ಬಿಬಿಎಂಪಿ ಕಚೇರಿಯಲ್ಲಿ ಮತ್ತೊಂದು ಪಾರ್ಕಿಂಗ್‌: ಮುಖ್ಯ ಆಯುಕ್ತರ ಸೂಚನೆ

By Kannadaprabha NewsFirst Published Feb 1, 2023, 2:34 PM IST
Highlights

ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಪಾಲಿಕೆ ಸದಸ್ಯರು, ಅಧಿಕಾರಿಗಳು, ಸಾರ್ವಜನಿಕರು ತಮ್ಮ ವಾಹನ ನಿಲ್ಲಿಸಲು ಪರದಾಡುವ ಸ್ಥಿತಿ ತಪ್ಪಿಸಲು ಭೂಗರ್ಭದಲ್ಲಿ (ಅಂಡರ್‌ ಗ್ರೌಂಡ್‌) ಬಹು ಹಂತದ ವಾಹನ ನಿಲುಗಡೆ ಕಟ್ಟಡ ನಿರ್ಮಿಸಲು ಚಿಂತನೆ ನಡೆಸಲಾಗುತ್ತಿದೆ.
 

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು (ಫೆ.01): ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಪಾಲಿಕೆ ಸದಸ್ಯರು, ಅಧಿಕಾರಿಗಳು, ಸಾರ್ವಜನಿಕರು ತಮ್ಮ ವಾಹನ ನಿಲ್ಲಿಸಲು ಪರದಾಡುವ ಸ್ಥಿತಿ ತಪ್ಪಿಸಲು ಭೂಗರ್ಭದಲ್ಲಿ (ಅಂಡರ್‌ ಗ್ರೌಂಡ್‌) ಬಹು ಹಂತದ ವಾಹನ ನಿಲುಗಡೆ ಕಟ್ಟಡ ನಿರ್ಮಿಸಲು ಚಿಂತನೆ ನಡೆಸಲಾಗುತ್ತಿದೆ.

ನಗರದ ಹಡ್ಸನ್‌ ವೃತ್ತದಲ್ಲಿ ಇರುವ ಬಿಬಿಎಂಪಿ ಕೇಂದ್ರ ಕಚೇರಿಗೆ ಆಗಮಿಸುವ ಸಾರ್ವಜನಿಕರು, ಅಧಿಕಾರಿ, ಸಿಬ್ಬಂದಿಗೆ ವಾಹನ ನಿಲ್ಲಿಸಲು ಸರಿಯಾದ ವ್ಯವಸ್ಥೆ ಇಲ್ಲ. ಜತೆಗೆ ಬಿಬಿಎಂಪಿಯ ವಾರ್ಡ್‌ ಸಂಖ್ಯೆಯನ್ನು 198ರಿಂದ 243ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಪಾಲಿಕೆ ಸದಸ್ಯರ ಸಂಖ್ಯೆ ಹೆಚ್ಚಾಗಲಿದೆ. ಪ್ರತಿ ತಿಂಗಳು ನಡೆಯುವ ಮಾಸಿಕ ಸಭೆಗೆ ಆಗಮಿಸುವ ಸದಸ್ಯರಿಗೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಬೇಕಾಗಲಿದೆ. ಹಾಗಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಸೂಚಿಸಿದ್ದಾರೆ.

ಸಿಡಿ ವಿಚಾರದಲ್ಲಿ ವೈಯಕ್ತಿಕ ಟೀಕೆ ಬೇಡ: ಬಾಲಚಂದ್ರ ಜಾರಕಿಹೊಳಿ

150 ಕಾರು ಪಾರ್ಕಿಂಗ್‌ಗೆ ಯೋಜನೆ: ಸದ್ಯ ಬಿಬಿಎಂಪಿ ಆವರಣದಲ್ಲಿ ಸುಮಾರು 150ರಿಂದ 200 ಕಾರು, 500 ಬೈಕ್‌ಗಳಲ್ಲಿ ನಿಲ್ಲಿಸುವಷ್ಟುಸ್ಥಳಾವಕಾಶವಿದೆ. ಆದ್ದರಿಂದ ಪಾಲಿಕೆ ಆವರಣದಲ್ಲಿ ಇರುವ ಡಾ. ರಾಜಕುಮಾರ್‌ ಗಾಜಿನ ಮನೆಯ ಮುಂಭಾಗದಲ್ಲಿ 150 ಕಾರು ನಿಲುಗಡೆಯ ತಾಣ ನಿರ್ಮಿಸಲು ಯೋಜಿಸಲಾಗುತ್ತಿದೆ. ಡಾ. ರಾಜಕುಮಾರ್‌ ಗಾಜಿನ ಮನೆಯ ಮುಂಭಾಗದಲ್ಲಿ ಖಾಲಿ ಜಾಗದ ಭೂ ಗರ್ಭದಲ್ಲಿ ಮೂರು ಬೇಸ್‌ಮೆಂಟ್‌ ಇರುವ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಮೇಲ್ಭಾಗದ ಜಾಗದವನ್ನು ಯಥಾ ಪ್ರಕಾರ ಉಳಿಸಿಕೊಂಡು ಯೋಜನೆ ಸಿದ್ಧಪಡಿಸುವುದಕ್ಕೆ ಸೂಚನೆ ನೀಡಲಾಗಿದೆ. ಯೋಜನೆ ಸಿದ್ಧಗೊಂಡ ಬಳಿಕ ಅಂದಾಜು ವೆಚ್ಚ, ಕಟ್ಟಡದ ನಕ್ಷೆ ಸೇರಿದಂತೆ ಮೊದಲಾದವುಗಳ ಬಗ್ಗೆ ಸ್ಪಷ್ಟಮಾಹಿತಿ ನೀಡಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಇರುವ ಪಾರ್ಕಿಂಗ್‌ಗೆ ನಿರ್ವಹಣೆಯೇ ಇಲ್ಲ: ಇನ್ನು ಬಿಬಿಎಂಪಿಯ ಕೇಂದ್ರ ಕಚೇರಿ ಆವರಣದ ಕೆಂಪೇಗೌಡ ಪೌರ ಸಭಾಂಗಣದ ತಳ ಮಹಡಿಯಲ್ಲಿ ವ್ಯವಸ್ಥಿತವಾದ ವಾಹನ ಪಾರ್ಕಿಂಗ್‌ ತಾಣ ಇದೆ. ಆದರೆ, ಅದನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹೀಗಾಗಿ, ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದೆ. ಜತೆಗೆ, ಅನೆಕ್ಸ್‌-3 ಕಟ್ಟಡ ಕೆಳಭಾಗದಲ್ಲಿಯೂ ಪಾರ್ಕಿಂಗ್‌ ವ್ಯವಸ್ಥೆ ಇದೆ. ಅದನ್ನೂ ಸರಿಯಾಗಿ ಬಳಕೆ ಮಾಡುತ್ತಿಲ್ಲ ಎಂಬ ಆರೋಪಗಳಿವೆ.

ಅನಾಮಿಕ ವಾಹನಗಳ ನಿಲುಗಡೆ: ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಅನೇಕ ಕಾರುಗಳು ತಿಂಗಳಾನುಗಟ್ಟಲೇ ನಿಲ್ಲಿಸಲಾಗಿದೆ. ಈ ವಾಹನ ಮಾಲಿಕರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತು ಕೊಂಡಿದ್ದಾರೆ. ಅದಲ್ಲದೇ, ಕಬ್ಬನ್‌ ಪಾರ್ಕ್ಗೆ ಹೋಗುವವರು, ಸುತ್ತಮುತ್ತಲಿನ ಖಾಸಗಿ ಕಚೇರಿಯ ಉದ್ಯೋಗಿಗಳು, ವ್ಯಾಪಾರಿಗಳು ಕೇಂದ್ರ ಕಚೇರಿ ಆವರಣವನ್ನು ವಾಹನ ಪಾರ್ಕಿಂಗ್‌ ತಾಣ ಮಾಡಿಕೊಂಡಿದ್ದಾರೆ. ಪ್ರತಿ ದಿನ ಬೆಳಗ್ಗೆ ವಾಹನ ತಂದು ನಿಲ್ಲಿಸಿ ಸಂಜೆ ಅಲ್ಲಿಂದ ತೆಗೆದುಕೊಂಡು ಹೋಗುತ್ತಾರೆ. ಈ ಎಲ್ಲವನ್ನೂ ಸರಿಪಡಿಸಿದರೆ, ಕೇಂದ್ರ ಕಚೇರಿ ಆವರಣದಲ್ಲಿನ ವಾಹನ ನಿಲ್ಲುಗಡೆ ಸಮಸ್ಯೆ ತಪ್ಪಿಸಬಹುದಾಗಿದೆ.

ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ನಾರಾಯಣಗೌಡ!

ಸುಮಾರು 150 ಕಾರು ನಿಲ್ಲಿಸುವುದಕ್ಕೆ ಹೊಸ ಪಾರ್ಕಿಂಗ್‌ ವ್ಯವಸ್ಥೆಗೆ ಯೋಜನೆ ಸಿದ್ಧಪಡಿಸುವುದಕ್ಕೆ ಸೂಚಿಸಲಾಗಿದೆ. ಡಾ.ರಾಜಕುಮಾರ್‌ ಗಾಜಿನ ಮನೆ ಮುಂಭಾಗದ ಜಾಗದಲ್ಲಿ ಮಲ್ಟಿಲೆವಲ್‌ ಪಾರ್ಕಿಂಗ್‌ ತಾಣ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ.
-ತುಷಾರ್‌ ಗಿರಿನಾಥ್‌, ಮುಖ್ಯ ಆಯುಕ್ತ, ಬಿಬಿಎಂಪಿ

click me!