'ರೈತರು ಸಾಲ ಕೇಳಿದ್ರೆ ಸಿಬಿಲ್‌ ಸ್ಕೋರ್‌ ನೋಡದಿರಿ': ಸಂಸದ ಡಾ.ಜಿಎಂ ಸಿದ್ದೇಶ್ವರ್ ಸೂಚನೆ

By Kannadaprabha NewsFirst Published Jul 8, 2023, 5:44 AM IST
Highlights

ವಿದ್ಯಾರ್ಥಿಗಳು, ನಿರುದ್ಯೋಗಿಗಳು, ರೈತರಿಗೆ ಆದ್ಯತೆ ಮೇರೆಗೆ ಸಾಲ ನೀಡಬೇಕು, ಯಾವುದೇ ಕಾರಣಕ್ಕೂ ಸಿಬಿಲ್‌ ಸ್ಕೋರ್‌ ಅಂತೆಲ್ಲಾ ಹೇಳಬೇಡಿ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ದಾವಣಗೆರೆ (ಜು.8) :  ವಿದ್ಯಾರ್ಥಿಗಳು, ನಿರುದ್ಯೋಗಿಗಳು, ರೈತರಿಗೆ ಆದ್ಯತೆ ಮೇರೆಗೆ ಸಾಲ ನೀಡಬೇಕು, ಯಾವುದೇ ಕಾರಣಕ್ಕೂ ಸಿಬಿಲ್‌ ಸ್ಕೋರ್‌ ಅಂತೆಲ್ಲಾ ಹೇಳಬೇಡಿ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಪಂ ಸಭಾಂಗಣದಲ್ಲಿ ಲೀಡ್‌ ಬ್ಯಾಂಕ್‌ನ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಬ್ಯಾಂಕ್‌ಗಳಲ್ಲಿ ಸಾಲ ಕೇಳಲು ಹೋದಾಗ ಎಲ್ಲಾ ಬ್ಯಾಂಕ್‌ಗಳಲ್ಲಿ ಸಿಬಿಲ್‌ ಸ್ಕೋರ್‌ ಕೇಳುತ್ತಾರೆಂಬ ದೂರು ಇದೆ. ಇದರಿಂದ ಸ್ವಂತ ಉದ್ಯಮ ಆರಂಭಿಸಬೇಕೆಂಬ ಸಾಕಷ್ಟುಯುವ ಜನರ ಉತ್ಸಾಹಕ್ಕೆ ತಣ್ಣೀರೆರಚುವ ಕೆಲಸವಾಗುತ್ತಿದೆ. ರೈತರಿಗೆ ಮತ್ತು ಉನ್ನತ ಶಿಕ್ಷಣದ ಕನಸು ಹೊತ್ತ ವಿದ್ಯಾರ್ಥಿಗಳ ಭವಿಷ್ಯಕ್ಕೂ ತೊಂದರೆಯಾಗಲಿದೆ. ಇಂತಹದ್ದು ಪದೇ ಪದೇ ಮರುಕಳಿಸಬಾರದು ಎಂದು ಹೇಳಿದರು.

Latest Videos

ದಾವಣಗೆರೆ: ಗ್ಯಾರಂಟಿ ಯೋಜನೆಗಳ ಮಧ್ಯೆ ವಿಶ್ವ ಕನ್ನಡ ಸಮ್ಮೇಳನ ಘೋಷಣೆ ಮರೆತ ಸಿಎಂ - ಬಿ.ವಾಮದೇವಪ್ಪ

ಸಿಬಿಲ್‌ ಸ್ಕೋರ್‌ ನೋಡಿ ಸಾಲ ನೀಡುವುದಾದರೆ ಸುಮಾರು 100 ಕೋಟಿ ರು.ಗೂ ಅಧಿಕ ಸಾಲ ಪಡೆದು, ಕೈಗಾರಿಕೆ ಆರಂಭಿಸುವ ದೊಡ್ಡ ಉದ್ಯಮಿಗಳಿಗೆ ಮಾತ್ರ ಅನ್ವಯಿಸಿ. ಈಗ ಮಳೆ ಇಲ್ಲದೇ, ರೈತರು ಕಂಗಾಲಾಗಿದ್ದಾರೆ. ಅಂತಹವರಿಗೆ ಆರ್ಥಿಕವಾಗಿ ತೊಂದರೆಯಾಗಿರುವ ಸಮಯದಲ್ಲಿ ರೈತರು ಸಾಲ ಕೇಳಲು ಬಂದಾಗ ಸಿಬಿಲ್‌ ಸ್ಕೋರ್‌ ನೋಡುತ್ತಾ, ಕುಳಿತರೆ ಹೇಗೆ? ಸಣ್ಣ ಪುಟ್ಟಸಾಲ ಕೇಳುವ ನಿರುದ್ಯೋಗಿಗಳು, ವಿದ್ಯಾರ್ಥಿಗಳು, ರೈತರಿಗೆ ಸಿಬಿಲ್‌ ಸ್ಕೋರ್‌ ಕಡ್ಡಾಯ ಮಾಡದೇ, ಸಾಲ ನೀಡಿ ಎಂದು ಸೂಚಿಸಿದರು.

ಶೇ.67 ಸಾಲ ಸೌಲಭ್ಯ ಹೆಚ್ಚಳ:

ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಜಿ.ಸಿ.ಪ್ರಕಾಶ ಮಾತನಾಡಿ, ಗರಿಷ್ಠ 3 ಲಕ್ಷ ರು.ವರೆಗೆ ಸಾಲ ನೀಡಲು ಯಾವುದೇ ಸಿಬಿಲ್‌ ಸ್ಕೋರ್‌ ಪರಿಗಣಿಸುವುದಿಲ್ಲ. ಆದರೆ, ಅದಕ್ಕಿಂತ ಹೆಚ್ಚು ಸಾಲ ಕೇಳಿದರೆ ಮಾತ್ರ ಸಿಬಿಲ್‌ ಸ್ಕೋರ್‌ ಕಡ್ಡಾಯವಾಗಿ ನೋಡಿ, ಸಾಲ ನೀಡಬೇಕೆಂಬ ನಿಯಮವಿದೆ. ಹಿಂದಿನ ವರ್ಷಕ್ಕಿಂತ ಪ್ರಸಕ್ತ ಸಾಲಿನಲ್ಲಿ ಕೃಷಿಗೆ ಶೇ.32ರಷ್ಟುಹೆಚ್ಚು ಸಾಲ ನೀಡಲು ಪ್ರಾಶಸ್ತ್ಯ ನೀಡಲಾಗಿದೆ. ಶಿಕ್ಷಣ, ಉದ್ಯಮ, ಕೃಷಿ, ಮನೆ ಸಾಲ ಸೇರಿ ಶೇ.67ರಷ್ಟುಸಾಲ ಸೌಲಭ್ಯ ಹೆಚ್ಚಿಸಲಾಗಿದೆ. ಎಲ್ಲಾ ಬ್ಯಾಂಕ್‌ಗಳು ಅದನ್ನು ಪರಿಪಾಲಿಸಿ, ಸಾಲ ವಿತರಿಸುತ್ತಿವೆ. ಕಳೆದ ಮಾಚ್‌ರ್‍ವರೆಗೂ ಶೇ.115.30ರಷ್ಟುಗುರಿ ತಲುಪಲಾಗಿದೆ. ಆದ್ಯತೆಯೇತರ ವಲಯಕ್ಕೆ ಶೇ.104ರಷ್ಟುಸಾಲ ನೀಡಲಾಗಿದೆ ಎಂದರು.

ಬ್ಯಾಂಕ್‌ ಅಧಿಕಾರಿಯೊಬ್ಬರು ಮಾತನಾಡಿ, ನಿರುದ್ಯೋಗಿ ಯುವಕರು ಮತ್ತು ಶೈಕ್ಷಣಿಕ ಸಾಲಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಸರಿಯಾದ ದಾಖಲಾತಿಗಳನ್ನು ಹಾಕದಿರುವುದರಿಂದ ಸಾಕಷ್ಟುಮಂದಿ ಫಲಾನುಭವಿಗಳ ಸಾಲದ ಅರ್ಜಿ ವಜಾ ಆಗುತ್ತದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಿಂದಲೂ ಜಾಗೃತಿ ಶಿಬಿರಗಳ ಆಯೋಜಿಸಬೇಕು ಎಂದು ಸಲಹೆ ನೀಡಿದರು. ಅದಕ್ಕೆ ಜಿಪಂ ಸಿಇಒ ಸುರೇಶ್‌ ಇಟ್ನಾಳ್‌ ಮಾತನಾಡಿ, ಈಗಿನ ಯುವಕರು ಸೋಶಿಯಲ್‌ ಮೀಡಿಯಾಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಜಾಲತಾಣ ಬಳಸಿಕೊಂಡು, ನೀವು ಅಲ್ಲಿಯೇ ಮಾಹಿತಿ ನೀಡಿದರೂ ಅದು ಉಪಯೋಗವಾಗುತ್ತದೆ ಎಂದು ಹೇಳಿದರು.

Karnataka budget 2023: ಕಾಫಿ ನಾಡಿಗೆ ಕೈ ಕೊಟ್ಟರಾಜ್ಯ ಸರ್ಕಾರ: ಜಿಲ್ಲೆಗೆ ಬಿಗ್‌ ಝೀರೋ ಶಾಕ್‌

ಆರ್‌ಬಿಐ ಎಜಿಎಂ ಮುರಳಿ ಮನೋಹರ ಪಾಠಕ್‌, ನಬಾರ್ಡ್‌ ಡಿಡಿಎಂ ರಶ್ಮಿ ರೇಖಾ, ಕೆ.ವಿ.ಶ್ರೀನಿವಾಸ ಇತರರಿದ್ದರು.

ಶೈಕ್ಷಣಿಕ ಸಾಲ ಆದ್ಯತೆಯೇತರ ವಲಯಕ್ಕೆ ಸೇರುತ್ತದೆ. ಕಳೆದ ಅನೇಕ ಸಭೆಗಳಲ್ಲಿ ಶೈಕ್ಷಣಿಕ ಸಾಲ ಹೆಚ್ಚಿಸಲು ಸೂಚಿಸಿದ್ದರೂ, ಅದನ್ನು ಅನುಷ್ಠಾನಗೊಳಿಸಿಲ್ಲ. ಕಡಿಮೆ ಸಾಲ ನೀಡಿದ್ದು, ಉನ್ನತ ಶಿಕ್ಷಣಕ್ಕೆ ಸಾಲ ಕೇಳುವ ವಿದ್ಯಾರ್ಥಿಗಳಿಗೆ ಸಿಬಿಲ್‌ ಸ್ಕೋರ್‌ ಕೇಳುತ್ತಿದ್ದೀರಿ ಸಾಲ ಸಿಗದ ವಿದ್ಯಾರ್ಥಿಗಳು ನಮ್ಮ ಬಳಿ ಬಂದು ದೂರುತ್ತಾರೆ. ಇಂತಹ ದೂರುಗಳು ಮತ್ತೆ ಕೇಳಿ ಬರದಂತೆ ಜಾಗ್ರತೆ ವಹಿಸಿ. ಅದೇ ರೀತಿ ಶೈಕ್ಷಣಿಕ ಸಾಲ ಹೆಚ್ಚಿಸಿ.

ಸಿದ್ದೇಶ್ವರ, ಸಂಸದ

click me!