ಭಾರತ ಸಂವಿಧಾನದ ಆಶೋತ್ತರದ ಜೀವನ ಎಲ್ಲರಿಗೂ ಸಿಗಲಿ: ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ

By Ravi JanekalFirst Published Nov 5, 2022, 6:42 PM IST
Highlights

ಸಮಾಜದಲ್ಲಿನ ಪ್ರತಿಯೊಬ್ಬರೂ ಗೌರವಯುತವಾಗಿ ಎಲ್ಲಾ ಸವಲತ್ತುಗಳನ್ನು ಹೊಂದಿ ಸಂತೋಷವಾಗಿ ಬಾಳುವುದೇ ಭಾರತ ಸಂವಿಧಾನದ ಅಶೋತ್ತರದ ಜೀವನ ಎಂದು ಗೌರವಾನ್ವಿತ ಉಪಲೋಕಾಯುಕ್ತರು ಹಾಗೂ ನ್ಯಾಯಮೂರ್ತಿಗಳಾದ ಕೆ.ಎನ್.ಫಣೀಂದ್ರ ಅವರು ತಿಳಿಸಿದರು. 

ಚಿಕ್ಕಬಳ್ಳಾಪುರ (ನ.5) :  ಸಮಾಜದಲ್ಲಿನ ಪ್ರತಿಯೊಬ್ಬರೂ ಗೌರವಯುತವಾಗಿ ಎಲ್ಲಾ ಸವಲತ್ತುಗಳನ್ನು ಹೊಂದಿ ಸಂತೋಷವಾಗಿ ಬಾಳುವುದೇ ಭಾರತ ಸಂವಿಧಾನದ ಅಶೋತ್ತರದ ಜೀವನ ಎಂದು ಗೌರವಾನ್ವಿತ ಉಪಲೋಕಾಯುಕ್ತರು ಹಾಗೂ ನ್ಯಾಯಮೂರ್ತಿಗಳಾದ ಕೆ.ಎನ್.ಫಣೀಂದ್ರ ಅವರು ತಿಳಿಸಿದರು. 

ಕಳೆದಿದ್ದ ಮೊಬೈಲ್ ಹುಡುಕಿಕೊಡೋಕೆ 5000 ರೂ. ಲಂಚ ; ಲೋಕಾಯುಕ್ತ ಬಲೆಗೆ ಬಿದ್ದ ಕಾನ್‌ಸ್ಟೇಬಲ್

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಕುಂದುಕೊರತೆ ದೂರುಗಳ ವಿಚಾರಣೆ ನಡೆಸುವ ವೇಳೆ  ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತ ಸಂವಿಧಾನದ ಮಹತ್ವ, ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಕಾರ್ಯ ಪ್ರಕ್ರಿಯೆಗಳನ್ನು ಮನಮುಟ್ಟುವಂತೆ ಸವಿಸ್ತಾರವಾಗಿ ತಿಳಿಸಿಕೊಟ್ಟರು. 

ಪರಸ್ಪರರನ್ನು ಗೌರವಿಸಿ :

ಸಮಾಜದಲ್ಲಿ ಎಲ್ಲರೂ ಗೌರವಯುತವಾಗಿ ಬದುಕಬೇಕಾದರೆ ಒಬ್ಬರು ಮತ್ತೊಬ್ಬರ ಹಕ್ಕುಗಳನ್ನು ಪರಸ್ಪರ ಗೌರವಿಸಬೇಕು. ಜೊತೆಗೆ ಸಂವಿಧಾನದಲ್ಲಿ ನೀಡಿರುವ ಕರ್ತವ್ಯಗಳನ್ನು ಎಲ್ಲರೂ ಪಾಲಿಸಿದರೆ ಸರ್ವರಿಗೂ ಉತ್ತಮ ಬದುಕು ದೊರಕುತ್ತದೆ. ಈ ಹಕ್ಕುಗಳಿಗೆ ಧಕ್ಕೆಯಾದಾಗ, ಕಾರ್ಯಾಂಗ ಯೋಜನೆಗಳನ್ನು ಅನುಷ್ಠಾನಗೊಳಿಸಲು ವಿಫಲವಾದರೆ ಹಾಗೂ ಶಾಸಕಾಂಗ ತಪ್ಪು  ಮಾಡಿದರೆ  ಆ ಎಲ್ಲ ಲೋಪದೋಷಗಳನ್ನು ಸರಿಪಡಿಸಲು ಸರ್ಕಾರಕ್ಕೆ ಪ್ರತ್ಯೇಕವಾಗಿ ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಈ ಸಂಸ್ಥೆಯ ಫಲಶೃತಿಯನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕರಿಂದ ಅಹವಾಲು, ದೂರು ಅರ್ಜಿಗಳನ್ನು ಸ್ವೀಕರಿಸುವ ಜೊತೆಗೆ ಜಾಗೃತಿಯುಂಟು ಮಾಡುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಈ ಸಂಸ್ಥೆಯನ್ನು ಸಮಪರ್ಕವಾಗಿ ಬಳಸಿಕೊಳ್ಳಲು ಮನವಿ ಮಾಡಿದರು.

ಉಪಲೋಕಾಯುಕ್ತರು ಸ್ವೀಕರಿಸಿದ ಕೆಲವು ದೂರು ಅರ್ಜಿಗಳ ಬಗ್ಗೆ ಸ್ಥಳದಲ್ಲೇ ತೀರ್ಮಾನ ಕೈಗೊಂಡು ವಿಲೇವಾರಿ ಮಾಡಿದರು. ಮತ್ತಷ್ಟು ಪ್ರಕರಣಗಳಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಸಮಯ ನಿಗದಿ ಮಾಡಿ ತ್ವರಿತವಾಗಿ ಪರಿಹರಿಸಲು ಆದೇಶಿಸಿದರು. ಸಂಜೆ ವೇಳೆಗೆ ಒಟ್ಟು 107 ಅರ್ಜಿಗಳನ್ನು  ಸ್ವೀಕರಿಸಿ ವಿಚಾರಣೆಗೋಳಪಡಿಸಿ ವಿಲೇವಾರಿ ಮಾಡುವ ಪ್ರಯತ್ನ ನಡೆಸಿದರು. ಈ  ಪೈಕಿ  60ರಿಂದ  70 ಪ್ರಕರಣಗಳು ಲೋಕಾಯುಕ್ತ ಸಂಸ್ಥೆಯ  ಕಾರ್ಯ ವ್ಯಾಪ್ತಿಯಡಿ  ನೋಂದಣಿ  ಮಾಡಿಕೊಂಡು ಅಗತ್ಯ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಉಳಿದ ಕೆಲವೊಂದು  ಪ್ರಕರಣಗಳನ್ನು ಜಿಲ್ಲಾ ಕಾನೂನು  ಸೇವಾ  ಪ್ರಾಧಿಕಾರಕ್ಕೆ  ವರ್ಗಾವಣೆ  ಮಾಡಲಾಗಿದೆ.

ಕಂದಾಯ ಇಲಾಖೆಗೆ ಸಂಬಂಧಿಸಿದ ಹಾಗೂ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ಪ್ರಕರಣಗಳು ಲೋಕಾಯುಕ್ತರ ಮುಂದೆ ವರದಿಯಾದವು. ಪ್ರಮುಖವಾಗಿ ಜಿಲ್ಲಾ ಕೇಂದ್ರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಕಾಮಗಾರಿ ಪ್ರಕರಣವು ಲೋಕಾಯುಕ್ತರ ಗಮನ ಸೆಳೆಯಿತು. ಉಪಲೋಕಾಯುಕ್ತರು ಅರ್ಜಿ ವಿಲೇವಾರಿ ಮಾಡಲು ಪ್ರಮಾಣಿಕ ಪ್ರಯತ್ನ ಮಾಡಿದರು. ಖುದ್ದು ಉಪಲೋಕಾಯುಕ್ತರು ಅರ್ಜಿ ದೂರುಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲು ಪ್ರಯತ್ನಿಸಿದ್ದು, ಸಾರ್ವಜನಿಕರಲ್ಲಿ ಹಾಗೂ ಅರ್ಜಿದಾರರಿಗೆ ಆತ್ಮವಿಶ್ವಾಸ ಮೂಡಿತು.  

ಮಾಧ್ಯಮ ಪಾತ್ರ ಮಹತ್ವದ್ದು

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಕಾರ್ಯನಡೆಗಳ ಬಗ್ಗೆ  ಸರ್ಕಾರದ ನಾಲ್ಕನೇ ಅಂಗವಾದ ಮಾಧ್ಯಮ ರಂಗವು ನಿರಂತರ ನಿಗಾವಹಿಸುತ್ತಿದೆ. ಯಾವುದೇ ಅಂಗಗಳಲ್ಲಿನ ಲೋಪದೋಷಗಳನ್ನು ಪ್ರಜೆಗಳ ಮುಂದಿಟ್ಟು ಸರಿಪಡಿಸುವಂತಹ ಮಹತ್ವದ ಜವಬ್ದಾರಿಯನ್ನು ಮಾಧ್ಯಮ ಕ್ಷೇತ್ರ ನಿರ್ವಹಿಸುವುದರಿಂದ ಈ ಕ್ಷೇತ್ರದ ಪಾತ್ರ ಮಹತ್ವದ್ದು, ಆದ್ದರಿಂದ ಲೋಕಾಯುಕ್ತ ಸಂಸ್ಥೆಯ ಕಾರ್ಯ ವಿಧಾನವನ್ನು ಹಳ್ಳಿ ಹಳ್ಳಿಯ ಕಟ್ಟ ಕಡೆಯ ವ್ಯಕ್ತಿಗೂ ತಾವೆಲ್ಲರೂ ತಲುಪಿಸಲು ಸಂಸ್ಥೆಯೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು. 

ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಕಾರ್ಯವೈಖರಿ 

ಸರ್ವರಿಗೂ ಸಮಪಾಲು, ಸಮಬಾಳು ಎಂಬ ಸಂವಿಧಾನದ ಆಶೋತ್ತರದ ಅಡಿಯಲ್ಲಿ ಲೋಕಾಯುಕ್ತ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಸರ್ಕಾರವು ರೂಪಿಸಿದ ಯೋಜನೆಗಳು ಹಾಗೂ ಇತರೆ ಸೌಲಭ್ಯಗಳನ್ನು ಎಲ್ಲರಿಗೂ  ದೊರಕಿಸುವ ಕಾರ್ಯವನ್ನು ಲೋಕಾಯುಕ್ತ ಸಂಸ್ಥೆ ಮಾಡುತ್ತಿದೆ. ಜನರ ಕುಂದುಕೊರತೆಗಳನ್ನು ಬಗೆಹರಿಸುವುದು, ಭ್ರಷ್ಟಾಚಾರ ನಿರ್ಮೂಲನೆ, ನಿಗ್ರಹ ಮಾಡುವುದು ಲೋಕಾಯುಕ್ತ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಗ್ರಾಮೀಣ ಭಾಗದ ಜನರಿಗೆ ಲೋಕಾಯುಕ್ತ ಸಂಸ್ಥೆಯು ಇದೆ ಎಂಬ ಅರಿವಿಲ್ಲ. ಹೇಗೆ ದೂರು ಸಲ್ಲಿಸಬೇಕು? ನಂತರ ಪ್ರಕ್ರಿಯೆ ಏನು ಎಂಬುದು ತಿಳಿದಿಲ್ಲ. ಈ ಕುರಿತು ಗ್ರಾಮೀಣ ಭಾಗದಲ್ಲಿ ಲೋಕಾಯುಕ್ತ ಸಂಸ್ಥೆಯ ಮಹತ್ವನ್ನು ಅರಿವು ಮೂಡಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.  

ಭ್ರಷ್ಟಮುಕ್ತ ಸಮಾಜ ನಿರ್ಮಾಣ ಆಗಬೇಕು: ನಿವೃತ್ತ ನ್ಯಾ.ಸಂತೋಷ್‌ ಹೆಗ್ಡೆ ಸಲಹೆ

ಈ ಹಿಂದೆ ಅಸ್ವಿತ್ವದಲ್ಲಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದಲ್ಲಿ ನಡೆಯುತ್ತಿದ್ದ ಪ್ರಕರಣಗಳನ್ನು ಲೋಕಾಯುಕ್ತ ಸಂಸ್ಥೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಒಂದು ತಿಂಗಳಲ್ಲಿ  ಪೂರ್ಣಗೊಳ್ಳುವ ನಿರೀಕ್ಷೆ ಇದೆ. ವರ್ಗಾವಣೆಯಾದ ಮೇಲೆ ನಮ್ಮ ಸಂಸ್ಥೆಯ ಕಾರ್ಯ ವ್ಯಾಪ್ತಿಯಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ವಿಚಾರಣೆ ಮತ್ತು ತನಿಖೆಯನ್ನು ಪರಿಣಾಮಕಾರಿಯಾಗಿ ನಡೆಸಲು ತಾಂತ್ರಿಕ ವರ್ಗ ಹಾಗೂ ಅಧಿಕಾರಿ/ಸಿಬ್ಬಂದಿ ವರ್ಗವನ್ನು ಸಂಸ್ಥೆಯಿಂದಲೇ ಪ್ರತ್ಯೇಕವಾಗಿ ನೇಮಕ ಮಾಡಿಕೊಳ್ಳುವ ಆಲೋಚನೆ ಇದೆ ಎಂದರು.

click me!