ಚುನಾವಣೆಯಿಂದ ಹಿಂದೆ ಸರಿಯಲ್ಲ : ಬಿಜೆಪಿ ವಿರುದ್ಧ ಬಂಡಾಯ

By Kannadaprabha NewsFirst Published Oct 15, 2020, 10:31 AM IST
Highlights

ಚುನಾವಣೆ ಇಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಲ್ಲ ಬಂಡಾಯವಾಗಿ ಸ್ಪರ್ಧೆ ಮಾಡುವೆ ಎಂದು ಮುಖಂಡರೋರ್ವರು ಹೇಳಿದ್ದಾರೆ.

ತುಮಕೂರು(ಅ.15):  ಐದು ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡ ಕರ್ನಾಟಕ ವಿಧಾನಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ. ಹಾಲನೂರು ಎಸ್‌. ಲೇಪಾಕ್ಷ ತಿಳಿಸಿದರು.

ನಗರದಲ್ಲಿ ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಳೆದ 30 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಶಿಕ್ಷಕನಾಗಿ, ಉಪನ್ಯಾಸಕನಾಗಿ 22 ವರ್ಷ ಸೇವೆ ಸಲ್ಲಿಸಿ, ಶಿಕ್ಷಕರು ಮತ್ತು ಪದವೀಧರರಿಗೆ ಸ್ಪಂದಿಸಿ ಕೆಲಸ ಮಾಡಿರುವುದಾಗಿ ವಿವರಿಸಿದರು.

ಕಳೆದ ಚುನಾವಣೆಯಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ವೈ.ಎ. ನಾರಾಯಣಸ್ವಾಮಿ ಅವರಿಗಾಗಿ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದು, ಅವರ ಪರವಾಗಿ ಪ್ರಚಾರ ಮಾಡಿ ಗೆಲುವಿಗೆ ಸಹಕಾರ ನೀಡಿದ್ದ ನನ್ನ ಬೆಂಬಲಕ್ಕೆ ಅವರು ನಿಲ್ಲಲ್ಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಂಸದ ಜಿ.ಎಸ್‌. ಬಸವರಾಜು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮಾತಿಗೆ ಕಟ್ಟುಬಿದ್ದು ಕಳೆದ ಸಲ ಚುನಾವಣಾ ಕಣದಿಂದ ಹಿಂದೆ ಸರಿದಿದ್ದೆ. ಈ ಸಲ ನನಗೆ ಪಕ್ಷದ ಟಿಕೆಟ್‌ ದೊರೆಯುವುದೆಂಬ ಆಶಾ ಭಾವನೆ ಹೊಂದಿದ್ದೆ. ಕೊನೆ ಗಳಿಗೆಯಲ್ಲಿ ನನಗೆ ಟಿಕೆಟ್‌ ವಂಚಿಸಿ, ಜೆಡಿಎಸ್‌ ಪಕ್ಷದಲ್ಲಿದ್ದ ಇತ್ತೀಚೆಗಷ್ಟೆಬಿಜೆಪಿ ಸೇರಿದ ಚಿದಾನಂದ ಎಂ. ಗೌಡ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ ಎಂದರು.

ನನಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ನಮ್ಮ ಪಕ್ಷದ ಯಾವ ನಾಯಕರು ಮುಂದಾಗಲಿಲ್ಲ. ಈ ಕಾರಣದಿಂದಾಗಿ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಯಾರು ಏನೇ ಹೇಳಿದರೂ ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೆ ಇಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಮುನಿರತ್ನ ಆಸ್ತಿ ಮೊತ್ತ ಎಷ್ಟಿದೆ..? ಕ್ರಿಮಿನಲ್ ಕೇಸು ಇದೆ ..

2005-06ರಲ್ಲಿ ಎಸ್‌ಆರ್‌ಎಸ್‌ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ, ಹಲವಾರು ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ನೀಡಿ, ಸಾರ್ವಜನಿಕ ಸೇವೆಯಲ್ಲಿ ತನ್ನನ್ನು ಸಂಪೂರ್ಣ ತೊಡಿಗಿಸಿಕೊಂಡಿದ್ದೇನೆ. ಸಾವಿರಾರು ಮಂದಿ ನಮ್ಮ ಶಿಕ್ಷಣ ಸಂಸ್ಥೆಯಿಂದ ಪದವೀಧರರಾಗಿ ಹೊರ ಬಂದಿದ್ದಾರೆ. ಇವರೆಲ್ಲರ ಹಾಗೂ ಜಿಲ್ಲೆಯ 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು, ಸಂಘಗಳು ಸೇರಿದಂತೆ ಈ ವ್ಯಾಪ್ತಿಯ ಹೊರ ಜಿಲ್ಲೆಗಳ ಬೆಂಬಲವೂ ನಮಗಿದ್ದು ಈಸಲದ ಚುನಾವಣೆ ಅನಿರೀಕ್ಷಿತ ಹೊಸ ಬದಲಾವಣೆಗೆ ಕಾರಣವಾಗಲಿದೆ ಎಂದರು.

ಜಿಲ್ಲಾ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ವಿ. ಶ್ರೀನಿವಾಸ್‌, ಉಪಾಧ್ಯಕ್ಷ ಲ್ಯಾನ್ಸಿ ಹೆಚ್‌. ಪಾಯಸ್‌, ಕಾರ್ಯದರ್ಶಿ ನಯಾಜ್‌ ಅಹಮದ್‌, ಇವರು ಈ ಸಂದರ್ಭದಲ್ಲಿ ಮಾತನಾಡಿ, ಸದಾ ಕಾಲ ಶಿಕ್ಷಕರು ಮತ್ತು ಪದವೀಧರರ ಜೊತೆ ಗುರುತಿಸಿಕೊಂಡಿರುವ ಹಾಲನೂರು ಲೇಪಾಕ್ಷ ಅವರಂತಹ ವ್ಯಕ್ತಿ ಜನಪ್ರತಿನಿಧಿಯಾಗಿ ಆಯ್ಕೆಯಾಗಬೇಕು ಎಂಬ ಉದ್ದೇಶದಿಂದ ನಾವು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದೇವೆ ಎಂದರು.

ಒಕ್ಕೂಟದ ಉಪಾಧ್ಯಕ್ಷ ಶಿವಪ್ರಕಾಶ್‌, ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್‌. ಸಿದ್ದಪ್ಪ, ಒಕ್ಕೂಟದ ನಿರ್ದೇಶಕ ಪ್ರಭಾಕರ ಅರಸ್‌, ಜಂಟಿ ಕಾರ್ಯದರ್ಶಿ ನಿಖಿಲ್‌ ಮಿರ್ಜಿ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

click me!