ಗುಳೇದಗುಡ್ಡ: 'ಸಿದ್ದರಾಮಯ್ಯ ಬಗ್ಗೆ ಮಾತಾಡುವ ನೈತಿಕತೆ ಶೀಲವಂತರಿಗಿಲ್ಲ'

By Kannadaprabha NewsFirst Published Jun 12, 2021, 3:22 PM IST
Highlights

* ಸಿದ್ದರಾಮಯ್ಯನವರಿಂದ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ
* ಶೀಲವಂತ ಅವರ ನಾಯಕತ್ವ ಹೇಗಿದೆ ಅಂತ ಗೊತ್ತಿದೆ
* ಬಿಜೆಪಿ ಸರ್ಕಾರವಿದೆ ತಾಕತ್ತಿದ್ದರೆ 10 ಕೋಟಿ ಅನುದಾನ ಮಂಜೂರಿ ಮಾಡಿಸಲಿ 
 

ಗುಳೇದಗುಡ್ಡ(ಜೂ.12): ರಾಜ್ಯದ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ, ಬಾದಾಮಿ ಶಾಸಕ ಜಿಲ್ಲೆಯಲ್ಲಿಯೇ ಹೆಚ್ಚಿನ ಅನುದಾನ ಮತಕ್ಷೇತ್ರಕ್ಕೆ ತಂದು ಅಭಿವೃದ್ಧಿ ಮಾಡುತ್ತಿದ್ದಾರೆ. ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಮಾಜಿ ಶಾಸಕ ಶೀಲವಂತ ಅವರಿಗೆ ಇಲ್ಲ ಎಂದು ಇಲ್ಲಿನ ಕಾಂಗ್ರೆಸ್‌ ಮುಖಂಡ, ಸಿದ್ದರಾಮಯ್ಯನವರ ಆಪ್ತ ಹೊಳಬಸು ಶೆಟ್ಟರ ಖಾರವಾಗಿ ಪ್ರತಿಕ್ರಿಯಿಸಿದರು.

ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಳೆದ ಎರಡುವರೆ ವರ್ಷದಲ್ಲಿ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅದನ್ನು ಸಹಿಸಲಿಕ್ಕಾಗದ ಮಾಜಿ ಶಾಸಕ ರಾಜಶೇಖರ ಶೀಲವಂತ ಸಿದ್ದರಾಮಯ್ಯ ಅವರನ್ನು ಕಡೆಗಣಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದಾರೆ. ತಾವು 2 ವರ್ಷ ಶಾಸಕರಾಗಿದ್ದಾಗ ಗುಳೇದಗುಡ್ಡದಲ್ಲಿ ಎಷ್ಟುಅಭಿವೃದ್ಧಿ ಮಾಡಿದ್ದಾರೆಂದು ಇಡೀ ಜನತೆಗೆ ಗೊತ್ತಿದೆ. ಮೂಕೇಶ್ವರಿ ಗುಡಿ ಅಭಿವೃದ್ಧಿಗೆ 50 ಲಕ್ಷ ಅನುದಾನವನ್ನು ಶಾಸಕರು ಮಂಜೂರಿ ಮಾಡಿಸಿದ್ದಾರೆ. ಬಿಜೆಪಿ ಸರ್ಕಾರವಿದೆ ತಾಕತ್ತಿದ್ದರೆ ಅದಕ್ಕೆ 10 ಕೋಟಿ ಅನುದಾನ ಮಂಜೂರಿ ಮಾಡಿಸಲಿ ಎಂದು ಸವಾಲು ಹಾಕಿದರು.

ಮೋದಿಗೆ ತಕ್ಕ ಪಾಠ ಕಲಿಸಲು ಜನ ತುದಿಗಾಲ ಮೇಲೆ ನಿಂತಿದ್ದಾರೆ: ಎಸ್‌.ಆರ್‌. ಪಾಟೀಲ

ಶೀಲವಂತ ಅವರು ಶಾಸಕರಾಗಿದ್ದಾಗ ಏನೆಲ್ಲ ಮಾರಿಕೊಂಡಿದ್ದಾರೆ. ಏನೆಲ್ಲ ಅಭಿವೃದ್ಧಿ ಮಾಡಿದ್ದಾರೆ ನನಗೆ ಗೊತ್ತಿದೆ. ಸಿದ್ದರಾಮಯ್ಯನವರು ಮತಕ್ಷೇತ್ರದಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಪಕ್ಷ ತೊರೆಯುತ್ತಿದ್ದಾರೆ. ಇದರಿಂದ ಶೀಲವಂತ ಅವರ ನಾಯಕತ್ವ ಹೇಗಿದೆ ಎಂದು ಗೊತ್ತಾಗುತ್ತದೆ. ಈ ಭಾಗದ ರೈತರು ಸಿದ್ದರಾಮಯ್ಯನವರನ್ನು ಹೋಗಳುತ್ತಾರೆ. ಯಾಕೆಂದರೆ ಮಲಪ್ರಭಾ ನದಿಗೆ ಕಳೆದ ಎರಡುವರೆ ವರ್ಷಗಳಿಂದ ನೀರು ಬಿಡಿಸುತ್ತಿದ್ದಾರೆ. ಈ ಕೆಲಸ ಈ ಮೊದಲು ಇವರೇ ಯಾಕೆ ಮಾಡಲಿಲ್ಲ. ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಶೀಲವಂತ ಅವರಿಗಿಲ್ಲ. ಇದೇ ರೀತಿ ಅವಹೇಳನವಾಗಿ ಮಾತನಾಡಿದರೆ ಅವರ ವಿರುದ್ಧ ಕಾಂಗ್ರೆಸ್‌ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಪುರಸಭೆ ಅಧ್ಯಕ್ಷರಾದ ವೈ.ಆರ್‌.ಹೆಬ್ಬಳ್ಳಿ, ನಾಗಪ್ಪ ಗೌಡ್ರ, ರಾಜು ತಾಪಡಿಯಾ, ಕಾಂಗ್ರೇಸ್‌ ತಾಲೂಕು ಘಟಕದ ಅಧ್ಯಕ್ಷ ರಾಜು ಜವಳಿ, ಮುಖಂಡ ಸಂಜಯ ಬರಗುಂಡಿ ಮಾತನಾಡಿದರು. ಪುರಸಭೆ ಸದಸ್ಯರಾದ ವಿನೋದ ಮದ್ದಾನಿ, ಶಾಮ್‌ ಮೇಡಿ, ಹಣಮಂತ ಗೌಡರ್‌, ಅಮರೇಶ ಕವಡಿಮಟ್ಟಿ, ವಿಠ್ಠಲ ಕಾವಡೆ, ರಾಜಶೇಖರ ಹೆಬ್ಬಳ್ಳಿ, ನಾಗರತ್ನಾ ಲಕ್ಕುಂಡಿ ಮುಖಂಡರಾದ ಪ್ರಕಾಶ ಮುರಗೋಡ, ಮುಬಾರಕ ಮಂಗಳೂರ,ನಾಗರಾಜ ಹಳ್ಳಿ, ಸೇರಿದಂತೆ ಕಾಂಗ್ರೇಸ್‌ ಮುಖಂಡರು ಹಾಜರಿದ್ದರು.
 

click me!