ಬಣಜಿಗರ ಅವಹೇಳನ: ಕಾಶಪ್ಪನವರ & ಯತ್ನಾಳ ಹೇಳಿಕೆ ಖಂಡಿಸಿ ಪ್ರತಿಭಟನೆ

By Ravi JanekalFirst Published Nov 5, 2022, 8:44 PM IST
Highlights
  • ಬಣಜಿಗರ ಅವಹೇಳ: ಕಾಶಪ್ಪನವರ & ಯತ್ನಾಳ ಹೇಳಿಕೆ ಖಂಡಿಸಿ ಪ್ರತಿಭಟನೆ
  • ಬಾಗಲಕೋಟೆ ಜಿಲ್ಲೆಯ ಹುನಗುಂದ & ಇಲಕಲ್ ಪಟ್ಟಣಗಳಲ್ಲಿ ನಡೆದ ಪ್ರತಿಭಟನೆ
  • ಬಣಜಿಗ ಸಮುದಾಯದ ವಿರುದ್ಧ ಮಾತಾಡಿಲ್ಲ ಎಂದ ಕಾಶಪ್ಪನವರ

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ..

ಬಾಗಲಕೋಟೆ (ನ.5) : ಬಣಜಿಗ ಸಮುದಾಯದ ವಿರುದ್ಧ ಮಾಜಿ ಸಚಿವ ಯತ್ನಾಳ ಮತ್ತು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ  ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆಂದು ಆರೋಪಿಸಿ ಬಾಗಲಕೋಟೆ ಜಿಲ್ಲೆಯ ಹುನಗುಂದ ಹಾಗೂ ಇಲಕಲ್  ಪಟ್ಟಣಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಮಧ್ಯೆ ತಮ್ಮ ವಿರುದ್ಧ ಪ್ರತಿಭಟನೆ ನಡೆದರೂ ಸ್ವತಃ ಕಾಶಪ್ಪನವರ ಸ್ಥಳಕ್ಕೆ ಧಾವಿಸಿ ವಿಷಾದ ವ್ಯಕ್ತಪಡಿಸಿದರು, ಆದರೂ ಬಣಜಿಗ ಸಮುದಾಯದಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಯತ್ನಾಳ್‌, ಕಾಶಪ್ಪನವರ ವಿರುದ್ಧ ಬೃಹತ್‌ ಪ್ರತಿಭಟನೆ: ಬಣಜಿಗ ಸಮಾಜದ ಮುಖಂಡರು

ಹುನಗುಂದದಲ್ಲಿ ಬಣಜಿಗ ಸಮುದಾಯದವರು ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ಧೇಶಿಸಿದ್ದ ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ,  ನಾನು ಬಣಜಿಗ ಸಮಾಜದವರಿಗೆ ನೋವು ಆಗುವಂತೆ ನಡೆದಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಕೂಡಲಸಂಗಮನಾಥನ ಮೇಲಾಣೆ ಮಾಡುತ್ತೇನೆ,  ಇನ್ನು ಮುಂದೆ ಯಾವತ್ತೂ ಹಾಗೆ ನಡೆದುಕೊಳ್ಳಲ್ಲ ಎಂದರು. 

ವಿಷಾದ ವ್ಯಕ್ತಪಡಿಸಿದರೂ ಬಿಡದ ಪ್ರತಿಭಟನಾ ಹೋರಾಟ; ಯತ್ನಾಳ ವಿರುದ್ಧ ಪ್ರತಿಭಟನೆಗೆ ಕರೆ

ಹುನಗುಂದದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಬಣಜಿಗ ಸಮಾಜದವರ ಎದುರು ವಿಷಾದದ ಹೇಳಿಕೆ ನೀಡುವ ಮೂಲಕ ವಿವಾದವನ್ನು ತೆರೆ ಎಳೆಯುವ ಮೂಲಕ ಪ್ರಯತ್ನ ಮಾಡಿದರು. ಆದರೆ ಬಣಜಿಗ ಸಮುದಾಯದಿಂದ  ಯತ್ನಾಳ ಹಾಗೂ ಕಾಶಪ್ಪನವರ ವಿರುದ್ಧ ಹುನಗುಂದ ಪಟ್ಟಣದಲ್ಲಿ  ಪ್ರತಿಭಟನೆ ಮುಂದುವರಿಸಿತು.

ಬಣಜಿಗ ಸಮುದಾಯದ ವಿರುದ್ಧ ಮಾತಾಡಿಲ್ಲ:

ಹುಕ್ಕೇರಿಯಲ್ಲಿ ಬಣಜಿಗ ಸಮಾಜದ ಬಗ್ಗೆ ನಾನು ಮಾತನಾಡಿಲ್ಲ. ಅಂದು ನನಗೆ ಕತ್ತಿ ಅವರ ಮಗ ಅಂತ ಗೊತ್ತಿರಲಿಲ್ಲ. ನನ್ನ ಬಗ್ಗೆ ಮಾತನಾಡಿದ್ದಕ್ಕೆ ನಾನು ಮಾತನಾಡಿದ್ದೆ. ಆದರೆ, ಸಮಾಜದ ವಿರುದ್ದ ಅಲ್ಲ. ಇದೀಗ ನನ್ನ ಬಗ್ಗೆ ಪ್ರತಿಭಟನೆ ಮಾಡ್ತಿರೋ ಕಾರಣಕ್ಕೆ ನಾನು ಇಲ್ಲಿಗೆ ಬಂದು ಸ್ಪಷ್ಟನೆ ಕೊಡ್ತಿದ್ದೇನೆ. ಪಂಚಮಸಾಲಿ ಬಣಜಿಗರು ಬೀಗರು, ಅಣ್ತಮ್ಮಂದಿರು ಇದ್ದ ಹಾಗೆ,
ನಮ್ಮ ತಂದೆಯವರ ಕಾಲದಿಂದ ಈ ಸಂಬಂಧ ಇಟ್ಟುಕೊಂಡು ಬಂದಿದ್ದೇವೆ. ನಮ್ಮ ತಂದೆ ಮೂರು ಸಲ ಶಾಸಕರಾಗಲು, ಮಂತ್ರಿ ಆಗಲು ತಾವು ಕೂಡ ಕಾರಣರಾಗಿದ್ದೀರಿ. ಹೀಗಾಗಿ ನಾವು ಯಾವತ್ತೂ ವಿರುದ್ಧವಾಗಿ ನಡೆದುಕೊಂಡಿಲ್ಲ.ಇವತ್ತು ಕೂಡ ಹುನಗುಂದದಲ್ಲಿ ಬಣಜಿಗ, ಪಂಚಮಸಾಲಿ, ಲಿಂಗಾಯತ(ಬಿಪಿಎಲ್) ಸಂಘಟನೆ ಇದೆ. ಅದನ್ನು ನಮ್ಮ ತಂದೆಯವರೇ ಮಾಡಿದ್ದು. ನಾನು ಶಾಸಕ ಇದ್ದಾಗ ಬಣಜಿಗ ಸಮಾಜದವರಿಗೂ ರಾಜಕೀಯ ಸ್ಥಾನಮಾನ ಕೊಟ್ಟಿದ್ದೇನೆ. ಹೀಗಾಗಿ ನಾನು ಬಣಜಿಗ ಸಮಾಜದ ಬಗ್ಗೆ ಏನೂ ಮಾತನಾಡಿಲ್ಲ. ಅದ್ಯಾಗೂ ನನ್ನ ಮಾತಿನಿಂದ ಸಮಾಜದಲ್ಲಿ ನೋವು ಆಗಿದ್ರೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ ತಿಳಿಸಿದರು.

ಇಲಕಲ್ ಪಟ್ಟಣದಲ್ಲೂ ಪ್ರತಿಭಟನೆ

ಹುನಗುಂದ ಪಟ್ಟಣದ ಪ್ರತಿಭಟನಾ ಸ್ಥಳದಲ್ಲಿ  ವಾದ, ವಿವಾದ, ವಾಗ್ವಾದ  ನಡೆದ್ರೂ ಬಣಜಿಗ ಸಮಾಜದ ಮುಖಂಡರು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಮುಂದುವರೆಸಿದರು. ಈ ಸಮಯದಲ್ಲಿ ಶಾಸಕರಾದ ಬಸವಗೌಡ ಪಾಟೀಲ ಯತ್ನಾಳ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಘೋಷಣೆ ಹಾಕಿದರು. ನಂತರ ಹುನಗುಂದ ತಹಸೀಲ್ದಾರರ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಯಿತು. ಅನಂತರ ಇಲಕಲ್ ಪಟ್ಟಣದ ಕಂಠಿ ವೃತ್ತದಿಂದ ಬಣಿಜಗ ಸಮಾಜ ವತಿಯಿಂದ ಪ್ರತಿಭಟನೆ ನಡೆಸಿ,ಯತ್ನಾಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. 

ಮಾಜಿ‌ ಶಾಸಕರಾದ ವಿಜಯಾನಂದ ಕಾಶಪ್ಪನವರ ಅವರು, ವಿಷಾದ ವ್ಯಕ್ತಪಡಿಸಿದ ಹಿನ್ನೆಲೆ ಇನ್ನು ಮುಂದೆ ವಿಜಯಾನಂದ ಕಾಶಪ್ಪನವರ ವಿರುದ್ದ ಘೋಷಣೆ ಹಾಕದೇ ಕೇವಲ ಬಸವಗೌಡ ಪಾಟೀಲ್ ‌ವಿರುದ್ದ ಘೋಷಣೆ ಹಾಕುವಂತೆ ಹೇಳಲಾಗಿತ್ತು. ಈ ಸಂದರ್ಭದಲ್ಲಿ ಕಾಶಪ್ಪನವರ ವಿರುದ್ಧ ಘೋಷಣೆ ಹಾಕಿದ್ದರಿಂದ ಕೆಲ ಸಮಯ ಮಾತಿನ ಚಕಿಮಕಿ‌ ನಡೆಯಿತು.

 

ಜನಾರ್ದನ ರೆಡ್ಡಿ ಸಹಾಯಕ್ಕೆ ಹೋಗದ ಯಡಿಯೂರಪ್ಪ ವಿರುದ್ಧ ಗುಡುಗಿದ ಯತ್ನಾಳ್‌..!

ಒಟ್ಟಾರೆ ಹುನಗುಂದ ಮತಕ್ಷೇತ್ರದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ವಿಷಾದ ವ್ಯಕ್ತಪಡಿಸಿದ ಹಿನ್ನಲೆ ವಿವಾದಕ್ಕೆ ತೆರೆ ಎಳೆಯುವಂತೆ ಯತ್ನ ನಡೆಸಲಾಯಿತಾದರೂ ಪ್ರತಿಭಟನೆ ಇದೀಗ ಯತ್ನಾಳರ ವಿರುದ್ಧ ಮುಂದುವರಿದಿದೆ. ಇದು ಇಷ್ಟಕ್ಕೆ ತೆರೆಬೀಳುತ್ತಾ ಅಥವಾ ಮುಂದೆವರಿಯುತ್ತಾ ಕಾದು ನೋಡಬೇಕು.

click me!