ಡ್ರಗ್ಸ್‌ ಕೇಸ್‌: ಅನುಶ್ರೀ ಬಚಾವ್‌ ಮಾಡಲು ಮಂಗ್ಳೂರು ಪೊಲೀಸ್‌ ಯತ್ನ?

By Kannadaprabha NewsFirst Published Sep 10, 2021, 9:14 AM IST
Highlights

*  ತರುಣ್‌ ಡ್ರಗ್ಸ್‌ ಸೇವನೆ ಸಾಬೀತಾದರೂ ಹೆಸರಿಲ್ಲ
*  ಆರೋಪ ಪಟ್ಟಿಯಿಂದ ಎದ್ದಿದೆ ಮಹತ್ವದ ಪ್ರಶ್ನೆ
*  ಅನುಶ್ರೀಗೆ ತರುಣ್‌ ರಾಜ್‌ ಜೊತೆ ನಿಕಟ ಸಂಪರ್ಕ 
 

ಮಂಗಳೂರು(ಸೆ.10): ತೀವ್ರ ಕುತೂಹಲ ಮೂಡಿಸಿರುವ ಮಂಗಳೂರು ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಪಟ್ಟಿಯಲ್ಲಿ ಮಂಗಳೂರಿನ ಡ್ಯಾನ್ಸರ್‌ ತರುಣ್‌ ರಾಜ್‌ನ ಹೆಸರು ಕೈಬಿಡುವ ಮೂಲಕ ಪೊಲೀಸರೇ ನಿರೂಪಕಿ ಅನುಶ್ರೀ ಬಚಾವ್‌ ಆಗಲು ಸಹಕರಿಸಿದರೆ? ಮಂಗಳೂರು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿ ಇಂಥದ್ದೊಂದು ಪ್ರಶ್ನೆ ಹುಟ್ಟುಹಾಕುವಂತೆ ಮಾಡಿದೆ.

ಪ್ರಕರಣದ ಆರೋಪಿ ಡ್ಯಾನ್ಸರ್‌ ಕಿಶೋರ್‌ ಅಮನ್‌ ಶೆಟ್ಟಿ ಹಾಗೂ ತರುಣ್‌ ರಾಜ್‌ನನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪೊಲೀಸರು ಬಂಧಿಸಿದ್ದರು. ಅಲ್ಲದೆ ತರುಣ್‌ ರಾಜ್‌ನನ್ನು ಪರೀಕ್ಷೆಗೆ ಒಳಪಡಿಸಿದಾಗ ಆತ ಡ್ರಗ್ಸ್‌ ಸೇವಿಸಿರುವುದು ದೃಢಪಟ್ಟಿತ್ತು ಎಂದು ಸಹ ಹೇಳಲಾಗಿದೆ. ಆದರೆ ಈ ವಿಚಾರವನ್ನು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿಲ್ಲ. ಈ ಕಾರಣಕ್ಕೆ ಆರೋಪಿ ಎಂದೂ ಹೆಸರಿಸಿಲ್ಲ. ಕೇವಲ ಹೇಳಿಕೆಯನ್ನಷ್ಟೆ ಪಡೆದು ಬಿಟ್ಟುಬಿಡಲಾಗಿದೆ.

ಡ್ರಗ್ ಕೇಸ್: ಅನುಶ್ರೀ ಆಸ್ತಿ ಮೂಲ ಕೆದಕಿದ ಪ್ರಶಾಂತ್ ಸಂಬರಗಿ

ಅನುಶ್ರೀಗೆ ತರುಣ್‌ ರಾಜ್‌ ಜೊತೆ ನಿಕಟ ಸಂಪರ್ಕ ಇತ್ತು. ಆತನ ಜೊತೆಯೇ ಅನುಶ್ರೀ ಹೆಚ್ಚಿನ ದಿನ ಇರುತ್ತಿದ್ದರು. ಇಬ್ಬರೂ ಒಂದು ದಿನ ಜೊತೆಯಾಗಿ ಇದ್ದರು ಎಂದು ಆರೋಪಿ ಕಿಶೋರ್‌ ಶೆಟ್ಟಿ ಹೇಳಿರುವುದು ಆರೋಪ ಪಟ್ಟಿಯಲ್ಲಿ ದಾಖಲಾಗಿದೆ. ಕಿಶೋರ್‌ ಶೆಟ್ಟಿ ಡ್ರಗ್ಸ್‌ ಸೇವಿಸಿರುವುದು ಪರೀಕ್ಷೆಯಲ್ಲಿ ಸಾಬೀತಾಗಿತ್ತು. ಇದೇ ವೇಳೆ ತರುಣ್‌ರಾಜ್‌ನ್ನೂ ಡ್ರಗ್ಸ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು ಎನ್ನಲಾಗಿದೆ. ಬಳಿಕ ದಂಡ ಪಾವತಿಸಿ ಆತನನ್ನು ಪ್ರಕರಣದಿಂದ ಕೈಬಿಡಲಾಯಿತು ಎಂದು ಹೇಳಲಾಗುತ್ತಿದೆ. ಇದೇ ವೇಳೆ ಕಿಶೋರ್‌ ಶೆಟ್ಟಿ ಮತ್ತು ತರುಣ್‌ ರಾಜ್‌ ಇಬ್ಬರನ್ನೂ ಡ್ರಗ್ಸ್‌ ಪರೀಕ್ಷೆಗೆ ಗುರಿಪಡಿಸಿದ ಪೊಲೀಸರು, ಅನುಶ್ರೀಯನ್ನು ಯಾಕೆ ಪರೀಕ್ಷೆ ನಡೆಸದೆ ಬಿಟ್ಟರು ಎಂಬುದು ನಿಗೂಢವಾಗಿಯೇ ಉಳಿದಿದೆ.

ಆರೋಪ ಪಟ್ಟಿ ಕಳೆದ ಡಿಸೆಂಬರ್‌ನಲ್ಲೇ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಕಾರಣ ನಾವು ಈಗೇನೂ ಮಾಡುವಂತಿಲ್ಲ ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಶಶಿಕುಮಾರ್‌ ತಿಳಿಸಿದ್ದಾರೆ. 
 

click me!