ​ದ್ದಾ​ರಿ ಕಾ​ಮ​ಗಾರಿ ನೆ​ಪ​ದಲ್ಲಿ ಲೋ​ಕೋ​ಪ​ಯೋಗಿ ವ್ಯಾ​ಪ್ತಿಯ ರ​ಸ್ತೆ​ಗ​ಳನ್ನು ಹಾಳು ಮಾ​ಡು​ತ್ತಿ​ದ್ದರೆ, ನೀ​ವೇನು ಮಾ​ಡು​ತ್ತಿ​ದ್ದೀರಿ ಎಂದು ಲೋ​ಕೋ​ಪ​ಯೋಗಿ ಇಂಜಿ​ನಿ​ಯರ್‌ಗ​ಳನ್ನು ಶಾ​ಸಕ ಸು​ರೇಶ್‌ ಗೌಡ ತ​ರಾ​ಟೆಗೆ ತೆ​ಗೆ​ದು​ಕೊಂಡರು.

ರಸ್ತೆ ದು​ರಸ್ತಿ ಮಾ​ಡಿ​ಸ​ಬೇಕು. ಇ​ಲ್ಲವೇ ಅ​ವರ ವಿ​ರುದ್ಧ ಪ್ರ​ಕ​ರಣ ದಾ​ಖ​ಲಿಸಿ ದಂಡ ವ​ಸೂಲಿ ಮಾ​ಡ​ಬೇಕು. ಅದು ಬಿಟ್ಟು ನೀವು ಏನು ಮಾ​ಡು​ತ್ತಿ​ದ್ದೀರಿ ಎಂದಾಗ, ಲೋ​ಕೋ​ಪ​ಯೋಗಿ ಇ​ಲಾ​ಖೆಯ ಸ​ಹಾ​ಯಕ ಕಾ​ರ‍್ಯ​ಪಾ​ಲಕ ಇಂಜಿ​ನಿ​ಯರ್‌ಗಳು ನಾವು ಎ​ರಡು ತಿಂಗಳ ಹಿಂದೆಯೇ ರ​ಸ್ತೆ​ಗಳ ದು​ರಸ್ತಿ ಬಗ್ಗೆ ತಿ​ಳಿ​ಸಿ​ದ್ದೇವೆ. ಈ ರ​ಸ್ತೆ​ಯಲ್ಲಿ ನಮ್ಮ ವಾ​ಹ​ನ​ಗಳು ಓ​ಡಾ​ಡಿಲ್ಲ ಎಂದು ಸ​ಬೂಬು ಹೇ​ಳಿ​ದ್ದರು. ಆ​ದರೆ ಗ್ರಾ​ಮ​ಸ್ಥರೇ ಅ​ವರ ವಾ​ಹ​ನ​ಗ​ಳನ್ನು ತ​ಡೆದು ನಿ​ಲ್ಲಿಸಿ ಪ್ರ​ತಿ​ಭ​ಟನೆ ಮಾ​ಡು​ತ್ತಿದ್ದ ವೇಳೆ ಸ್ಥ​ಳಕ್ಕೆ ತೆ​ರಳಿ ವೀ​ಡಿಯೋ ಮಾ​ಡಿ​ಕೊಂಡು ಅ​ವ​ರಿಗೆ ತ​ಲು​ಪಿ​ಸಿ​ದ್ದೇವೆ ಎಂದು ತಿ​ಳಿ​ಸಿ​ದರು. ಆ​ದರೂ ಇನ್ನೂ ದು​ರಸ್ತಿ ಮಾ​ಡಿಲ್ಲ ಎಂದು ಸ​ಭೆಗೆ ಮಾ​ಹಿತಿ ನೀ​ಡಿ​ದರು.

ಆರಂಭದಲ್ಲೇ ಸಭೆಯಲ್ಲಿ ಗದ್ದಲ:

ದಿಶಾ ಸಭೆಗೆ ಸಮಯಕ್ಕೆ ಸರಿಯಾಗಿ ನಡೆಯದಿದ್ದಕ್ಕೆ ಶಾಸಕ ಕೆ.ಸುರೇಶ್‌ ಗೌಡ ಅಸಮಾಧಾನ ವ್ಯಕ್ತಪಡಿಸಿದರು. ಸಭೆ ಈಗಾಗಲೇ 2 ಗಂಟೆ ತಡವಾಗಿ ಆರಂಭವಾಗಿದೆ. ಸಂಸದರ ಸಭೆಗೆ ನಾವು 2 ಗಂಟೆಗೆ ಬಂದಿದ್ದೆವು. ಜನಪ್ರತಿನಿಧಿಗಳ ಬಗ್ಗೆ ನಿಮಗೆ ಗೌರವ, ಬೆಲೆ ಇಲ್ಲ. ಒಂದು ತೊಟ್ಟು ನೀರು ಕೊಡುವುದಕ್ಕೂ ಯಾರೂ ಇಲ್ಲಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಭೆಯನ್ನು ಅಜೆಂಡಾದಂತೆ ಸಂಪೂರ್ಣ ಮಾಡುವುದಿದ್ದರೆ ಮಾತ್ರ ಸಭೆ ನಡೆಸಿ. ಮಧ್ಯದಲ್ಲೇ ಬರಖಾಸ್ತು ಮಾಡುವುದಾದರೆ ಸಭೆಯನ್ನು ಮುಂದೂಡಿ ಎಂದು ಸಂಸದೆಯನ್ನು ಗುರಿಯಾಗಿಸಿಕೊಂಡು ಮಾತನಾಡಿದರು.

ಈ ವೇಳೆ ಮಧ್ಯ ಪ್ರವೇಶ ಮಾಡಿದ ದಿಶಾ ಸಮಿತಿ ಸದಸ್ಯ ಬೇಲೂರು ಸೋಮಶೇಖರ್‌, ಹಿಂದಿನ ಸಭೆಯಲ್ಲಿ ಅಜೆಂಡಾ ಪ್ರಕಾರ ಚರ್ಚೆ ಮಾಡಿದಿರಾ ಎಂದು ಪ್ರಶ್ನಿಸಿದಾಗ, ಶಾಸಕರಾದ ಕೆ.ಸುರೇಶ್‌ಗೌಡ ಹಾಗೂ ಡಾ.ಕೆ.ಅನ್ನದಾನಿ ದಿಶಾ ಸಮಿತಿ ಸದಸ್ಯನ ನಡುವೆ ಮಾತಿನ ಚಕಮಕಿ ನಡೆಯಿತು. ಏರು ದನಿಯಲ್ಲಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದರು.

ಸಭೆಗೆ ಅಜೆಂಡಾ ಕೂಡ ಕೊಟ್ಟಿಲ್ಲ:  ಆನಂತರ ಸಭೆಯ ಅಜೆಂಡಾ ಕೊಡುವಂತೆ ಶಾಸಕರು (MLA) ಪಟ್ಟು ಹಿಡಿದರು. ಅಜೆಂಡಾ ಬದಲು ಪೋ›ಗ್ರೆಸ್‌ ರಿಪೋರ್ಟ್‌ ಕೊಟ್ಟಿದ್ದೀರಿ. ಇದನ್ನ ಅಜೆಂಡಾ ಅಂತಾ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದಾಗ, ಶಾಸಕರು ಸದನದಲ್ಲಿದ್ದ ಕಾರಣ ಪಿಎಗಳಿಗೆ ಅಜೆಂಡಾ ಕೊಟ್ಟಿದ್ದೇವೆ ಎಂದು ಸಿಇಒ ಹೇಳಿದರು.  ಯಾರು ಯಾರಿಗೆ ಅಜೆಂಡಾ ಕೊಟ್ಟಿದ್ದೀರಿ, ಯಾರು ರಿಸೀವ್‌ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಸ್ವೀಕೃತಿ ಮಾಹಿತಿ ಕೊಡಿ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಕೇಳಿದರು.

ನಾವು ತಾಪಂ ಇಒ ಮೂಲಕ ಎಲ್ಲರಿಗೂ ತಲುಪಿಸಿದ್ದೇವೆ ಎಂದಾಗ, ಮತ್ತೆ ಶಾಸಕ ಸಿ.ಎಸ್‌.ಪುಟ್ಟರಾಜು, ದಿಶಾ ಸಭೆ ನಡೆಯುವುದಕ್ಕೆ 7 ದಿನಗಳ ಮುಂಚೆ ಅಜೆಂಡಾ ಕಾಪಿಯನ್ನು ಕಳುಹಿಸಬೇಕಲ್ಲವೇ. ನಾವು ಸದನದಲ್ಲಿದ್ದೆವು. ನಿನ್ನೆ-ಮೊನ್ನೆ ಬಂದಿದ್ದೇವೆ. ನಾವು ಒಂದು ದಿನಕ್ಕೆ ಓದಿಕೊಂಡು ಬರಲು ಸಾಧ್ಯವೇ. ಇಲಾಖೆಗಳಿಂದ ಮಾಹಿತಿಯನ್ನು ದಿಶಾ ಸಭೆ ಕರೆಯುವ 15 ದಿನಗಳ ಮುಂಚೆ ತರಿಸಿಕೊಳ್ಳುವಂತೆ ಸಿಇಒ ಅವರಿಗೆ ಸಲಹೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಾಂತಲಾ, ಜಿಲ್ಲಾ ಪೊಲೀಸ್‌ ಅಧೀಕ್ಷಕ ಎನ್‌.ಯತೀಶ್‌ ಇದ್ದರು.

PREV
Read more Articles on
click me!

Recommended Stories

ಅಪ್ಪನಿಗೆ ಅನಾರೋಗ್ಯ ಮನೆಯಲ್ಲಿ ಬಡತನ SSLC ಪರೀಕ್ಷೆ ಬಿಟ್ಟು ಕೂಲಿಗೆ ಹೋದ ಬಾಲಕಿ: ಆಮೇಲಾಗಿದ್ದೇನು?
ಗ್ಯಾರಂಟಿ ಯೋಜನೆ ಜನರ ಪರ: ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ