Tomato Price Rises: ಟೊಮೇಟೊಗೆ ಇಬ್ಬರು ಬಲಿ

By Suvarna NewsFirst Published Nov 27, 2021, 9:40 AM IST
Highlights

ಗೌರಿಬಿದನೂರಿನಲ್ಲಿ ಟೊಮೇಟೊಗೆ(Tomato) ಇಬ್ಬರು ಬಲಿಯಾಗಿದ್ದಾರೆ. ಚಿಕ್ಕಬಳ್ಳಾಪುರದ(Chikkaballapura) ಗೌರಿಬಿದನೂರಿನಲ್ಲಿ ನಡೆದ ಘಟನೆ ಈಗ ಎಲ್ಲೆಡೆ ಸುದ್ದಿಯಾಗಿದೆ.

ಚಿಕ್ಕಬಳ್ಳಾಪುರ(ನ.27): ಕರ್ನಾಟಕದ(Karnataka) ಚಿಕ್ಕಬಳ್ಳಾಪುರ(Chikkaballapura) ಜಿಲ್ಲೆಯಲ್ಲಿ ಟೊಮೇಟೊಗೆ(Tomato) ಇಬ್ಬರು ಬಲಿಯಾಗಿದ್ದಾರೆ. ಹೌದು. ಟೊಮೆಟೋ ಸೇರಿದಂತೆ ತರಕಾರಿಗಳ ಬೆಲೆ ಹೆಚ್ಚಳವಾದ ಬೆನ್ನಲ್ಲೇ ಗೌರಿಬಿದನೂರಿನಲ್ಲಿ ಇಬ್ಬರು ಕೊಲೆಯಾಗಿದ್ದಾರೆ. ಟೊಮೇಟೋ ಸಾವಿಗೆ ಕಾರಣವಾಗಿದ್ದು ಹೇಗೆ ? ಇಬ್ಬರು ಸಾವನ್ನಪ್ಪಿದ್ದು ಹೇಗೆ ? ತರಕಾರಿ ಬೆಲೆ ಹೆಚ್ಚಳ ಸಾವಿಗೆ ಕಾರಣವಾಗಿದ್ದು ಹೇಗೆ ? ಇಲ್ಲಿದೆ ಡಿಟೇಲ್ಸ್.

ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚರಕಮಟ್ಟೇನಹಳ್ಳಿಯಲ್ಲಿ ವಿದ್ಯುತ್‌ ಅಕ್ರಮ ಸಂಪರ್ಕ ಇಬ್ಬರನ್ನು ಬಲಿ ಪಡೆದಿದೆ. ತೋಟಕ್ಕೆ ಅಳವಡಿಸಿದ್ದ ವಿದ್ಯುತ್‌ ತಂತಿ ತುಳಿದು ಯುವಕ ಮೃತಪಟ್ಟಿದರಿಂದ ರೊಚ್ಚಿಗೆದ್ದ ಯುವಕನ ಸಂಬಂಧಿಕರು ತೋಟದ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆತನನ್ನು ಕೊಲೆ ಮಾಡಿದ್ದಾರೆ.

"

ವಿದ್ಯುತ್‌ ಬಲಿಯಾದ ವ್ಯಕ್ತಿ ಗೌರಿಬಿದನೂರು ತಾಲೂಕಿನ ಚರಕಮಟ್ಟೇನಹಳ್ಳಿ ಗ್ರಾಮದ ವಸಂತರಾವ್‌(29) ಹಾಗೂ ಹತ್ಯೆಗೀಡಾದ ಮಾಲೀಕ ಚಿಕ್ಕಹುಸೇನಪುರ ಗ್ರಾಮದ ಅಶ್ವತ್ಥರಾವ್‌(45) ಎಂದು ಗುರುತಿಸಲಾಗಿದೆ.

ಏನಿದು ಪ್ರಕರಣ:

ಇತ್ತೀಚೆಗೆ ತೀವ್ರ ಮಳೆಯಿಂದಾಗಿ ತರಕಾರಿ ಸೇರಿದಂತೆ ಟೊಮೆಟೋ ಬೆಳೆಯ ದರ ಗಗನಕ್ಕೇರಿದೆ. ಈ ಕಾರಣಕ್ಕಾಗಿಯೆ ಬೆಳೆ ರಕ್ಷಣೆಗಾಗಿ ಟೊಮೇಟೊ ತೋಟಕ್ಕೆ ಮಾಲೀಕ ಅಕ್ರಮವಾಗಿ ತನ್ನ ತೋಟಕ್ಕೆ ಕಲ್ಪಿಸಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಯುವಕ ಮೃತಪಟ್ಟಹಿನ್ನೆಲೆಯಲ್ಲಿ ಆಕ್ರೋಶಗೊಂಡ ಯುವಕನ ಕುಟುಂಬಸ್ಥರು ತೋಟದ ಮಾಲೀಕನನ್ನು ಥಳಿಸಿ ಹತ್ಯೆಗೈದಿದ್ದಾರೆ.

Vegetable Price in Chennai : ನಗರದಲ್ಲಿ ಕೈ ಸುಡುತ್ತಿದೆ ಟೊಮೆಟೋ ಬೆಲೆ

ಚಿಕ್ಕಹುಸೇನಪುರ ಗ್ರಾಮದ ರೈತ ಅಶ್ವತ್ಥರಾವ್‌ ಟೊಮೆಟೋ ಬೆಳೆದಿದ್ದರು. ಟೊಮೆಟೋ ದರ ದುಬಾರಿಯಾಗಿದ್ದರ ಹಿನ್ನೆಲೆಯಲ್ಲಿ ತೋಟಕ್ಕೆ ಕಳ್ಳರ ಕಾಟ ಎದುರಾಗಬಹುದು. ಜತೆಗೆ ಪ್ರಾಣಿಗಳು ಲಗ್ಗೆ ಇಡಬಹದೆಂದು ಬೆಳೆ ರಕ್ಷಣೆ ಸಲುವಾಗಿ ತೋಟಕ್ಕೆ ಕಂಬದಿಂದ ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದರು. ತೋಟದ ಪಕ್ಕದಲ್ಲೇ ಜಮೀನು ಹೊಂದಿರುವ ವಸಂತರಾವ್‌ ಸಹ ತನ್ನ ಜಮೀನಿನಲ್ಲಿ ಮೇಕೆ ಶೆಡ್‌ ನಿರ್ಮಿಸಿಕೊಂಡಿದ್ದರು. ಕಳೆದ ರಾತ್ರಿ ಮೇಕೆ ಮರಿ ತಪ್ಪಿಸಿಕೊಂಡು ಟೊಮೇಟೊ ತೋಟಕ್ಕೆ ನುಗ್ಗಿದೆ. ಆ ವೇಳೆ ಅಶ್ವತ್ಥರಾವ್‌ ತೋಟದ ಬಳಿ ಹೋದಾಗ ವಿದ್ಯುತ್‌ ತಗುಲಿ ವಸಂತರಾವ್‌ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾಲೀಕನ ಮೇಲೆ ಹಲ್ಲೆ, ಕೊಲೆ:

ವಿದ್ಯುತ್‌ ತಂತಿ ಸ್ಪರ್ಶದಿಂದಲೇ ಯುವಕ ಮೃತಪಟ್ಟಿರುವ ವಿಷಯ ತಿಳಿದ ಸಂಬಂಧಿಕರು, ತೋಟದ ಪಕ್ಕದ ಶೆಡ್‌ನಲ್ಲಿ ಮಲಗಿದ್ದ ತೋಟದ ಮಾಲೀಕ ಅಶ್ವತ್ಥರಾವ್‌ರನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಆಗ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಎರಡೂ ಕಡೆಯಿಂದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಶ್ವತ್ಥರಾವ್‌ ಕೊಲೆಗೆ ಕಾರಣದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.ಪರೀಕ್ಷೆಗೆ ಮುಂದಾಗಿದ್ದಾರೆ.

click me!