ನನಗೆ ಕುಟುಂಬ ರಾಜಕಾರಣ ಬರಲ್ಲ : ನಾರಾಯಣಗೌಡ

By Kannadaprabha NewsFirst Published Mar 9, 2023, 6:08 AM IST
Highlights

ನನಗೆ ಕುಟುಂಬ ರಾಜಕೀಯ ಮಾಡಲು ಬರುವುದಿಲ್ಲ. ಮತದಾರರೇ ನನ್ನ ತಂದೆ ತಾಯಿಗಳು. ನೀವು ಆಶೀರ್ವಾದ ಮಾಡಿದರಷ್ಟೇ ನಾನು ಚುನಾವಣೆ ಕಣಕ್ಕೆ ಇಳಿಯುತ್ತೇನೆ. ಇಲ್ಲದಿದ್ದರೆ ನಿಮ್ಮ ಸೇವೆ ಮಾಡಿಕೊಂಡು ಸುಮ್ಮನಿರುತ್ತೇನೆ ಎಂದು ಸಚಿವ ಕೆ.ಸಿ.ನಾರಾಯಣಗೌಡರು ಭಾವುಕರಾಗಿ ಹೇಳಿದರು.

 ಕೆ.ಆರ್‌.ಪೇಟೆ :  ನನಗೆ ಕುಟುಂಬ ರಾಜಕೀಯ ಮಾಡಲು ಬರುವುದಿಲ್ಲ. ಮತದಾರರೇ ನನ್ನ ತಂದೆ ತಾಯಿಗಳು. ನೀವು ಆಶೀರ್ವಾದ ಮಾಡಿದರಷ್ಟೇ ನಾನು ಚುನಾವಣೆ ಕಣಕ್ಕೆ ಇಳಿಯುತ್ತೇನೆ. ಇಲ್ಲದಿದ್ದರೆ ನಿಮ್ಮ ಸೇವೆ ಮಾಡಿಕೊಂಡು ಸುಮ್ಮನಿರುತ್ತೇನೆ ಎಂದು ಸಚಿವ ಕೆ.ಸಿ.ನಾರಾಯಣಗೌಡರು ಭಾವುಕರಾಗಿ ಹೇಳಿದರು.

ತಾಲೂಕಿನ ಬೂಕನಕೆರೆ ಹೋಬಳಿ ಗವಿಮಠದ ಕಾಪನಹಳ್ಳಿ ಸಮೀಪದ ಶ್ರೀಮಡಿಲಮ್ಮ ದೇವಾಲಯದ ಆವರಣದಲ್ಲಿ ಅಭಿಮಾನಿಗಳ ಬಳಗ ಏರ್ಪಡಿಸಿದ್ದ ಔತಣಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Latest Videos

ಕ್ಷೇತ್ರದಲ್ಲಿ ನನ್ನ ಅಣ್ಣ-ತಮ್ಮಂದಿರು ಯಾರೂ ಮಾಡುತ್ತಿಲ್ಲ. ಮತದಾರ ದೇವತೆಗಳಾದ ನೀವು ನಾನು ಮುಂದೆ ಏನು ಮಾಡಬೇಕು ಎಂಬುದನ್ನು ಹೇಳಬೇಕು. ನಾನೆಂದೂ ಕ್ಷೇತ್ರದ ಜನರಿಗೆ ಮೋಸ ಮಾಡಿಲ್ಲ. ಚುನಾವಣಾ ರಾಜಕೀಯ ಬರುತ್ತದೆ ಹೋಗುತ್ತದೆ. ಆದರೆ, ನಾನು ಸದಾ ನಿಮ್ಮ ಸೇವೆಯಲ್ಲಿರುತ್ತೇನೆ. ನಾನು ಸಂಪಾದನೆಗಾಗಿ ಹೊರಗೆ ಹೋಗಿರಬಹುದು. ಆದರೆ, ಈ ಮಣ್ಣಿನಲ್ಲಿಯೇ ನಾನು ಮಣ್ಣಾಗುತ್ತೇನೆ ಎಂದು ಭಾವನಾತ್ಮಕವಾಗಿ ನುಡಿದರು.

ಪುಡಾರಿಗಳನ್ನು ನೆನೆಯೋಲ್ಲ:

ಕ್ಷೇತ್ರದಲ್ಲಿ ಎಸ್‌.ಎಂ.ಲಿಂಗಪ್ಪ, ಎಂ.ಪುಟ್ಟಸ್ವಾಮಿಗೌಡ, ಮಾಜಿ ಸ್ಪೀಕರ್‌ಅವರಂತಹ ಸಜ್ಜನ ರಾಜಕಾರಣಿಗಳು ಬಂದು ಹೋಗಿದ್ದಾರೆ. ಅವರನ್ನು ನಾನು ಗೌರವದಿಂದ ಸ್ಮರಿಸುತ್ತೇನೆ. ಆದರೆ, ಪುಡಾರಿ ರಾಜಕಾರಣಿಗಳನ್ನು ನೆನೆಯುವ ಅಗತ್ಯ ನನಗಿಲ್ಲ. ಎಲ್ಲೋ ಕುಳಿತು ನನ್ನ ಬಗ್ಗೆ ಮಾತನಾಡುವವರು ಧೈರ್ಯವಿದ್ದರೆ ನನ್ನೆದುರಿಗೆ ಬರಲಿ ಎಂದು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್‌ ವಿರುದ್ಧ ಗುಡುಗಿದ ನಾರಾಯಣಗೌಡ, ಪುಡಾರಿ ರಾಜಕಾರಣಕ್ಕೆ ನಾನು ಉತ್ತರ ಕೊಡುವ ಅಗತ್ಯವಿಲ್ಲ ಎಂದು ಖಾರವಾಗಿ ಹೇಳಿದರು.

ಪುಂಡಾಟಕ್ಕೆ ಅವಕಾಶ ನೀಡೋಲ್ಲ:

ಪುಡಾರಿಗಳ ಆಟವನ್ನು ಕ್ಷೇತ್ರದಲ್ಲಿ ಎಲ್ಲಿಯೂ ನಡೆಯಲು ಬಿಡುವುದಿಲ್ಲ. ನಾನು ಯಾರು ಎನ್ನುವುದನ್ನು ಅರ್ಥ ಮಾಡಿಸುತ್ತೇನೆ. ಯಾವ ಗೂಂಡಾಗಳೂ ನಿಮ್ಮನ್ನು ಟಚ್‌ ಮಾಡಲು ಬಿಡೋಲ್ಲ. ನನ್ನ ಶರೀರದಲ್ಲಿ ಉಸಿರು ಇರೋವರೆಗೂ ಕ್ಷೇತ್ರ ಬಿಟ್ಟು ಹೋಗಲ್ಲ. ಯಾವ ಗೂಂಡಾಗಳು ನಿಮ್ಮನ್ನ ಬೆರಳಲ್ಲಿ ಟಚ್‌ ಮಾಡದ ಹಾಗೆ ಕಾಯುತ್ತೇನೆ ಎಂದು ವಾಗ್ದಾನ ನೀಡಿದರು.

ನಾನು ಬಾಂಬೆ, ಡೆಲ್ಲಿ, ಅಮೆರಿಕಾಗೆ ಹೋಗೋಲ್ಲ. ದೇಶ ತಿರುಗಿ ಸಂಪಾದನೆ ಮಾಡಿಕೊಂಡು ಬರಬೇಕು. ತಾಲೂಕು ಅಭಿವೃದ್ಧಿ ಮಾಡಬೇಕು. ಆ ಶಕ್ತಿಯನ್ನು ಭಗವಂತ ನನಗೆ ಕೊಟ್ಟಿದ್ದಾನೆ. ನಿಮ್ಮನ್ನು ಬಿಟ್ಟು ನಾನು ಎಲ್ಲಿಯೂ ಹೋಗೋಲ್ಲ. ಸದಾ ನಿಮ್ಮ ಜೊತೆ ಇರುತ್ತೇನೆ. ನೀವೇ ನನ್ನ ಪಾಲಿನ ದೇವರು. ಮತದಾರರಿಗೆ ಅನ್ಯಾಯ ಮಾಡಿದರೆ ಭಗವಂತ ನನ್ನನ್ನು ಸುಮ್ಮನೆ ಬಿಡುವುದಿಲ್ಲ. ನನ್ನ ಕುಟುಂಬದಿಂದ ಬೇರೆ ಯಾರೂ ರಾಜಕಾರಣ ಮಾಡಲು ಬರುವುದಿಲ್ಲ ಎಂದು ಅಭಯ ನೀಡಿದರು.

ಮುಡಾ ಅಧ್ಯಕ್ಷ ಕೆ.ಶ್ರೀನಿವಾಸ್‌, ಜಿಲ್ಲಾ ಹಾಪ್‌ಕಾಮ್ಸ್‌ ಅಧ್ಯಕ್ಷ ಕೆ.ಜೆ.ತಮ್ಮಣ್ಣ, ತಾಪಂ ಮಾಜಿ ಅಧ್ಯಕ್ಷ ಜವರಾಯಿಗೌಡ, ಪಿಎಲ್‌ಡಿ ಬ್ಯಾಂಕ್‌ ನಿರ್ದೇಶಕ ಕೈಗೋನಹಳ್ಳಿ ಕುಮಾರ್‌, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್‌, ಉಪಾಧ್ಯಕ್ಷ ಭಾರತೀಪುರ ಪುಟ್ಟಣ್ಣ, ಗ್ರಾಪಂ ಅಧ್ಯಕ್ಷ ಅಂಜನಿಗೌಡ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮೇಗೌಡ, ಗೂಡೆಹೊಸಹಳ್ಳಿ ಜವರೇಗೌಡ, ಯುವ ಮುಖಂಡ ಬಳ್ಳೇಕೆರೆ ಪ್ರವೀಣ್‌, ಮೋದೂರು ಮಂಜುನಾಥ್‌, ದೊದ್ದನಕಟ್ಟೆನಾರಾಯಣ, ಪ್ರಥಮ ದರ್ಜೆ ಗುತ್ತಿಗೆದಾರ ಪಾಂಡು ಸೇರಿದಂತೆ ಇತರರಿದ್ದರು.

ಕ್ಷೇತ್ರದೆಲ್ಲೆಡೆ ಬಾಡೂಟ ರಾಜಕಾರಣ

ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಎಲ್ಲಾ ಹೋಬಳಿಗಳಲ್ಲೂ ಭರ್ಜರಿ ಬಾಡೂಟದ ರಾಜಕಾರಣ ಆರಂಭಗೊಂಡಿದೆ. ಈಗಾಗಲೇ ಸಂತೇಬಾಚಹಳ್ಳಿ ಹೋಬಳಿಯ ಶ್ರೀಗವಿರಂಗನಾಥ ದೇವಾಲಯದ ಆವರಣ ಮತ್ತು ಹೋಬಳಿ ಕೇಂದ್ರ ಶೀಳನೆರೆಯಲ್ಲಿ ಬಾಡೂಟದ ಸಮಾವೇಶ ಯಶಸ್ವಿಯಾಗಿ ಸಂಘಟಿಸಿರುವ ಸಚಿವ ಕೆ.ಸಿ.ನಾರಾಯಣಗೌಡ ಬುಧವಾರ ಕಾಪನಹಳ್ಳಿಯ ಶ್ರೀಮಡಿಲಮ್ಮ ದೇವಾಲಯದ ಆವರಣದಲ್ಲಿ ಮೂರನೇ ಸುತ್ತಿನ ಬಾಡೂಟವನ್ನು ಯಶಸ್ವಿಯಾಗಿ ನಡೆಸಿದರು.

ಸಚಿವ ಕೆಸಿಎನ್‌ ಬಿಜೆಪಿ ಪಕ್ಷದಲ್ಲಿದ್ದರೂ ಮತಬೇಟೆಯ ಕಾರ್ಯಕ್ರಮಗಳನ್ನು ಬಿಜೆಪಿ ಬ್ಯಾನರ್‌ ಅಡಿಯಲ್ಲಿ ರೂಪಿಸದೆ ತಮ್ಮ ಅಭಿಮಾನಿ ಬಳಗದ ಹೆಸರಿನಲ್ಲಿ ಸಂಘಟಿಸುವ ಮೂಲಕ ಮುಂದೆ ತಾವು ಯಾವುದೇ ರಾಜಕೀಯ ತೀರ್ಮಾನ ತೆಗೆದುಕೊಂಡರೂ ತಮ್ಮ ಬೆಂಬಲಿಗ ಮತದಾರ ಪಡೆ ಚದುರದಂತೆ ನೋಡಿಕೊಳ್ಳುವ ಕೆಲಸವನ್ನು ಬಾಡೂಟದ ಸಮಾವೇಶಗಳ ಮೂಲಕ ಮಾಡುತ್ತಿದ್ದಾರೆ.

8ಕೆಎಂಎನ್‌ಡಿ-14

ಕೆ.ಆರ್‌.ಪೇಟೆ ತಾಲೂಕಿನ ಗವಿಮಠದ ಕಾಪನಹಳ್ಳಿ ಸಮೀಪವಿರುವ ಶ್ರೀಮಡಿಲಮ್ಮನವರ ದೇವಾಲಯದ ಆವರಣದಲ್ಲಿ ಏರ್ಪಡಿಸಿದ್ದ ಔತಣಕೂಟದ ಕಾರ್ಯಕ್ರಮವನ್ನು ಸಚಿವ ಕೆ.ಸಿ.ನಾರಾಯಣಗೌಡ ಉದ್ಘಾಟಿಸಿದರು.

8ಕೆಎಂಎನ್‌ಡಿ-15

ಬಾಡೂಟ ಕಾರ್ಯಕ್ರಮದಲ್ಲಿ ತಲ್ಲೀನರಾಗಿರುವ ಜನರು.

click me!