ಮೈಸೂರು: ಅರಮನೆಯಲ್ಲಿ ದಸರಾ ಜಂಬೂಸವಾರಿ ತಾಲೀಮು

By Kannadaprabha NewsFirst Published Oct 20, 2023, 4:00 AM IST
Highlights

ಮೈಸೂರು ಅರಮನೆಯ ಮುಂಭಾಗದಲ್ಲಿ ನಡೆದ ಜಂಬೂಸವಾರಿಯ ಮೊದಲ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ವರಲಕ್ಷ್ಮಿ ಮತ್ತು ವಿಜಯ, ಅಶ್ವರೋಹಿ ದಳ ಕುದುರೆಗಳು, ವಿವಿಧ ಪೊಲೀಸ್ ತುಕಡಿಗಳು, ಪೊಲೀಸ್ ಬ್ಯಾಂಡ್ ಭಾಗವಹಿಸಿದ್ದವು.

ಮೈಸೂರು(ಅ.20):  ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಗೆ ಇನ್ನೂ 5 ದಿನವಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ಗಜಪಡೆ, ಅಶ್ವರೋಹಿ ದಳದ ಹಾಗೂ ವಿವಿಧ ಪೊಲೀಸ ತುಕಡಿಗಳು ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಸೇರಿದಂತೆ ಜಂಬೂಸವಾರಿ ತಾಲೀಮನ್ನು ಗುರುವಾರ ನಡೆಸಲಾಯಿತು.

ಮೈಸೂರು ಅರಮನೆಯ ಮುಂಭಾಗದಲ್ಲಿ ನಡೆದ ಜಂಬೂಸವಾರಿಯ ಮೊದಲ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ವರಲಕ್ಷ್ಮಿ ಮತ್ತು ವಿಜಯ, ಅಶ್ವರೋಹಿ ದಳ ಕುದುರೆಗಳು, ವಿವಿಧ ಪೊಲೀಸ್ ತುಕಡಿಗಳು, ಪೊಲೀಸ್ ಬ್ಯಾಂಡ್ ಭಾಗವಹಿಸಿದ್ದವು.

ಮೈಸೂರಿನಲ್ಲಿ ಯುವ ದಸರಾ ಸಂಭ್ರಮ: ಮಕ್ಕಳ ದಸರಾದಲ್ಲಿ ಕಳೆಗಟ್ಟಿದ ಕಲರವ

ಈ ತಾಲೀಮಿನಲ್ಲಿ ಅಭಿಮನ್ಯು ಆನೆಯೊಂದಿಗೆ ಕುಮ್ಕಿಗಳಾಗಿ ವರಲಕ್ಷ್ಮಿ ಮತ್ತು ವಿಜಯ ಸಾಗಿದವು. ಅರ್ಜುನ, ಮಹೇಂದ್ರ, ಗೋಪಿ, ಕಂಜನ್, ಸುಗ್ರೀವ, ಪ್ರಶಾಂತ, ರೋಹಿತ, ಲಕ್ಷ್ಮಿ ಮತ್ತು ಹಿರಣ್ಯಾ ಸಾಲಾನೆಗಳಾಗಿ ಸಾಗಿದವು. ಇನ್ನೂ ಖಾಸಗಿ ದರ್ಬಾರ್ ನಲ್ಲಿ ಪಟ್ಟಣದ ಆನೆಗಳಾಗಿ ಪಾಲ್ಗೊಂಡಿರುವ ಧನಂಜಯ ಮತ್ತು ಭೀಮ ಆನೆಗಳು ಈ ತಾಲೀಮಿನಲ್ಲಿ ಪಾಲ್ಗೊಂಡಿರಲಿಲ್ಲ.

ಅ.24 ರಂದು ದಸರಾ ಜಂಬೂಸವಾರಿ ದಿನ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ಬರುವ ಮಾರ್ಗ, ಪುಷ್ಪಾರ್ಚನೆ ಮಾಡುವ ಸ್ಥಳ, ಆನೆಗಳ ತಂಡದ ಮುಂದೆ ಸಂಚರಿಸಲಿರುವ ಅಶ್ವರೋಹಿದಳ, ಪಥಸಂಚಲನದಲ್ಲಿ ಪಾಲ್ಗೊಳ್ಳುವ ಪೊಲೀಸ್ ತುಕಡಿಗಳು, ಪೊಲೀಸ್ ಬ್ಯಾಂಡ್‌ ಯಾವ ಕ್ರಮಾಂಕದಲ್ಲಿ ಸಾಗಬೇಕೆಂಬುದನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ತಾಲೀಮು ಯಶಸ್ವಿಯಾಗಿ ಜರುಗಿತು. ಇನ್ನೂ ಅ.20 ರಂದು 21 ಸುತ್ತು ಕುಶಾಲತೋಪು ಸಿಡಿಸುವುದರೊಂದಿಗೆ ತಾಲೀಮು ನಡೆಯಲಿದೆ. ಹಾಗೆಯೆ ಅ.23 ರಂದು ಜಂಬೂಸವಾರಿಯ ಅಂತಿಮ ಹಂತದ ತಾಲೀಮು ಜರುಗಲಿದೆ.

ಯುವ ದಸರಾಗೆ ರಂಗು ತಂದ 'ಘೋಸ್ಟ್': ಹಾಡಿ-ಕುಣಿದು ರಂಜಿಸಿದ ಶಿವಣ್ಣ

ಈ ವೇಳೆ ಡಿಸಿಎಫ್ ಸೌರಭಕುಮಾರ್, ಅಶ್ವರೋಹಿದಳ ಕಮಾಂಡೆಂಟ್ ಶೈಲೇಂದ್ರ, ಅರಮನೆಯ ಎಸಿಪಿ ಚಂದ್ರಶೇಖರ್, ಸಿಎಆರ್ ಎಸಿಪಿ ಸತೀಶ್, ಆರ್ ಎಫ್ಒ ಸಂತೋಷ್, ಪಶು ವೈದ್ಯ ಡಾ. ಮುಜೀಬ್ ಉರ್ ರೆಹಮಾನ್ ಮೊದಲಾದವರು ಇದ್ದರು.

ಅಂತಿಮ ಹಂತಕ್ಕೆ ತಲುಪಿದ ಗಜಪಡೆ

ಮೊದಲ ತಂಡದಲ್ಲಿ 9, ಎರಡನೇ ತಂಡದಲ್ಲಿ 5 ಸೇರಿದಂತೆ ಒಟ್ಟು 14 ಆನೆಗಳು ಕಾಡಿನಿಂದ ನಾಡಿಗೆ ಆಗಮಿಸಿದ್ದು, ವಿಜಯದಶಮಿ ಮೆರವಣಿಗಾಗಿ ವಿವಿಧ ತಾಲೀಮಿನಲ್ಲಿ ಆನೆಗಳು ಭಾಗವಹಿಸಿವೆ. ಈಗಾಗಲೇ ಅರಮನೆ ಆವರಣದ ಆನೆ ಬಿಡಾರದಿಂದ ಬನ್ನಿಮಂಟಪದವರೆಗೆ ನಡಿಗೆ ತಾಲೀಮು, ಮರಳು ಮೂಟೆ ಹೊರಿಸಿ ತಾಲೀಮು, ಮರದ ಅಂಬಾರಿ ಹೊರಿಸುವ ತಾಲೀಮು ಯಶಸ್ವಿಗೊಳಿಸಿ, ಮೂರು ಬಾರಿ ಕುಶಾಲತೋಪು ಸಿಡಿಸುವಾಗ ಉಂಟಾಗುವ ಶಬ್ದದ ಪರಿಚಯಿಸುವ ತಾಲೀಮಿನನ್ನು ಗಜಪಡೆ ಯಶಸ್ವಿಗೊಳಿಸಿವೆ. ಈಗ ತಾಲೀಮ ಅಂತಿಮ ಹಂತವಾದ ಜಂಬೂಸವಾರಿ ತಾಲೀಮಿಲ್ಲಿ ಭಾಗವಹಿಸಿದ್ದು, ಇನ್ನೂ ಎರಡು ದಿನ ಈ ತಾಲೀಮು ನಡೆಯಲಿದೆ.

click me!