
ಹೊಸನಗರ: ರೈಲ್ವೆ ಸಂಪರ್ಕಕ್ಕೆ ಹೊಸನಗರವನ್ನು ಸೇರಿಸಿಕೊಳ್ಳುವ ಮೂಲಕ ನಮಗೆ ನ್ಯಾಯ ದೊರಕಿಸಿ ಎಂದು ಹೊಸನಗರ ತಾಲೂಕು ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್ ಮಲೆಬೈಲು ಮನವಿ ಮೂಲಕ ಆಗ್ರಹಿಸಿದ್ದಾರೆ.
ಮಲೆನಾಡು ಕರಾವಳಿ ರೈಲು ಸಂಪರ್ಕಕ್ಕೆ ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲು ಸಂಪರ್ಕಕ್ಕೆ ರೈಲುಮಾರ್ಗ ನಿರ್ಮಾಣಕ್ಕೆ ಡಿಪಿಆರ್ (ವಿಸ್ತ್ಕೃತ ಯೋಜನಾ ವರದಿ) ತಯಾರಿಗೆ ಟೆಂಡರ್ ಕರೆಯಾಗಿದ್ದು, ಮಾರ್ಗವು ಸುಮಾರು 332 ಕಿ.ಮೀ ಉದ್ದ ಹೊಂದಿದ್ದು, ಸುಮಾರು 3300 ಕೋಟಿ ರು/ ಅಂದಾಜು ವೆಚ್ಚದ ಯೋಜನೆಯಾಗಿದೆ ಎಂದಿದ್ದಾರೆ.
2018ರಲ್ಲಿ ಸದಾನಂದಗೌಡರು ರೈಲ್ವೆ ಮಂತ್ರಿಯಾಗಿದ್ದಾಗ ಹೊಸನಗರವನ್ನು ಕೂಡ ಈ ಯೋಜನೆಯಲ್ಲಿ ಸಂಪರ್ಕಕ್ಕೆ ಸೇರಿಸುವಂತೆ ಹೊಸನಗರ ಜನತೆ ಮನವಿ ಮಾಡಿದ್ದರು, ಅದಕ್ಕೆ ಪರಿಶೀಲಿಸುತ್ತೇವೆ ಎನ್ನುವ ಪ್ರತ್ಯುತ್ತರ ಕೂಡ ಬಂದಿದೆ. ಈಗ ಅರಸಾಳು-ರಿಪ್ಪನ್ಪೇಟೆ, ತೀರ್ಥಹಳ್ಳಿ, ಶೃಂಗೇರಿ ಮೂಲಕ ಸಂಪರ್ಕ ರಸ್ತೆ ಹಾದು ಹೋಗುವ ಮಾತು ನಡೆಯುತ್ತಿದೆ.
ಹೊಸನಗರ ತಾಲ್ಲೂಕು ಕೇಂದ್ರವಾಗಿದೆ. ಹೊಸನಗರದ ಕೇಂದ್ರ ಸ್ಥಾನವನ್ನು ಈ ಯೋಜನೆಯಿಂದ ಹೊರಗಿಡದೆ ರೈಲು ಮಾರ್ಗವು ಅರಸಾಳಿನಿಂದ ರಿಪ್ಪನ್ ಪೇಟೆ, ಹೊಸನಗರ, ತೀರ್ಥಹಳ್ಳಿ ಮೂಲಕ ಹಾದು ಹೋಗಬೇಕು ದಶಕಗಳಿಂದ ಆದ ಅನ್ಯಾಯಗಳಿಗೆ ಹೊಸನಗರ ಕೇಂದ್ರ ಸ್ಥಾನವನ್ನು ಈ ಯೋಜನೆಗೆ ಸೇರಿಸಿಕೊಳ್ಳುವ ಮೂಲಕ ನಮಗೆ ನ್ಯಾಯ ಒದಗಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುವುದರ ಮೂಲಕ ಆಗ್ರಹಿಸಿದ್ದಾರೆ.
ಶಿವಮೊಗ್ಗ-ಮಂಗಳೂರು ರೈಲು ಮಾರ್ಗ ಬರೋಬ್ಬರಿ 332 ಕಿಲೋಮೀಟರ್ ಉದ್ದವಿರಲಿದ್ದು, ಈ ನೂತನ ರೈಲ್ವೇ ಟ್ರ್ಯಾಕ್ಗೆ ಸುಮಾರು 3,300 ಕೋಟಿ ರುಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಬೃಹತ್ ಯೋಜನೆಯ ಕುರಿತಂತೆ ಡಿಪಿಆರ್ ತಯಾರಿಕೆಗೆ ಟೆಂಡರ್ ಕರೆಯಲು ರೈಲ್ವೇ ಇಲಾಖೆ ಸಿದ್ದತೆ ನಡೆಸಿದೆ