Haveri: ಸಾವಿನಲ್ಲೂ ಒಂದಾದ ಸತಿ-ಪತಿ: ಪತ್ನಿಯ ಅಗಲಿಕೆ ತಾಳಲಾರದೆ ಕೆಲವೇ ಗಂಟೆಗಳಲ್ಲಿ ಪ್ರಾಣಬಿಟ್ಟ ಪತಿ!

Published : Jul 27, 2026, 11:27 AM IST
Haveri couple die together

ಸಾರಾಂಶ

ಹಾವೇರಿ ಜಿಲ್ಲೆಯ ಹೆಸರೂರು ಗ್ರಾಮದಲ್ಲಿ 45 ವರ್ಷಗಳ ಕಾಲ ಅನ್ಯೋನ್ಯವಾಗಿ ಬಾಳಿದ ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಪತ್ನಿ ನಿಧನರಾದ ಕೆಲವೇ ಗಂಟೆಗಳಲ್ಲಿ, ಅವರ ಅಗಲಿಕೆಯ ದುಃಖ ತಾಳಲಾರದೆ ಪತಿಯೂ ಕೊನೆಯುಸಿರೆಳೆದಿದ್ದಾರೆ. ಈ ಹೃದಯವಿದ್ರಾವಕ ಘಟನೆ ಇಡೀ ಗ್ರಾಮಸ್ಥರನ್ನು ಭಾವುಕರನ್ನಾಗಿಸಿದೆ.

ಹಾವೇರಿ: ಬದುಕಿದರೂ ಜೊತೆಯಾಗಿ, ಬಾಳದಿದ್ದರೂ ಜೊತೆಯಾಗಿ ಎನ್ನುವ ಹಿರಿಯರ ಮಾತು ಹಾವೇರಿ ಜಿಲ್ಲೆಯಲ್ಲಿ ಅಕ್ಷರಶಃ ನಿಜವಾಗಿದೆ. ದಾಂಪತ್ಯ ಜೀವನದ ಪವಿತ್ರತೆಗೆ ಸಾಕ್ಷಿಯೆಂಬಂತೆ, 45 ವರ್ಷಗಳ ಕಾಲ ಅನ್ಯೋನ್ಯವಾಗಿ ಬಾಳಿ ಬದುಕಿದ ಆದರ್ಶ ದಂಪತಿಗಳಿಬ್ಬರು ಸಾವಿನಲ್ಲೂ ಒಂದಾಗುವ ಮೂಲಕ ಇಡೀ ಗ್ರಾಮಸ್ಥರನ್ನು ಭಾವುಕರನ್ನಾಗಿಸಿದ್ದಾರೆ. ಪತ್ನಿ ನಿಧನರಾದ ಕೆಲವೇ ಗಂಟೆಗಳಲ್ಲಿ, ಆಕೆಯ ಅಗಲಿಕೆಯ ತೀವ್ರ ದುಃಖವನ್ನು ತಾಳಲಾರದೆ ಪತಿಯೂ ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ಹೆಸರೂರು ಗ್ರಾಮದಲ್ಲಿ ಜರುಗಿದೆ.

45 ವರ್ಷಗಳ ಅನ್ಯೋನ್ಯ ದಾಂಪತ್ಯ

ಹೆಸರೂರು ಗ್ರಾಮದ ನಿವಾಸಿಗಳಾದ ಜುಂಜಪ್ಪ ಬಾರ್ಕಿ (75 ವರ್ಷ) ಮತ್ತು ಶಾಂತಮ್ಮ (65 ವರ್ಷ) ಸಾವಿನಲ್ಲೂ ಒಂದಾದ ಅಪರೂಪದ ಸತಿ-ಪತಿಗಳು. ಕಳೆದ 45 ವರ್ಷಗಳ ದೀರ್ಘಾವಧಿಯಿಂದ ಈ ದಂಪತಿಗಳು ಯಾವುದೇ ಕಹಿ ಘಟನೆಗಳಿಲ್ಲದೆ, ಪರಸ್ಪರ ಪ್ರೀತಿ, ವಿಶ್ವಾಸದಿಂದ ಹಳ್ಳಿಯ ಜನರ ಕಣ್ಣಿಗೆ ಆದರ್ಶ ಜೋಡಿಯಾಗಿ ಬದುಕಿದ್ದರು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರಲಾರದಷ್ಟು ಪ್ರೇಮ ಇವರದ್ದಾಗಿತ್ತು.

ರಾತ್ರಿ ಪತ್ನಿ ಸಾವು, ಬೆಳಗ್ಗೆ ಪತಿ ನಿಧನ!

ವಿಧಿಯ ಆಟ ವಿಚಿತ್ರವಾಗಿತ್ತು. ಭಾನುವಾರ ತಡರಾತ್ರಿ ಸುಮಾರು 12 ಗಂಟೆಯ ಸುಮಾರಿಗೆ ಪತ್ನಿ ಶಾಂತಮ್ಮ ಅವರು ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದರು. ಅರ್ಧಾಂಗಿಯ ಹಠಾತ್ ನಿಧನ ವಯೋವೃದ್ಧ ಜುಂಜಪ್ಪ ಅವರಿಗೆ ಸಹಿಸಿಕೊಳ್ಳಲು ಅಸಾಧ್ಯವಾದ ಆಘಾತವನ್ನು ನೀಡಿತು. 45 ವರ್ಷಗಳ ಕಾಲ ನೆರಳಿನಂತೆ ಜೊತೆಗಿದ್ದ ಹೆಂಡತಿಯ ಶವದ ಮುಂದೆ ಕುಳಿತು, "ನೀನಿಲ್ಲದೆ ನಾ ಹೇಗೆ ಬದುಕಲಿ?" ಎಂದು ಆ ವೃದ್ಧ ರಾತ್ರಿ ಇಡೀ ಕಣ್ಣೀರು ಹಾಕುತ್ತಾ ಅಳಲು ತೋಡಿಕೊಂಡಿದ್ದಾರೆ.

ಪತ್ನಿಯ ವಿಯೋಗದ ತೀವ್ರ ದುಃಖ ಮನಸ್ಸಿನ ಮೇಲೆ ಎಷ್ಟರಮಟ್ಟಿಗೆ ಬೀರಡಿತೆಂದರೆ, ಸೋಮವಾರ ಮುಂಜಾನೆ ಜುಂಜಪ್ಪ ಅವರ ಹೃದಯದ ಬಡಿತವೂ ನಿಂತುಹೋಗಿದೆ. ಪತ್ನಿ ತೀರಿಕೊಂಡ ಕೆಲವೇ ಗಂಟೆಗಳ ಅಂತರದಲ್ಲಿ ಪತಿ ಜುಂಜಪ್ಪ ಅವರೂ ಸಹ ನಿಧನರಾಗುವ ಮೂಲಕ ಪತ್ನಿಯ ಹಿಂದೆಯೇ ಮಸಣದ ಹಾದಿ ಹಿಡಿದರು.

ಗ್ರಾಮಸ್ಥರ ಕಣ್ಣಾಲಿಗಳು ಒದ್ದೆ

ಒಂದೇ ಮನೆಯಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ದಂಪತಿಗಳಿಬ್ಬರೂ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಹೆಸರೂರು ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಇಬ್ಬರ ಪಾರ್ಥಿವ ಶರೀರಗಳನ್ನು ಜೊತೆಯಾಗಿಯೇ ಇರಿಸಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಯಿತು.

ದಂಪತಿಗಳ ಈ ಅಪರೂಪದ ಪ್ರೀತಿ ಮತ್ತು ಸಾವಿನಲ್ಲೂ ಒಂದಾದ ನಿಷ್ಠೆಯನ್ನು ಕಂಡು ಗ್ರಾಮಸ್ಥರು ಹಾಗೂ ನೆರೆಹೊರೆಯವರು ತೀವ್ರ ಭಾವುಕರಾಗಿದ್ದಾರೆ. "ಇಂತಹ ಸತಿ-ಪತಿಯರನ್ನು ನೋಡುವುದೇ ಅಪರೂಪ. ಬದುಕಿದ್ದಾಗಲೂ ಪ್ರೀತಿಯಿಂದ ಬಾಳಿದರು, ಈಗ ಸಾವಿನಲ್ಲೂ ಒಬ್ಬರನ್ನೊಬ್ಬರು ಬಿಟ್ಟಿರಲಾರದೆ ಒಟ್ಟಿಗೆ ಹೊರಟುಹೋದರು" ಎಂದು ಗ್ರಾಮದ ಹಿರಿಯರು ಕಣ್ಣೀರು ಹಾಕುತ್ತಾ ದಂಪತಿಗಳ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

PREV
Read more Articles on
click me!

Recommended Stories

ಕಾಮನ್‌ವೆಲ್ತ್ ಗೇಮ್ಸ್ 2026ರ ಭಾರತೀಯ ತಂಡದ ಫಿಸಿಯೋ ಆಗಿ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಪುತ್ರ ರೋಹನ್
ಕುಡಿದ ಮತ್ತಿನಲ್ಲಿ ಬೆಂಗಳೂರಿನ ಪಬ್ ಮುಂದೆ ಯುವತಿ ಕಿರಿಕ್.. ಸುಮ್ಮನಿರಿಸಲು ಬಂದ ಯುವಕನಿಗೆ ಶಾಕ್!