ಕರಾವಳಿ, ಕೊಡಗು: ದೇಗುಲಗಳಲ್ಲಿ ಭಕ್ತರ ಸಂಖ್ಯೆ ಇಳಿಮುಖ

By Kannadaprabha NewsFirst Published Jun 10, 2020, 7:26 AM IST
Highlights

ಉಡುಪಿ ಜಿಲ್ಲೆಯಲ್ಲಿ ಲಾಕ್‌ ಡೌನ್‌ ನಂತರ ದೇವಾಲಯಗಳನ್ನು ತೆರೆದ 2ನೇ ದಿನವಾದ ಮಂಗಳವಾರ, ಮೊದಲ ದಿನಕ್ಕಿಂತ ಭಕ್ತರಲ್ಲಿ ಹೆಚ್ಚು ಉತ್ಸಾಹ ಕಂಡು ಬಂತು.

ಮಂಗಳೂರು(ಜೂ.10): ಉಡುಪಿ ಜಿಲ್ಲೆಯಲ್ಲಿ ಲಾಕ್‌ ಡೌನ್‌ ನಂತರ ದೇವಾಲಯಗಳನ್ನು ತೆರೆದ 2ನೇ ದಿನವಾದ ಮಂಗಳವಾರ, ಮೊದಲ ದಿನಕ್ಕಿಂತ ಭಕ್ತರಲ್ಲಿ ಹೆಚ್ಚು ಉತ್ಸಾಹ ಕಂಡು ಬಂತು.

ಉಡುಪಿಯ ಅನಂತೇಶ್ವರ, ಕಡಿಯಾಳಿ ಮಹಿಷಮರ್ಧಿನಿ ದೇವಾಲಯಗಳಲ್ಲಿ ಎಂದಿನಷ್ಟಿಲ್ಲದಿದ್ದರೂ, ಸೋಮವಾರಕ್ಕಿಂತ ಹೆಚ್ಚು ಜನರು ಭೇಟಿ ಕೊಟ್ಟಿದ್ದರು. ಉಡುಪಿಯ ಕೃಷ್ಣಮಠಕ್ಕೆ ಭಕ್ತರಿಗೆ ಪ್ರವೇಶ ಇಲ್ಲದಿದ್ದರೂ, ಮಠದ ಹೊರಗೆ ಇರುವ ಕನಕನ ಕಿಂಡಿಯಿಂದ ಕೃಷ್ಣನನ್ನು ನೋಡಿ ಭಕ್ತರು ತೃಪ್ತಿಪಟ್ಟುಕೊಳ್ಳುತ್ತಿದ್ದರು.

ಮಸೀದಿಗಳು ಓಪನ್‌:

ಮಸೀದಿಗಳನ್ನು ತೆರೆಯುವುದಕ್ಕೆ ಆಯಾ ಮಸೀದಿಗಳ ಸಮಿತಿಗಳಿಗೆ ಮುಸ್ಲಿಂ ಒಕ್ಕೂಟ ಅಧಿಕಾರವನ್ನು ಕೊಟ್ಟಿದ್ದರಿಂದ, ಮಂಗಳವಾರ ಉಡುಪಿಯ ಹೂಡೆ ಕೆಮ್ಮಣ್ಣು ವ್ಯಾಪ್ತಿಯ 5 ಮಸೀದಿಗಳು ಮತ್ತು ಸಂತೋಷ್‌ ನಗರದ ಮಸೀದಿ ಸೇರಿದಂತೆ ಗ್ರಾಮೀಣ ಭಾಗದ ಕೆಲವು ಮಸೀದಿಗಳು ತೆರೆದಿವೆ. ಆದರೆ ನಗರ ಪ್ರದೇಶದ ಮಸೀದಿಗಳು ಇನ್ನೂ ಕಾದು ನೋಡುವ ಪರಿಸ್ಥಿತಿ ಅನುಸರಿಸಿವೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀರಾ ಕಡಿಮೆಯಾಗಿರುವುದರಿಂದ ಇನ್ನೊಂದೆರಡು ದಿನಗಳಲ್ಲಿ ಎಲ್ಲ ಮಸೀದಿಗಳು ಆರಂಭವಾದರೇ ಅಚ್ಚರಿ ಇಲ್ಲ. ಮಂಗಳವಾರ ಕ್ರೈಸ್ತ ಧರ್ಮಪ್ರಾಂತ್ಯದ ಸಭೆಯಲ್ಲಿ ಜಿಲ್ಲೆಯ ಚರ್ಚುಗಳನ್ನು ಮಾತ್ರ ಈ ತಿಂಗಳ 30ರವರೆಗೆ ತೆರೆಯದಿರಲು ನಿರ್ಧರಿಸಲಾಗಿದೆ.

ಕುಕ್ಕೆ-2000 ಭಕ್ತರು:

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಂಗಳವಾರ 2194 ಮಂದಿ ದೇವರ ದರ್ಶನ ಮಾಡಿದ್ದಾರೆ. ಮಂಗಳವಾರವೂ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ವಿರಳವಾಗಿತ್ತು. 77 ದಿನಗಳ ಬಳಿಕ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದ್ದರೂ, ಎರಡನೆ ದಿನವೂ ನಿರೀಕ್ಷೆಯ ಸಂಖ್ಯೆಯಲ್ಲಿ ಭಕ್ತರು ಬಂದಿರಲಿಲ್ಲ. ಶುಕ್ರವಾರ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು, ಆಡಳಿತ ಮಂಡಳಿ ಎಲ್ಲಾ ರೀತಿಯ ಪೂರ್ವ ತಯಾರಿಯನ್ನು ಮಾಡಿಕೊಂಡಿದೆ. ಮಂಗಳವಾರ ದರ್ಶನ ಪಡೆದವರಲ್ಲಿ ಹೊರ ರಾಜ್ಯಗಳಿಂದ ಬಂದಿದ್ದ ಭಕ್ತರು ಕಾಣಿಸಲಿಲ್ಲ.

ದಕ್ಷಿಣ ಕನ್ನಡದಲ್ಲಿ ದ್ವಿಶತಕ ದಾಟಿದ ಸೋಂಕಿತರ ಸಂಖ್ಯೆ

ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಮುಂಜಾಗ್ರತಾ ಕ್ರಮದೊಂದಿಗೆ ಬುಧವಾರದಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಶ್ರೀದೇವರ ದರ್ಶನ ಮಾಡಲು ಬಯಸುವ ಭಕ್ತರಿಗೆ ದೇವಸ್ಥಾನದ ಮುಖಮಂಟಪದ ವರೆಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ.

ಹುಟ್ಟಿ ಕೇವಲ 20 ನಿಮಿಷ, ಡ್ಯಾನ್ಸ್ ರಾಜಾ ಡ್ಯಾನ್ಸ್; ವಿಡಿಯೋ

ಕೊಡಗು ಜಿಲ್ಲೆಯ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳಾದ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯ, ತಲಕಾವೇರಿ, ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ ಹಾಗೂ ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ ಮಂಗಳವಾರ ಭಕ್ತರ ಸಂಖ್ಯೆ ಬೆರಳೆಣಿಕೆಯಷ್ಟೇ ಇತ್ತು. ಜಿಲ್ಲೆಯ ಇತರೆ ದೇವಾಲಯದಲ್ಲಿ ಕೂಡ ಭಕ್ತರು ಕಡಿಮೆ ಸಂಖ್ಯೆಯಲ್ಲಿ ಕಂಡುಬಂದರು. ಮಾÓ್ಕ… ಧರಿಸಿಯೇ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ಭಕ್ತರಿಗೆ ದೇವಾಲಯ ವೀಕ್ಷಣೆಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ಇಂದಿನಿಂದ ಪಿಲಿಕುಳ ವೀಕ್ಷಣೆಗೆ ಮುಕ್ತ

ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಜೂನ್‌ 10ರಿಂದ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 9.30ರಿಂದ ಸಂಜೆ 5 ಗಂಟೆ ವರೆಗೆ ನಿಸರ್ಗಧಾಮ ವೀಕ್ಷಿಸಬಹುದು. ಆದರೆ ಬೋಟಿಂಗ್‌, ಅಮ್ಯೂಸ್‌ಮೆಂಟ್‌ ಪಾರ್ಕ್ಗೆ ಅವಕಾಶ ಇಲ್ಲ. ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರದ ನಿಯಮವನ್ನು ಪಾಲಿಸಿಕೊಂಡೇ ಪ್ರವಾಸಿಗರನ್ನು ನಿಸರ್ಗಧಾಮ ವೀಕ್ಷಣೆಗೆ ಬಿಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

click me!