'ಲಾಕ್‌ಡೌನ್‌ ಇನ್‌ ನರಕ’ ಸೂತ್ರದ ಗೊಂಬೆಯಾಟ: ನಿಯಮ ಉಲ್ಲಂಘಿಸಿದ್ರೆ ನರಕದಲ್ಲೂ ಶಿಕ್ಷೆ..!

By Kannadaprabha NewsFirst Published May 6, 2020, 12:24 PM IST
Highlights

ಸದ್ಯದಲ್ಲೇ ಕೊರೋನಾ ಜಾಗೃತಿಯ ಗೊಂಬೆಯಾಟ ಪ್ರದರ್ಶನ| ಹೊಂಗಿರಣ ಗೊಂಬೆಯಾಟ ತಂಡ ಕೊರೋನಾ ವೈರಸ್‌ ಕುರಿತು ಜಾಗೃತಿ| ಗೊಂಬೆಯಾಟದ ತಂಡದಲ್ಲಿ ಸೂತ್ರದಗೊಂಬೆ ಕಡ್ಡಿಗೊಂಬೆ ಮತ್ತು ಕೈಗೊಂಬೆಗಳ ಬಳಕೆ|

ಹಳಿಯಾಳ(ಮೇ.06): ಹೊಂಗಿರಣ ಗೊಂಬೆಯಾಟ ತಂಡ ಕೊರೋನಾ ವೈರಸ್‌ ಕುರಿತು ಜಾಗೃತಿ ಮೂಡಿಸುವ ವಿಶೇಷ ಸೂತ್ರದ ಗೊಂಬೆಯಾಟ ‘ಲಾಕ್‌ಡೌನ್‌ ಇನ್‌ ನರಕ’ ಪ್ರದರ್ಶನಕ್ಕೆ ಮುಂದಾಗಿದೆ.

ಯಮಲೋಕದಲ್ಲಿ ಯಮರಾಜನ ಮುಂದೆ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದವರ ಕುರಿತು ವಿಚಾರಣೆ ನಡೆಯುತ್ತದೆ. ಆಗ ಚಿತ್ರಗುಪ್ತ ವರದಿ ಸಲ್ಲಿಸುತ್ತಾನೆ. ಪಾಪಪುಣ್ಯಗಳ ಲೆಕ್ಕಾಚಾರ ಮಾಡಿ, ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದವರಿಗೆ 14 ದಿನಗಳ ಕ್ವಾರಂಟೈನ್‌ ನರಕದಲ್ಲಿರುವ ಶಿಕ್ಷೆ ವಿಧಿಸುತ್ತಾನೆ ಯಮ. ಇದರಿಂದ ನಾವೆಲ್ಲರೂ ಲಾಕ್‌ಡೌನ್‌ ನಿಯಮಗಳನ್ನು ಉಲ್ಲಂಘಿಸಬಾರದೆಂದು ಎನ್ನುವ ಸಂದೇಶ ಸಾರುವ ಗೊಂಬೆಯಾಟ ಇದಾಗಿದೆ.

ಲಾಕ್‌ಡೌನ್ ಉಲ್ಲಂಘನೆ: 24 ಗ್ರಾಪಂ ಸದಸ್ಯರು ಸಾಮೂಹಿಕ ರಾಜೀನಾಮೆ

ಸದ್ಯದಲ್ಲೇ ಶಾಲಾ ಮಕ್ಕಳಿಗೆ, ಗ್ರಾಮೀಣ ಮಹಿಳೆಯರಿಗೆ ಹಾಗೂ ಜನಸಾಮಾನ್ಯರಿಗೆ ಗೊಂಬೆಗಳ ಕುಣಿತದೊಂದಿಗೆ ಹಾಡು, ಸಂಗೀತ ಸಂಭಾಷಣೆಯ ಮನರಂಜನೆ ನೀಡಲು ಬರುತ್ತಿದೆ. ಹೊಂಗಿರಣ ತಂಡ ಅನೇಕ ವರ್ಷಗಳಿಂದ ಗೊಂಬೆಯಾಟ ಪ್ರದರ್ಶನ ಮಾಡುತ್ತ ಬಂದಿದೆ. ರಾಜ್ಯದ ವಿವಿಧ ಸಭೆ ಸಮಾರಂಭಗಳಲ್ಲಿ ಪ್ರದರ್ಶಿಸಿದೆ. ಅಸ್ಸಾಂನ ಗುವಾಹಾಟಿ, ಸಿಕ್ಕಿಂನ ಗ್ಯಾಂಗ್‌ಟಕ್‌, ತಮಿಳುನಾಡು, ಹೈದರಾಬಾದ್‌, ಕೇರಳ, ದೆಹಲಿ ಹೀಗೆ ದೇಶದ 17 ರಾಜ್ಯಗಳಲ್ಲಿ ಕಾರ್ಯಕ್ರಮ ನೀಡಿದೆ. ನೇಪಾಳದ ಲುಂಬಿಣಿ ಪಾರ್ಕ್‌ನಲ್ಲಿ ಅಲ್ಲದೆ ದೂರದರ್ಶನ ಚಂದನ ಸೇರಿದಂತೆ ಹಲವು ಖಾಸಗಿ ವಾಹಿನಿಗಳಲ್ಲಿ ಅನೇಕ ಕಾರ್ಯಕ್ರಮ ನೀಡಿ ಮೆಚ್ಚುಗೆ ಪಡೆದಿದೆ.

ಈ ಗೊಂಬೆಯಾಟದ ತಂಡದಲ್ಲಿ ಸೂತ್ರದಗೊಂಬೆ ಕಡ್ಡಿಗೊಂಬೆ ಮತ್ತು ಕೈಗೊಂಬೆಗಳನ್ನು ಬಳಸಲಾಗುತ್ತದೆ. ನಮ್ಮ ಇತಿಹಾಸ ಪರಂಪರೆಯನ್ನು ಮತ್ತು ಸಂಸ್ಕೃತಿಯನ್ನು ಬಿಂಬಿಸುವ, ರಾಮಾಯಣ, ಮಹಾಭಾರತದ, ಪುಣ್ಯಕೋಟಿ, ಜಾಗತಿಕ ತಾಪಮಾನ, ಪರಿಸರ ಕುರಿತಾದ ವಿವಿಧ ಸನ್ನಿವೇಶಗಳನ್ನು ಮತ್ತು ಐತಿಹಾಸಿಕ, ವಿವಿಧ ರೂಪಕವನ್ನು ಸಮಯದ ಸಂದರ್ಭಾನುಸಾರ 15 ನಿಮಿಷದಿಂದ 1 ಗಂಟೆಯ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಅನೇಕ ವರ್ಷಗಳಿಂದ ನೀಡುತ್ತಾ ಬಂದಿದ್ದಾರೆ.

ಈ ಲಾಕ್‌ಡೌನ್‌ ಇನ್‌ ನರಕ ಸೂತ್ರದ ಗೊಂಬೆಯಾಟದ ಸಾಹಿತ್ಯ ರಚನೆ ಗಂಗಾಧರ ನಾಯ್ಕ, ಸಂಗೀತ ಗಜಾನನ ಭಟ್‌ ತುಳಗೇರಿ, ಚಂಡೆ ಪ್ರಸನ್ನ ಭಟ್‌ ಹೆಗ್ಗಾರ, ಮದ್ದಲೆ ಮಧುಸೂದನ ಭಟ್‌ ವಾನಳ್ಳಿ, ಹಾಡು ಅರುಣ ಗೊಂದಳೆ, ಹಿನ್ನೆಲೆ ಧ್ವನಿ ಕಾಳಿದಾಸ ಬಡಿಗೇರ ಮತ್ತು ಸುರೇಂದ್ರ ಬಿರ್ಜೆ. ಗೊಂಬೆಯಾಟದಲ್ಲಿ ಗಜಾನನ, ಪ್ರವೀಣ, ಅಕ್ಷಯ ಕುಮಾರ, ಅದಿತ, ಗೊಂಬೆ ತಯಾರಿಕೆಯಲ್ಲಿ ಗುರುರಾಜ ರತಕರ, ಶ್ರೇಯಾ, ಪ್ರಜ್ವಲ್‌, ಗೊಂಬೆ ಅಲಂಕಾರದಲ್ಲಿ ಜಗದೀಶ ಗುಡಿಗಾರ, ಸುಜಾತಾ ಬಿರಾದಾರ, ವಸ್ತ್ರ ವಿನ್ಯಾಸ ಮಾಡಿದವರು ಆಲ್ಫಿಯಾ ಟೇಲರ ಹಳಿಯಾಳ ಗೊಂಬೆಯಾಟದ ನಿರ್ದೇಶನ ಸಿದ್ದಪ್ಪ ಬಿರಾದಾರ. ಹೊಂಗಿರಣ ಗೊಂಬೆಯಾಟ ತಂಡ ಹಳಿಯಾಳ ನಿರ್ಮಾಣ ಮಾಡಿದೆ.
 

click me!