
ಹುಬ್ಬಳ್ಳಿ (ಹು.17): ಬಲತ್ಕಾರಕ್ಕ ಗರ್ಭಿಣಿಯಾಗಿದ್ದ ಅಪ್ರಾಪ್ತೆ ಜನ್ಮ ನೀಡಿದ ಪ್ರಕರಣವನ್ನು ಮುಚ್ಚಿಹಾಕಿದ್ದಲ್ಲದೇ ಆಕೆಗೆ ಜನಿಸಿದ ಮಗುವನ್ನು ಸ್ವತಃ ವೈದ್ಯರೇ ಮಾರಾಟ ಮಾಡಿರುವ ಹೇಯಕೃತ್ಯ ಹುಬ್ಬಳ್ಳಿಯಲ್ಲಿ ನಡೆದಿದ್ದು, ಆರೋಪಿ ಸೇರಿ, ಬಾಲಕಿಯ ತಂದೆ-ತಾಯಿ, ಇಬ್ಬರು ಖಾಸಗಿ ವೈದ್ಯರ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
15 ವರ್ಷ 6 ತಿಂಗಳ ಬಾಲಕಿಗೆ ಕರೀಂ ಎಂಬ ಆರೋಪಿ ಪುಸಲಾಯಿಸಿ ಉಣಕಲ್ಲ ರೈಲ್ವೆ ಬ್ರಿಡ್ಜ್ ಹತ್ತಿರ ಕರೆದುಕೊಂಡು ಹೋಗಿ 2025 ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಬಲತ್ಕರಿಸಿದ್ದಾನೆ.. ಆಕೆ ಗರ್ಭಿಣಿಯಾಗಿದ್ದ ವಿಷಯ ತಂದೆ-ತಾಯಿಗೆ ಗೊತ್ತಿದ್ದರೂ ಪೊಲೀಸರಿಗೆ ತಿಳಿಸದೆ ಮರೆ ಮಾಚಿದ್ದಾರೆ. ಅಲ್ಲದೆ ಮಗುವನ್ನು ಬೇರೆಯವರಿಗೆ ಕೊಟ್ಟಿದ್ದಾರೆ. ಇದೀಗ ಈ ಅಪ್ರಾಪ್ತೆ ಮತ್ತೆ ಗರ್ಭಿಣಿಯಾಗಿದ್ದಾಳೆ ಎಂದು ದೂರಿನಲ್ಲಿ ನಮೂದಾಗಿದೆ.
ಪಾಲಕರಿಂದ ಯಾವುದೇ ದಾಖಲಾತಿ ಪಡೆಯದೆ ವೈದ್ಯರು ಚಿಕಿತ್ಸೆ ನೀಡಿದ್ದು, ಇಲಾಖೆಗಳಿಗೆ ಮಾಹಿತಿ ಒದಗಿಸದೆ ಅಪರಾಧ ಮರೆಮಾಚಿದ ಚಳ್ಳಮಟ್ಟಿ ಗ್ರಾಮದ ವೈದ್ಯ ಮತ್ತು ನಗರದ ಖಾಸಗಿ ಆಸ್ಪತ್ರೆ ವೈದ್ಯರ ಮೇಲೆ ಸೂಕ್ತ ಕ್ರಮ ಜರುಗಿಸಲು ಒತ್ತಾಯಿಸಿ ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಪ್ರಕಾಶ ಕೊಡ್ಲಿವಾಡ ಪ್ರಕರಣ ದಾಖಲಿಸಿದ್ದಾರೆ.