ಕೊಡಗು: ಬರಿದಾದ ಕಾವೇರಿ ಒಡಲು, ನೂರಾರು ಮೀನುಗಳ ಮಾರಣಹೋಮ..!

Published : Apr 30, 2024, 09:00 PM IST
ಕೊಡಗು: ಬರಿದಾದ ಕಾವೇರಿ ಒಡಲು, ನೂರಾರು ಮೀನುಗಳ ಮಾರಣಹೋಮ..!

ಸಾರಾಂಶ

ದಿನಗಳು ಕಳೆದಂತೆ ನೀರಿನ ಪ್ರಮಾಣವೂ ಕಡಿಮೆಯಾಗಿ ತೀವ್ರ ಬಿಸಿಲ ಧಗೆಗೆ ನೀರು ಬಿಸಿಯಾಗುತ್ತದೆ. ಜೊತೆಗೆ ಇರುವ ಅಲ್ಪಸ್ವಲ್ಪ ನೀರು ಪೂರ್ಣ ಕಲುಷಿತಗೊಂಡಿರುವುದರಿಂದ ನೀರಿನಲ್ಲಿರುವ ಮೀನು ಸೇರಿದಂತೆ ಇತರೆ ಜಲಚರಗಳು ಜೀವ ಬಿಟ್ಟಿವೆ. ಎರಡರಿಂದ ನಾಲ್ಕು ಕೆಜಿ ಯಷ್ಟು ತೂಕದ ಮೀನುಗಳೇ ಹೆಚ್ಚಿನ ಪ್ರಮಾಣದಲ್ಲಿ ಸಾವನ್ನಪ್ಪಿವೆ. 

ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಏ.30):  ಕೊಡಗು ಎಂದರೆ ಎತ್ತೇಚ್ಛವಾಗಿ ಮಳೆ ಸುರಿಯುವ ಜಿಲ್ಲೆ ಎನ್ನುವಂತೆ ಆಗಿತ್ತು. ಆದರೆ ಈ ಬಾರಿ ತೀವ್ರ ಬರಗಾಲ ಎದುರಾದ ಪರಿಣಾಮ ತವರು ಜಿಲ್ಲೆ ಕೊಡಗಿನಲ್ಲಿಯೇ ಕಾವೇರಿ ನದಿ ಸಂಪೂರ್ಣ ಬತ್ತಿಹೋಗಿದೆ. ನದಿಯ ತಗ್ಗು ಪ್ರದೇಶದಲ್ಲಿ ನಿಂತಿದ್ದ ಅಲ್ಪಸ್ವಲ್ಪ ನೀರು ಕೂಡ ಕಲುಷಿತಗೊಂಡು ನೂರಾರು ಮೀನುಗಳ ಮಾರಣ ಹೋಮವಾಗಿದೆ. 

ಹೌದು, ಕಾವೇರಿ ನದಿ ತಲಕಾವೇರಿಯಲ್ಲಿ ಹುಟ್ಟಿ ನಾಡಿನುದ್ದಕ್ಕೂ ಹರಿದು ತಮಿಳುನಾಡು ಮೂಲಕ ಹಿಂದೂ ಮಹಾಸಾಗರ ಸೇರುತ್ತದೆ. ವಿಪರ್ಯಾಸ ಎಂದರೆ ತಲಕಾವೇರಿಯಿಂದಲೇ ಕಾವೇರಿ ನದಿಯಲ್ಲಿ ನೀರೇ ಇಲ್ಲದಂತೆ ಆಗಿದೆ. ಇದುವರೆಗೆ ಕಾವೇರಿ ನದಿ ಎಂದೂ ಈ ಮಟ್ಟಿಗೆ ಬತ್ತಿ ಹೋದ ಉದಾಹರಣೆಗಳಿರಲಿಲ್ಲ. 

ಫೈನಲ್ ಹಂತಕ್ಕೆ ತಲುಪಿದ ಕುಂಡ್ಯೋಳಂಡ ಹಾಕಿ ಕ್ರೀಡಾಕೂಟ

ಫೆಬ್ರುವರಿ ಅಥವಾ ಮಾರ್ಚಿ ತಿಂಗಳಿನಲ್ಲಿ ಪೂರ್ವ ಮುಂಗಾರಿನ ಒಂದೆರಡು ಮಳೆ ಬರುತ್ತಿದ್ದರಿಂದ ಕಾವೇರಿ ನದಿಗೆ ಮತ್ತೆ ಜೀವಕಳೆ ಬಂದುಬಿಡುತಿತ್ತು. ಆದರೆ ಕಳೆದ ಬಾರಿ ಮುಂಗಾರು ಮಳೆಯೂ ವಾಡಿಕೆಗಿಂತ ತೀವ್ರ ಕಡಿಮೆಯಾಗಿತ್ತು. ಜೊತೆಗೆ ಏಪ್ರಿಲ್ ತಿಂಗಳು ಮುಗಿದಿದ್ದರೂ ಇದುವರೆಗೆ ಒಂದು ಹನಿ ಪೂರ್ವ ಮುಂಗಾರು ಮಳೆ ಬಂದಿಲ್ಲ. ಪರಿಣಾಮ ಇಡೀ ನದಿಯ ಒಡಲು ಬರಿದಾಗಿದ್ದು ಯಾವುದೋ ಮರುಭೂಮಿಗೆ ಹೋದಂತಹ ರೀತಿ ನದಿ ಭಾಸವಾಗುತ್ತಿದೆ. ಆದರಲ್ಲೂ ಕುಶಾಲನಗರ ತಾಲ್ಲೂಕಿನ ಅಲ್ಲಲ್ಲಿ ತಗ್ಗು, ಗುಂಡಿಗಳಲ್ಲಿ ಇದ್ದ ನೀರಿನಲ್ಲಿ ಜಲಚರಗಳು ತಮ್ಮ ಜೀವ ಉಳಿಸಿಕೊಂಡಿದ್ದವು. 

ದಿನಗಳು ಕಳೆದಂತೆ ಆ ನೀರಿನ ಪ್ರಮಾಣವೂ ಕಡಿಮೆಯಾಗಿ ತೀವ್ರ ಬಿಸಿಲ ಧಗೆಗೆ ನೀರು ಬಿಸಿಯಾಗುತ್ತದೆ. ಜೊತೆಗೆ ಇರುವ ಅಲ್ಪಸ್ವಲ್ಪ ನೀರು ಪೂರ್ಣ ಕಲುಷಿತಗೊಂಡಿರುವುದರಿಂದ ನೀರಿನಲ್ಲಿರುವ ಮೀನು ಸೇರಿದಂತೆ ಇತರೆ ಜಲಚರಗಳು ಜೀವ ಬಿಟ್ಟಿವೆ. ಎರಡರಿಂದ ನಾಲ್ಕು ಕೆಜಿ ಯಷ್ಟು ತೂಕದ ಮೀನುಗಳೇ ಹೆಚ್ಚಿನ ಪ್ರಮಾಣದಲ್ಲಿ ಸಾವನ್ನಪ್ಪಿವೆ. ಸಾವನ್ನಪ್ಪಿದ ಮೀನುಗಳನ್ನು ಕೂಡಲೇ ಕುಶಾಲನಗರ ಪಟ್ಟಣ ಪಂಚಾಯಿತಿ ಸಿಬ್ಬಂದಿ ಎಲ್ಲಾ ಮೀನುಗಳನ್ನು ತೆಗೆದು ಗುಂಡಿಯಲ್ಲಿ ಹೂತು ಹಾಕಿದ್ದಾರೆ. 

ಬೀಗರೂಟ ಮಾಡಿ ಮದುಮಕ್ಕಳ ಸಹಿತ 500+ ಮಂದಿ ಅಸ್ವಸ್ಥ: ಸಚಿವ ವೆಂಕಟೇಶ್‌ ಸಹ ಭಾಗಿ!

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಕಾವೇರಿ ನದಿಯಲ್ಲಿ ನೀರು ಪೂರ್ಣ ಬತ್ತಿ ಹೋಗಿದೆ. ಇಷ್ಟಾದರೂ ಪಟ್ಟಣಗಳ ಎಲ್ಲಾ ರೀತಿಯ ತ್ಯಾಜ್ಯ ನೀರು ಸಹ ಕಾವೇರಿ ನದಿಯ ತಗ್ಗು ಗುಂಡಿಗಳಲ್ಲಿ ಇರುವ ನೀರಿಗೆ ಸೇರುತ್ತಿರುವುದರಿಂದ, ಇದ್ದ ನೀರು ಕೂಡ ಕೊಳೆತು ದುರ್ನಾತ ಬೀರುತ್ತಿದೆ. ಕಳೆದ ಐದು ವರ್ಷಗಳ ಹಿಂದೆಯೂ ಮಳೆಯ ಕೊರತೆ ಆಗಿ ಕಾವೇರಿ ನದಿ ಬತ್ತಲಾರಂಭಿಸಿತ್ತು. ಇಡೀ ದೇಶದಲ್ಲಿ ಇಲ್ಲದ ಅಪರೂಪದ ಮಹಶೀರ್ ತಳಿಯ ಮೀನುಗಳು ಕುಶಾಲನಗರ ತಾಲ್ಲೂಕಿನ ಕಾವೇರಿ ನದಿ ಕೊಳ್ಳದಲ್ಲಿವೆ. ಹೀಗಾಗಿ ಐದು ವರ್ಷಗಳ ಹಿಂದೆ ನದಿ ಬತ್ತಲಾರಂಭಿಸುತ್ತಿದ್ದಂತೆ ಎಲ್ಲಾ ಮೀನುಗಳನ್ನು ಹಿಡಿದು ಹಾರಂಗಿ ಜಲಾಶಯಕ್ಕೆ ಬಿಡಲಾಗಿತ್ತು. ಆದರೆ ಈ ಬಾರಿ ಚುನಾವಣೆಯ ಕೆಲಸದ ನಿಮಿತ್ತ ಎಲ್ಲಾ ಅಧಿಕಾರಿಗಳು ಸಾಕಷ್ಟು ಬ್ಯುಸಿಯಾಗಿದ್ದರಿಂದ ಈ ಬಾರಿ ಮೀನುಗಳನ್ನು ಸ್ಥಳಾಂತರಿಸಲೇ ಇಲ್ಲ. ಹೀಗಾಗಿ ಅಪರೂಪದ ತಳಿಯ ಮಹಶೀರ್ ನೂರಾರು ಮೀನುಗಳು ಮಾರಣ ಹೋಮವಾಗಿವೆ.  ಇಂತಹ ಸ್ಥಿತಿಯನ್ನು ಕಂಡ ಸ್ಥಳೀಯರು, ಪ್ರಾಣಿ ಪ್ರಿಯರು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮತ್ತೊಂದೆಡೆ ತಗ್ಗು ಪ್ರದೇಶಗಳಲ್ಲಿ ಇದ್ದ ಒಂದಿಷ್ಟು ನೀರು ಕೊಳೆತು ನಾರುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡು ಭೀತಿ ಎದುರಾಗಿದೆ. ಸದ್ಯ ಕೊಳೆತು ನಾರುತ್ತಿರುವ ನೀರಿನ ಸುತ್ತ ಬ್ಲೀಚಿಂಗ್ ಪೌಡರ್ ಸಿಂಪಡಿಸಿದ್ದು ಅಧಿಕಾರಿಗಳು ಸಣ್ಣ ಪ್ರಮಾಣದಲ್ಲಿ ಗಮನಹರಿಸಿದ್ದಾರೆ. 

PREV
Read more Articles on
click me!

Recommended Stories

KSRTC ಬಸ್ ಡ್ರೈವರ್ ಹಾರ್ನ್ ಮಾಡಿದ್ದೇ ತಪ್ಪಾಯ್ತಂತೆ; ಊರಿನ ಜನರೆಲ್ಲಾ ಸೇರಿಕೊಂಡು ಧರ್ಮದೇಟು ಕೊಟ್ಟರು!
ಮೈಸೂರು ಅರಮನೆ ವರಹ ದ್ವಾರದ ಮೇಲ್ಛಾವಣಿ ಕುಸಿತ; ಪ್ರವಾಸಿಗರ ಗೈರಿನಿಂದ ತಪ್ಪಿದ ಭಾರೀ ಅನಾಹುತ