ವಿದೇಶ, ಹೊರರಾಜ್ಯಳಿಂದ ಬಂದವರಿಗೆ ಹೋಂ ಕ್ವಾರಂಟೈನ್‌

By Kannadaprabha NewsFirst Published Jun 10, 2020, 7:28 AM IST
Highlights

ಕೊರೋನಾ ವಾರಿಯರ್ಸ್‌ಗೆ ಗೌರವ ಸಲ್ಲಿಸಿದ ಕೊಪ್ಪಳ ತಾಪಂ| ವಿದೇಶ ಮತ್ತು ಅಂತರ್‌ ರಾಜ್ಯದಿಂದ ಬಂದ ವ್ಯಕ್ತಿಗಳನ್ನು ಹೋಂ ಕ್ವಾರಂಟೈನ್| ಹನಿ ನೀರಾವರಿಗೆ ಶೇ. 90ರಷ್ಟು ಸಹಾಯಧನ| ಅನುದಾನದ ಕೊರತೆಯಿಂದ ಕಳೆದ ಸಾಲಿನ ಅರ್ಜಿಗಳು ಬಾಕಿ ಉಳಿದಿವೆ| 

ಕೊಪ್ಪಳ(ಜೂ.10): ಮಹಾಮಾರಿ ಕೊರೋನಾ ನಿಯಂತ್ರಣ ಮಾಡುವಲ್ಲಿ ಶ್ರಮ ವಹಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು, ವಿಶೇಷವಾಗಿ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಶೇಷ ಗೌರವ ಸಲ್ಲಿಸಲಾಯಿತು.

ತಾಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಆರೋಗ್ಯ ಇಲಾಖೆಯ ತಾಲೂಕು ಅಧಿಕಾರಿ ರಾಮಂಜನೇಯ ಅವರು ಮಾಹಿತಿ ನೀಡಿದ ಬಳಿಕ, ಸದಸ್ಯರೆಲ್ಲರೂ ಒಕ್ಕಲೂರಿನಿಂದ ಕೊರೋನಾ ವಾರಿಯರ್ಸ್‌ಗೆ ನಮನ ಸಲ್ಲಿಸಿದರು.

ಕೊಪ್ಪಳ ಜಿಲ್ಲೆಯಲ್ಲಿ ಒಂದೇ ದಿನ 6 ಮಹಾಮಾರಿ ಕೊರೋನಾ ಪಾಸಿಟಿವ್‌

ಕೋವಿಡ್‌ 19 ತಡೆಗಟ್ಟುವ ಕ್ರಮಗಳ ಬಗ್ಗೆ ತಾಲೂಕು ಆರೋಗ್ಯಧಿಕಾರಿ ಎ. ರಾಮಾಂಜನೇಯ ಮಾಹಿತಿ ನೀಡಿ, ಪ್ರತಿಯೊಬ್ಬರೂ ಆರೋಗ್ಯ ಇಲಾಖೆಗೆ ಸಹಕಾರ ನೀಡಿದ್ದಾರೆ. ವಿದೇಶ ಮತ್ತು ಅಂತರ್‌ ರಾಜ್ಯದಿಂದ ಬಂದ ವ್ಯಕ್ತಿಗಳನ್ನು ಹೋಂ ಕ್ವಾರಂಟೈನ್‌ ಮಾಡಿ ಕೋವಿಡ್‌ ತಡೆಗಟ್ಟುವ ಕಾರ್ಯವನ್ನು ಮಾಡಲಾಗಿದೆ. 7 ಸಾಂಸ್ಥಿಕ ಕ್ವಾರಂಟೈನ್‌ ಹಾಗೂ ಮುಂದೆ 14 ದಿನಗಳು ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ವಿಶೇಷ ಆ್ಯಪ್‌ ಮೂಲಕ ನಿಯಂತ್ರಣ ಮಾಡಲು ಕ್ರಮ ವಹಿಸಿದೆ. ಮಳೆಗಾಲದಲ್ಲಿ ಸೊಳ್ಳೆ ಹೆಚ್ಚುವುದರಿಂದ ಚಿಕೂನ್‌ಗುನ್ಯ ತಡೆಗಟ್ಟಲು ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದರು.

ಶಿಕ್ಷಣ ಇಲಾಖೆಯ ಅಧಿಕಾರಿ, ಶಾಲೆಗಳನ್ನು ಪ್ರಾರಂಭಗೊಳಿಸುವ ಬಗ್ಗೆ ಸರ್ಕಾರ ಆದೇಶ ನೀಡಿದೆ. ಕೇವಲ ಶಿಕ್ಷಕರು ಮಾತ್ರ ಶಾಲೆಗೆ ಹಾಜರಾಗಬೇಕು. ಜೂ. 24ರಿಂದ ಜು. 5ರ ವರೆಗೆ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 21 ಕೇಂದ್ರಗಳನ್ನು ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. 7 ಹೆಚ್ಚುವರಿ ಬ್ಲಾಕ್‌ ಸಿದ್ಧವಾ​ಗಿ​ವೆ ಎಂದರು.

ಮಕ್ಕಳು ಪರೀಕ್ಷೆ ಬರೆಯಲು ಸಿದ್ಧ. ಅವರಿಗೆ ಹಾಗೂ ಸಿಬ್ಬಂದಿಗೆ ಮಾಸ್ಕ್‌ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿ ನಜೀರ್‌ ಅಹ್ಮದ್‌ ಮಾಹಿತಿ ನೀಡಿ, ತಾಲೂಕು ಪಂಚಾಯಿತಿ ಎಲ್ಲ ಯೋಜನೆ ಅನುಷ್ಠಾನ ಮಾಡಲಾಗಿದೆ. ತರಕಾರಿ ಬೀಜ ಮತ್ತು ಎರೆಹುಳು ಗೊಬ್ಬರವನ್ನು ರೈತರಿಗೆ ಬದಗಿಸಲಾಗುತ್ತದೆ. ರೈತರ ಅನುಕೂಲಕ್ಕಾಗಿ ಮಣ್ಣು ಮತ್ತು ನೀರು ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಲಾಗಿದೆ.

ಹಣ್ಣು ಮೇಳ, ಜೇನು ಮೇಳ ಸೇರಿದಂತೆ ಅನೇಕ ಕಾರ್ಯಕ್ರಮ ನಡೆಸಲಾಗಿದೆ. ಜೇನು ಸಾಕಾಣಿಕೆಗೆ ಉತ್ತೇಜನ ನೀಡಿ ರೈತರು ತಮ್ಮ ಮನೆ ಮುಂದೆ ಜೇನು ಸಾಕಾಣಿಕೆಗೆ ಅನುಕೂಲ ಮಾಡಲಾಗಿದೆ. ಅಕಾಲಿಕ ಮಳೆಯಿಂದ 69 ಹೆಕ್ಟೇರ ಬಾಳೆ ಹಾನಿಯಾಗಿದೆ. ಹೂವಿನ ಬೆಳೆ ಹಾನಿಯಾದ ಬಗ್ಗೆ ಅರ್ಜಿ ಬಂದಿದೆ. ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ. ಹನಿ ನೀರಾವರಿಗೆ ಶೇ. 90ರಷ್ಟು ಸಹಾಯಧನ ನೀಡಲಾಗುತ್ತದೆ. ಆದರೆ, ಅನುದಾನದ ಕೊರತೆಯಿಂದ ಕಳೆದ ಸಾಲಿನ ಅರ್ಜಿಗಳು ಬಾಕಿ ಉಳಿದಿವೆ. ಸದ್ಯ ಅರ್ಜಿ ಸಲ್ಲಿಕೆ ತಡೆ ಹಿಡಿಯಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷೆ ಶಂಕ್ರಮ್ಮ ಉಪಲಾಪುರ, ತಾಪಂ ಇಒ ವೆಂಕೋಬಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಪ್ಪ ಹೊಸಳ್ಳಿ ಸೇರಿದಂತೆ ತಾಪಂ ಸದಸ್ಯರು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
 

click me!