ಕಳೆದ ವರ್ಷ ಸಿದ್ದು ಬಜೆಟ್‌ನಲ್ಲಿ ಬಳ್ಳಾರಿಗೆ ಸಿಕ್ಕಿದ್ದೆಷ್ಟು? ಅನುಷ್ಠಾನ ಆಗಿದ್ದೆಷ್ಟು?

Published : Mar 05, 2026, 08:01 AM IST
Ballari Budget

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ ವರ್ಷ ಬಜೆಟ್‌ನಲ್ಲಿ ಗಣಿ ಜಿಲ್ಲೆ ಬಳ್ಳಾರಿಗೆ 7 ಯೋಜನೆಗಳನ್ನು ಘೋಷಿಸಿದ್ದರು.  ಏಳು ಯೋಜನೆಗಳ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ ವರ್ಷ ಬಜೆಟ್‌ನಲ್ಲಿ ಗಣಿ ಜಿಲ್ಲೆ ಬಳ್ಳಾರಿಗೆ 7 ಯೋಜನೆಗಳನ್ನು ಘೋಷಿಸಿದ್ದರು. ಈ ಪೈಕಿ ಬಹುತೇಕ ಕಾರ್ಯರೂಪ ಪಡೆದುಕೊಂಡಿವೆ.

ಇಲ್ಲಿ ಗಮನಾರ್ಹ ಸಂಗತಿ ಎಂದರೆ ಕಳೆದ ವರ್ಷದ ಬಜೆಟ್‌ನಲ್ಲಿ ಜಿಲ್ಲೆಯ ಬಹುಜನರ ಬೇಡಿಕೆಗಳ ಯೋಜನೆಗಳಿಗೆ ಬಜೆಟ್‌ನಲ್ಲಿ ಹಣ ನೀಡಿರಲಿಲ್ಲ. ಆದರೆ, ಜಿಲ್ಲೆಗೆ ಒಂದಷ್ಟು ಸಮಾಧಾನಪಡಿಸಲು ಎಂಬಂತೆ ಸಣ್ಣಪುಟ್ಟ ಯೋಜನೆಗಳನ್ನು ನೀಡಿ ಕೈ ತೊಳೆದುಕೊಂಡಿತ್ತು. ಶ್ರವಣದೋಷ ಪ್ರಾಥಮಿಕ ಶಾಲೆಯನ್ನು ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿಸಿರುವುದು, ಪಿಯು ಕಾಲೇಜು ಹಾಸ್ಟೆಲ್ ಆರಂಭ, ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್‌ ತಡೆಗೆ ಲಸಿಕೆ ನೀಡಿಕೆ, ಕಂಪ್ಲಿಯಲ್ಲಿ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆ ಈ ರೀತಿಯ ಯೋಜನೆಗಳು ಘೋಷಣೆಗೊಂಡು ಕಾರ್ಯೋನ್ಮುಖವಾಗಿವೆ. ಕಳೆದ ವರ್ಷ ಘೋಷಿತ ಬಾಂಬ್‌ಪತ್ತೆ ಮತ್ತು ನಿಷ್ಕ್ರಿಯ ದಳ ಸ್ಥಾಪನೆ, 5267 ಶಿಕ್ಷಕರ ನೇಮಕ, ಹೈನುಗಾರಿಕೆ ಉತ್ತೇಜನಕ್ಕೆ 10 ಕೋಟಿ ರು. ಅನುದಾನ ಬಿಡುಗಡೆಯಾಗಿಲ್ಲ. ಸಿಎಂ ಸಿದ್ದರಾಮಯ್ಯ ಬಳ್ಳಾರಿಗೆ ಜಿಲ್ಲೆಗೆ ಈ ಹಿಂದಿನ ವರ್ಷದ ಬಜೆಟ್‌ನಲ್ಲಿ ನೀಡಿದ್ದೇನು? ಎಂಬುದರ ಫಾಲೋಅಪ್ ವರದಿ ಇದು.

ಎಚ್‌ಪಿವಿ ಲಸಿಕೆ ನೀಡಲು ಆರೋಗ್ಯ ಇಲಾಖೆ ಸಿದ್ಧತೆ

ಬಳ್ಳಾರಿ ಜಿಲ್ಲೆಯ 14 ವರ್ಷದ ಹೆಣ್ಣು ಮಕ್ಕಳಿಗೆ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟಲು ಎಚ್‌ಪಿವಿ ಲಸಿಕೆ ನೀಡುವ ಕುರಿತು ಕಳೆದ ವರ್ಷ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಈಗಾಗಲೇ ಜಿಲ್ಲಾ ಕೇಂದ್ರಕ್ಕೆ 5564 ಲಸಿಕೆ ಪೂರೈಕೆಯಾಗಿದ್ದು, ಉಳಿದವು ಹಂತ ಹಂತವಾಗಿ ಪೂರೈಕೆಯಾಗಲಿವೆ. ಮಾರ್ಚ್‌ 11ಕ್ಕೆ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಜಿಲ್ಲೆಯ 16 ಸಾವಿರ ಮಹಿಳೆಯರಿಗೆ ಲಸಿಕೆ ನೀಡಲು ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದು ಅತ್ಯಂತ ದುಬಾರಿ ಲಸಿಕೆಯಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ.

ಕಂಪ್ಲಿಯಲ್ಲಿ ಜಿಟಿಟಿಸಿ ಕೇಂದ್ರ ಸ್ಥಾಪನೆ

ವಿದ್ಯಾರ್ಥಿ-ಯುವಜನರಿಗೆ ಕೌಶಲ್ಯ ತರಬೇತಿಯನ್ನು ನೀಡುವ ಸಂಬಂಧ ಕಳೆದ ಬಜೆಟ್‌ನಲ್ಲಿ ಕಂಪ್ಲಿಯಲ್ಲಿ ಜಿಟಿಟಿಸಿ (ಕೌಶಲ್ಯ ಅಭಿವೃದ್ಧಿ ಕೇಂದ್ರ) ಸ್ಥಾಪನೆ ಘೋಷಣೆ ಮಾಡಲಾಗಿತ್ತು. ಕಂಪ್ಲಿ ಪಟ್ಟಣದಲ್ಲಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸುವಿಕೆ ಪೂರ್ಣಗೊಂಡಿದ್ದು ಕೆಕೆಆರ್‌ಡಿಬಿ ಅನುಮತಿಯ ಪ್ರಕ್ರಿಯೆ ನಡೆದಿದೆ. ನಂತರ ವಿಸ್ತೃತ ಯೋಜನಾ ವರದಿ (ಡಿಪಿಆರ್ )ಸಲ್ಲಿಕೆಯಾಗಲಿದ್ದು ಬಳಿಕ ಕೇಂದ್ರದ ಕಟ್ಟಡ ನಿರ್ಮಾಣ ಕಾರ್ಯ ಶುರುಗೊಳ್ಳಲಿದೆ. ಮುಂದಿನ ವರ್ಷದಿಂದ ಕೌಶಲ್ಯ ತರಬೇತಿ ಕೇಂದ್ರ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ.

ಬಳ್ಳಾರಿಯ ರೇಡಿಯೋ ಪಾರ್ಕ್ ಪ್ರದೇಶದಲ್ಲಿ ಕಳೆದ ಐದು ತಿಂಗಳ ಹಿಂದೆ ಜಿಟಿಟಿಸಿ ಕೇಂದ್ರ ಕಾರ್ಯಾರಂಭ ಮಾಡಿದ್ದು ಇಲ್ಲಿನ 3 ಹಾಗೂ 6 ತಿಂಗಳು ತರಬೇತಿ ನೀಡಲಾಗುತ್ತಿದೆ. ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಎಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್‌ ಕೋರ್ಸ್‌ಗಳು ನಡೆಯುತ್ತವೆ.

ಮೇಲ್ದರ್ಜೆಗೇರಿದ ಶ್ರವಣದೋಷ ಮಕ್ಕಳ ಸರ್ಕಾರಿ ಶಾಲೆ:

ಶ್ರವಣದೋಷವುಳ್ಳ ಮಕ್ಕಳ 1ರಿಂದ 7ನೇ ತರಗತಿವರೆಗಿನ ಸರ್ಕಾರಿ ಶಾಲೆಯನ್ನು ಪ್ರೌಢಶಾಲೆಯಾಗಿ ಮೇಲ್ದರ್ಜೆಗೆ ಏರಿಸುವ ಕುರಿತು ಕಳೆದ ಬಜೆಟ್‌ನಲ್ಲಿ ಪ್ರಸ್ತಾಪಿಸಿದಂತೆಯೇ ಈ ವರ್ಷದಿಂದಲೇ ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿಸಲಾಗಿದ್ದು 8ನೇ ತರಗತಿಗೆ ಪ್ರವೇಶ ಪಡೆಯಲಾಗುತ್ತಿದೆ.

ಆದರೆ, ಇಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸುವ ಕಾರ್ಯವಾಗಿಲ್ಲ. ಶಿಕ್ಷಕರ 5 ಹುದ್ದೆಗಳು ಸೃಜನಗೊಂಡಿವೆ. ಮುಖ್ಯಗುರು ಸೇರಿದಂತೆ ಮೂವರು ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. 48 ಶ್ರವಣದೋಷವುಳ್ಳ ವಿದ್ಯಾರ್ಥಿಗಳಿದ್ದಾರೆ. ಕಟ್ಟಡ ಶಿಥಿಲಗೊಂಡಿದ್ದು ಹೊಸ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಶಾಲೆಯನ್ನು ಮೇಲ್ದರ್ಜೆಗೇರಿಸುವುದಷ್ಟೇ ಮುಖ್ಯವಲ್ಲ. ಬೋಧಕ ಸಿಬ್ಬಂದಿ ನಿಯೋಜನೆ ಕೆಲಸವೂ ಆಗಬೇಕು ಎಂದು ಶ್ರವಣದೋಷವುಳ್ಳ ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ.

ಪಿಯು ಕಾಲೇಜು ಹಾಸ್ಟೇಲ್ ಶುರು:

ರಾಜ್ಯದ 32 ಎಸ್ಸಿ-ಎಸ್ಟಿ ಹಾಗೂ ಒಬಿಸಿ ಹಾಸ್ಟೆಲ್‌ಗಳನ್ನು ಕಾಲೇಜು ಹಾಸ್ಟಲ್‌ಗಳನ್ನಾಗಿ ಪರಿವರ್ತಿಸಿರುವಂತೆ ಬಳ್ಳಾರಿ ನಗರದ ರೇಡಿಯೋ ಪಾರ್ಕ್‌ನಲ್ಲಿ ಎಸ್ಸಿಎಸ್ಟಿ -ಒಬಿಸಿ ಹಾಸ್ಟೆಲ್‌ನ್ನು ಕಾಲೇಜು ಹಾಸ್ಟೆಲನ್ನಾಗಿಸಲಾಗಿದೆ. ಕಳೆದ ಜೂನ್‌ನಿಂದಲೇ ಪ್ರವೇಶ ಪಡೆಯಲಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ ತಾಲೂಕಿನ ಬೆಣಕಲ್ ಹಾಗೂ ಜಾನೆಕುಂಟೆ ಹಾಸ್ಟೆಲ್‌ಗಳನ್ನು ಸಂಯೋಜಿಸಿ ಬಳ್ಳಾರಿಯ ರೇಡಿಯೋ ಪಾರ್ಕ್‌ ಪ್ರದೇಶದಲ್ಲಿ ಹಾಸ್ಟೆಲ್‌ ಆರಂಭಿಸಲಾಗಿದೆ. ಇದರಿಂದ ಪದವಿಪೂರ್ವ ಶಿಕ್ಷಣದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾದಂತಾಗಿದೆ. ಕಳೆದ ವರ್ಷ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆಯೇ ಕಾಲೇಜು ಹಾಸ್ಟಲ್‌ಗೆ ಕ್ರಮ ವಹಿಸಿರುವುದು ಸ್ವಾಗತಾರ್ಹ ನಿಲುವಾಗಿದೆ.

ಇದನ್ನೂ ಓದಿ: 2025ರ ಬಜೆಟ್‌ನಲ್ಲಿ ರಾಮನಗರಕ್ಕೆ 6 ಯೋಜನೆ ಘೋಷಣೆ : 3ಕ್ಕೆ ಚಾಲನೆ, 3ಕ್ಕೆ ಗ್ರಹಣ?

ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಕೆಎಂಆರ್‌ಇಸಿ ಅನುದಾನ ಬಳಕೆ:

ಬಳ್ಳಾರಿ ಜಿಲ್ಲೆಯ 50 ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಳೆದ ಬಜೆಟ್ ನಲ್ಲಿ ರಾಜ್ಯ ಸರ್ಕಾರ 200 ಕೋಟಿ ರು. ಘೋಷಣೆ ಮಾಡಿತ್ತು. ಈ ಪೈಕಿ 20 ಶಾಲೆಗಳಿಗೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದಿಂದ (ಕೆಎಂಇಆರ್‌ಸಿ) ಅನುದಾನ ನೀಡುತ್ತಿದ್ದು, 18 ಶಾಲೆಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ (ಕೆಕೆಆರ್‌ಡಿಬಿ) ಹಾಗೂ ಮೂರು ಶಾಲೆಗಳಿಗೆ ಎಡಿಬಿ ಬ್ಯಾಂಕ್ ಅನುದಾನ ನೀಡಿದೆ. ಬರುವ ವರ್ಷದಲ್ಲಿ ಎಲ್ಲ ಶಾಲೆಗಳು ಶುರುಗೊಳ್ಳುವ ಸಾಧ್ಯತೆಯಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ 6 ಕರ್ನಾಟಕ ಪಬ್ಲಿಕ್ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. 200 ವಿದ್ಯಾರ್ಥಿಗಳು ಮೇಲ್ಪಟ್ಟು ಇರುವ ಶಾಲೆಗಳನ್ನು ಗುರುತಿಸಿ ಕರ್ನಾಕಟ ಪಬ್ಲಿಕ್ ಶಾಲೆಯನ್ನು ಆರಂಭಿಸಲಾಗುತ್ತದೆ. ಸರ್ಕಾರ ನೇರವಾಗಿ ಈ ಯೋಜನೆಗಳಿಗೆ ಹಣ ನೀಡಿಲ್ಲ. ಜಿಲ್ಲೆಯ ಪ್ರಾಕೃತಿಕ ಸಂಪನ್ಮೂಲಗಳಿಂದ ಬಂದ ನಿಧಿಯನ್ನೇ ಬಳಕೆ ಮಾಡಿದೆ.

ಇದನ್ನೂ ಓದಿ: ಮಟ್ಕಾ ವಿಚಾರಕ್ಕೆ ಪಿಎಸ್‌ಐ ಬಸನಗೌಡ ಬಿರಾದಾರ್ ಸಸ್ಪೆಂಡ್; ಶಾಸಕ ರುದ್ರಪ್ಪ ಲಮಾಣಿ ಕೆಲಸಕ್ಕೆ ಚಪ್ಪಾಳೆ!

PREV
Read more Articles on
click me!

Recommended Stories

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದ ಸುತ್ತ 8 ಕಿ.ಮೀ ವ್ಯಾಪ್ತಿ 'ರೆಡ್ ಝೋನ್': ಡ್ರೋಣ್ ಹಾರಾಟ ನಿಷೇಧ!
ಮಟ್ಕಾ ವಿಚಾರಕ್ಕೆ ಪಿಎಸ್‌ಐ ಬಸನಗೌಡ ಬಿರಾದಾರ್ ಸಸ್ಪೆಂಡ್; ಶಾಸಕ ರುದ್ರಪ್ಪ ಲಮಾಣಿ ಕೆಲಸಕ್ಕೆ ಚಪ್ಪಾಳೆ!